ಮೈಸೂರು: ಹಬ್ಬದ ರಜೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ನೀರುಪಾಲು
ದೀಪಾವಳಿ ಹಬ್ಬದ ರಜೆ ಇದ್ದ ಕಾರಣ ಈ ಮೂವರು ಬಾಲಕರು ಗ್ರಾಮಕ್ಕೆ ಬಂದಿದ್ದರು. ಸೋಮವಾರ ಮಧ್ಯಾಹ್ನ, ಸಾಲಿಗ್ರಾಮದ ಭಾಸ್ಕರ ದೇವಸ್ಥಾನದ ಸಮೀಪವಿರುವ ಚಾಮರಾಜ ಎಡದಂಡೆ ನಾಲೆಗೆ ಈಜಲು ತೆರಳಿದ್ದರು.
ಸಾಂದರ್ಭಿಕ ಚಿತ್ರ
ದೀಪಾವಳಿ ಹಬ್ಬದ ರಜೆಯ ಸಂಭ್ರಮದಲ್ಲಿದ್ದ ಮೂರು ಕುಟುಂಬಗಳಲ್ಲಿ ತೀವ್ರ ಶೋಕ ಆವರಿಸಿದೆ. ಈಜಲೆಂದು ನಾಲೆಗೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಸಾಲಿಗ್ರಾಮ ತಾಲೂಕಿನಲ್ಲಿ ಸೋಮವಾರ ನಡೆದಿದೆ. ಅಯಾನ್ (16), ಆಜನ್ (13) ಹಾಗೂ ಲುಖ್ಯಾನ್ (14) ಮೃತ ದುರ್ದೈವಿ ಬಾಲಕರು.
ದೀಪಾವಳಿ ಹಬ್ಬದ ರಜೆ ಇದ್ದ ಕಾರಣ ಈ ಮೂವರು ಬಾಲಕರು ಗ್ರಾಮಕ್ಕೆ ಬಂದಿದ್ದರು. ಸೋಮವಾರ ಮಧ್ಯಾಹ್ನ, ಸಾಲಿಗ್ರಾಮದ ಭಾಸ್ಕರ ದೇವಸ್ಥಾನದ ಸಮೀಪವಿರುವ ಚಾಮರಾಜ ಎಡದಂಡೆ ನಾಲೆಗೆ ಈಜಲು ತೆರಳಿದ್ದರು. ಆದರೆ, ಸಂಜೆ ಕತ್ತಲಾಗುತ್ತಿದ್ದರೂ ಮಕ್ಕಳು ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದಾಗ, ನಾಲೆ ಬಳಿ ಮಕ್ಕಳ ಬಟ್ಟೆಗಳು ಪತ್ತೆಯಾಗಿವೆ. ತಕ್ಷಣವೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು.
ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದರೂ ಬಾಲಕರು ಪತ್ತೆಯಾಗಿರಲಿಲ್ಲ. ಮಂಗಳವಾರ ಮುಂಜಾನೆ ಮತ್ತೆ ಕಾರ್ಯಾಚರಣೆ ಮುಂದುವರಿಸಿದಾಗ ಮೂವರ ಮೃತದೇಹಗಳು ದೊರೆತಿವೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.