E-Khata | ಇ-ಖಾತಾದಿಂದ ಆಸ್ತಿ ಮಾಲೀಕತ್ವಕ್ಕೆ ಬಲ; ಕಂದಾಯ ಸಚಿವರ ಅಭಿಮತ
ಆಸ್ತಿ ಮಾಲೀಕರಿಗೆ ಒಂದೇ ಸೂರಿನಡಿ ಇ-ಖಾತಾ ಒದಗಿಸುವ ಸಲುವಾಗಿ ಭಾನುವಾರ ಯಲಹಂಕದ ಸಹಕಾರ ನಗರದಲ್ಲಿ ಇ-ಖಾತಾ ಅಭಿಯಾನ ನಡೆಯಿತು.;
ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸುವವರಿಗೆ ಕಡಿವಾಣ ಹಾಕುವ ಹಾಗೂ ಆಸ್ತಿ ಮಾಲೀಕತ್ವಕ್ಕೆ ಬಲ ತುಂಬುವ ಉದ್ದೇಶದಿಂದ ರಾಜ್ಯ ಸರ್ಕಾರ ಇ-ಖಾತಾ ವ್ಯವಸ್ಥೆ ಜಾರಿಗೆ ತಂದಿದೆ.
ಆಸ್ತಿ ಮಾಲೀಕರಿಗೆ ಒಂದೇ ಸೂರಿನಡಿ ಇ-ಖಾತಾ ಒದಗಿಸುವ ಸಲುವಾಗಿ ಭಾನುವಾರ ಯಲಹಂಕದ ಸಹಕಾರ ನಗರದಲ್ಲಿ ಇ-ಖಾತಾ ಅಭಿಯಾನ ಆಯೋಜಿಸಿತ್ತು.
ಅಭಿಯಾನದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಕಷ್ಟಪಟ್ಚು ದುಡಿದ ಯಾರದ್ದೋ ಮನೆ-ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದವರಿಗೆ ಸರ್ಕಾರದ ಈ ಉಪಕ್ರಮ ಕಡಿವಾಣ ಹಾಕಲಿದೆ.
ಪೇಪರ್ ಖಾತಾ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಯಾರು ಬೇಕಾದರೂ ನಕಲಿ ಖಾತಾ ಸೃಷ್ಟಿಸುವ ಅಪಾಯ ಇತ್ತು. ನಕಲಿ ಖಾತೆಗಳ ಮೂಲಕ ಭೂ ಮಾಫಿಯಾದವರು ಹಲವರ ಆಸ್ತಿಗಳನ್ನು ಲಪಟಾಯಿಸಿರುವ ಉದಾಹರಣೆಗಳೂ ಸಾಕಷ್ಟಿವೆ ಎಂದರು.
ಮಧ್ಯಮ ವರ್ಗದ ಜನ ಕಷ್ಟಪಟ್ಟು ದುಡಿದು ನಗರ ಭಾಗದಲ್ಲಿ ಆಸ್ತಿ ಖರೀದಿಸಿದರೆ, ಅದನ್ನ ಮತ್ಯಾರೋ ನಕಲಿ ದಾಖಲೆ ಸೃಷ್ಟಿಸಿ ಕಬಳಿಸುವುದನ್ನು ಸರ್ಕಾರ ನೋಡುತ್ತಾ ಕೂರಲಾಗದು. ಅಲ್ಲದೆ, ಇಂತಹ ಸಂದರ್ಭದಲ್ಲಿ ಆಸ್ತಿ ಮಾಲೀಕರ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಅಥವಾ ಮಾರಾಟ ಮಾಡಲು ಮಧ್ಯವರ್ತಿಗಳಿಗೆ ಲಕ್ಷಗಟ್ಟಲೆ ಹಣ ನೀಡಬೇಕಾದ ದುಸ್ಥಿತಿ ಇತ್ತು. ಇದೇ ಕಾರಣಕ್ಕೆ ಈ ಎಲ್ಲಾ ಸಮಸ್ಯೆಗಳಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಇ-ಖಾತಾ ವ್ಯವಸ್ಥೆ ಜಾರಿಗೆ ತರಲಾಯಿತು ಎಂದು ವಿವರಿಸಿದರು.
