ಮಂಗಳೂರಿನ ಕುಡುಪು ಗುಂಪು ಹತ್ಯೆ: ಮಾನವ ಹಕ್ಕುಗಳ ವರದಿಯಲ್ಲಿ ಭಯದ ವಾತಾವರಣ, ಸುಳ್ಳು ಕಥನ ಪತ್ತೆ
ಭಯದ ವಾತಾವರಣ, ಭಯದ ವಾತಾವರಣ, ಸರ್ಕಾರ ಪ್ರಾಯೋಜಿತ ಸುಳ್ಳು ಕಥನ ಸೇರಿದಂಥೆ ಹಲವು ಪ್ರಮುಖ ಅಂಶಗಳು ಸತ್ಯಶೋಧನೆಯಲ್ಲಿ ಪತ್ತೆಯಾಗಿದೆ.;
ಸುಮಾರು ಎರಡು ತಿಂಗಳ ಹಿಂದೆ ಮಂಗಳೂರಿನ ಕುಡುಪು ಗ್ರಾಮದಲ್ಲಿ ನಡೆದ ಗುಂಪು ಹತ್ಯೆಯ ಕುರಿತು ಮಾನವ ಹಕ್ಕುಗಳ ಸಂಘಟನೆಗಳು ನಡೆಸಿದ ಸತ್ಯಶೋಧನಾ ವರದಿಯಲ್ಲಿ ಆಘಾತಕಾರಿ ಅಂಶಗಳು ಬಯಲಾಗಿವೆ. ಭಯದ ವಾತಾವರಣ, ಸಾರ್ವಜನಿಕರ ಉದಾಸೀನತೆ ಮತ್ತು ಸರ್ಕಾರ ಪ್ರಾಯೋಜಿತ ಸುಳ್ಳು ಕಥನ ಸೇರಿದಂತೆ ಹಲವು ಗಂಭೀರ ಲೋಪಗಳನ್ನು ವರದಿ ಎತ್ತಿ ತೋರಿಸಿದೆ.
ಗುಂಪು ಹತ್ಯೆಯಲ್ಲಿ ಸಾವಿಗೀಡಾದ ಮೊಹಮ್ಮದ್ ಅಶ್ರಪ್ ಸಾವಿನ ಘಟನೆ ಸಂಬಂಧಿಸಿದಂತೆ ಪಿಯುಸಿಎಲ್ (PUCL), ಎಸಿಸಿಆರ್ (ACCR) ಮತ್ತು ಎಐಎಲ್ಎಜೆ (AILAJ) ಮಾನವ ಹಕ್ಕುಗಳ ಸಂಘಟನೆಗಳು ಜಂಟಿಯಾಗಿ ಸತ್ಯಶೋಧನೆ ನಡೆಸಿದ್ದವು. ಈ ಸಂದರ್ಭದಲ್ಲಿ ಪತ್ತೆಯಾದ ಪ್ರಮುಖ ಅಂಶಗಳು ಹೀಗಿವೆ:
ವರದಿಯ ಪ್ರಮುಖ ಅಂಶಗಳು
* ಸಾರ್ವಜನಿಕರ ಉದಾಸೀನತೆ: ಘಟನೆ ನಡೆದಾಗ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಎಫ್ಐಆರ್ನಲ್ಲಿ 20 ಜನರ ಹೆಸರು ಉಲ್ಲೇಖಿಸಲಾಗಿದ್ದರೂ, ಯಾರೊಬ್ಬರೂ ಹತ್ಯೆಯನ್ನು ತಡೆಯಲು ಅಥವಾ ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸದಿರುವುದು ಆತಂಕಕಾರಿಯಾಗಿದೆ.
* ಭಯದ ವಾತಾವರಣ: ಘಟನೆ ನಡೆದ ಸ್ಥಳದಲ್ಲಿದ್ದವರೇ ಗುಂಪು ಹತ್ಯೆಯ ಬಗ್ಗೆ ಸ್ಥಳೀಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಆದರೆ, ಸತ್ಯಶೋಧನಾ ತಂಡದೊಂದಿಗೆ ಮಾತನಾಡಲು ಭಯಪಟ್ಟಿದ್ದರು. ಇದು ಆ ಪ್ರದೇಶದಲ್ಲಿ ದ್ವೇಷದ ವಾತಾವರಣ ಎಷ್ಟು ವ್ಯಾಪಕವಾಗಿದೆ ಮತ್ತು ಸತ್ಯ ಹೇಳಿದರೆ ತೊಂದರೆಯಾಗಬಹುದು ಎಂಬ ಭಯ ಜನರಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
* ಸರ್ಕಾರ ಪ್ರಾಯೋಜಿತ ಸುಳ್ಳು ಕಥನ: ನೆಲದ ಕಾನೂನುಗಳನ್ನು ಗಾಳಿಗೆ ತೂರಿ, ಅಶ್ರಫ್ ಅವರು 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದಾರೆ ಎಂದು ಎಲ್ಲಿಯೂ ವರದಿಯಾಗದ ವದಂತಿಗಳನ್ನು ಮೊದಲು ಪ್ರಸಾರ ಮಾಡಿದ್ದು ಗೃಹ ಸಚಿವರಾಗಿದ್ದಾರೆ. ನಂತರದಲ್ಲಿ ಗೃಹ ಸಚಿವರ ಹೇಳಿಕೆಗಳನ್ನೇ ಮಾಧ್ಯಮಗಳು ವ್ಯಾಪಕವಾಗಿ ಹರಡಿದ್ದು ಆತಂಕಕಾರಿಯಾಗಿದೆ.
