Special Action Force | ಕರಾವಳಿಗೆ ವಿಶೇಷ ಕಾರ್ಯಪಡೆ; ಕೋಮು ಸಂಘರ್ಷಕ್ಕೆ ಬೀಳಲಿದೆಯೇ ಕಡಿವಾಣ?
ದಶಕಗಳಿಂದ ಕೋಮುದಳ್ಳುರಿಯಲ್ಲಿ ಬೇಯುತ್ತಿರುವ ಕರಾವಳಿ ಜಿಲ್ಲೆಗಳಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವತ್ತ ಸರ್ಕಾರ ಮಹತ್ತರ ಹೆಜ್ಜೆ ಇಟ್ಟಿದೆ. ಕೋಮು ಸಂಘರ್ಷ ತಡೆಗೆ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಿ ಸರ್ಕಾರ ಆದೇಶಿಸಿದೆ.;
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋಮು ಸಂಘರ್ಷ ತಡೆಗೆ ವಿಶೇಷ ಕಾರ್ಯಪಡೆ ರಚನೆಗೆ ರಾಜ್ಯ ಸರ್ಕಾರ ಮೇ 28 ರಂದು ಮಂಜೂರಾತಿ ಆದೇಶ ಹೊರಡಿಸಿದೆ.
ದಶಕಗಳಿಂದ ಕೋಮುದಳ್ಳುರಿಯಲ್ಲಿ ಬೇಯುತ್ತಿರುವ ಕರಾವಳಿ ಜಿಲ್ಲೆಗಳಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವತ್ತ ಸರ್ಕಾರ ಮಹತ್ತರ ಹೆಜ್ಜೆ ಇಟ್ಟಿದೆ.
ಕರಾವಳಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ದಕ್ಷಿಣ ಕನ್ನಡ, ಉಡುಪಿಯಲ್ಲಿ ಕೋಮು ಹತ್ಯೆ, ದ್ವೇಷ ಭಾಷಣ, ಹಿಂಸಾಚಾರ ಘಟನೆಗಳು ಪುನರಾವರ್ತಿತವಾಗುತ್ತಿವೆ. ಇದರಿಂದ ಜಿಲ್ಲೆಗಳ ಅಭಿವೃದ್ಧಿ ಹಾಗೂ ಆಡಳಿತದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಿರುವಾಗ ವಿಶೇಷ ಕಾರ್ಯಪಡೆಯ ಕಾರ್ಯ ನಿರ್ವಹಣೆ ಹೇಗೆ?, ಸಿಬ್ಬಂದಿ ನೇಮಕ ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಮೂರು ಕಂಪನಿಯ ಕಾರ್ಯಪಡೆ
ಹೊಸದಾಗಿ ಸ್ಥಾಪನೆಯಾಗಿರುವ ವಿಶೇಷ ಕಾರ್ಯಪಡೆಯು ಮೂರು ಕಂಪನಿಗಳನ್ನು ಹೊಂದಿರಲಿದೆ. ಈ ಕಂಪನಿಗಳು ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲಿವೆ.
ಆಯಾ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ಕಾರ್ಯಪಡೆಯು ಕೋಮು ಸಂಬಂಧಿತ ಯಾವುದೇ ಘಟನೆಗಳ ಗುಪ್ತಚರ ಮಾಹಿತಿ ಸಂಗ್ರಹ ಮಾಡಲಿವೆ. ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಿವೆ.
ಕಾರ್ಯಪಡೆಯ ಜವಾಬ್ದಾರಿಗಳೇನು?
ದ್ವೇಷ ಭಾಷಣ, ಉದ್ರೇಕಕಾರಿ ಘಟನೆ ಮತ್ತು ಕೋಮು ಗಲಭೆ ಕುರಿತು ಮಾಧ್ಯಮಗಳಲ್ಲಿ ಬರುವ ಹಾಗೂ ಗುಪ್ತಚರ ಮೂಲಗಳಿಂದ ಸಂಗ್ರಹಿಸುವ ಮಾಹಿತಿ ಆಧರಿಸಿ ಮೇಲ್ವಿಚಾರಣೆ ನಡೆಸಲಿದೆ.
