"ವಿಕಸಿತ ಕರ್ನಾಟಕ, ವಿಕಸಿತ ಭಾರತಕ್ಕೆ" ಪ್ರಧಾನಿ ಮೋದಿ ಕರೆ
ಅಯೋಧ್ಯೆ ರಾಮಮಂದಿರದ ಮೇಲೆ ಧರ್ಮಧ್ವಜದ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿಯವರೆಗೆ ಅಸಂಖ್ಯಾ ರಾಮಭಕ್ತರು ಸಂತುಷ್ಟರಾಗಿದ್ದಾರೆ. ರಾಮಮಂದಿರ ಹೋರಾಟದ ಹಾದಿ ಎಲ್ಲರಿಗೂ ಗೊತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಪ್ರಧಾನಿ ಮೋದಿ ಅವರಿಗೆ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಶ್ರೀಕೃಷ್ಣನ ಸ್ಮರಣಿಕೆ ನೀಡಿ ಗೌರವಿಸಿದರು.
'2047-ಅಮೃತ' ಕಾಲದ ಗುರಿ ನನಸಾಗಿಸಲು ಭಾರತೀಯರು ಎಲ್ಲರೂ ತಮ್ಮ ಕರ್ತವ್ಯ ನಿಭಾಯಿಸಬೇಕು. "ವಿಕಸಿತ ಕರ್ನಾಟಕ- ವಿಕಸಿತ ಭಾರತದ ಸಂಕಲ್ಪ ನಮ್ಮದಾಗಲಿ" ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ (ನ.28) ಹಮ್ಮಿಕೊಂಡಿದ್ದ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡದಲ್ಲಿ ಮಾತು ಆರಂಭಿಸಿದ ಅವರು, ಜೈ ಶ್ರೀಕೃಷ್ಣ ಎಂದು ಘೋಷಣೆ ಕೂಗಿದರು. ಲಕ್ಷ ಕಂಠ ಗೀತಾ ಪಠಣ ಅಭಿಯಾನ ಹಮ್ಮಿಕೊಂಡಿರುವ ಸುಗುಣೇಂದ್ರ ಶ್ರೀಗೆ ಅಭಿನಂದನೆಗಳು, ಇದು ಸನಾತನ ಸಂಸ್ಕೃತಿಯ ಅಭಿಯಾನ, ಇದರಿಂದ ನನಗೆ ಬಹಳ ಪ್ರೇರಣೆ ಸಿಕ್ಕಿದೆ, ಭಗವದ್ಗೀತೆಯೊಂದಿಗೆ ನವಪೀಳಿಗೆಯನ್ನು ಜೋಡಿಸುವ ಸತ್ಕಾರ್ಯ ಇದಾಗಿದೆ ಎಂದರು.
ಕನಕದಾಸರ ಭಕ್ತಿ ದೊಡ್ಡದು
ನ. 25 ರಂದು ನಾನು ಅಯೋಧ್ಯೆಯಲ್ಲಿದ್ದೆ. ಅಯೋಧ್ಯೆಯ ರಾಮಮಂದಿರದ ಮೇಲೆ ಧರ್ಮಧ್ವಜದ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿವರೆಗೆ ಅಸಂಖ್ಯಾ ರಾಮಭಕ್ತರು ಸಂತುಷ್ಟರಾಗಿದ್ದಾರೆ. ರಾಮಮಂದಿರ ಹೋರಾಟದ ಹಾದಿ ಎಲ್ಲರಿಗೂ ಗೊತ್ತಿದೆ. ಜಗದ್ಗುರು ಮಧ್ವಾಚಾರ್ಯರಿಂದ ಸ್ಥಾಪನೆಯಾದ ಉಡುಪಿಯಲ್ಲಿ ವೇದಾನಂತ ಅಧ್ಯಯನ, ಭಗವಾನ್ ಶ್ರೀಕೃಷ್ಣನ ಆರಾಧನೆ ಇದೆ. ಲಕ್ಷಾಂತರ ಭಕ್ತರಿಗೆ ಅನ್ನದಾನ ಸೇವೆ ಇದೆ. ಇದು ಭಕ್ತಿ, ಆಧ್ಯಾತ್ಮಿಕತೆಯ ಸಂಗಮ ತೀರ್ಥವಾಗಿದೆ. ಕನಕದಾಸರ ಭಕ್ತಿಯೂ ದೊಡ್ಡದು. ಮಧ್ವಾಚಾರ್ಯರೊಂದಿಗೆ ದಾಸ ಪರಂಪರೆಯೂ ಇಲ್ಲಿಯ ಇನ್ನೊಂದು ಕೊಡುಗೆ ಎಂದರು.