ಒಮ್ಮೆ ಇ-ಖಾತಾ ಪಡೆದರೆ ಆಸ್ತಿ ಮಾಲೀಕತ್ವಕ್ಕೆ ಸಂಪೂರ್ಣ ರಕ್ಷಣೆ ದೊರಕಲಿದೆ. ನಕಲಿ ವಹಿವಾಟು ಕೊನೆಗೊಳ್ಳಲಿದೆ. ಅಲ್ಲದೆ, ಭವಿಷ್ಯದಲ್ಲಿ ಆಸ್ತಿ ಮಾರಾಟ-ವಹಿವಾಟು ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿಯನ್ನೂ ತಡೆಯಬಹುದಾಗಿದೆ ಎಂದು ಭರವಸೆ ನೀಡಿದರು.
ನಾವು ಇ-ಖಾತಾ ಜಾರಿಗೆ ತಂದಾಗ ಕೆಲವರು ಟೀಕಿಸಿದ್ದರು. ಇದರಿಂದ ಸರ್ಕಾರದ ಆದಾಯ ಕಡಿತವಾಗುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದರು. ಆದರೆ, ಸರ್ಕಾರವು ಅಕ್ರಮ ವಹಿವಾಟಿನಿಂದ ಹಣ ಮಾಡಬೇಕಾದ ಅಗತ್ಯ ಇದೆಯಾ? ಎಂದು ಪ್ರಶ್ನಿಸಿದರು.
ಸುಳ್ಳು ಸುದ್ದಿಗಳ ವಿರುದ್ಧ ಅಸಮಾಧಾನ
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಳೆದ 5 ತಿಂಗಳಲ್ಲಿ 150ಕ್ಕೂ ಹೆಚ್ಚು ಇ-ಖಾತಾ ಅಭಿಯಾನ ನಡೆಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ತಮ್ಮ ಕೆಲಸ ಕಾರ್ಯ ಬಿಟ್ಟು 50,000 ಜನರಿಗೆ ಉಚಿತವಾಗಿ ಇ-ಖಾತಾ ಮಾಡಿಕೊಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಇ-ಖಾತಾ ವಿತರಿಸಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಬ್ಯಾಟರಾಯನಪುರ ಪಾತ್ರವಾಗಿದೆ. ಆದರೆ, ವಿಪಕ್ಷದ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಈ ಬಗ್ಗೆಯೂ ಸುಳ್ಳುಸುದ್ದಿ ಹಬ್ಬಿಸುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಆಸ್ತಿ ಮಾಲೀಕರಿಂದ ಅವರ ಆಸ್ತಿ ಮಾಹಿತಿ ಪಡೆದು ಲಪಟಾಯಿಸುವುದು ಇ-ಖಾತಾ ಅಭಿಯಾನದ ಉದ್ದೇಶ ಎಂದು ಬ್ಯಾಟರಾಯನಪುರ ಕ್ಷೇತ್ರದ ಕೆಲ ವಿಪಕ್ಷ ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಬಿಜೆಪಿಗರಿಗಂತು ಸುಳ್ಳು ಸುದ್ದಿ ಹರಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಆದರೆ, ಈ ಸುಳ್ಳನ್ನೂ ನಂಬುವ ಜನರ ಬಗ್ಗೆ ಏನೆಂದು ಹೇಳುವುದು? ಎಂದು ಖೇದ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಇ-ಖಾತಾ ನನ್ನ ಕನಸಿನ ಯೋಜನೆ. ಸಚಿವ ಕೃಷ್ಣ ಬೈರೇಗೌಡ ಅವರು ಸಚಿವರಾಗಿ ಸಾಕಷ್ಟು ಜವಾಬ್ದಾರಿಯಿಂದ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ ಎಂದು ಪ್ರಶಂಶಿಸಿದರು.
ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರನ್ನು ನಿರ್ಮಿಸಿದರು. ಕೆಂಗಲ್ ಹನುಮಂತಯ್ಯನವರು ಹೆಮ್ಮೆಯ ವಿಧಾನಸೌಧ ನಿರ್ಮಿಸಿದರು. ಎಸ್ ಎಂ ಕೃಷ್ಣ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣದ ಜೊತೆಗೆ ಐಟಿ-ಬಿಟಿ ಕ್ಷೇತ್ರಗಳಿಗೆ ಅಂಕಿತ ಹಾಕಿದರು. ಇದೇ ರೀತಿ ಇ-ಖಾತಾ ಮೂಲಕ ಸಾರ್ವಜನಿಕರ ಆಸ್ತಿ ಮಾಲೀಕತ್ವಕ್ಕೆ ಗ್ಯಾರಂಟಿ ನೀಡಿದ ಕೃಷ್ಣ ಬೈರೇಗೌಡ ಎಂದು ಇತಿಹಾಸ ಸ್ಮರಿಸಲಿದೆ. ಇಂತಹ ನಾಯಕರನ್ನು ಕ್ಷೇತ್ರದ ಜನ ಮುಂದಿನ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತದಿಂದ ಗೆಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಇ-ಖಾತಾ ಅಭಿಯಾನದಲ್ಲಿ ನಿರೀಕ್ಷೆಗೂ ಮೀರಿ ಸುಮಾರು 4,000 ಕ್ಕೂ ಅಧಿಕ ಜನ ಭಾಗವಹಿಸಿದ್ದರು. ಈ ಪೈಕಿ ಸುಮಾರು 1,500 ಜನಕ್ಕೆ ಇಂದು ಸ್ಥಳದಲ್ಲೇ ಇ-ಖಾತಾ ನೀಡಲಾಯಿತು. ಅಭಿಯಾನ ನಾಳೆಯೂ ಮುಂದುವರೆಯಲಿದ್ದು, ಎಲ್ಲರಿಗೂ ಇ-ಖಾತಾ ನೀಡುವ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
ಮನೆ ಮನೆಗೆ ತೆರಳಿ ಇ-ಖಾತಾ ವಿತರಣೆ
ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇ-ಖಾತಾ ಅಭಿಯಾನಕ್ಕೂ ಮುನ್ನ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಇ-ಖಾತಾ ಡ್ರಾಫ್ಟ್ ವಿತರಿಸಿದರು.
ಕಳೆದ 5 ತಿಂಗಳಿನಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರ ತಂಡ ಬ್ಯಾಟರಾಯನಪುರ ಕ್ಷೇತ್ರದಲ್ಲಿ 50,000ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಮನೆ ಮನೆಗೆ ತೆರಳಿ ಇ-ಖಾತಾ ಮಾಡಿಕೊಟ್ಟಿರುವುದು ವಿಶೇಷ.
ನಾಳೆಯೂ ಇರಲಿದೆ ಅಭಿಯಾನ
ಜೂ.30 ರಂದು ಕೂಡ ಸಹಕಾರ ನಗರದಲ್ಲಿ ಇ-ಖಾತಾ ಅಭಿಯಾನ ಇರಲಿದೆ. ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಬಂದು ಇ-ಖಾತಾಗೆ ನೋಂದಣಿ ಮಾಡಿಸಬೇಕು ಎಂದು ಕಂದಾಯ ಇಲಾಖೆ ಪ್ರಕಟಣೆ ಕೋರಿದೆ.
ಮೊದಲ ದಿನದ ಅಭಿಯಾನದಲ್ಲಿ ಒಟ್ಟು 4000 ಜನರು ಮಂದಿ ನೋಂದಣಿ ಮಾಡಿಕೊಂಡಿದ್ದು, 1679 ಅರ್ಜಿಗಳು ಪ್ರಕ್ರಿಯೆ ಹಂತದಲ್ಲಿವೆ. 677 ಅರ್ಜಿಗಳನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದೆ.