ಹಗುರ ಮಾತುಗಳ ಬಗ್ಗೆ ಕಮಲ್‌ ಹಾಸನ್‌ಗೆ ಮನದಟ್ಟು ಮಾಡಿಕೊಡಿ; ಶಿವರಾಜ್‌ಕುಮಾರ್‌ಗೆ ಸಚಿವ ತಂಗಡಗಿ ಮನವಿ

ಕಮಲ್ ಹಾಸನ್ ಚಿತ್ರ ʼಥಗ್ ಲೈಪ್ʼ ಚಿತ್ರ ಬಿಡುಗಡೆ ನಿಷೇಧಕ್ಕೆ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದೇನೆ. ತಾವು ಕೂಡ ಅದೇ ಮಾದರಿಯಲ್ಲಿ ಹೆಜ್ಜೆ ಇಡುವ ಮೂಲಕ ಧ್ವನಿ ಎತ್ತಬೇಕು ಎಂದು ತಂಗಡಗಿ ಅವರು ಶಿವಣ್ಣಗೆ ಮನವಿ ಮಾಡಿದ್ದಾರೆ.;

Update: 2025-05-29 09:26 GMT

ಬೆಂಗಳೂರಿನಲ್ಲಿ ಜೀ ಕನ್ನಡ ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸಚಿವ ಶಿವರಾಜ್‌ ತಂಗಡಗಿ ಅವರು ನಟ ಶಿವರಾಜ್‌ಕುಮಾರ್‌ ಅವರಿಗೆ ಕಮಲ್‌ ವಿವಾದದ ಇತ್ಯರ್ಥಕ್ಕೆ ಮನವಿ ಮಾಡಿದರು

ಕನ್ನಡ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕಮಲ್ ಹಾಸನ್ ಅವರಿಗೆ ನೀವು ಮನವಿ ಮಾಡುತ್ತೀರೋ, ಪತ್ರ ಬರೆಯುತ್ತಿರೋ ಗೊತ್ತಿಲ್ಲ. ಅವರ ಹಗುರ ಮಾತುಗಳ ಬಗ್ಗೆ ಮನದಟ್ಟು ಮಾಡಿಕೊಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ನಟ ಶಿವರಾಜ್‌ಕುಮಾರ್‌ ಎದುರಲ್ಲೇ ವಿನಂತಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀವು ಹಿರಿಯ ನಟರು. ರಾಜ್‌ಕುಮಾರ್ ಅವರ ಸ್ಥಾನದಲ್ಲಿ ನಿಮ್ಮನ್ನು ಕಾಣುತ್ತೇವೆ. ಕಮಲ್ ಹಾಸನ್ ಅವರು ನಿಮ್ಮ ಮಾತನ್ನು ಪ್ರೀತಿಯಿಂದ ಕೇಳುತ್ತಾರೆ. ಕನ್ನಡ ಭಾಷೆ ಕುರಿತು ಆಡಿರುವ ಮಾತುಗಳ ಬಗ್ಗೆ ಅವರಿಗೆ (ಕಮಲ್ ಹಾಸನ್) ಮನದಟ್ಟು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕನ್ನಡ ಭಾಷೆ ವಿಚಾರವಾಗಿ ಹಗುರವಾಗಿ ಮಾತನಾಡುವುದನ್ನು ನಾವು ಸಹಿಸುವುದಿಲ್ಲ. ಹಗುರ ಮಾತುಗಳನ್ನು ನಾವು ಪ್ರಶ್ನಿಸದೇ ಹೋದರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೀವು ಚಿತ್ರರಂಗದಲ್ಲಿ ದೊಡ್ಡಣ್ಣನಂತೆ ಇದ್ದೀರಿ, ಕರ್ನಾಟಕಕ್ಕೆ ನಿಮ್ಮ ಕುಟುಂಬದ ಕೊಡುಗೆ ದೊಡ್ಡದಿದೆ. ಕಮಲ್ ಹಾಸನ್ ಕೂಡ ಮೇರು ನಟರು. ಆದರೆ, ತಮಿಳಿನಿಂದ ಕನ್ನಡ ಭಾಷೆ ಹುಟ್ಟಿಲ್ಲ. ಎರಡೂ ಭಾಷೆಗಳು ಜೊತೆಯಾಗಿಯೇ ಉದಯಿಸಿವೆ. ಕಮಲ್ ಹಾಸನ್ ಅವರು ಒಂದು ಭಾಷೆಯನ್ನು ಮೆಚ್ಚಿಸಲು ಹೋಗಿ ಇನ್ನೊಂದು ಭಾಷೆಯನ್ನು ಹೀಗಳೆದಿರುವುದು ಸರಿ ಕಾಣುವ ವಿಷಯವಲ್ಲ. ಕನ್ನಡಿಗರು ಇದನ್ನು ಈಗಾಗಲೇ ಖಂಡಿಸಿದ್ದಾರೆ ಎಂದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ನಾನು ಕೂಡ ಕಮಲ್ ಹಾಸನ್ ಅವರ ಚಿತ್ರ ಥಗ್ ಲೈಪ್ ಚಿತ್ರ ಬಿಡುಗಡೆಗೆ ನಿಷೇಧ ಹೇರಲು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದೇನೆ. ತಾವು ಕೂಡ ಅದೇ ಮಾದರಿಯಲ್ಲಿ ಹೆಜ್ಜೆ ಇಡಬೇಕು. ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಕೋರಿದ್ದಾರೆ.

ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಮಾತನಾಡುವ ವೇಳೆ ನೀವು ಅಲ್ಲಿದ್ದಿರಿ, ನೀವು ಸೌಮ್ಯ ಸ್ವಭಾವದವರು. ಕಮಲ್ ಹಾಸನ್ ಮಾತುಗಳ ಕುರಿತು ಪೂರ್ಣ ಮಾಹಿತಿ ಆ ಸಮಯದಲ್ಲಿ ನಿಮಗೆ ಇಲ್ಲದಿರಬಹುದು. ಆದರೆ, ಮಾಹಿತಿ ತಿಳಿದ ಬಳಿಕ ಅದನ್ನು ಉಗ್ರವಾಗಿ ಖಂಡಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.

Tags:    

Similar News