ದೇಶ ವಿರೋಧಿಗಳ ಮೇಲೆ ಸುದರ್ಶನ ಚಕ್ರ ಪ್ರಯೋಗ
ಲೋಕ ಕಲ್ಯಾಣದ ಸಂದೇಶ ಭಗವದ್ಗೀತೆಯಲ್ಲಿದೆ. ʼಸರ್ವಜನ ಸುಖಾಯ - ಸರ್ವಜನ ಹಿತಾಯ, ಸಬ್ಕಾ ಸಾಥ್ - ಸಬ್ಕಾ ವಿಕಾಸʼ ಇದು ಭಗವದ್ಗೀತೆಯಿಂದ ಬಂದ ಪ್ರೇರಣೆ. ಭಗವಾನ್ ಶ್ರೀಕೃಷ್ಣನ ಸಂದೇಶ ಪಾಲನೆಗಾಗಿ ಅತ್ಯಾಚಾರಿಗಳ ಅಂತ್ಯವೂ ಅಗತ್ಯವಾಗಿದೆ. ಧರ್ಮ ರಕ್ಷಣೆ, ದುಷ್ಟ ಸಂಹಾರವೂ ನಮಗೆ ಗೊತ್ತು. ಧರ್ಮಸಂದೇಶವನ್ನೂ ಕೊಡುತ್ತೇವೆ, ಅದರ ಜೊತೆಗೆ ಮಿಷನ್ ಸುದರ್ಶನ ಚಕ್ರದ ಪ್ರಯೋಗವನ್ನೂ ಮಾಡುತ್ತೇವೆ. ದೇಶವಿರೋಧಿಗಳ ಮೇಲೆ ನಮ್ಮ ಸುದರ್ಶನ ಚಕ್ರ ಪ್ರಯೋಗವಾಗಲಿದೆ ಎಂದು ತಿಳಿಸಿದರು.
ಪ್ರಧಾನಿ ಮಾಡಿದ 'ನವ ಸಂಕಲ್ಪ'ಗಳೇನು?
* ಜಲಸಂರಕ್ಷಣೆ ಮಾಡುವುದು.
* ಮರ ಬೆಳೆಸುವುದು, ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನ ಆರಂಭಿಸಿ.
* ಪ್ರತಿಯೊಬ್ಬರೂ ಕನಿಷ್ಠ ಪಕ್ಷ ಒಬ್ಬ ಬಡವರ ಜೀವನ ಸುಧಾರಿಸಿ.
* ಸ್ವದೇಶಿ ಅಳವಡಿಸಿಕೊಳ್ಳಿ. ವೋಕಲ್-ಲೋಕಲ್ ಮಂತ್ರ ನಮ್ಮದಾಗಲಿದೆ.
* ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಿ.
* ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳೋಣ. ಊಟದಲ್ಲಿ ಎಣ್ಣೆ ಕಡಿಮೆ ಮಾಡೋಣ, ಸಿರಿಧಾನ್ಯ ಬಳಸೋಣ.
* ಯೋಗ ಅಳವಡಿಸಿಕೊಳ್ಳಿ, ಎಲ್ಲರೂ ಯೋಗಿಗಳಾಗಿ.
* ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ನೀಡಿ.
* ಕನಿಷ್ಠ ಪಕ್ಷ ದೇಶದ 25 ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಮಾಡಿ.
ಕಾರ್ಯಕ್ರಮದಲ್ಲಿ ಜನಸಂಘ ಮತ್ತು ಬಿಜೆಪಿಯ ಉತ್ತಮ ಆಡಳಿತದ ಮಾದರಿಯ ಕರ್ಮಭೂಮಿ ಉಡುಪಿ ಹಾಗೂ ಹಿರಿಯ ನಾಯಕ ವಿ.ವಿ.ಎಸ್ ಆಚಾರ್ಯ ಅವರನ್ನು ನೆನಪಿಸಿಕೊಂಡರು. ತಮ್ಮ ಭಾವಚಿತ್ರ ಹಿಡಿದು ನಿಂತಿದ್ದವರಿಂದ ಅವುಗಳನ್ನು ಪಡೆದುಕೊಳ್ಳುವಂತೆ ಎಸ್ಪಿಜಿಗೆ ಸೂಚಿಸಿದ ಅವರು, ಹಿಂದೆ ವಿಳಾಸ ಬರೆಯಿರಿ. ನಾನು ಅಭಿನಂದನಾ ಪತ್ರ ಕಳಿಸುವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವಿಡಿಯೋ ಲಿಂಕ್ ಇಲ್ಲಿದೆ.