ಜಾತಿಗಣತಿ | ಸಮೀಕ್ಷೆ ನಡೆಸುವ ಸಿಬ್ಬಂದಿಗೆ ನವರಾತ್ರಿ ಹಬ್ಬ ಇಲ್ಲವೇ ; ಕೇಂದ್ರ ಸಚಿವ ಎಚ್ಡಿಕೆ ಪ್ರಶ್ನೆ
ಸಮೀಕ್ಷೆ ಬಗ್ಗೆ ನಮಗೇನೂ ತಕರಾರಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಕಾಲ ಕಾಲಕ್ಕೆ ಸಮೀಕ್ಷೆ ನಡೆಯಬೇಕು, ನಡೆಯಲಿ. ಆದರೆ, ಕೇವಲ ಹದಿನೈದು ದಿನದಲ್ಲಿ 6.5 ಕೋಟಿ ಜನರ ಸಮೀಕ್ಷೆ ಸಾಧ್ಯವೇ ಎಂಬುದು ನಮ್ಮ ಪ್ರಶ್ನೆಯಾಗಿದೆ.
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ
ಆತುರಾತುರವಾಗಿ ನಡೆಸಲು ಉದ್ದೇಶಿಸಿರುವ ಶೈಕ್ಷಣಿಕ-ಸಾಮಾಜಿಕ ಸಮೀಕ್ಷೆಯನ್ನು ಮುಂದೂಡಬೇಕು, ಇಲ್ಲವೇ ಕನಿಷ್ಠ ಮೂರು ತಿಂಗಳು ವಿಸ್ತರಣೆ ಮಾಡಬೇಕು. ನವರಾತ್ರಿ ಸಂದರ್ಭದಲ್ಲಿ ಸಮೀಕ್ಷೆ ನಡೆಸುವ ಸಿಬ್ಬಂದಿಗೆ ಹಬ್ಬ ಇಲ್ಲವೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಮೀಕ್ಷೆ ಬಗ್ಗೆ ನಮಗೇನೂ ತಕರಾರಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಕಾಲ ಕಾಲಕ್ಕೆ ಸಮೀಕ್ಷೆ ನಡೆಯಬೇಕು, ನಡೆಯಲಿ. ಆದರೆ, ಕೇವಲ ಹದಿನೈದು ದಿನದಲ್ಲಿ 6.5 ಕೋಟಿ ಜನರ ಸಮೀಕ್ಷೆ ಸಾಧ್ಯವೇ ಎಂಬುದು ನಮ್ಮ ಪ್ರಶ್ನೆಯಾಗಿದೆ. ಈಗ ಪವಿತ್ರ ನಾಡಹಬ್ಬ, ನವರಾತ್ರಿಗಳ ಸಂದರ್ಭ. ಸಮೀಕ್ಷೆ ನಡೆಸುವ ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಸರ್ಕಾರಿ ಅಧಿಕಾರಿ -ಸಿಬ್ಬಂದಿಗೆ ಹಬ್ಬ, ಆಚರಣೆ, ಸಂಭ್ರಮ ಇರುವುದಿಲ್ಲವೇ?, ನಿಮಗೆ ಮಾತ್ರವೇ ನವರಾತ್ರಿಯೇ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ನವದುರ್ಗೆಯರನ್ನು ಪೂಜಿಸುವ ಈ ಕಾಲದಲ್ಲಿ ಮಹಿಳೆಯರಿಗೆ ತಮ್ಮ ಮನೆಗಳಲ್ಲಿ ನೆರವೇರಿಸಲೇಬೇಕಾದ ಧಾರ್ಮಿಕ ಕಾರ್ಯಗಳು ಇರುತ್ತವೆ. ಈ ಸಮಯದಲ್ಲಿ ಸಮೀಕ್ಷೆ ಹೇಗೆ ಸಾಧ್ಯ? ಹೀಗಾಗಿ ಇದು ಸಮೀಕ್ಷೆಗೆ ಸಕಾಲವಲ್ಲ. ಮುಂದಕ್ಕೆ ಹಾಕಿ ಅಥವಾ ಸಮಯ ವಿಸ್ತರಿಸಿ. ಜನರಿಗೆ ಪ್ರಾಮಾಣಿಕ, ವಸ್ತುನಿಷ್ಠ, ಸತ್ಯನಿಷ್ಠ ಸಮೀಕ್ಷೆ ಬೇಕು. ಇಲ್ಲವಾದರೆ ಇದಕ್ಕೂ ಹಿಂದಿನ ಎರಡು ಸಮೀಕ್ಷಾ ವರದಿಗಳ ಗತಿಯೇ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜನರ ತೆರಿಗೆ ಹಣ ಪೋಲಾಗಬೇಕೆ?, ಇನ್ನೂ ಎಷ್ಟು ಕೋಟಿ ಖರ್ಚಾಗಬೇಕು?, ಕೊನೆ ಪಕ್ಷ 3 ತಿಂಗಳ ಕಾಲಾವಕಾಶ ಬೇಕೇ ಬೇಕು. ಹಂತ ಹಂತವಾಗಿ ಸಮೀಕ್ಷೆ ನಡೆಸಿ, ಅದಕ್ಕೇನು ಸಮಸ್ಯೆ?, ಆತುರಾತುರ ಸಮೀಕ್ಷೆ ಯಾರ ಆನಂದಕ್ಕೆ?, ಎಲ್ಲರನ್ನೂ ಒಳಗೊಳ್ಳುವ, ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ಆದರ್ಶ ಸಮೀಕ್ಷೆ ಅಗತ್ಯ. ತಪ್ಪಿದರೆ ಈ ಸಮೀಕ್ಷೆಯ ಹಿಂದಿರುವ ಶಕ್ತಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.