HS Venkatesha murthy | ವೆಂಕಟೇಶಮೂರ್ತಿಯವರ ಸ್ಥಾನ-ಮಾನ ಅಜರಾಮರ; ನಾ.ದಾಮೋದರ ಶೆಟ್ಟಿ ಕಂಡಂತೆ ಎಚ್ಚೆಸ್ವಿ
"ಎಚ್.ಎಸ್. ವೆಂಕಟೇಶಮೂರ್ತಿಯವರು ಒಬ್ಬ ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ, ಕವಿಯಾಗಿ, ನಾಟಕಕಾರನಾಗಿ, ಉತ್ತಮ ಕನ್ನಡದ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ಬದುಕು ಬರಹ ಬರೆದವರು. ಬುದ್ಧನಂತಹ ಮಹಾತ್ಮರ ಬಗ್ಗೆ ಲೌಕಿಕ-ಅಲೌಕಿಕ ವಿಚಾರಗಳನ್ನು ಬರೆದವರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಬಹಳ ಆತ್ಮೀಯರಾಗಿದ್ದವರು.;
ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಅಗಲಿಕೆ ಸಾಹಿತ್ಯ ವಲಯ ಹಾಗೂ ಚಿತ್ರರಂಗದಲ್ಲಿ ಶೂನ್ಯ ಭಾವ ಆವರಿಸುವಂತೆ ಮಾಡಿದೆ. ಕೊನೆಯ ಉಸಿರಿನವರೆಗೂ ಬರಹ ಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಎಚ್ಎಸ್ವಿ ಅವರು ಹಲವು ಬರಹಗಾರರು, ಸಾಹಿತಿಗಳು ಹಾಗೂ ಚಿತ್ರರಂಗದ ಕಲಾವಿದರಿಗೆ ಪ್ರೇರಣೆಯಾಗಿದ್ದವರು. ಅವರ ಬರಹ ಕೃಷಿಯಿಂದ ಭಾವತರಂಗವಾಗಿ ಹೊಮ್ಮಿದ ಹಲವು ಹಾಡುಗಳು ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯ ಛಾಪು ಮೂಡಿಸಿವೆ.
ಮಕ್ಕಳಿಗೆ ಮಗುವಾಗಿ, ಹಿರಿಯರಿಗೆ ಗುರುವಾರ, ಉದಯೋನ್ಮುಖ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದ ಎಚ್ಎಸ್ವಿ ಅವರು ಸಾಹಿತ್ಯ ಕ್ಷೇತ್ರದ ರತ್ನವಾಗಿ ಮಿಂಚಿ ಮರೆಯಾಗಿದ್ದಾರೆ.
ಎಚ್ಎಸ್ವಿ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ನಟ, ನಾಟಕಕಾರ, ಸಾಹಿತಿ ನಾ.ದಾಮೋದರ ಶೆಟ್ಟಿ ಅವರು ಕಂಡಂತೆ ವೆಂಕಟೇಶಮೂರ್ತಿ ಅವರ ವ್ಯಕ್ತಿತ್ವವನ್ನು ಪದಗಳಲ್ಲಿ ಕಟ್ಟಿಕೊಡುವ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ.
"ಎಚ್.ಎಸ್. ವೆಂಕಟೇಶಮೂರ್ತಿಯವರು ಒಬ್ಬ ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ, ಕವಿಯಾಗಿ, ನಾಟಕಕಾರನಾಗಿ, ಉತ್ತಮ ಕನ್ನಡದ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ಬದುಕು ಬರಹ ಬರೆದವರು. ಬುದ್ಧನಂತಹ ಮಹಾತ್ಮರ ಬಗ್ಗೆ ಲೌಕಿಕ-ಅಲೌಕಿಕ ವಿಚಾರಗಳನ್ನು ಬರೆದವರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಬಹಳ ಆತ್ಮೀಯರಾಗಿದ್ದಾರೆ.
ಒಂದೆಂದರೆ, ವೆಂಕಟೇಶಮೂರ್ತಿಯವರು ಒಬ್ಬ ಸಾಮಾನ್ಯ ಕವಿಯ ಲಕ್ಷಣವನ್ನು ತೋರಿಸುತ್ತಾ ಅಸಾಮಾನ್ಯ ವ್ಯಕ್ತಿತ್ವ ಮೆರೆದವರು. ಕವಿಯಾಗಿ ಜನರ ಹೃದಯದೊಳಗೆ ಪ್ರವೇಶ ಮಾಡಿ ನೋವು ನಲಿವುಗಳನ್ನು ಅರ್ಥ ಮಾಡಿಕೊಂಡವರು. ಅವರ ಬದುಕೂ ಕೂಡ ಹಾಗೆಯೇ ಇತ್ತು. ಪ್ರತಿಯೊಬ್ಬ ವ್ಯಕ್ತಿಯನ್ನು ಕೂಡ ಬಡವ, ಬಲ್ಲಿದ, ಶ್ರೇಷ್ಠ, ಹಾಗೇ-ಹೀಗೆ ಅಂತ ತಾರತಮ್ಯ ಮಾಡದೇ ಎಲ್ಲರನ್ನೂ ಒಂದೇ ದೃಷ್ಟಿಕೋನದಿಂದ, ಪ್ರೀತಿಯಿಂದ ಅಪ್ಪಿಕೊಂಡಂತ ಅಪರೂಪದ ವ್ಯಕ್ತಿತ್ವ ಅವರದ್ದು.
