ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ, ಮುಂಜಾಗ್ರತಾ ಕ್ರಮಕ್ಕೆ ಸಭಾಧ್ಯಕ್ಷ ಯು.ಟಿ. ಖಾದರ್‌ ಸೂಚನೆ

ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ, ಸಾರ್ವಜನಿಕರ ಸಂಪರ್ಕದಲ್ಲಿದ್ದುಕೊಂಡು ಸಹಕರಿಸುವಂತೆ ಸೂಚನೆ ನೀಡಲಾಗಿದೆ.;

Update: 2025-05-30 14:41 GMT

ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಉಳ್ಳಾಲ ತಾಲೂಕಿನ ವಿವಿಧೆಡೆ ಗುಡ್ಡ ಕುಸಿತದಿಂದಾಗಿ ಪ್ರಾಣ ಹಾನಿ ಸಂಭವಿಸಿದ್ದು ಅಗತ್ಯ ಮುಂಜಾಗ್ರತಾ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಜಿಲಾಧಿಕಾರಿಗಳಿಗೆ ವಿಧಾನಸಭಾ ಸಭಾಧ್ಯಕ್ಷ ಹಾಗೂ ಮಂಗಳೂರು ಶಾಸಕರೂ ಆಗಿರುವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.

ಉಳ್ಳಾಲ ತಾಲೂಕಿನ ಬೆಳ್ಮ ಹಾಗೂ ಮಂಜನಾಡಿ ಗ್ರಾಮದಲ್ಲಿ ಗುಡ್ಡ ಕುಸಿದು ಪ್ರಾಣ ಹಾನಿ ಸಂಭವಿಸಿದೆ. ನಗರಸಭೆ ವ್ಯಾಪ್ತಿಯ ಉಳ್ಳಾಲ ಬೈಲು, ಅಕ್ಕರೆಕೆರೆ, ಮಿಲ್ಲತ್ ನಗರ, ಉಳಿಯ, ಅಲೇಕಳ, ಸುಂದರಿಬಾಗ್, ಕಲ್ಲಾಪು ಸೋಮೇಶ್ವರ ಕೋಟೆಕಾರು ವ್ಯಾಪ್ತಿಯ ಕುಂಪಲ, ಕನೀರ್ ತೋಟ, ಉಚ್ಚಿಲ ಮುಂತಾದ ನದಿ ತಗ್ಗು ಪ್ರದೇಶಗಳಿಗೆ ಕೃತಕ ನೆರೆಯಿಂದ ಮನೆಗಳಿಗೆ ನೀರು ನುಗ್ಗಿ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗಿದ್ದು ಮುಂಜಾಗ್ರತಾ ಕ್ರಮ ಹಾಗೂ ಅಗತ್ಯ ರಕ್ಷಣಾ ಕಾರ್ಯದ ಕುರಿತಾಗಿ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ ಮುಂತಾದ ರಕ್ಷಣಾ ತಂಡಗಳನ್ನು ಸನ್ನದ್ಧಗೊಳಿಸುವಂತೆ ತಿಳಿಸಿದರು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಜತೆ ಮಾತುಕತೆ ನಡೆಸಿ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಮೃತರ ಕುಟುಂಬಗಳಿಗೆ ಹಾಗೂ ಆಸ್ತಿ, ಪಾಸ್ತಿ ನಷ್ಟ ಸಂಭವಿಸಿದರ ವರದಿ ಆಧರಿಸಿ ಪರಿಹಾರ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಅಧಿಕಾರಿಯನ್ನು ನೇಮಿಸಿ ಪರಿಸ್ಥಿತಿಯ ಅವಲೋಕನ ನಡೆಸಲು ಸೂಚನೆ ನೀಡಲಾಗಿದೆ ಎಂದರು.

ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಪಂಚಾಯತಿ ಪ್ರತಿನಿಧಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣದ ಮಾಹಿತಿಯನ್ನು ಪಡೆದು ರಕ್ಷಣಾ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ತಾಲೂಕಿನ ಬೆಳ್ಮ ಗ್ರಾಮದ ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದು ನೌಶಾದ್ ಅವರ ಪುತ್ರಿ ಫಾತಿಮ (10), ಮಂಜನಾಡಿ ಗ್ರಾಮದ ಮೊಂಟೆ ಪದವು ಸಮೀಪದ ಕೋಡಿ ಎಂಬಲ್ಲಿ ಗುಡ್ಡ ಜರಿದು ಐವರು ಮಣ್ಣಿನಡಿಯಲ್ಲಿ ಸಿಲುಕಿ ಪ್ರೇಮ ಪೂಜಾರಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ, ಸಾರ್ವಜನಿಕರ ಸಂಪರ್ಕದಲ್ಲಿದ್ದುಕೊಂಡು ಸಹಕರಿಸುವಂತೆ ಸೂಚನೆ ನೀಡಿದ್ದು ಜನ ಸಾಮಾನ್ಯರೂ ಕೂಡಾ ಎಚ್ಚರಿಕೆ ವಹಿಸುವಂತೆ ಸಭಾಧ್ಯಕ್ಷರು ಮನವಿ ಮಾಡಿದ್ದಾರೆ.

Tags:    

Similar News