Child marriage| ಆರತಕ್ಷತೆ ವೇಳೆ ದಾಳಿ ನಡೆಸಿ ಬಾಲ್ಯ ವಿವಾಹ ತಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು
ಅದ್ಧೂರಿ ರಿಸೆಪ್ಷನ್ ನಡೆಯುತ್ತಿದ್ದಾಗಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಅಲ್ಲಿಗೆ ದಾಳಿ ಮಾಡಿ, ಮದುವೆ ತಡೆದಿದ್ದಾರೆ. ರಾತ್ರಿಯೇ ಬಾಲಕಿಯನ್ನು ರಕ್ಷಿಸಲಾಗಿದೆ.;
ಬೆಂಗಳೂರಿನ ದೇವನಹಳ್ಳಿಯ ಬಳಿ ರಾತ್ರಿ ಅದ್ದೂರಿಯಾಗಿ ವಿವಾಹ ಆರತಕ್ಷತೆ ನಡೆದಿತ್ತು. ಆದರೆ ಮರುದಿನ ನಡೆಯಬೇಕಾದ ಮದುವೆ ಮುರಿದು ಬಿದ್ದಿದೆ. ಏಕೆಂದರೆ ಅದು ಬಾಲ್ಯ ವಿವಾಹ ಪ್ರಕರಣವಾಗಿತ್ತು.
ವಿಜಯಪುರ ಪಟ್ಟಣದ ಚನ್ನಪ್ಪ-ಸುಬ್ಬಮ್ಮ ಕಲ್ಯಾಣ ಮಂಟಪದಲ್ಲಿ 17 ವರ್ಷದ ಅಪ್ರಾಪ್ತೆಯ ಮದುವೆಗೆ ಕುಟುಂಬಸ್ಥರು ಸಜ್ಜಾಗಿದ್ದರು. ಅದ್ಧೂರಿ ರಿಸೆಪ್ಷನ್ ನಡೆಯುತ್ತಿದ್ದಾಗಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಅಲ್ಲಿಗೆ ದಾಳಿ ಮಾಡಿ, ಮದುವೆ ತಡೆದಿದ್ದಾರೆ. ರಾತ್ರಿಯೇ ಬಾಲಕಿಯನ್ನು ರಕ್ಷಿಸಿ ಅಧಿಕಾರಿಗಳು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಅಪರಿಚಿತರ ಮಾಹಿತಿ, 1098 ಕರೆಗೆ ತಕ್ಷಣದ ಪ್ರತಿಕ್ರಿಯೆ
ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಮಾಹಿತಿ ಮಕ್ಕಳ ಸಹಾಯವಾಣಿ 1098 ಕ್ಕೆ ಬಂದಿತ್ತು. ಅದರಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸ್ಥಗಿತಗೊಳಿಸಿದರು. ಅಪ್ರಾಪ್ತ ವಧುವನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಕಾನೂನು ಉಲ್ಲಂಘನೆಗೆ ಕಠಿಣ ಕ್ರಮ: ಪ್ರಕರಣ ದಾಖಲು
ವಧುವಿನ ಪೋಷಕರು, ವರ, ಮತ್ತು ಮಂಟಪ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪದಡಿ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲ್ಯವಿವಾಹದಿಂದ ತಪ್ಪಿಸಿಕೊಂಡಿದ್ದ ಬಾಲಕಿ
ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಾಲ್ಯವಿವಾಹ ನಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಬಾಲಕಿ ಪರಿ ಪರಿಯಾಗಿ ಬೇಡಿಕೊಂಡರೂ ಪೋಷಕರು, ಸಂಬಂಧಿಕರು ಬಿಡದೇ ಒತ್ತಾಯ ಪೂರ್ವಕವಾಗಿ ತಾಳಿ ಕಟ್ಟಿಸುತ್ತಿದ್ದರು. ಆದರೆ ಬಾಲಕಿ ಈ ಮದುವೆಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ತಾಯಿ ಸೇರಿದಂತೆ ಒಟ್ಟು 5 ಮಂದಿ ಮೇಲೆ ಪೊಲೀಸ್ ಎಫ್ಐಆರ್ ದಾಖಲಾಗಿತ್ತು.
ರಾಜ್ಯದಲ್ಲಿ 700 ಬಾಲ್ಯ ವಿವಾಹ
2024-25ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 700 ಬಾಲ್ಯ ವಿವಾಹಗಳು ನಡೆದಿವೆ. ಒಟ್ಟು 3,049 ಬಾಲ್ಯ ವಿವಾಹ ದೂರುಗಳು ಸ್ವೀಕೃತವಾಗಿವೆ. ಈ ಪೈಕಿ 2,349 ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಎರಡು ದಿನ ಸಿಎಂ ನೇತೃತ್ವದಲ್ಲಿ ನಡೆದ ಡಿಸಿ ಹಾಗೂ ಸಿಇಒಗಳ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2024-25ರಲ್ಲಿ 700 ಬಾಲ್ಯ ವಿವಾಹಗಳು ನಡೆದಿವೆ.
ಇದರಲ್ಲಿ, ಶಿವಮೊಗ್ಗದಲ್ಲಿ ಅತೀ ಹೆಚ್ಚು 79 ಬಾಲ್ಯ ವಿವಾಹಗಳು ನಡೆದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲಿ 78 ಬಾಲ್ಯ ವಿವಾಹ ನಡೆದಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಚಿತ್ರದುರ್ಗದಲ್ಲಿ 74 ಬಾಲ್ಯ ವಿವಾಹ ನಡೆದರೆ, ಬಾಗಲಕೋಟೆ ಜಿಲ್ಲೆಯಲ್ಲಿ 60, ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ 60, ಮಂಡ್ಯದಲ್ಲಿ 57 ಹಾಗೂ ಹಾವೇರಿ ಜಿಲ್ಲೆಯಲ್ಲಿ 42 ಬಾಲ್ಯ ವಿವಾಹಗಳು ನಡೆದಿತ್ತು.
