KIAL | ಲಾಭದ ಜತೆಗೆ ಶ್ರೇಷ್ಠತೆ ಮೆರೆದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಆರ್ಥಿಕ ಕಾರ್ಯಕ್ಷಮತೆ ಜೊತೆಗೆ 2025 ರಲ್ಲಿ ಅನೇಕ ಪ್ರತಿಷ್ಠಿತ ಜಾಗತಿಕ ಪುರಸ್ಕಾರಗಳಿಗೆ ಭಾಜನವಾಗಿದೆ. ಆ ಮೂಲಕ ವಿಶ್ವದ ಸುಸ್ಥಿರ ಮತ್ತು ಸುರಕ್ಷಿತ ವಿಮಾನ ನಿಲ್ದಾಣ ಕಾರ್ಯಾಚರಣೆಗಳ ಪೈಕಿ ಅಗ್ರಸ್ಥಾನ ಕಾಯ್ದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.;
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ದಾಖಲೆಯ ಲಾಭ ಗಳಿಸಿದೆ. ಇದು ವಿಮಾನ ನಿಲ್ದಾಣದ ಬೆಳವಣಿಗೆ, ಸುಸ್ಥಿರತೆಯ ಉಪಕ್ರಮಗಳು ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ಬಿಐಎಎಲ್ ಮೂಲಗಳು ತಿಳಿಸಿವೆ.
ಆರ್ಥಿಕ ಕಾರ್ಯಕ್ಷಮತೆ ಜೊತೆಗೆ 2025 ರಲ್ಲಿ ಅನೇಕ ಪ್ರತಿಷ್ಠಿತ ಜಾಗತಿಕ ಪುರಸ್ಕಾರಗಳಿಗೆ ಭಾಜನವಾಗಿದೆ. ಆ ಮೂಲಕ ವಿಶ್ವದ ಸುಸ್ಥಿರ ಮತ್ತು ಸುರಕ್ಷಿತ ವಿಮಾನ ನಿಲ್ದಾಣ ಕಾರ್ಯಾಚರಣೆಗಳ ಪೈಕಿ ಅಗ್ರಸ್ಥಾನ ಕಾಯ್ದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಕೌನ್ಸಿಲ್( ACI) ನ ವಿಮಾನ ನಿಲ್ದಾಣಗಳ ಕಾರ್ಬನ್ ಮಾನ್ಯತೆ ಕಾರ್ಯಕ್ರಮದಡಿ 5 ಶ್ರೇಣಿಯ ಮಾನ್ಯತೆ ಸಾಧಿಸಿದ ಏಷ್ಯಾದ ಮೊದಲ ವಿಮಾನ ನಿಲ್ದಾಣ ಎಂಬ ಖ್ಯಾತಿಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.
ಅನಿಲ ಹೊರಸೂಸುವಿಕೆಯಲ್ಲಿ ಶೇ 95.6 ರಷ್ಟು ಕಡಿತ ದಾಖಲಿಸಿದೆ. 2030 ರ ವೇಳೆಗೆ ಶೂನ್ಯ ಅನಿಲ ಹೊರಸೂಸುವಿಕೆ ಗುರಿಯನ್ನು ಏಳು ವರ್ಷಗಳ ಮುಂಚಿತವಾಗಿಯೇ ಸಾಧಿಸಿದೆ ಎಂದು ಹೇಳಿದೆ.
ಪರಿಸರ ಸಂರಕ್ಷಣೆಯ ವಿಭಾಗದಲ್ಲಿ ACI ನ ಗ್ರೀನ್ ಏರ್ಪೋರ್ಟ್ ರಿಕಗ್ನಿಷನ್ 2025ರಲ್ಲಿ ಸಿಲ್ವರ್ ಪ್ರಶಸ್ತಿ ಗಳಿಸಿದೆ. ಇದು ನಿರಂತರ ನಾಲ್ಕನೇ ವರ್ಷವೂ ಪ್ರಶಸ್ತಿಗೆ ಭಾಜನವಾಗಿದೆ. ಈ ಹಿಂದೆ ಕಾರ್ಬನ್ ನಿರ್ವಹಣೆ (2022) ಹಾಗೂ ಪ್ಲಾಸ್ಟಿಕ್ ಸಂಚಲನತೆಯ (2023) ವಿಭಾಗಗಳಲ್ಲಿ ಪ್ಲಾಟಿನಮ್ ಪ್ರಶಸ್ತಿ ಪಡೆದಿತ್ತು.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ವಿಮಾನ ನಿಲ್ದಾಣ ಪ್ರಾಧಿಕಾರದ (ಬಿಐಎಎಲ್) ಮಂಡಳಿ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿರುವ ಪ್ರಾಧಿಕಾರದ ಅಧ್ಯಕ್ಷೆ ಶಾಲಿನಿ ರಜನೀಶ್ ಅವರು ವಿಮಾನ ನಿಲ್ದಾಣದ ಸಾಧನೆಯನ್ನು ಶ್ಲಾಘಿಸಿದ್ದಾರೆ.