ಹುಬ್ಬಳ್ಳಿ- ಧಾರವಾಡ ನಡುವೆ ಸ್ವಿಜರ್ಲೆಂಡ್​​ ಮಾದರಿಯ ಇ-ಬಸ್​ ಸೇವೆ; ಅವಳಿ ನಗರಗಳು ಇನ್ನೂ ಹತ್ತಿರ

ಹುಬ್ಬಳ್ಳಿ-ಧಾರವಾಡ ನಡುವೆ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ ಅನುಷ್ಠಾನ ಸಂಬಂಧ ಮೂರು ತಿಂಗಳೊಳಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಒಡಂಬಡಿಕೆಗೆ ಸಹಿ ಹಾಕಿದ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ.;

Update: 2025-04-12 13:17 GMT

ವಿದೇಶಗಳಲ್ಲಿ ಸಂಚರಿಸುವ ಇಆರ್​ಟಿ ಬಸ್​​ಗಳು (ಚಿತ್ರ ಕೃಪೆ- ಎಕ್ಸ್​)

ಹುಬ್ಬಳ್ಳಿ-ಧಾರವಾಡದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿರುವ ವಿದ್ಯುತ್‌ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ (e-RT) ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಂಬಂಧ ಶನಿವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು HESS AG, HESS INDIA ಹಾಗೂ SSB AG ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಯೋಜನೆಯು ಆಧುನಿಕ, ಪರಿಸರ ಸ್ನೇಹಿ ಮತ್ತು ದಕ್ಷ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಗುರಿ ಹೊಂದಿದೆ.

ಒಡಂಬಡಿಕೆ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೂರು ತಿಂಗಳೊಳಗೆ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಈ ವರದಿಯು ಯೋಜನೆಯ ತಾಂತ್ರಿಕ, ಆರ್ಥಿಕ ಮತ್ತು ಕಾರ್ಯಾಚರಣೆಯ ಸಾಧ್ಯತೆಗಳನ್ನು ವಿಶ್ಲೇಷಿಸಲಿದೆ. ಕಳೆದ ಒಂದು ವರ್ಷದಿಂದ ಈ ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಈಗ ಅದು ಜಾರಿಗೊಳಿಸುವ ಹಂತಕ್ಕೆ ತಲುಪಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿದ್ಯುತ್‌ ಚಾಲಿತ ಬಸ್‌ಗಳ ವೈಶಿಷ್ಟ್ಯ

ವಿದ್ಯುತ್‌ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆಯಡಿ ಬಳಸಲಾಗುವ ಬಸ್‌ಗಳು ವಿಶಿಷ್ಟ ವಿನ್ಯಾಸ ಹೊಂದಿವೆ. ಈ ಬಸ್‌ಗಳು ಎತ್ತರಿಸಿದ ರಸ್ತೆಗಳಲ್ಲಿ (ಎಲಿವೇಟೆಡ್ ಕಾರಿಡಾರ್) ಮತ್ತು ನೆಲದ ಮೇಲೂ ಸಂಚರಿಸಬಲ್ಲವು. ಒಂದು ಬಸ್‌ನಲ್ಲಿ ಒಮ್ಮೆಗೆ 250 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಈ ವ್ಯವಸ್ಥೆಯು ಮೆಟ್ರೋ ರೈಲಿನಂತೆ ದಕ್ಷತೆಯನ್ನು ಒದಗಿಸಲಿದ್ದು, ಆದರೆ ಮೆಟ್ರೋಗಿಂತ ಕಡಿಮೆ ವೆಚ್ಚದಲ್ಲಿ ಜಾರಿಗೊಳಿಸಬಹುದಾಗಿದೆ.

 

HESS AG, HESS INDIA ಮತ್ತು SSB AG ಸಂಸ್ಥೆಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಈ ಯೋಜನೆಯ ಯಶಸ್ಸಿನ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಮಾದರಿಯ ವಿದ್ಯುತ್‌ ಚಾಲಿತ ಕ್ಷಿಪ್ರ ಸಾರಿಗೆ ವ್ಯವಸ್ಥೆಯು ಯುರೋಪಿನ ಹಲವು ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ವ್ಯವಸ್ಥೆಯು ಇಂಧನ ದಕ್ಷತೆ, ಕಡಿಮೆ ಮಾಲಿನ್ಯ ಮತ್ತು ವೇಗದ ಸಾರಿಗೆ ಸೌಲಭ್ಯವನ್ನು ಒದಗಿಸುವುದರಿಂದ ಜನಪ್ರಿಯವಾಗಿದೆ.

ರಾಜ್ಯದ ಇತರ ನಗರಗಳಿಗೂ ವಿಸ್ತರಣೆಯ ಸಾಧ್ಯತೆ

ಹುಬ್ಬಳ್ಳಿ-ಧಾರವಾಡದಲ್ಲಿ ಈ ಯೋಜನೆ ಯಶಸ್ವಿಯಾದರೆ, ರಾಜ್ಯದ ಇತರ ಎರಡನೇ ಹಂತದ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಗುಲ್ಬರ್ಗಾದಂತಹ ನಗರಗಳಿಗೂ ಇದನ್ನು ವಿಸ್ತರಿಸುವ ಯೋಜನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಯೋಜನೆಯು ರಾಜ್ಯದ ನಗರೀಕರಣ ಮತ್ತು ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪರಿಸರ ಸ್ನೇಹಿ ಸಾರಿಗೆಗೆ ಒತ್ತು

ವಿದ್ಯುತ್‌ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆಯು ರಾಜ್ಯ ಸರ್ಕಾರದ ಪರಿಸರ ಸ್ನೇಹಿ ಉಪಕ್ರಮಗಳಿಗೆ ಸಾಥ್ ನೀಡಲಿದೆ. ಈ ವ್ಯವಸ್ಥೆಯು ಡೀಸೆಲ್‌ ಚಾಲಿತ ವಾಹನಗಳಿಗಿಂತ ಕಡಿಮೆ ಮಾಲಿನ್ಯ ಉಂಟುಮಾಡುವುದರಿಂದ, ಇದು ವಾಯು ಮಾಲಿನ್ಯ ಕಡಿಮೆಗೊಳಿಸುತ್ತದೆ.  ಅಲ್ಲದೆ, ಈ ಯೋಜನೆಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆಗೊಳಿಸಲು ನೆರವಾಗಲಿದೆ.

ಹುಬ್ಬಳ್ಳಿ-ಧಾರವಾಡಕ್ಕೆ ಹೊಸ ಗುರುತು

ಹುಬ್ಬಳ್ಳಿ-ಧಾರವಾಡದಂತಹ ಜೋಡಿ ನಗರಗಳಿಗೆ ಈ ಯೋಜನೆಯು ಹೊಸ ಗುರುತನ್ನು ಒದಗಿಸಲಿದೆ. ಈ ಯೋಜನೆಯ ಯಶಸ್ಸು ಉತ್ತರ ಕರ್ನಾಟಕದ ಈ ಎರಡು ನಗರಗಳನ್ನು ಆಧುನಿಕ ಸಾರಿಗೆ ವ್ಯವಸ್ಥೆಯ ಹಬ್‌ ಆಗಿ ಪರಿವರ್ತಿಸಲಿದೆ. ಇದರಿಂದ ಈ ಪ್ರದೇಶದ ಆರ್ಥಿಕತೆ, ಉದ್ಯೋಗ ಸೃಷ್ಟಿ ಮತ್ತು ಜೀವನ ಗುಣಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. 

Tags:    

Similar News