Internal Reservation | ಒಳ ಮೀಸಲಾತಿ ಸಮೀಕ್ಷೆ ಅವಧಿ ವಿಸ್ತರಣೆ ; ಜೂ.22 ರವರೆಗೆ ನಾಗರಿಕ ಸೇವಾ ಕೇಂದ್ರಗಳಲ್ಲಿ ಮಾಹಿತಿ ಸಂಗ್ರಹ

ಜೂ.6 ರವರೆಗೆ ಶೇ 90 ರಷ್ಟು ಸಮೀಕ್ಷೆಯಾಗಿದೆ. ಉಳಿದ ಶೇ 10 ರಷ್ಟು ಸಮೀಕ್ಷೆ ಬಾಕಿ ಇದೆ. ಪರಿಶಿಷ್ಟ ಜಾತಿಯ ಒಂದೇ ಒಂದು ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯುವಂತೆ ನೋಡಿಕೊಳ್ಳುವ ಸಲುವಾಗಿ ‌ಸಮೀಕ್ಷೆ ಅವಧಿಯನ್ನು ಜೂ.22ರವರೆಗೆ ವಿಸ್ತರಣೆ ಮಾಡಲಾಗಿದೆ.;

Update: 2025-06-08 09:14 GMT

ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಗಳ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಅವಧಿಯನ್ನು ಜೂ.22 ರವರೆಗೆ ವಿಸ್ತರಿಸಲಾಗಿದೆ. 

ಪ್ರಸ್ತುತ, ರಾಜ್ಯಾದ್ಯಂತ ಜೂ.8 ರವರೆಗೆ ವಿಶೇಷ ಶಿಬಿರಗಳು ಹಾಗೂ ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆಗೆ ಅವಕಾಶ ನೀಡಲಾಗಿತ್ತು. ಆದರೆ, ಜೂ.6 ರವರೆಗೆ ಶೇ 90 ರಷ್ಟು ಸಮೀಕ್ಷೆಯಾಗಿದೆ. ಉಳಿದ ಶೇ 10 ರಷ್ಟು ಸಮೀಕ್ಷೆ ಬಾಕಿ ಇದೆ.  ಪರಿಶಿಷ್ಟ ಜಾತಿಯ ಒಂದೇ ಒಂದು ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯುವಂತೆ ನೋಡಿಕೊಳ್ಳುವ ಸಲುವಾಗಿ ‌ಸಮೀಕ್ಷೆಗೆ ಇನ್ನಷ್ಟು ಅವಧಿಯನ್ನು ವಿಸ್ತರಿಸಲಾಗಿದೆ. 


ನಾಗರಿಕ ಸೇವಾ ಕೇಂದ್ರಗಳಲ್ಲಿ ಮಾಹಿತಿ ಸಂಗ್ರಹ

ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿರುವ ಹಿನ್ನೆಲೆ ಗಣತಿಯಲ್ಲಿ ತೊಡಗಿಸಿಕೊಂಡಿದ್ದ ಶಿಕ್ಷಕರನ್ನು ಸಮೀಕ್ಷೆ ಕಾರ್ಯದಿಂದ ಬಿಡುಗಡೆಗೊಳಿಸಲಾಗಿದೆ. ಹೀಗಾಗಿ, ನಿಗದಿತ ಅವಧಿಯಲ್ಲಿ ಸಮೀಕ್ಷೆಯ ಪ್ರಗತಿ ಸಾಧ್ಯವಾಗಿಲ್ಲ. ಇದರ ಸಲುವಾಗಿ ಆಯೋಗವು ಜೂ.9 ರಿಂದ ರಾಜ್ಯಾದ್ಯಂತ ಇರುವ ಒಟ್ಟು 9,400 ನಾಗರಿಕ ಸೇವಾ ಕೇಂದ್ರಗಳಾದ "ಕರ್ನಾಟಕ ಒನ್‌, ಬೆಂಗಳೂರು ಒನ್‌, ಗ್ರಾಮ ಒನ್‌, ಬಿಬಿಎಂಪಿಯ 198 ವಾರ್ಡ್‌ ಕಚೇರಿಗಳಲ್ಲಿ ಮಾಹಿತಿ ದಾಖಲಿಸಲು ಕ್ರಮ ಕೈಗೊಂಡಿದೆ. 

ಈವರೆಗೆ ಸಮೀಕ್ಷೆಯಲ್ಲಿ ಭಾಗಿಯಾಗದೇ ಇರುವವರು ನಾಗರಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಒದಗಿಸಬೇಕು ಎಂದು ಆಯೋಗ ಮನವಿ ಮಾಡಿದೆ. ಇನ್ನು ಆನ್‌ಲೈನ್‌ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳುವ ಅವಧಿಯನ್ನೂ ಜೂ.22 ರವರೆಗೆ ವಿಸ್ತರಣೆ ಮಾಡಲಾಗಿದೆ.  ಪರಿಶಿಷ್ಟ ಜಾತಿಯವರು https://schedulecastesurvey.karnataka.gov.in/selfdeclaration ಈ ಲಿಂಕ್‌ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬಹುದಾಗಿದೆ.

ಜಿಲ್ಲಾವಾರು ಸಮೀಕ್ಷೆಯ ಪ್ರಗತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಕಡಿಮೆ ಸಮೀಕ್ಷೆ ನಡೆದಿದೆ. ಬಿಬಿಎಂಪಿ ಎಂಟೂ ವಲಯಗಳಲ್ಲಿ ಈವರೆಗೆ ಶೇಕಡಾ 46 ರಷ್ಟು ಪ್ರಗತಿ ಕಂಡಿದೆ. ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕ್ರಮವಾಗಿ ಶೇಕಡಾ 79ಹಾಗೂ ಶೇಕಡಾ 87ರಷ್ಟು ಸಮೀಕ್ಷೆ ನಡೆದಿದೆ.

ಚಾಮರಾಜನಗರ, ತುಮಕೂರು, ಹಾಸನ, ಮಂಡ್ಯ, ಧಾರವಾಡ, ಉತ್ತರ ಕನ್ನಡ,  ಬಾಗಲಕೋಟೆ, ಉಡುಪಿ, ಗದಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸಮೀಕ್ಷೆಯ ಪ್ರಗತಿ ಶೇ 100ರ ಗಡಿ ದಾಟಿದೆ. 

Tags:    

Similar News