ಹೊಸಬಾಳೆ ಭೇಟಿಯಿಂದ ಈಶ್ವರಪ್ಪ ಪಾಲಿಗೆ ಹೊಸಬೆಳಕು ... ?

ಸಂಘಪ್ರಿಯ ಕೆ.ಎಸ್‌. ಈಶ್ವರಪ್ಪ ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ಯತ್ನ ನಡೆಯುತ್ತಿದೆ. ಈಶ್ವರಪ್ಪ ಅವರು ಬಿ.ಎಸ್‌. ಯಡಿಯೂರಪ್ಪ ಅವರ ಕುಟುಂಬದ ಟೀಕೆಯನ್ನು ಕಡಿಮೆ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಈಶ್ವರಪ್ಪ ಬಿಜೆಪಿಗೆ ಮತ್ತೆ ಸೇರ್ಪಡೆಯನ್ನು ಸೂಚಿಸುತ್ತಿವೆ.;

Update: 2025-06-20 00:30 GMT

ಮಾಜಿ ಉಪಮುಖ್ಯಮಂತ್ರಿ ಹಾಗೂ ಒಂದು ಕಾಲದ ಬಿಜೆಪಿಯ 'ಫೈರ್‌ ಬ್ರಾಂಡ್‌' ಕೆ.ಎಸ್.ಈಶ್ವರಪ್ಪ ಅವರು ಮರಳಿ ಗೂಡು ಸೇರುವರೆ? ಎಂಬ ಚರ್ಚೆಯೊಂದು ಬಿಜೆಪಿಯ ಪಡಸಾಲೆಯಲ್ಲಿ ಬಲವಾಗಿ ಕೇಳಿಬರುತ್ತಿದೆ. ಅದಕ್ಕಾಗಿ ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರೇ ಈಶ್ವರಪ್ಪ  ಅವರ ಬಿಜೆಪಿ ಮರಳುವಿಕೆಗೆ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಈಶ್ವರಪ್ಪ ಅವರು ಬಿಜೆಪಿಯಲ್ಲಿದ್ದ ಪ್ರಬಲ ಹಿಂದುಳಿದ ವರ್ಗಗಳ ನಾಯಕ. ಪಕ್ಷ ನಿಷ್ಠೆಯಲ್ಲಿ ಅವರನ್ನು ಮೀರಿಸುವವರು ಯಾರೂ ಇರಲಿಲ್ಲ. ಈಗ ಪಕ್ಷದಿಂದ ಹೊರಗಿದ್ದರೂ ಅವರು, ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇದೇ ಪರಿವಾರ ಈಶ್ವರಪ್ಪರನ್ನು ಮತ್ತೆ ಬಿಜೆಪಿಗೆ ಕರೆತರಬೇಕೆಂಬ ಪ್ರಯತ್ನದಲ್ಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಆರ್‌.ಎಸ್.ಎಸ್.‌ನ ಎರಡನೇ ಪರಮೋಚ್ಛ ನಾಯಕ ದತ್ತಾತ್ರೇಯ ಹೊಸಬಾಳೆ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಈಶ್ವರಪ್ಪರನ್ನು ಕರೆಸಿಕೊಂಡು ಮಾತನಾಡಿದ್ದಾರೆ. ಪರಿವಾರದ ವಲಯದಲ್ಲಿ ಈಶ್ವರಪ್ಪ ಬಗ್ಗೆ ಸಕಾರಾತ್ಮಕವಾದ ಮಾತುಗಳು ಬಂದಿವೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಸೇರಿದಂತೆ ಪರಿವಾರದ ಎಲ್ಲಾ ನಾಯಕರೊಂದಿಗೆ ಈಶ್ವರಪ್ಪ ಅವರು ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಈಶ್ವರಪ್ಪ ಅವರು ಮತ್ತೆ ಮರಳಿಗೂಡಿಗೆ ಬರುವ ಸಾಧ್ಯತೆಗಳಿಗೆ ಪುರಾವೆ ನೀಡಿವೆ ಎನ್ನುತ್ತಾರೆ ಅವರ ಅನುಯಾಯಿಗಳು.

ವೇದಿಕೆ ಹಂಚಿಕೊಂಡರು

ಕಳೆದ ತಿಂಗಳು ಶಿವಮೊಗ್ಗದಲ್ಲಿ ಆರ್‌.ಎಸ್.ಎಸ್.‌ ನಾಯಕ ಹಿರಿಯೂರು ಕೃಷ್ಣಮೂರ್ತಿ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ವೇದಿಕೆ ಹಂಚಿಕೊಂಡಿದ್ದರು. ಇದೇ ಸಮಾರಂಭದಲ್ಲಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಪರಿವಾರದ ಅನೇಕರು ಭಾಗಿಯಾಗಿದ್ದರು. ಈ ಸಂದರ್ಭ ವೈಮನಸು ಬಿಟ್ಟು ಬಿಜೆಪಿ ಮತ್ತು ರಾಷ್ಟ್ರೀಯವಾದಕ್ಕೆ ದುಡಿಯಿರಿ ಎಂಬ ಸಲಹೆಗಳನ್ನು ಪರಿವಾರ ಪ್ರಮುಖರು ನೀಡಿದ್ದಾರೆನ್ನಲಾಗಿದೆ.

ಮದುವೆಗೆ ಆಮಂತ್ರಣ

ಜೂನ್‌ 8 ರಂದು ಸಂಸದ ಬಿ.ವೈ.ರಾಘವೇಂದ್ರ ಅವರ ಪುತ್ರನ ವಿವಾಹ ನಡೆದಿದ್ದು, ಆ ಮದುವೆಗೆ ಖುದ್ದು ರಾಘವೇಂದ್ರ ಅವರೇ ಈಶ್ವರಪ್ಪರ ಮನೆಗೆ ಭೇಟಿ ನೀಡಿ ಮದುವೆಗೆ ಆಮಂತ್ರಣ ನೀಡಿದ್ದರು. ತಮ್ಮ ಹುಟ್ಟು ಹಬ್ಬದ ಅಂಗವಾಗಿ ಹಲವು ಧಾರ್ಮಿ ಮತ್ತು ಸಮಾಜ ಸೇವೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಈಶ್ವರಪ್ಪ ಅವರು, ಒತ್ತಡದ ನಡುವೆಯೂ ಜೂ.12 ರಂದು ಶಿಕಾರಿಪುರದಲ್ಲಿ ನಡೆದಿದ್ದ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ಹಸ್ತಲಾಘವ ಮಾಡಿಕೊಂಡಿದ್ದರು. ಯಡಿಯೂರಪ್ಪ ಪುತ್ರರಾದ ವಿಜಯೇಂದ್ರ ಮತ್ತು ರಾಘವೇಂದ್ರ ಅವರು ಈಶ್ವರಪ್ಪರನ್ನು ಪ್ರೀತಿಯಿಂದ ಸ್ವಾಗತಿಸಿ ಆತಿಥ್ಯ ನೀಡಿದ್ದರು.

ಹಳೆಯ ಗೆಳಯ ಬಿಎಸ್‌ವೈ ಜತೆ ಯಾಕೆ ಮುನಿಸು?

ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾವೇರಿಯಲ್ಲಿ ಪುತ್ರ ಕೆ.ಇ.ಕಾಂತೇಶ್‌ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಲಿಲ್ಲ ಎಂದು ಮುನಿಸಿಕೊಂಡು ಬಿಜೆಪಿ ತೊರೆದಿದ್ದ ಈಶ್ವರಪ್ಪ ಅದೇ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದು ಠೇವಣಿ ಕಳೆದುಕೊಂಡಿದ್ದರು.

ತಮ್ಮ ಬಹುಕಾಲದ ಒಡನಾಡಿ ಮತ್ತು ಮಾರ್ಗದರ್ಶಕರಾಗಿದ್ದ ಯಡಿಯೂರಪ್ಪ ಅವರು ಮನಸ್ಸು ಮಾಡಿದ್ದರೆ, ಹಾವೇರಿಯಲ್ಲಿ ಪುತ್ರನಿಗೆ ಅವಕಾಶ ಕೊಡಿಸಬಹುದಿತ್ತು. ಆದರೆ ಅವರು ನೆರವಿಗೆ ಬರಲಿಲ್ಲ ಎಂದು ಕೋಪಗೊಂಡಿದ್ದ ಈಶ್ವರಪ್ಪ ಅವರು 'ರಾಜ್ಯ ಬಿಜೆಪಿಯನ್ನು ಒಂದು ಕುಟುಂಬದ ಹಿಡಿತದಿಂದ ಪಾರು ಮಾಡಬೇಕಿದೆ,' ಎಂದು ಸಮರ ಸಾರಿದ್ದರು. ಲೋಕಸಭೆ ಚುನಾವಣೆಯಲ್ಲಿ ಸೋಲಾದ ಬಳಿಕವೂ 'ರಾಷ್ಟ್ರ ಭಕ್ತ ಬಳಗ'ದ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಭೌತಿಕವಾಗಿ ಬಿಜೆಪಿ ತೊರೆದಿದ್ದರೂ , ಅವರ ಎಲ್ಲಾ ಚಟುವಟಿಕೆ ಮತ್ತು ಹೋರಾಟಗಳು ಬಿಜೆಪಿಗೆ ಪೂರಕವಾಗಿಯೂ ಕಾಂಗ್ರೆಸ್‌ಗೆ ವಿರುದ್ಧವಾಗಿಯೇ ನಡೆಯುತ್ತಿವೆ ಎಂಬುದು ಮಾತ್ರ ಕಟುವಾಸ್ತವ.

