ಕಮಲ್ ಹಾಸನ್ ಭಾಷಾ ವಿವಾದ | ಎರಡು ದಿನದಲ್ಲಿ ಕ್ಷಮೆ ಕೇಳದಿದ್ದರೆ ರಾಜ್ಯದಲ್ಲಿ ʼಥಗ್ ಲೈಫ್ʼ ಚಿತ್ರ ಬಿಡುಗಡೆಗೆ ನಿಷೇಧ
ಕನ್ನಡ ಭಾಷೆಯನ್ನು ನಿಂದಿಸಿರುವ ಕಮಲ್ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದೆ. ಕನ್ನಡ ಪರ ಸಂಘಟನೆಗಳ ಬೇಡಿಕೆಯಂತೆ ಕಮಲ್ ಅವರ ಚಿತ್ರ ಬಿಡುಗಡೆಗೆ ನಿಷೇಧ ಹೇರಲಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಇಂತಹ ವಿಚಾರಗಳಲ್ಲಿ ಯಾವಾಗಲೂ ಕನ್ನಡ ಪರ ಸಂಘಟನೆಗಳ ಜೊತೆಯಲ್ಲೇ ಇರಲಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.;
ಕನ್ನಡ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕಮಲ್ ಹಾಸನ್ ಅವರು ಮೇ 30 ರೊಳಗೆ ಕ್ಷಮಾಪಣೆ ಕೇಳದಿದ್ದರೆ ರಾಜ್ಯದಲ್ಲಿ ಅವರ ನಟನೆಯ ಬಹು ನಿರೀಕ್ಷಿತ ಚಿತ್ರ ʼಥಗ್ ಲೈಫ್ʼ ಬಿಡುಗಡೆ ನಿರ್ಬಂಧ ಹೇರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ.
ನಟ ಶಿವರಾಜ್ಕುಮಾರ್ ಅನುಪಸ್ಥಿತಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಕನ್ನಡ ಪರ ಸಂಘಟನೆಗಳ ಆಪೇಕ್ಷೆಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಮಲ್ ಹಾಸನ್ ಅವರಿಗೆ ಎರಡು ದಿನ ಗಡುವು ನೀಡಲಾಗಿದೆ. ಮೇ 30 ರೊಳಗೆ ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ʼಥಗ್ ಆಫ್ ಲೈಫ್ʼ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ನಟ ಕಮಲ್ ಹಾಸನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಕಮಲ್ ಅವರು ಕ್ಷಮೆಯಾಚಿಸದ ಹೊರತು ಚಿತ್ರ ಬಿಡುಗಡೆ ಮಾಡದಂತೆ ಈಗಾಗಲೇ ರಾಜ್ಯದಲ್ಲಿ ಚಿತ್ರ ವಿತರಕರು ಹಾಗೂ ಚಿತ್ರಮಂದಿರ ಮಾಲೀಕರಿಗೆ ಸೂಚಿಸಲಾಗಿದೆ. ಕಮಲ್ ಹಾಸನ್ ಅವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆಗೆ ದಕ್ಷಿಣ ಭಾರತ ಚಿತ್ರರಂಗ ವಾಣಿಜ್ಯ ಮಂಡಳಿ ವತಿಯಿಂದಲೂ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ನರಸಿಂಹಲು ತಿಳಿಸಿದ್ದಾರೆ.
ಕನ್ನಡ ಭಾಷೆಯನ್ನು ನಿಂದಿಸಿರುವ ಕಮಲ್ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದೆ. ಕನ್ನಡ ಪರ ಸಂಘಟನೆಗಳ ಬೇಡಿಕೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಕನ್ನಡದ ಅಸ್ಮಿತೆಯೇ ನಮಗೆ ಮುಖ್ಯ. ಚಲನಚಿತ್ರ ವಾಣಿಜ್ಯ ಮಂಡಳಿ ಇಂತಹ ವಿಚಾರಗಳಲ್ಲಿ ಯಾವಾಗಲೂ ಕನ್ನಡ ಪರ ಸಂಘಟನೆಗಳ ಜೊತೆಯಲ್ಲೇ ಇರಲಿದೆ ಎಂದು ಹೇಳಿದ್ದಾರೆ.
ವಾಣಿಜ್ಯ ಮಂಡಳಿ ಸಭೆಯ ಬಳಿಕ ಮಾತನಾಡಿದ ರಾಜಕುಮಾರ್ ಅಭಿಯಾನಿಗಳ ಒಕ್ಕೂಟ ಅಧ್ಯಕ್ಷ ಸಾ.ರಾ.ಗೋವಿಂದು ಅವರು, ಕಮಲ್ ಹಾಸನ್ ನಾಳೆಯೊಳಗೆ ಕ್ಷಮೆಯಾಚಿಸದಿದ್ದರೆ, ಥಗ್ ಲೈಫ್ ಚಿತ್ರ ಬಿಡುಗಡೆಗೆ ಬಿಡುವುದಿಲ್ಲ. ಕಮಲ್ ಹಾಸನ್ ಬಗ್ಗೆ ನಮಗೆ ಯಾವುದೇ ಸಹಾನುಭೂತಿ ಇಲ್ಲ. ಇಂದು ಅಥವಾ ನಾಳೆಯೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ನಮ್ಮ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಜಯಮಾಲಾ ಮಾತನಾಡಿ, "ಭಾಷಾ ವಿವಾದ ಉಂಟಾದಾಗ ಎಲ್ಲಾ ಕನ್ನಡಿಗರು ಒಂದಾಗಬೇಕು. ಅದು ನಮ್ಮ ಕರ್ತವ್ಯ. ಕಮಲ್ ಹಾಸನ್ ತಿಳಿದೋ ಅಥವಾ ತಿಳಿಯದೆಯೋ ಮಾತನಾಡಿದ್ದರೂ ಅವರ ಹೇಳಿಕೆ ತಪ್ಪಾಗಿದೆ. ಕನ್ನಡ ತಮಿಳಿನಿಂದ ಹುಟ್ಟಿಲ್ಲ. ಅವರು ತಮ್ಮ ತಪ್ಪಿಗೆ ಸಮರ್ಥನೆ ನೀಡುವ ಬದಲು ವಿಷಾದ ವ್ಯಕ್ತಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.