ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನ ಪ್ರಕ್ರಿಯೆ ; 495 ಎಕರೆ ಕೈ ಬಿಡಲು ಸರ್ಕಾರ ನಿರ್ಧಾರ

ಚನ್ನರಾಯಪಟ್ಟಣ ಹೋಬಳಿಯಲ್ಲಿ ಒಟ್ಟು 1777ಎಕರೆ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಸ್ಥಾಪನೆಯ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ 2021ರ ಆ.27ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.;

Update: 2025-06-24 11:14 GMT

ಕೆ.ಎಚ್‌.ಮುನಿಯಪ್ಪ ಹಾಗೂ ಎಂ.ಬಿ. ಪಾಟೀಲ್‌   

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಮೂರು ಗ್ರಾಮಗಳಲ್ಲಿ ಒಟ್ಟು 495 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಇಲ್ಲಿನ 13 ಗ್ರಾಮಗಳ ರೈತರು 1180 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 

ಚನ್ನರಾಯಪಟ್ಟಣ ಹೋಬಳಿಯಲ್ಲಿ ಒಟ್ಟು 1777ಎಕರೆ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಸ್ಥಾಪನೆಯ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ 2021ರ ಆ.27ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದಾದ ಮೇಲೆ 2022ರ ಫೆ.15ರಂದು ಈ ಸಂಬಂಧ ಆದೇಶ ಹೊರಡಿಸಿತ್ತು. ಆದರೆ, ಭೂಸ್ವಾಧೀನ ವಿರೋಧಿಸಿ ರೈತರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದರು.

ʼದೇವನಹಳ್ಳಿ ಚಲೋʼ ಬೆನ್ನಲ್ಲೇ ತೀರ್ಮಾನ

ಭೂಸ್ವಾಧೀನ ವಿರೋಧಿಸಿ ಜೂ.25ರಂದು (ನಾಳೆ) ಚನ್ನರಾಯಪಟ್ಟಣ ಹಾಗೂ ಹೊಸಕೋಟೆಯ ನಂದಗುಡಿ ರೈತರು ದೇವನಹಳ್ಳಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರೈತರ ಹೋರಾಟದ ಬಿಸಿಯ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ನಡೆಸಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರದ ನಿರ್ಧಾರ ಪ್ರಕಟಿಸಿದ್ದಾರೆ. 

ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಗುರುತಿಸಿರುವ 1771 ಎಕರೆ ಪೈಕಿ ನೀರಾವರಿ ಸೌಲಭ್ಯ ಹೊಂದಿರುವ ಮೂರು ಗ್ರಾಮಗಳ 495ಎಕರೆ ಕೈಬಿಡಲು ನಿರ್ಧರಿಸಲಾಗಿದೆ. ಜತೆಗೆ ಮುಂಬರುವ ದಿನಗಳಲ್ಲಿ ಚನ್ನರಾಯಪಟ್ಟಣ ಹೋಬಳಿಯಲ್ಲಿ ಯಾವುದೇ ರೀತಿ ಭೂಸ್ವಾಧೀನ ನಡೆಸದಿರಲು ತೀರ್ಮಾನಿಸಿದೆ ಎಂದು ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ. 

ನೀರಾವರಿ ಜಮೀನು‌ ಮತ್ತು ಹಳ್ಳಿಗೆ ಸಮೀಪವಿರುವ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದೇವೆ. ಈ ತೀರ್ಮಾನವನ್ನು ರೈತರ ಗಮನಕ್ಕೆ ತಂದು ಹೋರಾಟ ಕೈಬಿಡಲು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ. 

ಸರ್ಕಾರದ ನಿರ್ಧಾರ ಒಪ್ಪದ ರೈತರು

ಭೂಸ್ವಾಧೀನಕ್ಕೆ ಅಧಿಸೂಚಿಸಿರುವ ಜಾಗದಲ್ಲಿ 495 ಎಕರೆ ಭೂಮಿ ಕೈ ಬಿಡುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಈ ಹಿಂದೆಯೇ ರೈತರ ಮುಂದಿಟ್ಟಿತ್ತು. ಆದರೆ, ಇದನ್ನು ಒಪ್ಪದ ರೈತರು ಯಾವುದೇ ಕಾರಣಕ್ಕೂ ಹೋಬಳಿಯಲ್ಲಿ ಒಂದಿಂಚು ಭೂಮಿ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಈಗ ರಾಜ್ಯ ಸರ್ಕಾರ ಅದೇ ಹಳೆಯ ಪ್ರಸ್ತಾವವನ್ನು ಮತ್ತೊಮ್ಮೆ ರೈತರ ಮುಂದಿಟ್ಟಿದೆ. ಜೊತೆಗೆ ಇನ್ನು ಮುಂದೆ ಹೋಬಳಿಯಲ್ಲಿ ಯಾವುದೇ ಭೂಸ್ವಾಧೀನ ನಡೆಸುವುದಿಲ್ಲ ಎಂದು ಭರವಸೆ ನೀಡಿದೆ. 

ಕಳೆದ ವರ್ಷ ರೈತರ ನಿಯೋಗದೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದರು. ಭೂಸ್ವಾಧೀ ತನಕ್ಕೆ ಈಗಾಗಲೇ ಪ್ರಕ್ರಿಯೆ ಆರಂಭಿಸಿರುವುದರಿಂದ  ಧೀನ ಪ್ರಕ್ರಿಯೆ ಕೈ ಬಿಡುವ ಬದಲು   ಸಭೆ ನಡೆಸಿದಾಗಲೂ ಅಧಿಸೂಚನೆ ಹೊರಡಿಸಿರುವ ಜಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ. ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆ ಹಿಂಪಡೆಯಲಾಗದು ಎಂದು ಸಿಎಂ ಹೇಳಿದ್ದರು. ಆದಾಗ್ಯೂ, ಕಾನೂನು ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಮೂರು ಗ್ರಾಮಗಳ ಜಮೀನು ವಾಪಸ್‌

ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಗಾಗಿ ಸ್ವಾಧೀನಕ್ಕೆ ಉದ್ದೇಶಿಸಿದ್ದ ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಟಿ.ತೆಲ್ಲೋಹಳ್ಳಿ ಗ್ರಾಮಗಳ ಒಟ್ಟು 495 ಎಕರೆ ಜಮೀನಿನ ಸ್ವಾಧೀನ ಪ್ರಕ್ರಿಯೆ ಕೈ ಬಿಡುತ್ತೇವೆ. ಅಲ್ಲದೇ ಇನ್ನು ಮುಂದೆ ಹೋಬಳಿಯಲ್ಲಿ ಯಾವುದೇ ಹೊಸ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದಿಲ್ಲ. ಹಾಗಾಗಿ ರೈತರು ತಮ್ಮ ಹೋರಾಟ ಕೈಬಿಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮನವಿ ಮಾಡಿದ್ದಾರೆ.

ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿಯಲ್ಲಿ ನೀರಾವರಿ, ಕೃಷಿ ಮತ್ತು ಜನವಸತಿ ಪರಿಗಣಿಸಿ ಕ್ರಮವಾಗಿ 231.23 ಎಕರೆ, 185.18 ಎಕರೆ ಮತ್ತು 78.21 ಎಕರೆಗೆ ಸ್ವಾಧೀನ ಪ್ರಕ್ರಿಯೆಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.

ಉಳಿದ ಹತ್ತು ಗ್ರಾಮಗಳಾದ ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮುದ್ದೇನಹಳ್ಳಿ ಮತ್ತು ಹಾಡ್ಯಾಳ ವ್ಯಾಪ್ತಿಯಲ್ಲಿನ 1,232 ಎಕರೆ ಭೂಸ್ವಾಧೀನ ಯಥಾಸ್ಥಿತಿಯಲ್ಲಿ ನಡೆಯಲಿದೆ. ಯಾವುದೇ ಬದಲಾವಣೆ ಇರುವುದಿಲ್ಲ. ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಜಿಲ್ಲಾಧಿಕಾರಿ ಸೂಕ್ತ ಪರಿಹಾರ ಮೊತ್ತ ನಿಗದಿಪಡಿಸಲಿದ್ದಾರೆ. ಸಂತ್ರಸ್ತ ರೈತರು ಆಸಕ್ತಿ ವ್ಯಕ್ತಪಡಿಸಿದರೆ 1 ಎಕರೆ ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ 10,771 ಚದರ ಅಡಿ ಜಮೀನು ಬೇಕಾದರೂ ಕೊಡಲು ಅವಕಾಶವಿದೆ. ಈ ಜಾಗವನ್ನು ರೈತರು ವಾಣಿಜ್ಯೋದ್ದೇಶಗಳಿಗಾಗಿ ಬಳಸಿಕೊಳ್ಳಬಹುದು ಎಂದು ವಿವರಿಸಿದ್ದಾರೆ.

ಪ್ರತಿಭಟನೆ ಕೈಬಿಡಿ: ಕೆಎಚ್‌ ಮುನಿಯಪ್ಪ ಮನವಿ

ರೈತರು ಸರ್ಕಾರದ ತೀರ್ಮಾನವನ್ನು ಗೌರವಿಸಿ, ಪ್ರತಿಭಟನೆ ಕೈಬಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌. ಮುನಿಯಪ್ಪ ಮನವಿ ಮಾಡಿದರು.

ರಾಜ್ಯದಲ್ಲಿ ಎಲ್ಲಿಯೂ ಸ್ವಾಧೀನದಿಂದ ಜಮೀನು ಕೈಬಿಟ್ಟ ನಿರ್ದಶನ ಇಲ್ಲ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ ಅವರು ರೈತರ ಪರ ತೀರ್ಮಾನ ತೆಗೆದುಕೊಂಡಿದ್ದು ಅದನ್ನು ಮನ್ನಿಸಿ ಪ್ರತಿಭಟನೆ ಕೈಬಿಡಬೇಕು‌ ಎಂದು ಹೇಳಿದರು.

Tags:    

Similar News