CBI Case| ಧಾರವಾಡ ಜಿ.ಪಂ.ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲು
ಸುಪ್ರೀಂಕೋರ್ಟ್ನಿಂದ ಜಾಮೀನು ರದ್ದು ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.. ಪ್ರಾಣ ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಮೆಮೋ ಸಲ್ಲಿಕೆ ಮಾಡಲಾಗಿದೆ;
ಕಳೆದ ಒಂಭತ್ತು ವರ್ಷಗಳ ಹಿಂದೆ ಧಾರವಾಡ ಜಿಲ್ಲಾ ಪಂಚಾಯತ್ನಲ್ಲಿ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯಾಗಿದ್ದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತೊಮ್ಮೆ ಜೈಲುಪಾಲಾಗಿದ್ದಾರೆ.
ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿ ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಇಂದು (ಜೂ.13) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನ್ಯಾಯಾಲಯಕ್ಕೆ ಶರಣಾಗಿದರು. ಈ ಸಂದರ್ಭದಲ್ಲಿ ನ್ಯಾಯಾಲಯವು ವಿಚಾರಣೆ ನಡೆಸಿ, ಸುಪ್ರೀಂಕೋರ್ಟ್ನ ಜಾಮೀನು ರದ್ದು ಆದೇಶವನ್ನು ಉಲ್ಲೇಖ ಮಾಡಿತು. ಜಾಮೀನು ರದ್ದುಗೊಂಡ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯುವಂತೆ ಆದೇಶ ನೀಡಿತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ಪರಪ್ಪನ ಅಗ್ರಹಾರಕ್ಕೆ ಜೈಲಿಗೆ ಜೈಲಿಗೆ ಕಳುಹಿಸಿದರು.
ಇದಕ್ಕೂ ಮುನ್ನ ವಿಚಾರಣೆ ವೇಳೆ ಈಗಾಗಲೇ ಜೈಲಿನಲ್ಲಿದ್ದ ಮತ್ತೋರ್ವ ಆರೋಪಿ ಚಂದ್ರಶೇಖರ್ನನ್ನು ಸಹ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅಲ್ಲದೇ, ವಿನಯ್ ಕುಲಕರ್ಣಿ ಹಾಜರು ಪಡಿಸಿದಾಗ ಅವರ ಮಕ್ಕಳು ಸಹ ನ್ಯಾಯಾಲಯಲ್ಲಿದ್ದರು. ಸಿಬಿಐ ಪರ ವಿಶೇಷ ಅಭಿಯೋಜಕ ಮಿತ್ತಳಿಕೆ ಗಂಗಾಧರ ಶೆಟ್ಟಿ ವಾದ ಮಂಡಿಸಿದರು.
ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಜಾ
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಶರಣಾಗಲು ನೀಡಿದ್ದ ಸಮಯವನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕಳೆದ ವಾರ, ಸಾಕ್ಷಿಗಳನ್ನು ತಿರುಚಿದ ಆರೋಪದ ಮೇಲೆ ಕುಲಕರ್ಣಿ ಅವರ ಜಾಮೀನನ್ನು ನ್ಯಾಯಾಲಯ ರದ್ದುಗೊಳಿಸಿ, ಒಂದು ವಾರದೊಳಗೆ ಶರಣಾಗುವಂತೆ ಸೂಚಿಸಿತ್ತು. ಇಂದು (ಜೂ.೧೩) ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರ ಪೀಠದ ಮುಂದೆ, ಶಾಸಕರ ಪರ ವಕೀಲರು ಶರಣಾಗಲು ಸಮಯ ವಿಸ್ತರಣೆಯನ್ನು ಕೋರಿ ಪ್ರಸ್ತಾಪಿಸಿದರು. ತಮ್ಮ ಕಕ್ಷಿದಾರ ಹಾಲಿ ಶಾಸಕ ಮತ್ತು ಕರ್ನಾಟಕ ನೀರು ಸರಬರಾಜು ಮಂಡಳಿಯ ಅಧ್ಯಕ್ಷನಾಗಿರುವುದರಿಂದ ಶರಣಾಗುವ ಸಮಯಕ್ಕೆ ವಿಸ್ತರಣೆ ನೀಡಬೇಕು. ನಿಗದಿಯಾಗಿರುವ ಸಭೆಯಲ್ಲಿ ಭಾಗವಹಿಸಬೇಕಾಗಿದೆ, ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.