ಕಲಬುರಗಿಯಲ್ಲಿ 142 ದೂರುಗಳ ಪೈಕಿ 130 ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, 12 ಬಾಲ್ಯ ವಿವಾಹಗಳು ನಡೆದಿವೆ. ವಿಜಯಪುರದಲ್ಲಿ 160 ಬಾಲ್ಯ ವಿವಾಹ ದೂರುಗಳ ಪೈಕಿ 148ನ್ನು ತಡೆಯಲಾಗಿದ್ದು, 12 ಬಾಲ್ಯ ವಿವಾಹಗಳು ನಡೆದಿವೆ. ಚಿಕ್ಕಬಳ್ಳಾಪುರದಲ್ಲಿ 12, ವಿಜಯನಗರದಲ್ಲಿ 11, ಬಳ್ಳಾರಿ ಹಾಗೂ ಚಿಕ್ಕಮಗಳೂರಲ್ಲಿ ತಲಾ 11 ಬಾಲ್ಯ ವಿವಾಹಗಳು ಸಂಭವಿಸಿವೆ. ಕೊಪ್ಪಳದಲ್ಲಿ 168 ಬಾಲ್ಯ ವಿವಾಹಗಳ ದೂರುಗಳು ಸ್ವೀಕೃತವಾಗಿದ್ದು, ಆ ಪೈಕಿ 161 ತಡೆದಿದ್ದು, 7 ಬಾಲ್ಯ ವಿವಾಹಗಳು ಜರುಗಿದ್ದವು.
ದಕ್ಷಿಣ ಕನ್ನಡ, ಕೊಡಗು, ಉಡುಪಿಯಲ್ಲಿ ಅತೀ ಕಡಿಮೆ ಬಾಲ್ಯ ವಿವಾಹಗಳ ದೂರುಗಳು ಸ್ವೀಕೃತವಾಗಿವೆ. ದ.ಕನ್ನಡ ಹಾಗೂ ಕೊಡಗು ತಲಾ 7, ಉಡುಪಿಯಲ್ಲಿ 6 ಬಾಲ್ಯ ವಿವಾಹಗಳು ನಡೆದಿವೆ. ದಾವಣಗೆರೆಯಲ್ಲೂ 7 ಬಾಲ್ಯ ವಿವಾಹಗಳು ನಡೆದಿವೆ. ರಾಯಚೂರಲ್ಲಿ 118 ಬಾಲ್ಯ ವಿವಾಹ ದೂರು ಸ್ವೀಕಾರವಾಗಿದ್ದು, 114 ತಡೆಯಲಾಗಿದೆ. ಕೇವಲ 4 ಬಾಲ್ಯ ವಿವಾಹಗಳು ನಡೆದಿವೆ. ಇನ್ನು ಬೀದರ್, ತುಮಕೂರು ಹಾಗೂ ಉತ್ತರ ಕನ್ನಡದಲ್ಲಿ ತಲಾ 3 ಬಾಲ್ಯ ವಿವಾಹಗಳು ನಡೆದಿವೆ. ಚಾಮರಾಜನಗರ, ಗದಗದಲ್ಲಿ ತಲಾ 2 ಮತ್ತು ಧಾರವಾಡದಲ್ಲಿ 1 ಬಾಲ್ಯ ವಿವಾಹ ನಡೆದಿತ್ತು.
ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 2,165 ಬಾಲ್ಯ ವಿವಾಹ
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2021-22 ರಿಂದ 2024-25ವರೆಗೆ 2,165 ಬಾಲ್ಯ ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 2021-22ರಲ್ಲಿ 418, 2022-23ರಲ್ಲಿ 328 ನಡೆದಿವೆ. ಆದರೆ ಕಾಂಗ್ರೆಸ್ ಸರ್ಕಾರದ ಆಡಳಿತ ಆರಂಭವಾದ 2023-24ರಲ್ಲಿ ಬಾಲ್ಯ ವಿವಾಹ ಪ್ರಕರಣ 719ಕ್ಕೆ ಏರಿಕೆಯಾಗಿದೆ. ಬಳಿಕ 2024-25ರಲ್ಲಿ 700 ಬಾಲ್ಯ ವಿವಾಹಗಳು ನಡೆದಿತ್ತು.
ಬಾಲ್ಯ ವಿವಾಹ ನಿಷೇಧ ಕಾಯಿದೆ ಏನು ಹೇಳುತ್ತದೆ..?
ಬಾಲ್ಯ ವಿವಾಹ ನಿಷೇಧ ಕಾಯಿದೆ, 2006 ರ ಪ್ರಕಾರ, 18 ವರ್ಷದೊಳಗಿನ ಹೆಣ್ಣು ಮತ್ತು 21 ವರ್ಷದೊಳಗಿನ ಗಂಡಿನ ವಿವಾಹವನ್ನು ನಿಷೇಧಿಸಲಾಗಿದೆ. ಬಾಲ್ಯ ವಿವಾಹವನ್ನು ಆಯೋಜಿಸುವ, ಉತ್ತೇಜಿಸುವ, ಅಥವಾ ನಡೆಸುವವರಿಗೆ 2 ವರ್ಷಗಳವರೆಗೆ ಕಠಿಣ ಕಾರಾಗೃಹ ವಾಸ ಮತ್ತು 1 ಲಕ್ಷ ರೂದವರೆಗೆ ದಂಡ ವಿಧಿಸಬಹುದೆಂದು ಸೆಕ್ಷನ್ 10, 11 ಹೇಳುತ್ತದೆ.