* ಪೊಲೀಸರ ಪಾತ್ರದ ಬಗ್ಗೆ ಅನುಮಾನ: ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಪೊಲೀಸ್ ಕರ್ತವ್ಯದಲ್ಲಿ ಲೋಪ ತೋರಿದ್ದಾರೆ ಎಂಬ ಅನುಮಾನಗಳು ವರದಿಯಲ್ಲಿ ವ್ಯಕ್ತವಾಗಿವೆ. ಘಟನೆಯಲ್ಲಿ ಅವರೂ ಕೈಜೋಡಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಸ್ಥಳದಲ್ಲಿದ್ದರೂ ತಕ್ಷಣವೇ ಎಫ್ಐಆರ್ ದಾಖಲಿಸದೇ ಇರುವ ಬಗ್ಗೆಯೂ ಸಂಶಯಗಳನ್ನು ಸೃಷ್ಟಿಸುತ್ತದೆ.
ತನಿಖೆಯಲ್ಲಿ ಗುರುತಿಸಲಾದ ಗಂಭೀರ ವೈಫಲ್ಯಗಳು:
1. ಎಫ್ಐಆರ್ ದಾಖಲಿಸುವಲ್ಲಿ ವಿಳಂಬ: ಸಾವು ಸಂಭವಿಸಿರುವುದು ಹಿಂಸೆಯ ಕಾರಣಕ್ಕೆ ಎಂಬುದನ್ನು ಅರಿತಿದ್ದರೂ, ಪೊಲೀಸರು ಮೊದಲು ಎಫ್ಐಆರ್ ಬದಲು ಅಸಹಜ ಸಾವು ವರದಿ (UDR) ದಾಖಲಿಸಿದರು. ಎಫ್ಐಆರ್ ದಾಖಲಿಸಲು ವಿಳಂಬವಾಗಿದ್ದು, ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಲು ಮತ್ತು ಗುಂಪಿನ ಸದಸ್ಯರು ತಪ್ಪಿಸಿಕೊಳ್ಳಲು ಸಮಯ ನೀಡಿತು. ಕಾನೂನುಗಳ ಅನ್ವಯ ಯು.ಡಿ.ಆರ್ ಅನ್ನು ಮ್ಯಾಜಿಸ್ಟ್ರೇಟ್ಗೆ ಕಳುಹಿಸಬೇಕಾಗಿದ್ದರೂ ಅದನ್ನು ಕಳುಹಿಸಲಾಗಿಲ್ಲ.
2. ಸಂತ್ರಸ್ತರನ್ನೇ ದೂಷಿಸುವ ಯತ್ನ: ಗೃಹ ಸಚಿವರು, ಅಶ್ರಫ್ ಅವರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ ಎಂಬ ವದಂತಿಯನ್ನೂ ಹರಡಿದರು. ಕೆಲವು ಮಾಧ್ಯಮಗಳು ಇದನ್ನು ದೊಡ್ಡದಾಗಿ ಬಿತ್ತರಿಸಿದವು. ಇದರಿಂದಾಗಿ ಪ್ರಕರಣದ ಬಗ್ಗೆ ಚರ್ಚೆಯಾಗುವುದಕ್ಕಿಂತಲೂ ಹೆಚ್ಚು ಸಂತ್ರಸ್ತರದ್ದೇ ತಪ್ಪು ಎಂಬುದಾಗಿ ಬಿಂಬಿಸಲು ಪ್ರಯತ್ನಗಳು ನಡೆದವು. ಇದು ಅಶ್ರಫ್ ಅವರ ಕುಟುಂಬವನ್ನು ಆಘಾತಕ್ಕೆ ದೂಡಿತು.
3. ಅಧಿಕಾರಿಗಳ ಹೊಣೆಗಾರಿಕೆ ಪ್ರಶ್ನೆ: ಅಮಾನತುಗೊಂಡ ಇನ್ಸ್ಪೆಕ್ಟರ್ ಘಟನೆ ನಡೆದ ಸ್ಥಳದಲ್ಲಿದ್ದರು. ಹೀಗಿರುವಾಗ ಹಿರಿಯ ಅಧಿಕಾರಿಗಳಿಗೆ ಗುಂಪು ಹತ್ಯೆಯ ಬಗ್ಗೆ ತಿಳಿದಿರಲಿಲ್ಲ ಎಂಬ ಪೊಲೀಸರ ಹೇಳಿಕೆ ಅನುಮಾನಾಸ್ಪದವಾಗಿದೆ. ಹಿರಿಯ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿದ್ದರೂ ಕೆಳ ಹಂತದ ಅಧಿಕಾರಿಗಳು ಮಾಹಿತಿ ನೀಡಲಿಲ್ಲ ಎಂಬುದು ಪೊಲೀಸ್ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
4. ಪ್ರಭಾವಿಗಳ ರಕ್ಷಣೆ ಆರೋಪ: ಬಿಜೆಪಿಯ ಮಾಜಿ ಕಾರ್ಪೊರೇಟರ್ ಅವರ ಪತಿ ರವೀಂದ್ರ ನಾಯಕ್ ಕ್ರಿಕೆಟ್ ಪಂದ್ಯದ ಪ್ರಮುಖ ಆಯೋಜಕರಲ್ಲಿ ಒಬ್ಬರಾಗಿದ್ದು, ಘಟನಾ ಸ್ಥಳದಲ್ಲಿ ಹಾಜರಿದ್ದರು ಎಂದು ಹೇಳಲಾಗಿದೆ. ಇಷ್ಟಾದರೂ ಅವರ ಹೆಸರನ್ನು ಎಫ್ಐಆರ್ನಲ್ಲಿ ಸೇರಿಸಿಲ್ಲ ಎಂಬುದನ್ನು ಗಮನಿಸಿದರೆ, ಪೊಲೀಸರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂದು ಸ್ಪಷ್ಟವಾಗುತ್ತದೆ.