ವಿನಯ್ ಕುಲಕರ್ಣಿ ಪರ ವಕೀಲರ ವಾದಕ್ಕೆ ಮನ್ನಣೆ ನೀಡಿದ ಸುಪ್ರೀಂಕೋರ್ಟ್, ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು. ಹೀಗಾಗಿ ವಿನಯ್ ಕುಲಕರ್ಣಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಹಾಜರಾದರು.
ವಿನಯ್ ಕುಲಕರ್ಣಿಯಿಂದ ಪ್ರಾಣ ಬೆದರಿಕೆ
ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಮಹಿಳೆಯೊಬ್ಬರು ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದ ಮಹಿಳೆಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಸಿಬಿಐ ಪರ ವಕೀಲ ಮಿತ್ತಳಿಕೆ ಗಂಗಾಧರ ಶೆಟ್ಟಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗಮನಕ್ಕೆ ತಂದರು. ನ್ಯಾಯಾಲಯದ ಸೂಚನೆ ಮೇರೆಗೆ ವಿನಯ್ ಕುಲಕರ್ಣಿ ವಿರುದ್ಧ ಪ್ರಾಣ ಬೆದರಿಕೆಯ ಮೆಮೋ ಹಾಕಲಾಯಿತು.
ಜಿಮ್ನಲ್ಲಿ ಯೋಗೀಶ್ ಗೌಡ ಹತ್ಯೆ:
2016 ರ ಜೂನ್ 15 ರಂದು ಧಾರವಾಡದ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಯೋಗೀಶಗೌಡನನ್ನು ಅವರದ್ದೇ ಮಾಲೀಕತ್ವದ ಜಿಮ್ನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ತನಿಖೆಯಲ್ಲಿ ವಿನಯ್ ಕುಲಕರ್ಣಿ ಕೈವಾಡ ಇರುವ ಆರೋಪದ ಶಂಕೆಯ ಮೇಲೆ 2020 ನವೆಂಬರ್ 5 ರಂದು ಸಿಬಿಐ ಬಂಧಿಸಿತ್ತು. ಬಳಿಕ 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ವಿನಯ್ ಕುಲಕರ್ಣಿ ಅವರ ಮೇಲೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪ ಹೊರಿಸಲಾಗಿತ್ತು. ಜಾಮೀನು ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದರಿಂದ ವಿನಯ್ ಕುಲಕರ್ಣಿ ಜಾಮೀನು ರದ್ದುಗೊಳಿಸುವಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.
ನ್ಯಾಯಾಲಯವು ಮನವಿಯನ್ನು ಸ್ವೀಕರಿಸಿ ಅವರ ಜಾಮೀನನ್ನು ರದ್ದುಗೊಳಿಸಿತ್ತು. 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಕ್ಷೇತ್ರದ ಹೊರಗಿದ್ದರೂ ಗೆಲುವು ಸಾಧಿಸುವ ಮೂಲಕ ವಿನಯ ಕುಲಕರ್ಣಿ ಇತಿಹಾಸ ನಿರ್ಮಿಸಿದ್ದರು. ಎರಡು ವರ್ಷಗಳ ಕಾಲ ಕ್ಷೇತ್ರದ ಹೊರಗಿದ್ದುಕೊಂಡೇ ಆಡಳಿತ ಮಾಡಿದ್ದ ಅವರು, ಇದೀಗ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ.
ಯೋಗೀಶ್ಗೌಡ ಸಹೋದರ ಸಿಬಿಐ ತನಿಖೆಗೆ ಒತ್ತಾಯ:
ಯೋಗೀಶ್ಗೌಡ ಹತ್ಯೆ ಪ್ರಕರಣವನ್ನು ಪೊಲೀಸರ ತನಿಖೆಯ ಬದಲು ಸಿಬಿಐ ತನಿಖೆಗೆ ನೀಡಬೇಕು ಎಂದು ಯೋಗೀಶ್ಗೌಡ ಸಹೋದರ ಗುರುನಾಥ್ ಗೌಡ ಆಗ್ರಹಿಸಿದ್ದರು. ಬಿಜೆಪಿ ನಾಯಕರ ಬೆಂಬಲದೊಂದಿಗೆ ಒತ್ತಾಯ ಮಾಡಿದರೂ, ಆಗಿನ ಕಾಂಗ್ರೆಸ್ ಸರ್ಕಾರ ಇದಕ್ಕೆ ಒಪ್ಪಿರಲಿಲ್ಲ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಕರಣವು ಅಂತಿಮವಾಗಿ ಸಿಬಿಐಗೆ ನೀಡಲು ತೀರ್ಮಾನಿಸಲಾಯಿತು.
ಸೆಪ್ಟೆಂಬರ್ 24, 2019 ರಂದು ಸಿಬಿಐ ತನಿಖೆಗೆ ಕೈಗೆತ್ತಿಕೊಂಡಿತು. ತನಿಖೆ ನಡೆಸಿದ ಸಿಬಿಐ ಎಂಟು ಆರೋಪಿಗಳನ್ನು ಗುರುತಿಸಿ ಬಂಧಿಸಿತು. 2020 ರ ಮೇ 20ರಂದು ಆರೋಪಪಟ್ಟಿ ಸಲ್ಲಿಸಿತು. ತನಿಖೆಯಲ್ಲಿ ವಿನಯ್ ಕುಲಕರ್ಣಿ ಪಾತ್ರ ಇರುವ ಬಗ್ಗೆ ಖಚಿತಗೊಂಡ ಬಳಿಕ 2020 ರ ನವೆಂಬರ್ 5, ರಂದು ಬಂಧಿಸಿತು. ವಿನಯ್ ಕುಲಕರ್ಣಿ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಿದಾಗಿನಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಮೊದಲು ಕೆಳ ನ್ಯಾಯಾಲಯ ಮತ್ತು ನಂತರ ಹೈಕೋರ್ಟ್ ಫೆಬ್ರವರಿ 2021 ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪೂರಕ ಆರೋಪಪಟ್ಟಿಯನ್ನು ಸಲ್ಲಿಸಿತ್ತು.
ಸಾಕ್ಷಿಗಳಿಗೆ ಹಣದ ಆಮಿಷೆ:
ವಿನಯ್ ಕುಲಕರ್ಣಿ ಸಾಕ್ಷಿಗಳಿಗೆ 1 ಲಕ್ಷ ರೂಪಾಯಿ ಹಣದ ಆಮಿಷ ಒಡ್ಡಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ರದ್ದುಪಡಿಸುವಂತೆ ಮನವಿ ಮಾಡಿತ್ತು. ಯೋಗೀಶ್ ಗೌಡ ಅವರ ಕೊಲೆ 2016ರ ಜೂನ್ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿತ್ತು. ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿತ್ತು. ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದಾರೆ. ವಿನಯ್ ಕುಲಕರ್ಣಿ, ಬಸವರಾಜ ಮುತ್ತಗಿ, ಶಿವಾನಂದ ಶ್ರೀಶೈಲ ಬಿರಾದಾರ, ಚಂದ್ರಶೇಖರ್ ಇತರರು ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಗುರುನಾಥ ಗೌಡ ಎಂಬುವವರು ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದರು. ವಿನಯ್ ಕುಲಕರ್ಣಿ ಮತ್ತು ಮೃತ ಯೋಗೇಶ್ ಗೌಡ ನಡುವೆ ಒಂದು ಬಾರಿ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಗಲಾಟೆ ನಡೆದಿತ್ತು. ಅದಾದ ಕೆಲವೇ ದಿನಗಳಲ್ಲಿ ಹತ್ಯೆಯಾಗಿದೆ ಎಂದು ತಿಳಿಸಿದ್ದರು. ಈ ನಡುವೆ, ಮೊದಲ ಆರೋಪಿ ಬಸವರಾಜ ಮುತ್ತಗಿ ತಪ್ಪೊಪ್ಪಿಕೊಂಡು, ನ್ಯಾಯಾಲಯದ ಮುಂದೆ ಹಲವು ಮಾಹಿತಿಗಳನ್ನು ತಿಳಿಸಿದ್ದರು.