ದುಡ್ಡು ಮಾಡೋಕೆ ಎಲೆಕ್ಷನ್ ಅಡ್ಡ ಬರಲ್ಲ, ಜನರ ಕೆಲಸ ಮಾಡೋಕೆ ಅಡ್ಡ ಬರುತ್ತಾ? ಎಸಿಗಳಿಗೆ ಸಚಿವರ ತರಾಟೆ

Update: 2024-08-23 12:39 GMT

ʻʻದುಡ್ಡು ಮಾಡೋಕೆ ಎಲೆಕ್ಷನ್ ಅಡ್ಡ ಬರಲ್ಲ, ಆದರೆ ಜನರ ಕೆಲಸ ಮಾಡೋಕೆ ಮಾತ್ರ ಎಲೆಕ್ಷನ್ ಅಡ್ಡ ಬರುತ್ತಾ..? ಕೋರ್ಟ್‌ನಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಅಂದ್ರೆ ಎಲೆಕ್ಷನ್‌ ಕೆಲಸ ಇತ್ತು ಎಂದು ಸಾಬೂಬು ಹೇಳುತ್ತೀರಿʼʼ ಎಂದು ಉಪ ವಿಭಾಗಾಧಿಕಾರಿಗಳನ್ನು (ಎಸಿ) ಕಂದಾಯ ಸಚಿವ ಕೃಷ್ಣ ಬೈರೇಗೌಡ ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಗಳ ಉಪ-ವಿಭಾಧಿಕಾರಿಗಳು ಹಾಗೂ ವಲಯ ಆಯುಕ್ತರ ಜೊತೆ ಸಭೆ ನಡೆಸಿದ ಸಚಿವರು, ಅಧಿಕಾರಿಗಳ ವಿಳಂಬ ಧೋರಣೆ ಮತ್ತು ಉದಾಸೀನ ಪ್ರವೃತ್ತಿಯ ಬಗ್ಗೆ ತರಾಟೆಗೆ ತೆಗೆದುಕೊಂಡರು. ಈ ವೇಳೆ ಎಸಿ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳಿಸದೆ ಬಾಕಿ ಉಳಿದಿರುವ ಪ್ರಕರಣಗಳ ಕುರಿತು ಚರ್ಚಿಸಿದರು.

ಬೆಂಗಳೂರು ದಕ್ಷಿಣ ಎಸಿ ರಜನಿಕಾಂತ್ ಬಗ್ಗೆ ಮಾತನಾಡಿ, ʻʻನಿಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳನ್ನು ಬಿಟ್ಟು ಬೇರೆ ವ್ಯಾಪ್ತಿಯ ಪ್ರಕರಣ ಯಾಕೆ ತೆಗೆದುಕೊಂಡಿದ್ದೀರಾ? 66% ವ್ಯಾಪ್ತಿ ಮೀರಿ ಪ್ರಕರಣಗಳನ್ನು ತೆಗೆದುಕೊಳ್ಳುವ ಹಾಗಿಲ್ಲ. ಈ ಪ್ರಕರಣಗಳನ್ನು ತೆಗೆದುಕೊಳ್ಳಲು ಅವರ ಬಳಿ ಎಷ್ಟು ಹಣ ತೆಗೆದುಕೊಂಡಿದ್ದೀರಾ? ಒಳ ಒಪ್ಪಂದ ಎನಿದೆ? ಹಣ ಮಾಡೋಕೆ ಎಸಿ ಆಗಿದ್ದೀರಾ?" ಎಂದು ನೇರವಾಗಿ ಪ್ರಶ್ನಿಸಿದರು.

ʻʻಬೆಂಗಳೂರು ಎಸಿಗಳು ಅಂದರೆ ಬರೀ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? ನಿಮ್ಮ ಕೆಲಸ ಬಗ್ಗೆ ಇಡೀ ದೇಶ ಮಾತಾಡುತ್ತಿದೆ. ನೀವೇನು ಕಾನೂನು ಒಳಗೆ ಇರೋರಾ? ಕಾನೂನಿಗಿಂತ ಮೇಲೆ ಇರೋರಾ?ʼʼ ಎಂದು ಅಧಿಕಾರಿಯ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಮಧುಗಿರಿ ಎಸಿ ವಿರುದ್ಧವೂ ಸಚಿವರು ಗರಂ ಆಗಿ ಮಾತನಾಡಿದ್ದು, ʻʻಹಲವು ವರ್ಷಗಳಿಂದ ಎಸಿ ನ್ಯಾಯಾಲಯಗಳಿಗೆ ಅಲೆದಾಡಿ ಜನ ಬಸವಳಿಸಿದ್ದಾರೆ. ಹೀಗಾಗಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ನಾವು ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಓಡಾಡಿ ಸಭೆ ನಡೆಸಿ ಎಲ್ಲಾ ಅಧಿಕಾರಿಗಳಿಗೂ ಗುರಿ ನಿಗದಿ ಮಾಡಲಾಗಿದೆ. ಆದರೆ, ಕಳೆದ ಮಾರ್ಚ್‌ನಿಂದ ಪ್ರಕರಣ ವಿಲೇವಾರಿ ಕೆಲಸ ಮತ್ತೆ ನಿಂತ ನೀರಾಗಿದೆʼʼ ಎಂದು ತೀವ್ರ ಅಸಮಾಧಾನ ಹೊರಹಾಕಿದರು.

