ಹಕ್ಕಿಪಿಕ್ಕಿ, ಅಲೆಮಾರಿ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ವಸತಿ ಹಕ್ಕುಪತ್ರ ವಿತರಣೆ
ಇದೇ ಮೊದಲ ಬಾರಿಗೆ ಹಕ್ಕಿಪಿಕ್ಕಿ ಹಾಗೂ ಅಲೆಮಾರಿ ಸಮುದಾಯ, ಲೈಂಗಿಕ ಕಾರ್ಯಕರ್ತೆಯರು ಮತ್ತು ಕುಷ್ಠರೋಗದಿಂದ ಗುಣಮುಖರದ ಕುಟುಂಬಗಳಿಗೆ ಮಂಜೂರಾತಿ ಪತ್ರ ಹಾಗೂ ಹಕ್ಕುಪತ್ರಗಳನ್ನು ಸಚಿವ ಜಮೀರ್ ಅಹಮದ್ ಖಾನ್ ವಿತರಿಸಿದರು.;
ವಸತಿ ಸಚಿವ ಜಮೀರ್ ಅಹಮದ್ ಖಾನ್ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು.
ಹಲವು ವರ್ಷಗಳಿಂದ ಯಾವುದೇ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ಮೂರು ವಿಧಾನಸಭಾ ಕ್ಷೇತ್ರಗಳ 777 ಕುಟುಂಬಗಳಿಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಮಂಗಳವಾರ ಮಂಜೂರಾತಿ ಹಾಗೂ ಹಕ್ಕುಪತ್ರಗಳನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಹಕ್ಕಿಪಿಕ್ಕಿ ಮತ್ತು ಅಲೆಮಾರಿ ಸಮುದಾಯ, ಲೈಂಗಿಕ ಕಾರ್ಯಕರ್ತೆಯರು, ಹಾಗೂ ಕುಷ್ಠರೋಗದಿಂದ ಗುಣಮುಖರಾದ ಕುಟುಂಬಗಳಿಗೆ ಇದೇ ಮೊದಲ ಬಾರಿಗೆ ಮಂಜೂರಾತಿ ಪತ್ರ ಮತ್ತು ಹಕ್ಕುಪತ್ರ ನೀಡಿದ್ದು ವಿಶೇಷವಾಗಿತ್ತು.
ಯಶವಂತಪುರ ಕ್ಷೇತ್ರದ ಯಲಚಗುಪ್ಪೆಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ 228 ಕುಟುಂಬಗಳಿಗೆ ಮತ್ತು ಮಾದಿಗರ ಚನ್ನಯ್ಯ ಸ್ಲಂನಲ್ಲಿ 259 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಇದಲ್ಲದೆ, ಲೈಂಗಿಕ ಕಾರ್ಯಕರ್ತೆಯರು ಹಾಗೂ ಅಲೆಮಾರಿ ಸಮುದಾಯದ 200 ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರಗಳನ್ನು ನೀಡಲಾಯಿತು. ಯಲಹಂಕ ಕ್ಷೇತ್ರದ ಗಿಡ್ಡೇನಹಳ್ಳಿ ಗ್ರಾಮದ ಬಿ.ಕೆ. ಸ್ಲಂನಲ್ಲಿ 40 ಕುಟುಂಬಗಳಿಗೆ ಮಂಜೂರಾತಿ ಪತ್ರಗಳು ದೊರೆತವು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮಾತಾಪುರ ದಲಿತ ಕಾಲೋನಿಯಲ್ಲಿ ಕುಷ್ಠರೋಗದಿಂದ ಗುಣಮುಖರಾದ 50 ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಶೆಡ್ನಲ್ಲಿ ಊಟ ಮಾಡಿದ ಸಚಿವ ಜಮೀರ್
ಕಾರ್ಯಕ್ರಮದ ನಂತರ, ಸಚಿವ ಜಮೀರ್ ಅಹಮದ್ ಖಾನ್ ಅವರು ಯಶವಂತಪುರ ಕ್ಷೇತ್ರದ ಯಲಚಗುಪ್ಪೆ ಗ್ರಾಮದ ಮಾದಾರ ಚನ್ನಯ್ಯ ಸ್ಲಂನ ಅಲೆಮಾರಿ ಸಮುದಾಯದ ಶರಣಯ್ಯ ಎಂಬುವರ ಶೆಡ್ನಲ್ಲಿ ಊಟ ಮಾಡಿದರು. ಈ ವೇಳೆ, ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಕೂಡಾ ಸಚಿವರೊಂದಿಗೆ ಕುಟುಂಬ ಸದಸ್ಯರ ಜೊತೆ ಸೇರಿಕೊಂಡರು. ಶೆಡ್ನಲ್ಲಿ ವಾಸಿಸುತ್ತಿರುವ ಆ ಕುಟುಂಬಕ್ಕೆ ಶೀಘ್ರವಾಗಿ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.