Spike in Heart Attacks | ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳು; ಕಳವಳಕಾರಿ ಏರಿಕೆಗೆ ಕಾರಣವೇನು?

ರಾಜ್ಯದಲ್ಲಿ 40 ವರ್ಷದೊಳಗಿನ ವಯಸ್ಕರೇ ತೀವ್ರ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಸಾವಿಗೀಡಾಗುತ್ತಿದ್ದು, ಕಾರಣ ನಿಗೂಢವಾಗಿದೆ.;

Update: 2025-06-29 10:17 GMT

ರಾಜ್ಯದಲ್ಲಿ ಹೃದಯಾಘಾತ ಹಾಗೂ ಹೃದಯ ಸ್ತಂಭನ ಪ್ರಕರಣಗಳ ಹಠಾತ್ ಏರಿಕೆಯು ತೀವ್ರ ಕಳವಳ ಮೂಡಿಸಿದೆ. 40 ವರ್ಷದೊಳಗಿನ ವಯಸ್ಕರೇ ತೀವ್ರ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಸಾವಿಗೀಡಾಗುತ್ತಿದ್ದು, ಕಾರಣ ನಿಗೂಢವಾಗಿದೆ. 

ಹಾಸನ ಜಿಲ್ಲೆಯೊಂದರಲ್ಲೇ ಒಂದು ತಿಂಗಳ ಅವಧಿಯಲ್ಲಿ 17 ಮಂದಿ ಹೃದಯಾಘಾತದಿಂದ ಮೃತಪಟ್ಟಿರುವುದು ವೈದ್ಯಕೀಯ ಕ್ಷೇತ್ರವನ್ನು ಅಚ್ಚರಿಗೆ ದೂಡಿದೆಯಲ್ಲದೇ  ಕಾರಣ ಪತ್ತೆ ಹಚ್ಚುವ ಸವಾಲನ್ನೂ ಮುಂದಿರಿಸಿದೆ.

ತಜ್ಞರ ಸಮಿತಿ‌ ರಚಿಸಿದ ಸರ್ಕಾರ

ರಾಜ್ಯದಲ್ಲಿ ಹೃದಯಾಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಾರಣಗಳ ಪತ್ತೆ ಹಾಗೂ ವಿಶ್ಲೇಷಣೆಗಾಗಿ ಸರ್ಕಾರ ತಜ್ಞರ ಸಮಿತಿ‌ ರಚಿಸಿದೆ.

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಕೆ.ಎ.ರವೀಂದ್ರನಾಥ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಮುಂದಿನ ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಹೃದಯಾಘಾತಗಳ ಸಂಖ್ಯೆ ದಿಢೀರ್ ಏರಿಕೆ ಬಗ್ಗೆ ಕಳವಳ

ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ತಿಂಗಳಿಗೆ 50-70 ಮಂದಿ ವಯಸ್ಕರೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಉಡುಪಿಯಲ್ಲಿ ಒಂದು ವಾರದಲ್ಲಿ ಐವರು ಮೃತಪಟ್ಟಿದ್ದಾರೆ. ಹಾಸನದಲ್ಲಿ ಒಂದು ತಿಂಗಳ ಅವಧಿಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಯಾರೂ ಸ್ಥೂಲಕಾಯ ಹೊಂದಿರಲಿಲ್ಲ. ಆದರೂ, ಹೃದಯಾಘಾತದಿಂದ ಮೃತಪಟ್ಟಿರುವುದು ಕಳವಳ ಮೂಡಿಸಿದೆ. ಒತ್ತಡ ಹಾಗೂ ಬದಲಾದ ಜೀವನಶೈಲಿಯಿಂದ ಹೃದಯಾಘಾತಗಳು ಸಂಭವಿಸುತ್ತಿದ್ದರೂ ಆ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಏರುಗತಿಯಲ್ಲಿರುವುದು. ಅದರಲ್ಲೂ ವಯಸ್ಕರೇ ಹೆಚ್ಚು ಬಲಿಯಾಗುತ್ತಿರುವ ಬಗ್ಗೆ ಕಾರಣಗಳನ್ನು ಪತ್ತೆ ಹಚ್ಚಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ‌ ಮಾಡಿದ್ದೆ. ಅದರಂತೆ ತನಿಖೆಗೆ ತಜ್ಞರ ಸಮಿತಿ ನೇಮಕ ಮಾಡಿದ್ದಾರೆ ಎಂದು ಚಿಂತಕ, ಬರಹಗಾರ ರಾಜಾರಾಮ್ ತಲ್ಲೂರು ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ವಿದೇಶಗಳಲ್ಲಿ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಂದ ಹೃದಯಾಘಾತ ಹೆಚ್ಚುತ್ತಿರುವ ಕುರಿತು ಚರ್ಚೆ ನಡೆಯುತ್ತಿದೆ. ನಮ್ಮಲ್ಲಿ ಆ ರೀತಿ ಇರಬಹುದು, ಇಲ್ಲದೆಯೂ ಇರಬಹುದು. ಆದರೆ, ದಿಢೀರನೇ ಹೃದಯಾಘಾತ ಪ್ರಕರಣಗಳು ಏರಿಕೆಯಾಗುತ್ತಿರುವುದು ಏಕೆ ಎಂಬುದನ್ನು ಪತ್ತೆ ಹಚ್ಚಬೇಕು ಎಂಬುದು ನಮ್ಮ ಮನವಿಯಾಗಿದೆ. ಆದರೆ, ಕೆಲವರು ಕೋವಿಡ್ ಲಸಿಕೆ ಪಡೆದವರೇ ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಹೆಚುತ್ತಿದೆ ದಿಕ್ಕು ತಪ್ಪಿಸುತ್ತಿದ್ದಾರೆ. ಒಂದು ಹಂತದಲ್ಲಿ ಕೋವಿಡ್ ನಿಂದಲೇ ಆಗಿದ್ದರೆ ಏನೂ ಮಾಡಲು ಆಗುವುದಿಲ್ಲ. ಸತ್ತವರನ್ನು ಉಳಿಸಲೂ ಆಗುವುದಿಲ್ಲ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ನೀತಿ ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.

ಸರ್ಕಾರದಿಂದ ಪರಿಶೀಲನೆ‌ಯೇ ಇಲ್ಲ

ಅಪಸಾಮಾನ್ಯ ರೀತಿಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ತ್ವರಿತವಾಗಿ  ಕಾರಣ ಪತ್ತೆ ಹಚ್ಚಬೇಕಾಗಿದೆ.

ಕಳೆದ ಐದು ವರ್ಷದಲ್ಲಿ ಕೋವಿಡ್ ನೊಂದಿಗೆ ಥಳಕು ಹಾಕಿಕೊಂಡ ರಕ್ತದೊತ್ತಡ, ಹೃದಯಾಘಾತದ ಸಾವುಗಳೇ 15 ಲಕ್ಷ ಇವೆ ಎಂಬ ಮಾಹಿತಿ ಇದೆ. ಆದರೆ, ಇದ್ಯಾವ ಸಾವುಗಳನ್ನು  ಸರ್ಕಾರ‌ ಮರಣೋತ್ತರ ಸೇರಿದಂತೆ ಯಾವುದೇ ಪರೀಕ್ಷೆ ನಡೆಸಿಲ್ಲ. ಸರ್ಕಾರ ಕಾರಣಗಳನ್ನು ಪತ್ತೆ ಹಚ್ಚದೇ ಸುಮ್ಮನೆ ಕುಳಿತಿರುವಾಗ ಸಾಮಾಜಿಕ ಕಳಕಳಿ ಹೊಂದಿರುವವಲ್ಲಿ ಅನುಮಾನ ಮೂಡುವುದು ಸಹಜ ಎಂದು ಹೇಳಿದರು.

