ಭೂಕುಸಿತ: 3 ತಿಂಗಳಲ್ಲಿ ಪಶ್ಚಿಮ ಘಟ್ಟದ ಧಾರಣ ಸಾಮರ್ಥ್ಯ ತಿಳಿಯಲು ಅಧ್ಯಯನ: ಪರಿಸರ ಇಲಾಖೆ ಕ್ರಮ

ದಕ್ಷಿಣ ಕನ್ನಡ, ಕೊಡಗು ಮೊದಲಾದ ಭಾಗದಲ್ಲಿ ಮುಂಗಾರು ಪೂರ್ವ ಮಳೆಗೇ ಭೂಕುಸಿತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಲು ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ನಿರ್ಧರಿಸಿದೆ.;

Update: 2025-06-01 06:29 GMT

ದಕ್ಷಿಣ ಕನ್ನಡ, ಕೊಡಗು ಮೊದಲಾದ ಭಾಗದಲ್ಲಿ ಮುಂಗಾರು ಪೂರ್ವ ಮಳೆಗೇ ಭೂಕುಸಿತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಲು ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ನಿರ್ಧರಿಸಿದೆ.

ಪಶ್ಚಿಮ ಘಟ್ಟಗಳ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸುವ ಸಂಬಂಧ ಕ್ರಮ ಕೈಗೊಳ್ಳಲು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಲಿಖಿತ ಸೂಚನೆಯನ್ನು ನೀಡಲಾಗಿದೆ.

ಪಶ್ಚಿಮ ಘಟ್ಟದಲ್ಲಿ ಹಲವು ರಸ್ತೆ, ಮತ್ತಿತರ ಯೋಜನೆಗಳು ಕಾರ್ಯಗತವಾಗುತ್ತಿದ್ದು, ಇದರಿಂದ ಘಟ್ಟ ಅಪಾಯಕ್ಕೆ ಸಿಲುಕಿದೆ, ಆಸ್ತಿಹಾನಿ, ಬೆಳೆ ಹಾನಿ, ಜೀವಿಹಾನಿಯ ಜೊತೆಗೆ ವನ್ಯ ಜೀವಿಗಳೂ ಸಂಕಷ್ಟ ಎದುರಿಸುವಂತಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಪಶ್ಚಿಮಘಟ್ಟ ಕ್ಷೀಣಿಸಿದರೆ ಮುಂಬರುವ ದಿನಮಾನಗಳಲ್ಲಿ ತೀವ್ರ ಜಲಕ್ಷಾಮ ಎದುರಾಗುವ ಭೀತಿ ಇದೆ ಎಂಬ ತಜ್ಞರ ಅಭಿಪ್ರಾಯ ಉಲ್ಲೇಖಿಸಿರುವ ಸಚಿವ ಖಂಡ್ರೆ,  ಈ ನಿಟ್ಟಿನಲ್ಲಿ ಅಧ್ಯಯನ ಮಾಡಿ 3 ತಿಂಗಳೊಳಗೆ ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯದ ಬಗ್ಗೆ ವರದಿ ಸಲ್ಲಿಸಲು ಜೀವವೈವಿಧ್ಯಮಂಡಳಿಯ ಸದಸ್ಯ ಕಾರ್ಯದರ್ಶಿ, ಮೌಲ್ಯಮಾಪನ, ಕಾರ್ಯಯೋಜನೆ, ಸಂಶೋಧನೆ ಮತ್ತು ತರಬೇತಿ ಹಾಗೂ ಅರಣ್ಯ ಸಂರಕ್ಷಣೆ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ಸೂಚಿಸಿದ್ದಾರೆ.

ಜೀವವೈವಿಧ್ಯತೆಯ ತಾಣವಾದ ಪಶ್ಚಿಮಘಟ್ಟದಲ್ಲಿ ಕರ್ನಾಟಕದ ಅರಣ್ಯಗಳ ಪೈಕಿ ಶೇ.60ರಷ್ಟು ಅರಣ್ಯ ಪ್ರದೇಶ ಇದ್ದು, ಇದು ಸಸ್ಯಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲಗಳ ನೆಲೆವೀಡಾಗಿದೆ. ಪಶ್ಚಿಮಘಟ್ಟಗಳು ಮಳೆಯ ಮಾರುತ ತಡೆದು ಮಳೆ ಸುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬ ತಜ್ಞರ ಅಭಿಪ್ರಾಯದಂಯತೆ ಸಚಿವ ಈಶ್ವರ ಖಂಡ್ರೆ ಪಶ್ಚಿಮ ಘಟ್ಟದ ಪ್ರಾಮುಖ್ಯತೆ, ಸಂರಕ್ಷಣೆಯ ಸಂಬಂಧ ಈ ಕ್ರಮ ಕೈಗೊಂಡಿದ್ದಾರೆ.

ಭೂಕುಸಿತ ಹೆಚ್ಚಳ

ಮುಂಗಾರು ಸಂದರ್ಭದಲ್ಲಿ 15 ವರ್ಷಗಳಲ್ಲಿ ಭೂಕುಸಿತ ಘಟನೆಗಳಿಗೆ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಕಳೆದೆರಡು ದಶಕಗಳಲ್ಲಂತೂ ಭೂಕುಸಿತ ಘಟನೆಗಳು  ಹೆಚ್ಚುತ್ತಿದ್ದು,  ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 2009ರಿಂದ ಇಲ್ಲಿವರೆಗೆ 1,200ಕ್ಕೂ ಅಧಿಕ ಭೂಕುಸಿತ ಘಟನೆಗಳು ದಾಖಲಾಗಿವೆ. ಇದರಲ್ಲಿ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ರಾಜ್ಯದ ಒಟ್ಟು ಭೂಪ್ರದೇಶದ ಶೇ.15.39ರಷ್ಟು ಭೂಪ್ರದೇಶ ಅಂದರೆ ಅಂದಾಜು 29 ಸಾವಿರ ಕಿ.ಮೀ. ಭೂ ವಿಸ್ತೀರ್ಣ ಭೂಕುಸಿತದ ಅಪಾಯದಲ್ಲಿದೆ. ಒಟ್ಟು 29 ತಾಲೂಕುಗಳು ಭೂಕುಸಿತ ಅಪಾಯದ ವ್ಯಾಪ್ತಿಗೆ ಬರುತ್ತವೆ. ಕಳೆದ ದಶಕದಲ್ಲಿ ಅತಿ ಹೆಚ್ಚು ಭೂಕುಸಿತ ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದೆ.  ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಭೂಕುಸಿತದ ಘಟನೆಗಳು ನಡೆದಿವೆ.

ಈ ಎಲ್ಲ ಜಿಲ್ಲೆಗಳು ಪಶ್ಚಿಮಘಟ್ಟ ಪ್ರದೇಶದ ಸುತ್ತುಮುತ್ತಲೂ ಇರುವುದರಿಂದ ಹಾಗೂ ಮುಂಗಾರು ಮಳೆಯಲ್ಲಿ  ಪಶ್ಚಿಮ ಘಟ್ಟ ಪ್ರಮುಖ ಪಾತ್ರ ವಹಿಸುವುದರಿಂದ ಆ  ಪ್ರದೇಶದ ಧಾರಣಾ ಸಾಮರ್ಥ್ಯ ತಿಳಿಯುವುದು ಇಂದಿನ ಅಗತ್ಯವಾಗಿದೆ. ಪಶ್ಚಿಮ ಘಟ್ಟ ಪ್ರದೇಶದ ಸುತ್ತುಮುತ್ತಲೂ ಆನೇಕ ಕಾಮಗಾರಿಗಳು, ರಸ್ತೆಗಳು, ಯೋಜನೆಗಳು ಜಾರಿಯಾಗಿರುವುದರಿಂದ ಈಗಿನ ಸಾಮರ್ಥ್ಯ ಪತ್ತೆ ಅನಿವ ಅನಿವಾರ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Tags:    

Similar News