ʻʻಮಾರ್ಚ್‌ ತಿಂಗಳವರೆಗೆ ಎಸಿ ನ್ಯಾಯಾಲಯಗಳಲ್ಲಿ ತಕರಾರು ಪ್ರಕರಣಗಳ ವಿಲೇವಾರಿ ವೇಗವಾಗಿಯೇ ಇತ್ತು. ಆದರೆ, ತದನಂತರ ಈ ವೇಗ ಇಳಿಮುಖವಾಗಿ ಅಧಿಕಾರಿಗಳು ಮತ್ತೆ ಹಳೆಯ ರೀತಿಯೇ ವರ್ತಿಸುತ್ತಿದ್ದಾರೆ. ಯಾಕೆ ಹೀಗೆ..? ಎಂದು ಪ್ರಶ್ನಿಸಿದರೆ ಚುನಾವಣೆ ನೆಪ ಹೇಳುತ್ತಾರೆ. ಕಿವಿ ಮೇಲೆ ದಾಸವಾಳ ಹೂ ಕಾಣುತ್ತಿದೆಯಾ? ಮರ್ಯಾದೆ ಕೊಟ್ಟರೆ ಮರ್ಯಾದೆ ತಗೊಳ್ಳೋಕೆ ನಿಮಗೆ ಯೋಗ್ಯತೆಯಿಲ್ಲ. ಅಂತಹ ಅಯೋಗ್ಯರು ನೀವು. ದುಡ್ಡು ಮಾಡೋಕೆ ಎಲೆಕ್ಷನ್ ಅಡ್ಡ ಬರಲ್ಲ, ಆದರೆ ಜನರ ಕೆಲಸ ಮಾಡೋಕೆ ಮಾತ್ರ ಎಲೆಕ್ಷನ್ ಅಡ್ಡ ಬರುತ್ತಾ?ʼʼ ಎಂದು ಕಿಡಿ ಕಾರಿದರು.

ಪ್ರಕರಣಗಳ ವಿಲೇವಾರಿ ಮಾಡದ ಮಧುಗಿರಿ ಎಸಿ ಶಿವಪ್ಪ ಹಾಗೂ ತುಮಕೂರು ಎಸಿ ಗೌರವ್ ಶೆಟ್ಟಿ ವಿರುದ್ಧವೂ ಕೆಂಡಾಮಂಡಲರಾದರು. ತುಮಕೂರು ಜಿಲ್ಲೆಯ ಎಸಿ ಕೋರ್ಟ್‌ನಲ್ಲಿ ಕಳೆದ ಮಾರ್ಚ್‌ನಲ್ಲಿ 1373 ಪ್ರಕರಣಗಳು ದಾಖಲಾಗಿದ್ದರೆ, ಮಧುಗಿರಿಯಲ್ಲಿ 898 ಪ್ರಕರಣಗಳು ದಾಖಲಾಗಿದೆ. ಆದರೆ, ಇಷ್ಟೂ ಪ್ರಕರಣಗಳ ಪೈಕಿ ಕಳೆದ ಐದು ತಿಂಗಳಿನಿಂದ ಯಾವೊಂದು ಪ್ರಕರಣದಲ್ಲೂ ಮಧುಗಿರಿ ಉಪ-ವಿಭಾಗಾಧಿಕಾರಿ ಶಿವಪ್ಪ ಹಾಗೂ ತುಮಕೂರು ಉಪ-ವಿಭಾಗಾಧಿಕಾರಿ ಗೌರವ್‌ ಶೆಟ್ಟಿ ಯಾವುದೇ ಕ್ರಮ ಜರುಗಿಸಿಲ್ಲ. ಇವರ ವಿರುದ್ಧವೂ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ಅಸಮಾಧಾನ ಹೊರಹಾಕಿದರು. ಅಲ್ಲದೆ, ಎಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗದ ಅಧಿಕಾರಿಗಳಿಗೆ ನೋಟೀಸ್‌ ಜಾರಿಗೊಳಿಸಿ ಕಠಿಣ ಕ್ರಮ ಜರುಗಿಸುವಂತೆಯೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸೂಚಿಸಿದರು.

ರಾಜ್ಯಾದ್ಯಂತ ಎಸಿ ನ್ಯಾಯಾಲಯಗಳಲ್ಲಿ ಒಟ್ಟಾರೆ 36,430 ಪ್ರಕರಣಗಳು ಬಾಕಿ ಇವೆ. ಈ ಪೈಕಿ ಅತ್ಯಧಿಕ ಬೆಂಗಳೂರು ಉತ್ತರ ವಲಯದಲ್ಲಿ 5419 ಹಾಗೂ ಬೆಂ.ದಕ್ಷಿಣ ವಲಯದಲ್ಲಿ 4351 ಪ್ರಕರಣಗಳು ಬಾಕಿ ಇವೆ. ಅಲ್ಲದೆ, ಈ ಎರಡೂ ವಿಭಾಗದಲ್ಲಿ ಅಧಿಕಾರಿಗಳು ಶೇ.65ಕ್ಕಿಂತ ಹೆಚ್ಚು ತನ್ನ ಕಾರ್ಯಕ್ಷೇತ್ರದ ಹೊರಗಿನ ಪ್ರಕರಣಗಳನ್ನೂ ದಾಖಲಿಸಿಕೊಂಡಿದ್ದಾರೆ. ಪ್ರಕರಣಗಳ ಇತ್ಯರ್ಥವೂ ಆಮೆ ಗತಿಯಲ್ಲಿ ಸಾಗಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಸಚಿವರ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Tags:    

Similar News