ಮೆಟ್ರೋ ನಿಲ್ದಾಣದಲ್ಲಿ ಅಮುಲ್‌ಗೆ ಅವಕಾಶ; ಕೆಎಂಎಫ್‌ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಕರ್ನಾಟಕದ ಹೆಮ್ಮೆ ಎನಿಸಿರುವ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ನೀಡದಿರುವುದು ಟೀಕೆಗೆ ಗುರಿಯಾಗಿದೆ.;

Update: 2025-06-19 07:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆ ತೆರೆಯಲು ಅವಕಾಶ ನೀಡಿರುವ ಸರ್ಕಾರದ ನಿರ್ಧಾರ ಹಾಗೂ ಜಾಗತಿಕ ಟೆಂಡರ್‌ನಲ್ಲಿ ಭಾಗವಹಿಸದ ಕೆಎಂಎಫ್‌ ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 

ಕರ್ನಾಟಕದ ಹೆಮ್ಮೆ ಎನಿಸಿರುವ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ನೀಡದಿರುವುದು ಟೀಕೆಗೆ ಗುರಿಯಾಗಿದೆ. ಬಿಎಂಆರ್‌ಸಿಎಲ್‌ ಕರೆದಿದ್ದ ಜಾಗತಿಕ ಟೆಂಡರ್‌ನಲ್ಲಿ ಭಾಗವಹಿಸದ ಕಾರಣಕ್ಕೆ ಕೆಎಂಎಫ್‌ಗೆ ಅವಕಾಶ ಸಿಕ್ಕಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿಕೆಗೂ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಕೆಎಂಎಫ್‌ ಸಂಸ್ಥೆಯನ್ನು ಟೆಂಡರ್‌ ಭಾಗವಹಿಸಲು ಸೂಚಿಸದೇ ಅವಕಾಶ ಕೈ ಚೆಲ್ಲಿದ ಬಳಿಕ ದೂರುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ನಂದಿನಿಗೆ ಮೊದಲ ಆದ್ಯತೆ ಸಿಗಲಿ

ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ಗೆ ರಾಜ್ಯದಲ್ಲಿ ಮೊದಲ ಆದ್ಯತೆ ನೀಡಬೇಕಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಅಸಮಾಧಾನ ವ್ಯಕ್ತಪಡಿಸಿರುವುದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ.

ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು , "ನಂದಿನಿ ನಮ್ಮ ರಾಜ್ಯದ ಹೆಮ್ಮೆಯ ಬ್ರ್ಯಾಂಡ್‌. ಇಂತಹ ಸ್ಥಿತಿಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಮೊದಲ ಅವಕಾಶವನ್ನು ನಂದಿನಿ ಉತ್ಪನ್ನಗಳ ಮಾರಾಟಕ್ಕೆ ನೀಡಬೇಕಾಗಿತ್ತು. ಆದರೆ, ಟೆಂಡರ್‌ ಪಡೆಯಿತೆಂಬ ಕಾರಣಕ್ಕೆ ಹೊರರಾಜ್ಯದ ಉತ್ಪನ್ನಕ್ಕೆ ಆದ್ಯತೆ ನೀಡಿರುವುದು ಸರಿಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಜಾಗತಿಕ ಟೆಂಡರ್‌ ಪ್ರಕ್ರಿಯೆ ಮುಗಿದ ಬಳಿಕವೂ ನಂದಿನಿ ಉತ್ಪನ್ನಗಳಿಗೆ ಅವಕಾಶವನ್ನು ಮುಕ್ತವಾಗಿರಿಸಬೇಕಿತ್ತು.  ಅಮೂಲ್ ಹೆಚ್ಚು ಹಣ ಕೊಡುತ್ತಿದೆ ಎಂದು ಹೋದರೆ ನಮ್ಮದೇ ಆದ ಬ್ರ್ಯಾಂಡ್‌ ಆಗಿರುವ ನಂದಿನಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳಲಿದೆ. ಹಾಗಾಗಿ ನಂದಿನಿ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡುವುದು ಅತ್ಯಂತ ಅಗತ್ಯ," ಎಂದು ತಿಳಿಸಿದ್ದಾರೆ.  

ಈ ವಿಚಾರ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಗಮನಕ್ಕೂ ಬಂದಿದೆ. ಡಿ.ಕೆ ಶಿವಕುಮಾರ್ ಅವರೇ ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವುದರಿಂದ ಕೆಎಂಎಫ್ ಮಳಿಗೆಗಳ ಸಂಖ್ಯೆ ಎಷ್ಟಿರಬೇಕು ಎಂಬ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ  

ಕೆಎಂಎಫ್ ನಿಕಟಪೂರ್ವ ಅಧ್ಯಕ್ಷ ಭೀಮಾನಾಯ್ಕ್‌ ಮಾತನಾಡಿ, “ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ಸ್ಥಾಪನೆಗೆ ಕರೆದಿದ್ದ ಜಾಗತಿಕ ಟೆಂಡರ್‌ನಲ್ಲಿ ಕೆಎಂಎಫ್‌ ಪಾಲ್ಗೊಳ್ಳಬೇಕಾಗಿತ್ತು. ಆದರೆ, ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ನಂದಿನಿಯ ಲಾಭದ ಮಾರ್ಗಕ್ಕೆ ತೊಂದರೆ ಉಂಟು ಮಾಡಲಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿವಾದ ತೀವ್ರ ಸ್ವರೂಪ ಪಡೆದುಕೊಂಡ ನಂತರ ಅಮೂಲ್‌ಗೆ 10 ನಿಲ್ದಾಣಗಳು ಮತ್ತು ನಂದಿನಿಗೆ 10 ನಿಲ್ದಾಣಗಳು ನೀಡುವ ಕುರಿತಂತೆ ಮಾತುಕತೆ ನಡೆಯುತ್ತಿದೆ ಎಂದು ಭೀಮಾನಾಯ್ಕ್‌ ಮಾಹಿತಿ ನೀಡಿದ್ದಾರೆ.

ಬುಧವಾರವಷ್ಟೇ ಮಾಧ್ಯಮದವರೊಂದಿಗೆ ಮಾತನಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಬಿಎಂಆರ್‌ಸಿಎಲ್‌ ಕರೆದಿದ್ದ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸಿರಲಿಲ್ಲ. ಹಾಗಾಗಿ ಅದು ಮಳಿಗೆ ತೆರೆಯುವ ಅವಕಾಶ ಕಳೆದುಕೊಂಡಿದೆ. ಆದಾಗ್ಯೂ, ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳನ್ನು ತೆರೆಯುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದರು.

Tags:    

Similar News