ಕೆಲಸದ ಅವಧಿ 10 ಗಂಟೆ |ಇನ್ಫಿ ‘ನಾರಾಯಣ ಮೂರ್ತಿ ಅವರ್ಸ್’ ; ಜಾಲತಾಣದಲ್ಲಿ ನೆಟ್ಟಿಗರ ವ್ಯಂಗ್ಯ
ಕೆಲಸದ ಅವಧಿ ಹೆಚ್ಚಿಸುವ ಕುರಿತು ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಭರಿತ ಚರ್ಚೆಗೆ ನಾಂದಿ ಹಾಡಿದೆ. ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕೆಂಬ ಅಭಿಪ್ರಾಯವನ್ನು ನಾರಾಯಣಮೂರ್ತಿ ವ್ಯಕ್ತಪಡಿಸಿದ್ದರು.;
ನಾರಾಯಣ ಮೂರ್ತಿ
ಖಾಸಗಿ ವಲಯದಲ್ಲಿ ದೈನಂದಿನ ಕೆಲಸದ ಅವಧಿಯನ್ನು 10 ಗಂಟೆಗೆ ವಿಸ್ತರಿಸುವ ರಾಜ್ಯ ಸರ್ಕಾರದ ಪ್ರಸ್ತಾವದ ಬೆನ್ನಲ್ಲೇ ವಾರಕ್ಕೆ 70ಗಂಟೆಗಳ ಕೆಲಸ ಮಾಡಬೇಕೆಂದಿದ್ದ ಇನ್ಫೊಸಿಸ್ ಸ್ಥಾಪಕ ನಾರಾಯಣಮೂರ್ತಿ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಭರಿತ ಚರ್ಚೆಗೆ ನಾಂದಿ ಹಾಡಿದೆ.
ಭಾರತದ ಯುವಕರಿಗೆ ವಾರಕ್ಕೆ 70 ಗಂಟೆಗಳ ಕೆಲಸ ಮಾಡಬೇಕು ಎಂಬ ನಾರಾಯಣ ಮೂರ್ತಿ ಅವರ ಹೇಳಿಕೆ ಉಲ್ಲೇಖಿಸಿ ‘ನಾರಾಯಣ ಮೂರ್ತಿ ಅವರ್ಸ್’ ಎಂದು ಗೇಲಿ ಮಾಡುತ್ತಿದ್ದಾರೆ.
ಬಳಕೆದಾರರೊಬ್ಬರು ಮಾಡಿರುವ ಪೋಸ್ಟ್ನಲ್ಲಿ, "ಕರ್ನಾಟಕ ಸರ್ಕಾರವು ಉದ್ದೇಶಿತ ತಿದ್ದುಪಡಿ ಮಸೂದೆಯನ್ನು ʼನಾರಾಯಣ ಮೂರ್ತಿ ಅವರ್ಸ್ʼ ಎಂದು ಕರೆಯಬೇಕು" ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಬ್ಬ ಬಳಕೆದಾರ " ತಿದ್ದುಪಡಿ ಕಾಯ್ದೆ ಪ್ರಸ್ತಾಪಿಸಿದ ಮಂಡಳಿಯಲ್ಲಿ ನಾರಾಯಣ ಮೂರ್ತಿ ಕೂಡ ಇದ್ದಿರಬೇಕು" ಎಂದು ಟೀಕೆ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಮೀಮ್ಸ್, GIF ಗಳು ಮತ್ತು ವ್ಯಂಗ್ಯಾತ್ಮಕ ಪೋಸ್ಟ್ಗಳಿಂದ ತುಂಬಿ ತುಳುಕುತ್ತಿವೆ. ಅದರಲ್ಲಿ "ನಾರಾಯಣ ಮೂರ್ತಿ ಸೈಡ್ ಮೇ ನಾಚ್ ರಹಾ ಹೇ (ಮೂರ್ತಿ ಸೈಡ್ಲೈನ್ನಲ್ಲಿ ನೃತ್ಯ ಮಾಡುತ್ತಿರಬೇಕು)" ಎಂದು ಬರೆದಿರುವ ಪೋಸ್ಟ್ ಹೆಚ್ಚು ವೈರಲ್ ಆಗುತ್ತಿದೆ.
ಸರ್ಕಾರದ ಕರಡು ಪ್ರಸ್ತಾವ ಅಂಗೀಕಾರಗೊಂಡರೆ, ಕೆಲಸದ ಅವಧಿ ಹೆಚ್ಚಿಸಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಸೇರಲಿದೆ. ಈಗಾಗಲೇ ಛತ್ತೀಸ್ಗಢ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಜಾರಿ ಮಾಡಲಾಗಿದೆ.
ಏನಿದು ತಿದ್ದುಪಡಿ ಕಾಯ್ದೆ?
ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1961 ಮತ್ತು 1963 ರ ಸಂಬಂಧಿತ ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಪಾಲುದಾರರೊಂದಿಗೆ ಕಾರ್ಮಿಕ ಇಲಾಖೆ ಸಭೆ ನಡೆಸಿದ್ದು, ಅಭಿಪ್ರಾಯ ಸಂಗ್ರಹಿಸಿದೆ.
ಒಂದು ವೇಳೆ ಕಾಯ್ದೆ ಜಾರಿಗೆ ಬಂದರೆ ಅಂಗಡಿ ಹಾಗೂ ವಾಣಿಜ್ಯ ಉದ್ದೇಶ ಹೊಂದಿರುವ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರು ನಿತ್ಯ 10 ತಾಸು ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ, ಕೆಲಸದ ಅವಧಿ 8-9 ಗಂಟೆ ಇದೆ.
ಪ್ರಸ್ತಾವಿತ ತಿದ್ದುಪಡಿಯು ಹೆಚ್ಚುವರಿ ಕೆಲಸದ ಮೇಲಿನ ಮೂರು ತಿಂಗಳ ಮಿತಿಯನ್ನು 50 ಗಂಟೆಗಳಿಂದ 144 ಗಂಟೆಗಳಿಗೆ ಹೆಚ್ಚಿಸಲಿದೆ. ಆದರೆ, ಸರ್ಕಾರ ನಿರ್ಧಾರಕ್ಕೆ ಕಾರ್ಮಿಕ ಸಂಘಗಳು ಮತ್ತು ನಾಗರಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಮುಂದೆ ಏನಾಗುತ್ತದೆ?
ಕಾಯ್ದೆ ತಿದ್ದುಪಡಿ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಸಾರ್ವಜನಿಕ ಹಿತಾಸಕ್ತಿ ಮತ್ತು ಸಂಸ್ಥೆಗಳಿಂದ ಅಭಿಪ್ರಾಯ ಸ್ವೀಕರಿಸಿ, ಅಂತಿಮವಾಗಿ ಆದೇಶ ಹೊರಡಿಸುವ ಸಾಧ್ಯತೆ ಇದೆ. ಆ ಬಳಿಕ ಈ ಪ್ರಸ್ತಾವನೆಯು ಕಾನೂನಾಗಲಿದೆ.