ಎಚ್ಎಸ್ವಿ ಅವರು ಬರೆದಂತಹ ನಾಟಕಗಳು, ಅದರಲ್ಲೂ ಕೂಡ ʼಅಳಿಲು ರಾಮಾಯಣʼ ಎನ್ನುವಂತ ನಾಟಕ ಮಕ್ಕಳನ್ನು ಹೇಗೆ ಆಕರ್ಷಿಸಿಬಿಟ್ಟಿತ್ತು ಅಂದರೆ ಒಂದು ಕಾಲಘಟ್ಟದಲ್ಲಿ ಅದು ಎಲ್ಲರಿಗೂ ಬೇಕಾದಂತ ನಾಟಕವಾಗಿತ್ತು. ಉರಿಯಉಯ್ಯಾಲೆ ನಾಟಕವಂತೂ ಏಕಪಾತ್ರಾಭಿನಯಕ್ಕೆ ಬೇಕಾಗಿಯೇ ಮಾಡಿದಂತಹ ನಾಟಕವಾಗಿತ್ತು.
ಬುದ್ಧ ಚರಣದಲ್ಲಿ ಬುದ್ಧನ ತಾತ್ವಿಕ ಸಿದ್ಧಾಂತಗಳು ಆಧುನಿಕ ಕಾಲಘಟ್ಟಕ್ಕೆ ಹೇಗೆ ನಾಟುತ್ತದೆ, ಅದು ಹೇಗೆ ಅನ್ವಯವಾಗುತ್ತವೆ ಎನ್ನುವುದನ್ನು ಬಹಳ ಸೊಗಸಾಗಿ ಹಿಡಿದಿಟ್ಟಿದ್ದಾರೆ. ಈ ತರಹ ಕನ್ನಡದಲ್ಲಿ ಒಬ್ಬ ಶ್ರೇಷ್ಠ ಅಧ್ಯಾಪಕನಾಗಿ, ಒಬ್ಬ ಅತ್ಯುತ್ತಮ ವಾಗ್ನಿಯಾಗಿ, ಒಬ್ಬ ದಾರ್ಶನಿಕ ವ್ಯಕ್ತಿತ್ವ ಉಳ್ಳವನಾಗಿ, ಎಲ್ಲರಿಗೂ ಬೇಕಾದ ವ್ಯಕ್ತಿ ನಮ್ಮ ಹೆಚ್.ಎಸ್.ವೆಂಕಟೇಶ್ ಮೂರ್ತಿಯವರು.
ರಾಷ್ಟ್ರಕವಿ ಎನ್ನುವಂತಹ ಒಂದು ಪದವಿಯನ್ನು ಕೊಡುವ ಪರಿಪಾಠ ನಮ್ಮಲ್ಲಿ ಇತ್ತು. ಆ ಪರಿಪಾಠದಲ್ಲಿ ಸ್ವಲ್ಪ ಎಡವಟ್ಟಾಗಿತ್ತು. ಇವರು ನಿಜವಾಗಿಯೂ ರಾಷ್ಟ್ರಕವಿ ಪಾತ್ರಕ್ಕೆ ಸರ್ವರೀತಿಯಲ್ಲೂ ಸಲುವವರಾಗಿದ್ದರು. ವೆಂಕಟೇಶ ಮೂರ್ತಿಯವರ ಕೊನೆಯ ಘಟ್ಟದಲ್ಲಿ ತಮ್ಮ ಬದುಕು ಇನ್ನೆಚ್ಚು ದಿನ ಇರುವುದಿಕ್ಕ ಎಂಬುದು ತಿಳಿದಿದ್ದರೂ ಅವರೊಂದು ಕವಿತೆ, ಕಾವ್ಯವನ್ನು ಬರೆದಿದ್ದರು. ಬರೆಯುವುದಕ್ಕಾಗಿಯೇ ಬದುಕನ್ನು ಮೀಸಲಿಟ್ಟಿದ್ದರು. ಪ್ರತಿ ನಿಮಿಷವನ್ನೂ ಅವರು ಎಂಜಾಯ್ ಮಾಡುತ್ತಿದ್ದರು. ಬದುಕು ದೊಡ್ಡ ಹೊರೆ ಅಂತ ಭಾಸವಾಗದ ರೀತಿಯಲ್ಲಿ ಸಾವು ಮನೆಯೆದುರು ಕೂತಿದ್ದರೂ ಸ್ವಲ್ಪಹೊತ್ತು ತಡಿ ನಾನು ಬರ್ತೇನೆ. ಆದರೆ, ನನಗೆ ಇದೊಂದು ಬರೆದು ಮುಗಿಸಲಿಕ್ಕಿದೆ ಅಂತ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದರು. ಕೊನೆಯ ತನಕವೂ ಕಾವ್ಯ ರಚನೆ, ಸಾಹಿತಿಗಳ ಜೊತೆ ಸಂವಾದ ಮಾಡಿದ್ದಾರೆ. ಪ್ರತಿಯೊಬ್ಬರೂ ಕೂಡ ಅವರನ್ನು ಭೇಟಿ ಮಾಡೋದಕ್ಕೆ ಮನೆಗೆ ಬಂದಾಗ ಹಾಸಿಗೆಯಲ್ಲಿ ಎದ್ದು ಕುಳಿತುಕೊಳ್ಳಲು ಸಾಧ್ಯವಾಗದಿದ್ದರೂ ಅವರ ಜೊತೆ ಒಂದು ಫೋಟೋ ತೆಗಿಸಿಕೊಂಡಿದ್ದಾರೆ.
