'ಜನರೊಂದಿಗೆ ಜನತಾದಳ' ಅಭಿಯಾನಕ್ಕೆ ಚಾಲನೆ; ಮಿಸ್ಡ್ ಕಾಲ್ ಅಭಿಯಾನ, ಲೋಗೋ ಬಿಡುಗಡೆ
ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ. ದೇವೇಗೌಡ. ಮೊರಾರ್ಜಿ ದೇಸಾಯಿ ಅವರು ಪಕ್ಷವನ್ನು ತಮಗೆ ಒಪ್ಪಿಸಿದ್ದು ಜೆಡಿಎಸ್ ಉಳಿಯಲಿದೆ ಎಂದು ನುಡಿದರು.;
'ಜನರೊಂದಿಗೆ ಜನತಾದಳ' ಎಂಬ ವಿನೂತನ ಅಭಿಯಾನಕ್ಕೆ ಜಾತ್ಯತೀತ ಜನತಾದಳ ಭಾನುವಾರ ಚಾಲನೆ ನೀಡಿದೆ. ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಚಾಲನೆ ನೀಡಿ, ಹೊಸ ಲೋಗೋ ಬಿಡುಗಡೆ ಮಾಡಿದರು.
ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ. ದೇವೇಗೌಡ. ಮೊರಾರ್ಜಿ ದೇಸಾಯಿ ಅವರು ಪಕ್ಷವನ್ನು ತಮಗೆ ಒಪ್ಪಿಸಿದ್ದು ಜೆಡಿಎಸ್ ಉಳಿಯಲಿದೆ ಎಂದು ದೃಢವಾಗಿ ನುಡಿದರು. ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಹೋರಾಟವನ್ನು ಶ್ಲಾಘಿಸಿದ ಅವರು, "ನಿಖಿಲ್ ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋಲು ಕಂಡಿದ್ದರೂ ದೃತಿಗೆಟ್ಟಿಲ್ಲ. ಸೋಲೇ ಗೆಲುವಿನ ಮೆಟ್ಟಿಲು. ಚನ್ನಪಟ್ಟಣ ಸೋಲಿನ ಬಗ್ಗೆ ವಿಮರ್ಶೆ ಬೇಡ" ಎಂದರು. 93 ವರ್ಷ ವಯಸ್ಸಾದರೂ ತಮ್ಮ ಬುದ್ಧಿ ಚುರುಕಾಗಿದೆ ಎಂದು ಹೇಳಿದ ದೇವೇಗೌಡರು, ಕಾರ್ಯಕರ್ತರು ಕರೆದರೆ ಎಲ್ಲಿಗೂ ಬರಲು ಸಿದ್ಧ ಎಂದೂ ತಿಳಿಸಿದರು. ಕುಟುಂಬದ ಪಕ್ಷ ಎಂಬ ಟೀಕೆಗಳಿಗೂ ಅವರು ತಿರುಗೇಟು ನೀಡಿದರು.
ಕಾಂಗ್ರೆಸ್ಗೆ ಟಾಂಗ್, ಮೋದಿಗೆ ಮೆಚ್ಚುಗೆ
ಕಾಂಗ್ರೆಸ್ ಆಡಳಿತದಿಂದ ಜನರಿಗೆ ಆದ ನೋವು ಎಲ್ಲರಿಗೂ ತಿಳಿದಿದೆ ಎಂದು ಕಾಂಗ್ರೆಸ್ ವಿರುದ್ಧ ದೇವೇಗೌಡರು ವಾಗ್ದಾಳಿ ನಡೆಸಿದರು. "ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಲ್ಲಿ ಆಡಳಿತದಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ದೊಡ್ಡ ನಾಯಕರಾಗಿದ್ದು, ಅವರಿಗೆ ಎದುರಾಗಿ ನಿಲ್ಲುವ ವ್ಯಕ್ತಿತ್ವ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ಜೆಡಿಎಸ್ ರಾಷ್ಟ್ರೀಯ ಪಕ್ಷದೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಮೋದಿಯ ವಿಶ್ವಾಸವನ್ನು ಗಳಿಸಿದೆ" ಎಂದು ಬಣ್ಣಿಸಿದರು.
