The Federal Exclusive: ಕಮಲ್‌ ಭಾಷಾ ವಿವಾದ | ʼಥಗ್‌ ಲೈಫ್‌ʼ ಚಿತ್ರ ಬಿಡುಗಡೆಗೆ ನಿರ್ಬಂಧ; ಮಹತ್ವದ ನಿರ್ಧಾರ ಕೈಗೊಂಡ ಫಿಲಂ ಛೇಂಬರ್‌

ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರವನ್ನು ಕನ್ನಡ ಚಿತ್ರರಂಗದ ಎಲ್ಲಾ ನಟರು ಬೆಂಬಲಿಸಲಿದ್ದಾರೆ. ವಿವಾದ ಕುರಿತ ಮಾತುಕತೆಗೆ ನಾವೇ ಆಹ್ವಾನ ನೀಡಿಲ್ಲ. ಮಂಡಳಿ ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಗೌರವಿಸುವ ವಿಶ್ವಾಸವಿದೆ ಎಂದು ಫಿಲಂ ಛೇಂಬರ್‌ ಅಧ್ಯಕ್ಷ ನರಸಿಂಹಲು ತಿಳಿಸಿದ್ದಾರೆ.;

Update: 2025-05-30 11:41 GMT

ಕನ್ನಡ ಭಾಷೆಯ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಅವರು ಎರಡು ದಿನಗಳ ಗಡುವು ಮುಗಿದರೂ ಕನ್ನಡಿಗರ ಕ್ಷಮೆ ಕೇಳದ ಹಿನ್ನೆಲೆಯಲ್ಲಿ ʼಥಗ್ ಲೈಫ್ʼ ಚಿತ್ರ ಬಿಡುಗಡೆ ನಿರ್ಬಂಧಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.

ಶುಕ್ರವಾರ ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರು, ಕಮಲ್ ಹೇಳಿಕೆಗೆ ಸಂಬಂಧಿಸಿ ಕನ್ನಡಪರ ಸಂಘಟನೆಗಳು ಥಗ್‌ ಲೈಫ್‌ ಚಿತ್ರ ಬಿಡುಗಡೆ ವಿರೋಧಿಸಿವೆ. ಸಂಘಟನೆಗಳ ನಿರ್ಧಾರಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬದ್ಧವಾಗಿದೆ. ಈಗಾಗಲೇ ಚಿತ್ರ ವಿತರಕರನ್ನು ಮಂಡಳಿಗೆ ಕರೆಸಿ ಕಮಲ್ ಅವರೊಂದಿಗೆ ಮಾತನಾಡುವಂತೆ ಸೂಚಿಸಲಾಗಿದೆ.  ಚಿತ್ರ ಮಂದಿರ ಮಾಲೀಕರೊಂದಿಗೂ ಸಭೆ ನಡೆಸಿ, ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ಚಿತ್ರ ಬಿಡುಗಡೆ ಮಾಡದಂತೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.

ಚಲನಚಿತ್ರ ವಾಣಿಜ್ಯ ಮಂಡಳಿಯು ಕಮಲ್ ಹಾಸನ್ ಅವರಿಗೆ ಇ-ಮೇಲ್‌ ಮೂಲಕ ರಾಜ್ಯದಲ್ಲಿ ಭುಗಿಲೆದ್ದಿರುವ ಆಕ್ರೋಶದ ಕುರಿತು ಮಾಹಿತಿ ನೀಡಿದ್ದೇವೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೊಂದೆಡೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಕಡೆಯಿಂದಲೂ ಕಮಲ್ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೆರಡು- ಮೂರು ದಿನದಲ್ಲಿ ವಿವಾದ ಸುಖಾಂತ್ಯವಾಗುವ ವಿಶ್ವಾಸವಿದೆ ಎಂದು ನರಸಿಂಹಲು ಹೇಳಿದರು.

ಕನ್ನಡ ಭಾಷಾ ವಿವಾದದಲ್ಲಿ ಹಿರಿಯ ನಟರು ಕಮಲ್ ಹಾಸನ್ ಅವರ ಹೇಳಿಕೆ ಖಂಡಿಸಿದ್ದಾರೆ. ಆದರೆ, ಹಿರಿಯ ನಟ ರವಿಚಂದ್ರನ್‌, ಸ್ಟಾರ್ ನಟರಾದ ಸುದೀಪ್, ದರ್ಶನ್, ಯಶ್ ಸೇರಿ ಯಾರೂ ಕೂಡ ಸೊಲ್ಲೆತ್ತುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರವನ್ನು ಎಲ್ಲಾ ನಟರು ಬೆಂಬಲಿಸಲಿದ್ದಾರೆ. ನಟರಿಗೆ ನಾವೇ ಮಾಹಿತಿ ನೀಡಿಲ್ಲ. ಮಂಡಳಿ ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಗೌರವಿಸುವ ವಿಶ್ವಾಸವಿದೆ ಎಂದು ಹೇಳಿದರು. 

ಕೆಲವರು ಪಾನ್ ಇಂಡಿಯಾ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿನ್ನಡೆ ಆಗಬಹುದು ಎಂಬ ಭೀತಿಯಿಂದ ಹಿಂದೇಟು ಹಾಕುತ್ತಿರಬಹುದು. ಮುಂದಿನ ದಿನಗಳಲ್ಲಿ ಈ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಲಿದ್ದಾರೆ ಎಂದರು ಹೇಳಿದರು. 

ಕಮಲ್‌ ಅವರು ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆ ನೀಡಬಹುದು. ಅವರ ಸಂಪರ್ಕಕ್ಕೆ ಬಂದ ಮೇಲೆ ಮನವೊಲಿಕೆ ಮಾಡಲಾಗುವುದು. ರಾಜ್ಯ ಸರ್ಕಾರ ವಾಣಿಜ್ಯ ಮಂಡಳಿಯ ನಿರ್ಧಾರಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.

Tags:    

Similar News