ಪೌರಕಾರ್ಮಿಕರ ಸಮಸ್ಯೆ| ಎಸಿ ರೂಂನಲ್ಲಿ ಕುಳಿತುಕೊಂಡವರಿಗೆ ಬೀದಿಯಲ್ಲಿ ಕಸ ಗುಡಿಸುವವರ ಕಷ್ಟ ಗೊತ್ತಿದೆಯೇ?
ಸೇವಾ ಕಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದ ಪೌರಕಾರ್ಮಿಕರಿಗೆ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆಯನ್ನೇನೋ ನೀಡಿದೆ. ಆದರೆ, ಬೇಡಿಕೆ ಈಡೇರುವವರೆಗೂ ಭರವಸೆಯ ಮೇಲೆ ನಂಬಿಕೆ ಇಲ್ಲದಂತಹ ಹತಾಶೆ ಪೌರಕಾರ್ಮಿಕರಲ್ಲಿದೆ.;
ಮಲಿನ ಕೆಲಸಗಳಲ್ಲಿ ತೊಡಗಿಸಿಕೊಂಡು ಆಯುಷ್ಯ ಕಳೆದುಕೊಳ್ಳುವ ಪೌರಕಾರ್ಮಿಕರಿಗೆ ಜೀವನ ಭದ್ರತೆ ಎಂಬುದು ಮರೀಚಿಕೆಯಾಗಿದೆ. ಮುಂಜಾನೆಯಲ್ಲೇ ನಗರದ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುವ ಪೌರಕಾರ್ಮಿಕರನ್ನು ಕನಿಷ್ಠ ಮನುಷ್ಯರು ಎಂದೂ ಕಾಣದಿರುವುದು ಸಮ ಸಮಾಜ ಕಲ್ಪನೆಯ ವಿಡಂಬನೆಯಾಗಿದೆ.
ಸೇವಾ ಕಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದ ಪೌರಕಾರ್ಮಿಕರಿಗೆ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆಯನ್ನೇನೋ ನೀಡಿದೆ. ಆದರೆ, ಬೇಡಿಕೆ ಈಡೇರುವವರೆಗೂ ಭರವಸೆಯ ಮೇಲೆ ನಂಬಿಕೆ ಇಲ್ಲದಂತಹ ಹತಾಶೆ ಪೌರಕಾರ್ಮಿಕರಲ್ಲಿದೆ.
ಪೌರ ಕಾರ್ಮಿಕರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ ಪರಿಣಾಮ ಅನೈರ್ಮಲ್ಯ ಹೆಚ್ಚಾಗಿತ್ತು. ಎಚ್ಚೆತ್ತುಕೊಂಡ ಸರ್ಕಾರ ಪೌರಕಾರ್ಮಿಕ ನೌಕರರ ಸಂಘದೊಂದಿಗೆ ತಡರಾತ್ರಿ ಮಾತುಕತೆ ನಡೆಸಿ, ಮುಷ್ಕರ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಬೇಡಿಕೆ ಈಡೇರಿಕೆಗೆ ಸಂಘದ ಪದಾಧಿಕಾರಿಗಳು ಒಂದು ತಿಂಗಳ ಗಡುವನ್ನು ಸರ್ಕಾರ ನೀಡಿದ್ದಾರೆ. ಅಷ್ಟರಲ್ಲಿ ಯಾವೆಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಪೌರಕಾರ್ಮಿಕರ ಮುಷ್ಕರದ ಕುರಿತಂತೆ ದ ಫೆಡರಲ್ ಕರ್ನಾಟಕದ ಜೊತೆ ಮಾತನಾಡಿದ ಪೌರಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜು. ಆರ್ ಅವರು, ಪೌರಕಾರ್ಮಿಕರ ಅಹವಾಲು, ಸರ್ಕಾರದ ನಿರ್ಲಕ್ಷ್ಯ ಧೋರಣೆ ಇತ್ಯಾದಿ ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
"ನಾವು ಕಸ ವಿಲೇವಾರಿ, ಸ್ವಚ್ಛತೆ ಸೇರಿದಂತೆ 65 ಸೇವೆಗಳನ್ನು ಮಾಡುತ್ತೇವೆ. ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ನಮಗೆ ಆರೋಗ್ಯ ಸಂಜೀವಿನಿ ಸೌಲಭ್ಯ ನೀಡಿಲ್ಲ. ಐಷಾರಾಮಿ ಕಚೇರಿಯಲ್ಲಿ ಕೆಲಸ ಮಾಡುವ ನೌಕರರಿಗೆ ಆರೋಗ್ಯ ಸಂಜೀವಿನಿ ನೀಡುವ ಸರ್ಕಾರ ಬೀದಿಯಲ್ಲಿ ಕೆಲಸ ಮಾಡುವ ನಮಗೆ ಏಕೆ ನೀಡಲ್ಲ ಎಂದು ಪ್ರಶ್ನಿಸಿದ್ದಾರೆ.