ಗೃಹ ಲಕ್ಷ್ಮೀ ಯೋಜನೆಗೆ ಟೀಕೆ
ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಗ್ಯಾರಂಟಿ ಯೋಜನೆಯನ್ನು ಟೀಕಿಸಿದ ದೇವೇಗೌಡರು, "ಕೇವಲ 2,000 ರೂ. ಗ್ಯಾರಂಟಿ ಘೋಷಣೆ ಮಾಡಿ ಜನ ಮನಸೋತು ಮತ ಹಾಕಿದ್ದಾರೆ. ಇದರಿಂದ ರಾಜ್ಯದ ಪ್ರಗತಿಗೆ ಪೆಟ್ಟು ಬಿದ್ದಿದೆ" ಎಂದು ದೂರಿದರು.
ಪಕ್ಷದ ಮರುಸಂಘಟನೆಗೆ ನಿಖಿಲ್ ಯೋಜನೆ
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ಮರುಸಂಘಟನೆಗೆ ವಿಸ್ತೃತ ಯೋಜನೆಯನ್ನು ಘೋಷಿಸಿದರು. ಅವರು 58 ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು, ಕಾರ್ಯಕರ್ತರ ಮನೆಯಲ್ಲಿ ವಾಸ ಮಾಡುವ ಯೋಜನೆಯನ್ನು ಪ್ರಕಟಿಸಿದರು. ಪ್ರತಿ ಬೂತ್ನಲ್ಲಿ 10 ಜನರ ತಂಡ ರಚಿಸಿ, ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದರು. ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಬೃಹತ್ ಸಮಾವೇಶಗಳನ್ನು ಆಯೋಜಿಸಿ, ಮುಂದಿನ ಸರ್ಕಾರದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ನೀಡುವ ಖಾತರಿಯನ್ನು ನಿಖಿಲ್ ಘೋಷಿಸಿದರು.
ಕುಮಾರಸ್ವಾಮಿ ಸಾಧನೆಗೆ ನಿಖಿಲ್ ಮೆಚ್ಚುಗೆ
ತಂದೆ ಎಚ್.ಡಿ. ಕುಮಾರಸ್ವಾಮಿ ಅವರ ಸಾಧನೆಗಳನ್ನು ನಿಖಿಲ್ ಕೊಂಡಾಡಿದರು. ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ, ಲಾಟರಿ ನಿಷೇಧದಂತಹ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಎಂದು ನೆನಪಿಸಿಕೊಂಡರು. ವೈಜಾಗ್ ಸ್ಟೀಲ್ ಪ್ಲಾಂಟ್ಗೆ 1,000 ಕೋಟಿ ಮತ್ತು ರಾಜ್ಯಕ್ಕೆ 4,500 ಇವಿ ಬಸ್ಗಳನ್ನು ಒದಗಿಸಿದ್ದಾರೆ ಎಂದ ಅವರು, ಮೂರು ಬಾರಿ ಹಾರ್ಟ್ ಶಸ್ತ್ರಚಿಕಿತ್ಸೆಗೆ ಒಳಗಾದರೂ ಕಾರ್ಯಕರ್ತರ ಕರೆಗೆ ಓಗೊಡುತ್ತಾರೆ ಎಂದು ತಿಳಿಸಿದರು.
ಪಕ್ಷದ ಭವಿಷ್ಯಕ್ಕೆ ಕರೆ
"ಕಾಲಬೈರವೇಶ್ವರನ ಆಶೀರ್ವಾದದಿಂದ ಪಕ್ಷಕ್ಕೆ ಹೊಸ ಯುಗ ಆರಂಭವಾಗಿದೆ. ಎಲ್ಲ ಕಾರ್ಯಕರ್ತರು ಛಲದಿಂದ ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕು" ಎಂದು ನಿಖಿಲ್ ಕರೆ ನೀಡಿದರು. "ಪಕ್ಷ ಬಿಟ್ಟವರು ಜೆಡಿಎಸ್ನಿಂದ ಬೆಳೆದು, ಅಧಿಕಾರ ಅನುಭವಿಸಿದ್ದಾರೆ. ಅವರು ತಮ್ಮ ಮನಸ್ಸಾಕ್ಷಿಗೆ ಪ್ರಶ್ನೆ ಕೇಳಿಕೊಳ್ಳಲಿ" ಎಂದು ದೇವೇಗೌಡರು ಈ ಸಂದರ್ಭದಲ್ಲಿ ತಿರುಗೇಟು ನೀಡಿದರು.