ಕೆಂಗೇರಿಯಲ್ಲಿ ಮನೆಗಳ್ಳನ ಬಂಧನ: 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶ
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಖಚಿತ ಮೂಲಗಳಿಂದ ಮಾಹಿತಿ ಪಡೆದು, ದಿನಾಂಕ ಆಗಸ್ಟ್ 24ರಂದು ಕೆಂಗೇರಿ ರೈಲ್ವೆ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆಯ ಸಮಯದಲ್ಲಿ, ಆರೋಪಿಯು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.;
ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನಿಂದ 8 ಲಕ್ಷ ರೂಪಾಯಿ ಮೌಲ್ಯದ 58 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿಯ ಹರ್ಷ ಲೇಔಟ್ನ ನಿವಾಸಿಯೊಬ್ಬರು 2024ರ ಡಿಸೆಂಬರ್ನಲ್ಲಿ ತಮ್ಮ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಅವರು ಮನೆಗೆ ಬೀಗ ಹಾಕಿಕೊಂಡು ವಿದ್ಯಾರಣ್ಯಪುರದಲ್ಲಿದ್ದ ತಮ್ಮ ತಾಯಿಯ ಮನೆಗೆ ಹೋಗಿದ್ದು, ವಾಪಸ್ ಬಂದು ನೋಡಿದಾಗ, ಮನೆಯ ಬಾಗಿಲಿನ ಬೀಗ ಮುರಿದು, ಒಳನುಗ್ಗಿದ್ದ ಕಳ್ಳರು 48 ಗ್ರಾಂ ಚಿನ್ನಾಭರಣ ಮತ್ತು 15,000 ರೂಪಾಯಿ ದೋಚಿದ್ದಾರೆ ಎಂದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಖಚಿತ ಮೂಲಗಳಿಂದ ಮಾಹಿತಿ ಪಡೆದು, ದಿನಾಂಕ ಆಗಸ್ಟ್ 24ರಂದು ಕೆಂಗೇರಿ ರೈಲ್ವೆ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆಯ ಸಮಯದಲ್ಲಿ, ಆರೋಪಿಯು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ವಿಚಾರಣೆ ವೇಳೆ, ಕದ್ದ ಚಿನ್ನಾಭರಣಗಳನ್ನು ತಮಿಳುನಾಡಿನ ಸೇಲಂನಲ್ಲಿರುವ ಮೂರು ಆಭರಣ ಮಳಿಗೆಗಳಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ ಪೊಲೀಸರ ತಂಡವು ಸೇಲಂಗೆ ತೆರಳಿ, ಮೂರು ಜ್ಯುವೆಲ್ಲರಿ ಅಂಗಡಿಗಳಿಂದ ಒಟ್ಟು 58 ಗ್ರಾಂ ತೂಕದ, 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.