ಜೀವನಶೈಲಿ ಹಾಗೂ ಒತ್ತಡದಿಂದ ಹೃದಯಾಘಾತ ಸಂಭವಿಸುತ್ತಿವೆ ಎಂಬುದು ಹಳೆಯ ಸಮರ್ಥನೆ. ಕಳೆದ 40 ವರ್ಷಗಳಿಂದಲೂ ಏಷ್ಯನ್ ರಾಷ್ಟ್ರಗಳಲ್ಲಿ ಹೃದಯಾಘಾತಗಳ ಪ್ರಕರಣಗಳ ಪ್ರಮಾಣ ಏರುತ್ತಿದೆ. ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ದಿಢೀರನೇ ವಯಸ್ಕರಲ್ಲೇ ಹೃದಯಾಘಾತ ಹೆಚ್ಚುತಿರುವುದು ಕಳವಳಕಾರಿಯಾಗಿದೆ. ಸರ್ಕಾರ ಅಪಾಯಕಾರಿ ಗುಂಪುಗಳನ್ನು ಗುರುತಿಸಲು ನೀತಿ ರೂಪಿಸಿದರೆ ಹೃದಯಾಘಾತದ ಪೂರ್ವದಲ್ಲೇ ಚಿಕಿತ್ಸೆ ನೀಡಬಹುದು. ಹೃದಯಾಘಾತಕ್ಕೆ ಕಾರಣಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಲು ಸುಮಾರು ಒಂದೂವರೆ ವರ್ಷ ಸಮಯ ಹಿಡಿಯಬಹುದು. ಆದರೆ, ಕೆಲವೇ ವಾರಗಳಲ್ಲಿ ವರದಿ‌ ನೀಡಿದರೆ ನೀತಿ ನಿರೂಪಣೆಗೆ ಕಷ್ಟವಾಗಬಹುದು ಎಂದು ಹೇಳಿದರು. 

ಮುಂದಿನ ವಾರ ಸರ್ಕಾರಕ್ಕೆ ವರದಿ ಸಲ್ಲಿಕೆ

ರಾಜ್ಯದಲ್ಲಿ ಸಂತಾನೋತ್ಪತ್ತಿ ವಯೋಮಾನದವರೇ ( ಪ್ರೊಡೆಕ್ಟಿವಿಟಿ ಏಜ್) ಹೃದಯಾಘಾತಕ್ಕೆ ಒಳಗಾಗುತ್ತಿರುವ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಚಿಂತಕ ರಾಜಾರಾಮ್ ತಲ್ಲೂರು ಅವರ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಿದ್ದಾರೆ. ಸಮಿತಿಯು ಈಗಾಗಲೇ ರಾಜ್ಯವ್ಯಾಪಿ ಹೃದಯಾಘಾತಕ್ಕೆ ಒಳಗಾದ ಕಡಿಮೆ ವಯಸ್ಸಿನವರ ಅಂಕಿ ಅಂಶ ಕಲೆ ಹಾಕುತ್ತಿದೆ. ಕೊವಿಡ್ ಲಸಿಕೆ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ‌. ಮುಂದಿನ ವಾರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಕೆ.ಎ. ರವೀಂದ್ರನಾಥ್ ಅವರ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ಹೃದ್ರೋಗ ತಜ್ಞರ ವಿಭಿನ್ನ ದೃಷ್ಟಿಕೋನ

ಹೃದಯಾಘಾತ ಅಥವಾ ಹೃದಯ ಸ್ತಂಭನಗಳ ಹೆಚ್ಚಳವನ್ನು ಹೃದ್ರೋಗ ತಜ್ಞರು ವಿಭಿನ್ನ ದೃಷ್ಟಿಕೋನಗಳಲ್ಲಿ ವಿಶ್ಲೇಷಿಸಿದ್ದಾರೆ.

ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತಗಳು ಹೆಚ್ಚುತ್ತಿವೆ ಎಂಬುದು ಎಷ್ಟು ನಿಜವೋ, ಕೋವಿಡ್ ಗಿಂತ ಮುಂಚೆಯೇ ಸಣ್ಣ ವಯಸ್ಸಿನವರಲ್ಲಿ ಹೃದಯಾಘಾತ‌ ಸಾಮಾನ್ಯವಾಗಿತ್ತು‌ ಎಂಬುದು ಕೂಡ ಸತ್ಯಸಂಗತಿ. ಹೃದಯಾಘಾತಗಳ ಹೆಚ್ಚಳ ಕೇವಲ ಕೋವಿಡ್ ನಂತರ ಕಾಣಿಸಿಕೊಂಡ ವಿದ್ಯಮಾನವೇನಲ್ಲ. ಅಧ್ಯಯನಗಳ ಪ್ರಕಾರ, ಲಸಿಕೆ ಹಾಕಿಸಿಕೊಂಡ ಹತ್ತು ಲಕ್ಷ ವ್ಯಕ್ತಿಗಳಲ್ಲಿ 4-5 ಜನರು ಮಾತ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಬಹುತೇಕ ಹೃದ್ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಲಸಿಕೆ ಹಾಕಿಸಿಕೊಂಡ ಆರು ತಿಂಗಳಲ್ಲಿ ಹೃದಯಾಘಾತ ಸಂಭವಿಸಿದರೆ ಕೋವಿಡ್ ಲಸಿಕೆ ಅಡ್ಡ ಪರಿಣಾಮ ಎಂದು ಭಾವಿಸಬಹುದು. ಆದರೆ, ಲಸಿಕೆ ಹಾಕಿಸಿಕೊಂಡು ಐದು ವರ್ಷಗಳಾದ ಮೇಲೆ ಹೃದಯಾಘಾತ ಸಂಭವಿಸುತ್ತಿರುವುದು‌ ನೋಡಿದರೆ ಲಸಿಕೆ ಹೊರತುಪಡಿಸಿದ ಕಾರಣಗಳಿವೆ ಎಂಬುದು ತಿಳಿಯುತ್ತದೆ ಎನ್ನುತ್ತಾರೆ ಸಂಸದ ಹಾಗೂ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್.

ಇನ್ನು ವಾಯು ಮಾಲಿನ್ಯ ಮತ್ತು ಬದಲಾದ ಜೀವನಶೈಲಿಯೂ ಹೃದಯಾಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣ‌ ಎಂದು ವಿಶ್ಲೇಷಿಸಲಾಗುತ್ತಿದೆ.

ಒತ್ತಡ, ಯಾಂತ್ರೀಕೃತ ಜೀವನ, ಆನ್ಲೈನ್ ಡೆಲಿವರಿಯಿಂದ ಕ್ಷೀಣಿಸಿದ ದೈಹಿಕ ಚಟುವಟಿಕೆ, ಧೂಮಪಾನ, ನಿದ್ರಾಹೀನತೆ, ಕಳಪೆ ಆಹಾರ ಸೇವನೆ, ಅಧಿಕ ಬೊಜ್ಜು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದಲೂ ಹೃದಯಾಘಾತ ಸಂಭವಿಸುತ್ತಿದೆ ಎಂದು ವೈದ್ಯರು ಹೇಳುತ್ತಾರೆ.

ಮಕ್ಕಳಲ್ಲಿ ಹೃದಯಾಘಾತ ಹೆಚ್ಚು

ಸಣ್ಣ ವಯಸ್ಸಿನ ಮಕ್ಕಳು ಹೃದಯಾಘಾತಕ್ಕೆ ಒಳಗಾಗುತ್ತಿರುವುದಕ್ಕೆ ಕಾರಣಗಳನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಸಂಶೋಧನಾ ಸಂಸ್ಥೆಯ (ಕೆಎಂಸಿ ಆರ್ ಐ) ವೈದ್ಯರು ಪತ್ತೆ ಹಚ್ಚಿದ್ದಾರೆ.

