Heavy Rain | ಮಂಗಳೂರು ಗುಡ್ಡ ಕುಸಿತ; ಒಂದೇ ಕುಟುಂಬದ ಮೂವರು ಸಾವು
ಮಂಗಳೂರಿನ ಉಳ್ಳಾಲ ತಾಲೂಕಿನ ಮಂಜನಾಡಿ ಬಳಿ ಧಾರಾಕಾರ ಮಳೆಗೆ ಗುಡ್ಡವೊಂದು ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಆರು ಜನರಿದ್ದ ಕುಟುಂಬದಲ್ಲಿ ಇಬ್ಬರು ಮೊಮ್ಮಕ್ಕಳು ಹಾಗೂ ವೃದ್ಧೆ ಮೃತಪಟ್ಟಿದ್ದಾರೆ.;
ಗುಡ್ಡ ಕುಸಿತಕ್ಕೆ ಮೂರು ಜನ ಬಲಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಸಮೀಪದ ಉರುಮನೆ ಕೋಡಿ ಬಳಿ ಧಾರಾಕಾರ ಮಳೆಗೆ ಗುಡ್ಡವೊಂದು ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಮನೆಯಲ್ಲಿ ಒಟ್ಟು ಆರು ಮಂದಿಯಿದ್ದರು. ಇವರ ಪೈಕಿ ಅಜ್ಜಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಮೃತಪಟ್ಟಿದ್ದಾರೆ.
ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದಿತ್ತು. ಆಗ ಮನೆಯಲ್ಲಿದ್ದ ವೃದ್ಧ ದಂಪತಿಯಾದ ಕಾಂತಪ್ಪ ಪೂಜಾರಿ ಹಾಗೂ ಪ್ರೇಮಾ ಪೂಜಾರಿ, ದಂಪತಿಯ ಪುತ್ರ ಸೀತಾರಾಮ್, ಸೊಸೆ ಅಶ್ವಿನಿ ಹಾಗೂ ಮೊಮ್ಮಕ್ಕಳಾದ ಆರುಷ್ , ಆರ್ಯನ್ ಮಣ್ಣಿನಡಿ ಸಿಲುಕಿದ್ದರು.
ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಾದ ಪ್ರೇಮಾ ಪೂಜಾರಿ(58) ಮೃತಪಟ್ಟಿದ್ದರು. ವೃದ್ಧ ಕಾಂತಪ್ಪ ಪೂಜಾರಿ, ಅವರ ಪುತ್ರ ಸೀತಾರಾಮ ಹಾಗೂ ಸೀತಾರಾಮ್ ಪತ್ನಿ ಅಶ್ವಿನಿ ಅವರನ್ನು ರಕ್ಷಿಸಲಾಗಿದೆ. ಆದರೆ, ಇಬ್ಬರು ಪುಟ್ಟ ಮಕ್ಕಳು ಮೃತಪಟ್ಟಿದ್ದಾರೆ.
ಸ್ಥಳದಲ್ಲಿ ಎಡಿಸಿ ಸಂತೋಷ್ ಕುಮಾರ್, ತಹಶೀಲ್ದಾರ್ ಪುಟ್ಟರಾಜು, ಡಿಸಿಪಿ ಸಿದ್ದಾರ್ಥ್ ಫೋಯಲ್, ಪ್ರಾಕೃತಿಕ ವಿಕೋಪದ ನಿರ್ವಹಣಾಧಿಕಾರಿ ವಿಜಯ್, ಕಾರ್ಯನಿರ್ವಹಣಾಧಿಕಾರಿ ಗುರುದತ್ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಲಹೆ ಸೂಚನೆ ನೀಡಿದರು.