ಸಂಭಾವ್ಯ ಕೋಮು ಹಿಂಸಾಚಾರದ ಮೇಲೆ ನಿರಂತರ ಕಣ್ಣಾವಲು ಇರಿಸಲಾಗುತ್ತದೆ. ಗುಪ್ತಚರ ಮಾಹಿತಿ ಮೂಲಕ ಎಚ್ಚರಿಕೆ ರವಾನಿಸಲಾಗುತ್ತಿದೆ.
ಮೂಲಭೂತವಾದ ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ರಮ ಕೈಗೊಳ್ಳಲಿದೆ. ವಲಯ ಐಜಿಪಿ ಅವರು ಕೋಮು ಗಲಭೆ ಸಂದರ್ಭದಲ್ಲಿ ವಿಶೇಷ ಕಾರ್ಯಪಡೆಯ ಅಧಿಕಾರಿ, ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳುವರು.
ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಬಳಕೆ
ರಾಜ್ಯ ಸರ್ಕಾರ ಸ್ಥಾಪಿಸಿರುವ ವಿಶೇಷ ಕಾರ್ಯಪಡೆಗೆ ನಕ್ಸಲ್ ನಿಗ್ರಹ ಪಡೆ (ANF)ಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನೇ ನೇಮಕ ಮಾಡಲು ಸರ್ಕಾರ ಆದೇಶಿಸಿದೆ.
ನಕ್ಸಲ್ ನಿಗ್ರಹ ಪಡೆಯಲ್ಲಿ ಪ್ರಸ್ತುತ ವಿವಿಧ ದರ್ಜೆಯ 656 ಅಧಿಕಾರಿ, ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ (ಬಿಡಿಎ ಮತ್ತು ಬಿಎಂಐಸಿಎಪಿಎ ಹೊರತುಪಡಿಸಿ).
ಬೆಂಗಳೂರಿನಲ್ಲಿ ಅನಧಿಕೃತ ಬಡಾವಣೆ ನಿರ್ಮಾಣ ತಡೆಗೆ ರಚಿಸಿರುವ ಟಾಸ್ಕ್ಫೋರ್ಸ್, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಪೊಲೀಸ್ ಠಾಣೆ, ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೇವಲಾಪುರದ ಪೊಲೀಸ್ ಹೊರ ಠಾಣೆ ಹಾಗೂ ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಲಾಗುವ ವಿಶೇಷ ಕಾರ್ಯಪಡೆಗೆ ವಿವಿಧ ದರ್ಜೆಯ ಒಟ್ಟು 248 ಅಧಿಕಾರಿ, ಸಿಬ್ಬಂದಿ ನಿಯೋಜಿಸಿ, ಉಳಿಕೆ 376 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಕ್ಸಲ್ ನಿಗ್ರಹ ಪಡೆ ಮುಂದಿನ ಮೂರು ವರ್ಷಗಳವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ.
ಛತ್ತೀಸ್ಗಢ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕೆಲವು ನಕ್ಸಲರು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಗಡಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಯಾರೆಲ್ಲಾ ಸಿಬ್ಬಂದಿ ಇರಲಿದ್ದಾರೆ?
ವಿಶೇಷ ಕಾರ್ಯಪಡೆಯಲ್ಲಿ ಒಬ್ಬರು ಡಿಐಜಿಪಿ, ಒಬ್ಬರು ಡಿವೈಎಸ್ಪಿ(ಸಿವಿಲ್), ಸಹಾಯಕ ಕಮಾಂಡೆಂಟ್ ಒಬ್ಬರು, ಪಿಐ/ ಆರ್ಪಿಐ ನಾಲ್ವರು, ಪಿಎಸ್ಐ/ ಆರ್ಎಸ್ಐ/ಎಸ್ಐ 16, ಸಿಎಚ್ಸಿ 60, ಸಿಪಿಸಿ/ಎಪಿಸಿ 150, ಅನುಯಾಯಿ 15 ಮಂದಿ ಇರಲಿದ್ದಾರೆ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎನ್.ವನಜಾ ಆದೇಶದಲ್ಲಿ ತಿಳಿಸಿದ್ದಾರೆ.