ಧಾರವಾಡ ಜಿಲ್ಲೆಯ ಆರು ಶಾಲೆಗಳಲ್ಲಿ 8 ಮತ್ತು 9 ನೇ ತರಗತಿಯ 30 ಮಂದಿ ಅಧಿಕ ತೂಕದ (ಸ್ಥೂಲಕಾಯ) ವಿದ್ಯಾರ್ಥಿಗಳನ್ನು ವೈದ್ಯರು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಈ ವಿದ್ಯಾರ್ಥಿಗಳನ್ನು ಆಸ್ಪತ್ರೆಯ ಬಹುಶಿಸ್ತೀಯ ಸಂಶೋಧನಾ ಘಟಕದಲ್ಲಿ ಸರಣಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಯಿತು.

30 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಅಸಹಜವಾದ ಬೆಳವಣಿಗೆ ನ್ಯೂನ್ಯತೆ ಹೊಂದಿದ್ದರು. ಇವರಲ್ಲಿ ಅನೇಕರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ಹನ್ನೊಂದು ವಿದ್ಯಾರ್ಥಿಗಳಲ್ಲಿ ಟ್ರೈಗ್ಲಿಸರೈಡ್ ಮಟ್ಟ ಹೆೆಚ್ಚಾಗಿದ್ದರೆ, ನಾಲ್ವರು ವಿದ್ಯಾರ್ಥಿಗಳಲ್ಲಿ ಹೋಮೋಸಿಸ್ಟೀನ್ ಮತ್ತು ಲಿಪೋಪ್ರೋಟಿನ್ ಮಟ್ಟ ಹೆಚ್ಚಾಗಿತ್ತು.

ಈ ಅಸಹಜತೆಗಳು ಹೃದಯ ರಕ್ತನಾಳದ ಅಪಾಯದ ಮುನ್ಸೂಚನೆ ಹೊಂದಿದ್ದವು ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ನೋಡೆಲ್ ಅಧಿಕಾರಿ ಡಾ. ರಾಮ್ ಕೌಲುಗುಡ್ಡ ಹೇಳಿದ್ದಾರೆ.

ಈ ಸಂಬಂಧದ ಸಂಶೋಧನಾ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಶಿಕ್ಷಣ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.

ವರದಿಯಲ್ಲಿ ನೀತಿ ಬದಲಾವಣೆಯ ತುರ್ತು ಅಗತ್ಯವನ್ನು ವಿವರಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಪಠ್ಯೇತರ ದೈಹಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಸರ್ಕಾರ ಆರೋಗ್ಯ ನೀತಿಯಲ್ಲಿ ಬದಲಾವಣೆ ತಂದು ಪರೀಕ್ಷೆಗೆ ಅನುವು ಮಾಡಿಕೊಟ್ಟರೆ ಮಕ್ಕಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಯನ್ನು ತಪ್ಪಿಸಬಹುದು ಎಂದು ವರದಿಯಲ್ಲಿ ಮನವಿ‌ ಮಾಡಿದ್ದಾರೆ. 

ವಾರ್ಷಿಕ 96 ಸಾವಿರ ಮಂದಿ ಹೃದಯಾಘಾತಕ್ಕೆ ತುತ್ತು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ‌ಅಂಶಗಳ ಪ್ರಕಾರ, ರಾಜ್ಯದಲ್ಲಿ ವಾರ್ಷಿಕ ಅಂದಾಜು 96,150 ಜನರು ತೀವ್ರ ಹೃದಯಾಘಾತದಿಂದ (ST-ಎಲಿವೇಶನ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್) ಬಳಲುತ್ತಿದ್ದಾರೆ. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಶೇ. 35 ರಷ್ಟು ಹೃದಯಾಘಾತ ಸಂಭವಿಸುತ್ತಿದೆ.

ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾದವರೆಷ್ಟು?

ಹಾಸನ ಜಿಲ್ಲೆ ಒಂದರಲ್ಲೇ ಹಠಾತ್ ಹೃದಯಾಘಾತದಿಂದ ಸಾವುಗಳು ಹೆಚ್ಚಾಗಿದ್ದು, ಕಳೆದ ತಿಂಗಳಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 17 ಮಂದಿ ಮೃತಪಟ್ಟಿದ್ದಾರೆ.

ಉಡುಪಿಯಲ್ಲಿ ಒಂದು ವಾರದ ಅವಧಿಯಲ್ಲಿ ಐವರು, ಬೆಳಗಾವಿಯಲ್ಲಿ ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿತ್ತು.

ಬಾಗಲಕೋಟೆ ಜಿಲ್ಲೆಯಲ್ಲಿ 25 ವರ್ಷದ ಮಧುಮಗ ತನ್ನ ಮದುವೆಯಲ್ಲಿ ಮಂಗಳಸೂತ್ರ ಕಟ್ಟಿದ ಸ್ವಲ್ಪ ಸಮಯದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದ. ಬೆಂಗಳೂರಿನಲ್ಲಿ 28 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದರು. ಹೀಗೆ ಪ್ರತಿ ದಿನವೂ ಒಂದಲ್ಲ, ಒಂದು ಕಡೆ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದುತ್ತಿರುವವರ‌ ವರದಿಗಳು ಆಗುತ್ತಲೇ ಇವೆ.

ಸರ್ಕಾರದಿಂದ STEMI ಹೃದಯಾಘಾತ ನಿರ್ವಹಣಾ ಕಾರ್ಯಕ್ರಮ

ಹೃದಯಾಘಾತ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ 2023 ಮಾರ್ಚ್ ತಿಂಗಳಿಂದ ರಾಜ್ಯ ಸರ್ಕಾರವು ಸಾರ್ವಜನಿಕ STEMI (ಎಸ್‌ಟಿ-ಎಲಿವೇಶನ್ ಮಯೋಕಾರ್ಡಿಯಲ್ ಇನ್‌ಫಾರ್ಕ್ಷನ್) ಹೃದಯಾಘಾತ ನಿರ್ವಹಣಾ ಕಾರ್ಯಕ್ರಮ ಜಾರಿಗೊಳಿಸಿದೆ.

ಕಾರ್ಯಕ್ರಮದಡಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ (AED) ಸಾಧನಗಳನ್ನು ಸ್ಥಾಪಿಸಲು‌ ನಿರ್ಧರಿಸಿದೆ.

STEMI ಕಾರ್ಯಕ್ರಮವು 'ಗೋಲ್ಡನ್ ಅವರ್' ಚಿಕಿತ್ಸೆ ಖಚಿತಪಡಿಸುವ ಗುರಿ ಹೊಂದಿದೆ. ಈ ಕಾರ್ಯಕ್ರಮವು ಹಬ್-ಅಂಡ್-ಸ್ಪೋಕ್ ಮಾದರಿಯದ್ದಾಗಿದೆ.

ಇದರಲ್ಲಿ ಕ್ಯಾತ್ ಲ್ಯಾಬ್‌ (cardiac catheterization laboratory) ಹೊಂದಿರುವ ಆಸ್ಪತ್ರೆಗಳು ಹಬ್‌ಗಳಾಗಿ ಕಾರ್ಯ ನಿರ್ವಹಿಸಲಿವೆ. ಹೃದಯಾಘಾತಕ್ಕೆ ಒಳಗಾಗುವವರನ್ನು ಗೋಲ್ಡನ್ ಅವರ್ ನಲ್ಲಿ ಈ ಹಬ್ ಗಳಿಗೆ ಸಾಗಿಸಲು ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು ಸ್ಪೋಕ್ ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸಲಿವೆ.

Tags:    

Similar News