ಮೋದಿ ಜಪ ಮುಂದುವರಿಕೆ

ಈಶ್ವರಪ್ಪ ಅವರು ಬಿಜೆಪಿ ತೊರೆದಿದ್ದರೂ ಪ್ರಧಾನಿ ಮೋದಿ ಅವರ ಜಪವನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷರ ಬದಲಾವಣೆ ಆಗುತ್ತದೆ ಆಗ ಎಲ್ಲಾ ಬದಲಾಗುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಈಶ್ವರಪ್ಪ ಇದ್ದರು. ಆದರೆ ಇತ್ತೀಚೆಗೆ ಬಿಜೆಪಿಗೆ ಸೆರಗೊಳಗಿನ ಕೆಂಡದಂತಿದ್ದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಯಿತು. ಕಾಕತಾಳೀಯ ಎಂಬಂತೆ ಈಶ್ವರಪ್ಪ ಅವರೂ ಯಡಿಯೂರಪ್ಪ ಕುಟುಂಬವನ್ನು ಟೀಕಿಸುವುದನ್ನು ಕೊಂಚ ಕಡಿಮೆ ಮಾಡಿದ್ದಾರೆ. ಮಾತ್ರವಲ್ಲದೆ ತಮ್ಮ ಪಾಡಿಗೆ ತಾವು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 'ಹಿಂದೂಗಳ ಮೇಲಿನ ಹಲ್ಲೆ', ಭಯೋತ್ಪಾದಕರ ದಾಳಿ, ಆಪರೇಷನ್‌ ಸಿಂಧೂರದಂತಹ ಘಟನೆಗಳು ನಡೆದಾಗ ಬಿಜೆಪಿಯನ್ನೂ ಮೀರಿಸುವಂತೆ ಪ್ರತಿಕ್ರಿಯೆ ಮತ್ತು ಹೋರಾಟಗಳನ್ನು ಮಾಡಿದ್ದಾರೆ.

ಬೆಂಬಲಿಗರ ಬಿಜೆಪಿ ಸೇರ್ಪಡೆ

ಈ ನಡುವೆ ಈಶ್ವರಪ್ಪರೊಂದಿಗೆ ಬಿಜೆಪಿ ತೊರೆದಿದ್ದ ಬಿಜೆಪಿಯ ಮಾಜಿ ಉಪಮೇಯರ್‌ ಶಂಕರ್‌ ಗನ್ನಿ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಅವರೊಂದಿಗೆ ಹಲವು ಬೆಂಬಲಿಗರನ್ನೂ ಕರೆದುಕೊಂಡು ಹೋಗಿದ್ದಾರೆ. ಈ ಸೇರ್ಪಡೆ ಮೂಲಕ ಈಶ್ವರಪ್ಪ ಬೆಂಬಲಿಗರ ಬಿಜೆಪಿ ಸೇರ್ಪಡೆ ಪರ್ವ ಆರಂಭವಾಗಲಿದೆ ಎನ್ನಲಾಗುತ್ತಿದೆ. ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ಈಶ್ವರಪ್ಪರನ್ನೂ ಮರಳಿ ಬಿಜೆಪಿಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷರು ಆಯ್ಕೆಯ ಸಂದರ್ಭದಲ್ಲಿಯೇ ಈ ಎಲ್ಲವೂ ನಡೆಯಲಿದೆ. ಸಿದ್ದರಾಮಯ್ಯ ಅವರ ಬೆನ್ನಿಗೆ ಕುರುಬ ಸಮಾಜ ಮತ್ತು ಹಿಂದುಳಿದ ವರ್ಗ ಇದ್ದಾರೆ. ಇಂತಹ ಹೊತ್ತಿನಲ್ಲಿ ಹಿಂದುಳಿದ ವರ್ಗದ ನಾಯಕ ಈಶ್ವರಪ್ಪರನ್ನು ಹೊರಗೆ ಬಿಡುವುದು ತರವಲ್ಲ ಎಂಬ ಚರ್ಚೆ ಬಿಜೆಪಿಯಲ್ಲಿಯೇ ನಡೆದಿದೆ.

ಒಟ್ಟಾರೆಯಾಗಿ ಸಂಘಪ್ರಿಯ ಈಶ್ವರಪ್ಪರನ್ನು ಬಿಜೆಪಿಗೆ ಮರಳಿ ಕರೆತರಲು ಸಂಘದ ಪ್ರಮುಖರೇ ಕಾರ್ಯಪ್ರವೃತ್ತರಾಗಿದ್ದಾರೆ ಎನ್ನುವ ಸುದ್ದಿಯಂತೂ ಹೊರಬಿದ್ದಿದೆ.

Tags:    

Similar News