Mysore MUDA Scam | ಸ್ನೇಹಮಯಿ ಕೃಷ್ಣ ವಿರುದ್ಧ ಎಂ.ಲಕ್ಷ್ಮಣ ದೂರು: ಗಡಿಪಾರಿಗೆ ಮನವಿ

Update: 2024-08-31 06:08 GMT

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ದೂರು ನೀಡಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧವೇ ಇದೀಗ ಮೈಸೂರು ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್​ ನಾಯಕ ಎಂ.ಲಕ್ಷ್ಮಣ ದೂರು ನೀಡಿದ್ದಾರೆ.

ʻʻಸ್ನೇಹಮಯಿ ಕೃಷ್ಣ ವಿರುದ್ಧ ರಾಜ್ಯದ ಹಲವೆಡೆ 17 ಕ್ರಿಮಿನಲ್ ಪ್ರಕರಣಗಳು​ ದಾಖಲಾಗಿವೆ. ಆಸ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಭೂಮಿ ವಶಪಡಿಸಿಕೊಳ್ಳುವುದು, ನನ್ನನ್ನು ಸೇರಿ ನಗರದ ಗಣ್ಯರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕ್ರಮ ಕೈಗೊಳ್ಳಿ ಹಾಗೂ ಕೃಷ್ಣ ಅವರನ್ನು ಗಡಿಪಾರು ಮಾಡಿ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಬೇಕುʼʼ ಎಂದು ಎಂ ಲಕ್ಷ್ಮಣ ಮನವಿ ಮಾಡಿದ್ದಾರೆ.

ʻʻ2022-2023ನೇ ಸಾಲಿನಲ್ಲಿ ಸ್ನೇಹಮಯಿ ಕೃಷ್ಣ ಅವರು ಒಟ್ಟು 110 ಅರ್ಜಿಗಳನ್ನು RTI ಮೂಲಕ ವಿವಿಧ ಇಲಾಖೆಗಳಿಗೆ ನೀಡಿ ದಾಖಲಾತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ವರದಿ ಹೇಳುತ್ತಿದೆ. ಕೆಲ ಇಲಾಖೆಗಳ ನಕಲಿ ಸೀಲ್‌ಗಳನ್ನು ಇಟ್ಟುಕೊಂಡು ಹಾಗೂ RTI ಮಾಹಿತಿ ಸೀಲ್‌ಗಳನ್ನು ನಕಲಿಯಾಗಿ ಮಾಡಿಸಿಕೊಂಡು ದಾಖಲೆಗಳನ್ನು ತಿರುಚಿ ಮತ್ತು ಕೆಲ ಅಕ್ಷರಗಳಿಗೆ ವೈಟ್ನರ್‌ ಹಚ್ಚಿರುವುದು ಕಂಡು ಬಂದಿದೆʼʼ ಎಂದು ಆರೋಪಿಸಲಾಗಿದೆ.

ʻʻಇವರ ವಿರುದ್ಧ ಸುಮಾರು 17 ಕ್ರಿಮಿನಲ್ ಪ್ರಕರಣಗಳು 10 ವರ್ಷದಿಂದ ಇದ್ದರೂ ಪೊಲೀಸ್ ಇಲಾಖೆ ಸೆಕ್ಯೂರಿಟಿ ಪ್ರಕರಣವನ್ನು 6 ತಿಂಗಳಿಗೊಮ್ಮೆ ಹಾಕಬೇಕಾಗಿರುವ ನಿಯಮವಿದ್ದರೂ ಹಾಕಿರುವುದಿಲ್ಲವೇಕೆ? ಇವರು ಒಬ್ಬ ರೌಡಿ ಶೀಟರ್ ಆಗಿದ್ದು ನಿರಂತರವಾಗಿ ನಗರದ ಗಣ್ಯರನ್ನು ಮತ್ತು ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದರೂ ಇವರ ಮೇಲೆ ಸೆಕ್ಯೂರಿಟಿ ಪ್ರಕರಣವನ್ನು ಪೊಲೀಸರು ಹಾಕದಿರುವುದು ಎಷ್ಟರಮಟ್ಟಿಗೆ ಸರಿ? ಇವರು ಒಬ್ಬ ಸಾಮಾನ್ಯ ಬ್ಲ್ಯಾಕ್ ಮೇಲರ್ ಮತ್ತು ಸುಲಿಗೆಯಲ್ಲಿ ತೊಡಗಿಸಿಕೊಂಡಿದ್ದರೂ ಪೊಲೀಸ್ ಇಲಾಖೆ ಜಾಣ ಕುರುಡನ್ನು ಪ್ರದರ್ಶಿಸುತ್ತಿರುವುದು ಎಷ್ಟು ಸರಿ?ʼʼ ಎಂದು ಪ್ರಶ್ನಿಸಿದ್ದಾರೆ.

Tags:    

Similar News