ಇವರದೊಂದು ಫೋಟೋ ತೆಗಿಯಪ್ಪ, ನನ್ನ ಜೊತೆ ಇವರದೊಂದು ಫೋಟೋ ಇರಲಿ ಎಂದು ತಮ್ಮ ಇಬ್ಬರು ಸೊಸೆಯಂದಿರಿಗೆ ಹೇಳುತ್ತಿದ್ದರು. ಆತುರದಲ್ಲಿ ಬದುಕನ್ನು ಬಹಳಷ್ಟು ಎಂಜಾಯ್ ಮಾಡಿದರು. ಬಹಳಷ್ಟು ಪ್ರೀತಿ ಮಾಡುವಂತ ಒಬ್ಬ ವ್ಯಕ್ತಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರು.
ನಾವು ಸುಗಮ ಸಂಗೀತ ಪರಿಷತ್ತು ಸ್ಥಾಪನೆ ಮಾಡಿದಾಗ ಆ ಸಂಸ್ಥೆಗೆ ಬಹಳ ಮುಖ್ಯವ್ಯಕ್ತಿಯಾಗಿ ನಿಂತುಕೊಂಡು ಸುಗಮ ಸಂಗೀತ ಯಾವ ತರದಲ್ಲಿ ಮುಂದಕ್ಕೆ ಸಾಗಬೇಕು ಎಂದು ಐ.ಕೆ. ಮುದ್ದುಕೃಷ್ಣ ಮೊದಲಾದವರಿಗೆ ಹೇಳಿಕೊಟ್ಟು ಒಂದು ದಾರಿಯಲ್ಲಿ ಸಾಗುವಂತೆ ಮಾಡಿದವರು.
ಜಿ.ಎಸ್. ಶಿವರುದ್ರಪ್ಪ ನಂತರ ಅತ್ಯಂತ ಮುಖ್ಯ ವ್ಯಕ್ತಿತ್ವವಾಗಿ ಸುಗಮ ಸಂಗೀತ ಪರಿಷತ್ತಿನಲ್ಲಿ ಕಾಣಿಸಿಕೊಳ್ಳುವುದು ಇವರೇ. ಇವರ ಭಾವಗೀತೆಗಳೆಲ್ಲ ಅನೂಹ್ಯ. ಅತ್ಯಂತ ಚೇತೋಹಾರಿಯಾದಂತದ್ದು. ಏಕೆಂದರೆ ಇವರು ಬರೆದಂತ ಪ್ರತಿಯೊಂದು ಕವನದಲ್ಲೂ ಗೋಪಾಲಕೃಷ್ಣ ಅಡಿಗರ ಹಾಗೆ ಒಂದು ವಿಶೇಷ ಲಯ ಇರುತ್ತಿತ್ತು. ಎಲ್ಲಾ ಸಾಧ್ಯತೆಗಳನ್ನು ಕಂಡುಕೊಂಡು ಕಾವ್ಯ ರಚನೆ ಮಾಡುತ್ತಾ ಇದ್ದರು.
ಎಚ್ಎಸ್ವಿ ಅವರಿಗೆ ಸಂಸ್ಕೃತದ ಹಿನ್ನೆಲೆ ಕೂಡ ತುಂಬಾ ಚೆನ್ನಾಗಿತ್ತು. ಅದನ್ನೆಲ್ಲಾ ಇಟ್ಟುಕೊಂಡು ಕಾವ್ಯರಚನೆ ಮಾಡಿದ್ದು, ಅದರಿಂದ ಕನ್ನಡ ಸಾಹಿತ್ಯದಲ್ಲಿ ಅವರ ಸ್ಥಾನ ಹಾಗೂ ಮಾನ ಎಂದೆಂದಿಗೂ ಅಜರಾಮರವಾಗಿರುತ್ತದೆ.
(ಲೇಖಕರು ಕನ್ನಡದ ಖ್ಯಾತ ರಂಗಕರ್ಮಿ ಹಾಗೂ ಸಾಹಿತಿಗಳು)