ಸಚಿವ ರಹೀಂಖಾನ್ ಹಾಗೂ ಅಧಿಕಾರಿಗಳು ಕೆಲ ಬೇಡಿಕೆಗಳ ಈಡೇರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಒಂದು ತಿಂಗಳ ಗಡುವು ನೀಡಿ ಮುಷ್ಕರ ವಾಪಸ್ ಪಡೆದಿದ್ದೇವೆ. ಚುನಾವಣೆಗೆ ಮುಂಚೆ ಭರವಸೆ ನೀಡಿ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಹೇಳಲಾಗಿತ್ತು. ನಮಗೆ ಲಿಖಿತ ಆದೇಶ ಬೇಕು ಎಂದು ಕೇಳಿದ್ದೇವೆ. ಒಂದು ತಿಂಗಳಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಮತ್ತೆ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ. ಸರ್ಕಾರದಿಂದ ನಮ್ಮ ಬೇಡಿಕೆಗಳ ಈಡೇರುವ ಭರವಸೆ ಇದೆ ಎಂದು ಅವರು ತಿಳಿಸಿದರು.
ಬೇಡಿಕೆಗಳೇನು?
ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಸವಲತ್ತುಗಳನ್ನು ಯಾವುದೇ ಷರತ್ತುಗಳಿಲ್ಲದೆ ಎಲ್ಲ ಪೌರ ಕಾರ್ಮಿಕರಿಗೂ ನೀಡಬೇಕು.
ಪಟ್ಟಣ ಪಂಚಾಯಿತಿ ಮತ್ತು ನಗರಸಭೆಯಲ್ಲಿ ಕೆಲಸ ಮಾಡುವ ಎಲ್ಲಾ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು.
2022ನೇ ಸಾಲಿನ ವಿಶೇಷ ನೇಮಕಾತಿ ಅಡಿ ಆಯ್ಕೆಯಾದ ಪೌರಸೇವಾ ನೌಕರರು ಮತ್ತು ಲೋಡರ್ಸ್ಗಳಿಗೆ ಎಸ್ಎಫ್ಸಿ ವೇತನ ನಿಧಿಯಿಂದ ವೇತನ ಪಾವತಿಸಬೇಕು.
ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿ ಅಡಿ ಪರಿಗಣಿಸಬೇಕು.
‘ಜ್ಯೋತಿ ಸಂಜೀವಿನಿ, ನಗದು ರಹಿತ ಚಿಕಿತ್ಸಾ ಸೌಲಭ್ಯಗಳನ್ನು ಪೌರಕಾರ್ಮಿಕರಿಗೂ ಕಲ್ಪಿಸಬೇಕು.
ಐ.ಟಿ.ಸಿಬ್ಬಂದಿ, ಅಕೌಂಟ್ ಕನ್ಸಲ್ಟೆಂಟ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕ, ಸ್ಯಾನಿಟರಿ ಸೂಪರ್ವೈಸರ್ ಹಾಗೂ ಇತರೆ ವೃಂದದ ನೌಕರರನ್ನು ಪೌರಸೇವಾ ನೌಕರರೆಂದು ಪರಿಗಣಿಸಬೇಕು.
ಸೇವೆ ಕಾಯಂಗೊಳಿಸಿದ್ದ ಸರ್ಕಾರ
ಮೇ 1 ರಂದು ಬೆಂಗಳೂರಿನ 12,699 ಪೌರ ಕಾರ್ಮಿಕರ ಸೇವೆಯನ್ನು ರಾಜ್ಯ ಸರ್ಕಾರ ಕಾಯಂಗೊಳಿಸಿತ್ತು. ಕಾಯಂಗೊಂಡ ಪೌರ ಕಾರ್ಮಿಕರಿಗೆ ವೇತನವು 32 ರಿಂದ 33 ಸಾವಿರಕ್ಕೆ ಏರಿಕೆಯಾಗಿದೆ.
ಇದಲ್ಲದೇ ಬೆಂಗಳೂರು ನಗರದಲ್ಲಿ ನೇರ ವೇತನ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ 15,400 ಪೌರ ಕಾರ್ಮಿಕರಿದ್ದು, ಇವರಲ್ಲಿ 12,699 ಮಂದಿಯ ಸೇವೆ ಕಾಯಂ ಮಾಡಿದೆ. ಬೆಂಗಳೂರು ನಗರದ ಉಳಿದ ಹಾಗೂ ರಾಜ್ಯದ ಇತರೆಡೆಗಳಲ್ಲಿರುವ ಪೌರಕಾಮಿಕರನ್ನು ಹಂತ ಹಂತವಾಗಿ ನೇಮಕ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು.