ಮುಂದುವರಿದಿದೆ ಕೆರೆಗಳ ಒತ್ತುವರಿ| 14,533 ಕೆರೆಗಳ ಪೈಕಿ 7,725 ಕಡೆ ತೆರವು ಇಲ್ಲ!
ಕೆರೆ ಒತ್ತುವರಿ ಸಮೀಕ್ಷೆ ನಡೆಸಿದಾಗ ರಾಜ್ಯದಲ್ಲಿ ಒತ್ತುವರಿಯಾಗಿದ್ದ 14,533 ಕೆರೆಗಳ ಪೈಕಿ 6,808 ಮಾತ್ರ ಕೆರೆಗಳ ಒತ್ತುವರಿಯನ್ನು ತೆರವು ಮಾಡಲಾಗಿದೆ.;
ರಾಜ್ಯದಲ್ಲಿ ನಗರೀಕರಣದ ವೇಗ ಹೆಚ್ಚುತ್ತಿರುವುದರ ಜತೆಗೆ ಕೆರೆಗಳ ಒತ್ತುವರಿ ಹೆಚ್ಚುತ್ತಲೇ ಇವೆ. ಪ್ರಭಾವಿ ವ್ಯಕ್ತಿಗಳಿಂದಾಗಿ ಕೆರೆ ಒತ್ತುವರಿ ಎಗ್ಗಿಲ್ಲದೆ ನಡೆಯುತ್ತಿದೆ. ಕೆರೆ ಒತ್ತುವರಿ ಸಮೀಕ್ಷೆ ನಡೆಸಿದಾಗ ರಾಜ್ಯದಲ್ಲಿ ಒತ್ತುವರಿಯಾಗಿದ್ದ 14,533 ಕೆರೆಗಳ ಪೈಕಿ 6,808 ಮಾತ್ರ ಕೆರೆಗಳ ಒತ್ತುವರಿಯನ್ನು ತೆರವು ಮಾಡಲಾಗಿದೆ. ಇನ್ನು, 7,725 ಕೆರೆಗಳ ಒತ್ತುವರಿ ತೆರವು ಕಾರ್ಯ ಬಾಕಿ ಇದೆ ಎಂಬುದು ಗೊತ್ತಾಗಿದೆ.
ಸರ್ಕಾರವು ರಾಜ್ಯದಲ್ಲಿನ ಕೆರೆಗಳನ್ನು ಅಳತೆ ಮಾಡಿ ಒತ್ತುವರಿಯಾಗಿರುವ ಬಗ್ಗೆ ಪತ್ತೆ ಮಾಡಿದೆ. ಅವುಗಳ ತೆರವು ಕಾರ್ಯಾಚರಣೆ ಕೈಗೊಂಡಿದೆ. ಆದರೆ, ಜಿಲ್ಲಾಡಳಿತವು ಸರ್ಕಾರದ ವೇಗಕ್ಕೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಸರ್ಕಾರದ ಆದೇಶಗಳನ್ನು ಜಿಲ್ಲಾಡಳಿತಗಳು ಸಮರ್ಪಕವಾಗಿ ಪಾಲನೆ ಮಾಡಿದರೆ ಕೆರೆಗಳ ಒತ್ತುವರಿ ತೆರವು ಕಾರ್ಯವು ಸುಲಭವಾಗಿ ನಡೆಯಲಿದೆ.
ಕೆರೆಗಳು ನೀರಿನ ಸೆಳೆಗೆ ಮೂಲವಾಗಿದೆ. ಆದರೆ ರಾಜ್ಯದಲ್ಲಿನ ಕೆರೆಗಳು ನಗರೀಕರಣ, ಅಭಿವೃದ್ಧಿ ಹೆಸರಲ್ಲಿ ಮಾಯವಾಗುತ್ತಿದೆ. ಅಭಿವೃದ್ಧಿ ಕಾರಣಕ್ಕೆ ಕೆರೆಗಳ ಒತ್ತುವರಿ ರಾಜ್ಯಾದ್ಯಂತ ವ್ಯಾಪಕವಾಗಿ ನಡೆಯುತ್ತಿದೆ. ನಗರ ಪ್ರದೇಶಗಳಲ್ಲಿ ಒತ್ತುವರಿಯಾದ ಕೆರೆಗಳ ಸಂಖ್ಯೆ ಅತಿ ಹೆಚ್ಚಿದೆ. ಪ್ರಭಾವಿಗಳ ಪ್ರಭಾವಕ್ಕೆ ಕೆರೆಗಳು ತಮ್ಮ ಅಸ್ತಿತ್ವವನ್ನು ನಿರಂತರವಾಗಿ ಕಳೆದುಕೊಳ್ಳುತ್ತಿವೆ. ಕೆರೆ ಒತ್ತುವರಿ ತೆರವಿಗೆ ಸರ್ಕಾರ ಕಾರ್ಯಕ್ರಮ ರೂಪಿಸಿದರೂ ಅದು ವಾಸ್ತವದಲ್ಲಿ ಹೆಚ್ಚಿನ ಫಲ ನೀಡುತ್ತಿಲ್ಲ. ಕೆರೆಗಳನ್ನು ಮನೆ, ಕಟ್ಟಡಗಳ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಒತ್ತುವರಿ ಮಾಡಲಾಗುತ್ತಿದೆ.
ಕೆರೆಗಳ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಅಪೆಕ್ಸ್ ಸಮಿತಿಯನ್ನು ಹಾಗೂ ಡಿಸಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚನೆ ಮಾಡಲಾಗಿದೆ. ಎರಡೂ ಸಮಿತಿಗಳು ನ್ಯಾಯಾಲಯದ ಆದೇಶದ ಅನ್ವಯ ಕೆರೆಗಳ ಸಂರಕ್ಷಣೆ, ಅಭಿವೃದ್ದಿ ಹಾಗೂ ನಿರ್ವಹಣೆ ಬಗ್ಗೆ ಕೆಲಸ ಮಾಡುತ್ತಿದೆ. ಇದಕ್ಕಾಗಿ ಒತ್ತುವರಿಯಾದ ಕೆರೆಗಳ ಸರ್ವೆ ಕಾರ್ಯವೂ ನಡೆಯುತ್ತಿದೆ. ಅದರಂತೆ ಬಹುತೇಕ ಕೆರೆಗಳು ಒತ್ತುವರಿಯಾಗಿರುವುದು ಪತ್ತೆಯಾಗಿವೆ. ಆದರೆ, ಅವುಗಳ ತೆರವು ಕಾರ್ಯ ಕಾರ್ಯ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ.
ಒತ್ತುವರಿ ತೆರವು ಮಾಡಿದ ಕೆರೆಗಳ ಸಂಖ್ಯೆ ಕೇವಲ 6,808
ಈ ವರ್ಷದ ಮೇವರೆಗೆ ಗುರುತು ಮಾಡಲಾದ 14,533 ಒತ್ತುವರಿ ಕೆರೆಗಳ ಪೈಕಿ ಒತ್ತುವರಿ ತೆರವು ಮಾಡಿದ್ದು ಕೇವಲ 6,808 ಮಾತ್ರ. 7,725 ಕೆರೆಗಳ ಒತ್ತುವರಿ ತೆರವು ಕಾರ್ಯ ಬಾಕಿ ಇದೆ. ಈವರೆಗೆ ಗುರುತಿಸಲಾದ ಒತ್ತುವರಿ ಕೆರೆಗಳ ಪೈಕಿ ಕೇವಲ ಶೇ.47 ಮಾತ್ರ ಕಬಳಿಕೆಯನ್ನು ತೆರವು ಮಾಡಲಾಗಿದೆ. ಕಂದಾಯ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಹಾಸನದಲ್ಲಿ 524 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಶಿವಮೊಗ್ಗದಲ್ಲಿ 641 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಕೋಲಾರದಲ್ಲಿ 706 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಹಾವೇರಿಯಲ್ಲಿ 174 ಕೆರೆಗಳ ತೆರವುಗೊಳಿಸಲಾಗಿದೆ. ತುಮಕೂರಿನಲ್ಲಿ 131 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ.
ಮೈಸೂರಲ್ಲಿ 818 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ರಾಮನಗರದಲ್ಲಿ 58 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 287, ಮಂಡ್ಯದಲ್ಲಿ 245, ಉತ್ತರ ಕನ್ನಡದಲ್ಲಿ 365, ಬೆಳಗಾವಿಯಲ್ಲಿ 47 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಬೀದರ್ ನಲ್ಲಿ 28, ರಾಯಚೂರಿನಲ್ಲಿ 2, ಧಾರವಾಡದಲ್ಲಿ 124, ಚಿಕ್ಕಮಗಳೂರಲ್ಲಿ 373, ಚಿತ್ರದುರ್ಗದಲ್ಲಿ 48, ಗದಗದಲ್ಲಿ 22, ದಕ್ಷಿಣ ಕನ್ನಡದಲ್ಲಿ 68, ಕಲಬುರ್ಗಿಯಲ್ಲಿ 0, ದಾವಣಗೆರೆಯಲ್ಲಿ 240, ಚಾಮರಾಜನಗರದಲ್ಲಿ 235, ಕೊಡಗಿನಲ್ಲಿ 233, ವಿಜಯನಗರದಲ್ಲಿ 102 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಇನ್ನು ಯಾದಗಿರಿಯಲ್ಲಿ 4, ಬಾಗಲಕೋಟೆಯಲ್ಲಿ 32, ಬಳ್ಳಾರಿಯಲ್ಲಿ 38, ಬೆಂಗಳೂರು ಗ್ರಾಮಾಂತರದಲ್ಲಿ 642, ಬೆಂಗಳೂರು ನಗರದಲ್ಲಿ 484, ಕೊಪ್ಪಳದಲ್ಲಿ 14, ಉಡುಪಿಯಲ್ಲಿ 55, ವಿಜಯಪುರದಲ್ಲಿ 68 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಪ್ರತಿ ಬಾರಿ ಒತ್ತುವರಿ ತೆರವು ತ್ವರಿತ ಗೊಳಿಸಲು ಸೂಚನೆ ನೀಡಿದರೂ ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿರುವುದು ಕಂಡು ಬರುತ್ತಿದೆ.
ಗುರುತಿಸಲಾದ ಒತ್ತುವರಿ ಕೆರೆಗಳ ಸಂಖ್ಯೆ 14,533
ಕಂದಾಯ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಅಳತೆ ಮಾಡಲಾದ 34,389 ಕೆರೆಗಳ ಪೈಕಿ ಈವರೆಗೆ 14,533 ಕೆರೆಗಳು ಒತ್ತುವರಿಯಾಗಿರುವುದು ಪತ್ತೆಯಾಗಿವೆ. ಹಾಸನದಲ್ಲಿ ಅಳತೆಯಾದ 3,924 ಕೆರೆಗಳ ಪೈಕಿ 1,629 ಕೆರೆಗಳ ಒತ್ತುವರಿ ಗುರುತಿಸಲಾಗಿದೆ. ಶಿವಮೊಗ್ಗದಲ್ಲಿ ಅಳತೆಗೈದ 3,647 ಕೆರೆಗಳ ಪೈಕಿ 1,537 ಕೆರೆಗಳ ಒತ್ತುವರಿ ಗುರುತಿಸಲಾಗಿದೆ. ಕೋಲಾರದಲ್ಲಿ ಅಳತೆಗೈದ 1,666 ಅಳತೆಗೈದ ಕೆರೆಗಳ ಪೈಕಿ 2,481 ಒತ್ತುವರಿಯಾಗಿದೆ. ತುಮಕೂರಿನಲ್ಲಿ 2,047 ಅಳತೆಗೈದ ಕೆರೆಗಳ ಪೈಕಿ 1,010 ಕೆರೆಗಳು ಒತ್ತುವರಿಯಾಗಿವೆ.
ಮೈಸೂರಲ್ಲಿ 2,639 ಅಳತೆಗೈದ ಕೆರೆಗಳ ಪೈಕಿ 1,346 ಕೆರೆಗಳು ಒತ್ತುವರಿಯಾಗಿವೆ. ರಾಮನಗರದಲ್ಲಿ ಅಳತೆಗೈದ 1,430 ಕೆರೆಗಳ ಪೈಕಿ 811 ಒತ್ತುವರಿಯಾಗಿವೆ. ಚಿಕ್ಕಬಳ್ಳಾಪುರದಲ್ಲಿ ಅಳತೆಗೈದ 916 ಕೆರೆಗಳ ಪೈಕಿ 415 ಒತ್ತುವರಿಯಾಗಿವೆ. ಮಂಡ್ಯದಲ್ಲಿ ಅಳತೆಗೈದ 962 ಕೆರೆಗಳ ಪೈಕಿ 448 ಒತ್ತುವರಿಯಾಗಿವೆ. ಉತ್ತರ ಕನ್ನಡದಲ್ಲಿ 2,118 ಅಳತೆಗೈದ ಕೆರೆಗಳ ಪೈಕಿ 454 ಒತ್ತುವರಿಯಾಗಿವೆ. ಬೆಳಗಾವಿಯಲ್ಲಿ ಅಳತೆಗೈದ 1,132 ಕೆರೆಗಳ ಪೈಕಿ 134 ಒತ್ತುವರಿಯಾಗಿವೆ. ಚಿಕ್ಕಮಗಳೂರಲ್ಲಿ ಅಳತೆಗೈದ 1,806 ಕರೆಗಳ ಪೈಕಿ 848 ಕೆರೆಗಳು ಒತ್ತುವರಿಯಾಗಿವೆ. ಬೆಂಗಳೂರು ನಗರದಲ್ಲಿ ಅಳತೆಗೈದ 837 ಕೆರೆಗಳ ಪೈಕಿ 733 ಕೆರೆಗಳು ಒತ್ತುವರಿಯಾಗಿವೆ. ಬೆಂಗಳೂರು ಗ್ರಾ.ದಲ್ಲಿ ಅಳತೆಗೈದ 710 ಕೆರೆಗಳ ಪೈಕಿ 643 ಒತ್ತುವರಿಯಾಗಿವೆ.
ಬೀದರ್ ನಲ್ಲಿ 31 ಕೆರೆಗಳು, ರಾಯಚೂರಲ್ಲಿ 46, ಧಾರವಾಡದಲ್ಲಿ 156 ಕೆರೆಗಳು ಒತ್ತುವರಿಯಾಗಿವೆ. ಚಿತ್ರದುರ್ಗದಲ್ಲಿ 50 ಕೆರೆಗಳು, ಗದಗದಲ್ಲಿ 97, ದ.ಕನ್ನಡದಲ್ಲಿ 97, ಕಲಬುರ್ಗಿಯಲ್ಲಿ 6, ದಾವಣಗೆರೆಯಲ್ಲಿ 283, ಚಾಮರಾಜನಗರದಲ್ಲಿ 281, ಕೊಡಗಿನಲ್ಲಿ 288, ವಿಜಯನಗರದಲ್ಲಿ 105, ಯಾದಗಿರಿಯಲ್ಲಿ 6, ಬಾಗಲಕೋಟೆಯಲ್ಲಿ 70, ಬಳ್ಳಾರಿಯಲ್ಲಿ 43, ಕೊಪ್ಪಳದಲ್ಲಿ 26, ಉಡುಪಿಯಲ್ಲಿ 59, ವಿಜಯಪುರದಲ್ಲಿ 85 ಕೆರೆಗಳ ಒತ್ತುವರಿ ಗುರುತು ಮಾಡಲಾಗಿದೆ.
ಶೇ.30 ಗಿಂತ ಕಡಿಮೆ ನೀರು ತುಂಬಿರುವ ಕೆರೆಗಳು
41,849 ಕೆರೆಗಳ ಪೈಕಿ 16,660 ಕೆರೆಗಳಲ್ಲಿಶೇ. 30 ಗಿಂತಲೂ ಕಡಿಮೆ ನೀರು ತುಂಬಿಕೊಂಡಿದೆ ಎಂದು ಸಣ್ಣ ನೀರಾವರಿ ಇಲಾಖೆ ಮಾಹಿತಿ ನೀಡಿದೆ. ಅದರಂತೆ ಹಾಸನದಲ್ಲಿ 2,909 ಕೆರೆಗಳು, ಶಿವಮೊಗ್ಗದಲ್ಲಿ 1,502, ಕೋಲಾರದಲ್ಲಿ 1546, ಹಾವೇರಿಯಲ್ಲಿ 612, ತುಮಕೂರಿನಲ್ಲಿ 974, ಮೈಸೂರಲ್ಲಿ 934, ರಾಮನಗರದಲ್ಲಿ 629, ಚಿಕ್ಕಬಳ್ಳಾಪುರದಲ್ಲಿ 1,420 ಕೆರೆಗಳಲ್ಲಿ 30%ಗಿಂತಲೂ ಕಡಿಮೆ ನೀರು ತುಂಬಿವೆ.
ಇತ್ತ ಬೆಂಗಳೂರು ಗ್ರಾಮಾಂತರದಲ್ಲಿ 301 ಕೆರೆಗಳು, ಬೆಂಗಳೂರು ನಗರದಲ್ಲಿ 298, ಮಂಡ್ಯದಲ್ಲಿ 275, ಉತ್ತರ ಕನ್ನಡದಲ್ಲಿ 1,524, ಬೆಳಗಾವಿಯಲ್ಲಿ 393, ಬೀದರ್ ನಲ್ಲಿ 150, ರಾಯಚೂರಿನಲ್ಲಿ 175, ಧಾರವಾಡದಲ್ಲಿ 479, ಚಿಕ್ಕಮಗಳೂರಲ್ಲಿ 156, ಚಿತ್ರದುರ್ಗದಲ್ಲಿ 162, ಗದಗದಲ್ಲಿ 103, ದಕ್ಷಿಣ ಕನ್ನಡದಲ್ಲಿ 161, ಕಲಬುರ್ಗಿಯಲ್ಲಿ 82 ಕೆರೆಗಳಲ್ಲಿ ಕಡಿಮೆ ನೀರು ತುಂಬಲಾಗಿದೆ.
ಇನ್ನು ದಾವಣಗೆರೆಯಲ್ಲಿ 104, ಚಾಮರಾಜನಗರದಲ್ಲಿ 467, ಕೊಡಗು 481, ವಿಜಯನಗರದಲ್ಲಿ 127, ಯಾದಗಿರಿಯಲ್ಲಿ 132, ಬಾಗಲಕೋಟೆಯಲ್ಲಿ 132, ಬಳ್ಳಾರಿಯಲ್ಲಿ 29, ಕೊಪ್ಪಳದಲ್ಲಿ 67, ಉಡುಪಿಯಲ್ಲಿ 220 ಮತ್ತು ವಿಜಯಪುರದಲ್ಲಿ 116 ಕೆರೆಗಳಲ್ಲಿ 30%ಕ್ಕಿಂತ ಕಡಿಮೆ ನೀರು ತುಂಬಿರುವುದಾಗಿ ಇಲಾಖೆ ಮಾಹಿತಿ ನೀಡಿದೆ.
ಕೆರೆ ಒತ್ತುವರಿ ತೆರವು ವಿಳಂಬಕ್ಕೆ ಸಿಎಂ ಗರಂ?
ಕೆರಗಳ ಒತ್ತುವರಿ ತೆರವು ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಾಣದೇ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಭೆಯಲ್ಲೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರಲ್ಲೂ ಒಂದೂ ಕೆರೆ ಒತ್ತುವರಿ ತೆರವುಗೊಳಿಸದ ಜಿಲ್ಲಾಧಿಕಾರಿ, ಸಿಇಓಗಳ ವಿರುದ್ಧ ಸೂಕ್ತ ಕ್ರಮಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.
ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿದ್ದರೂ, ನಿರೀಕ್ಷಿತ ಪ್ರಗತಿಯಾಗಿಲ್ಲ. ಕೂಡಲೇ ಇದರ ಬಗ್ಗೆ ಗಮನಹರಿಸಿ, ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಬೇಕು. ಕೆರೆಗಳ ಒತ್ತುವರಿ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಕೆರೆ ಒತ್ತುವರಿ ತೆರವು ಕಾರ್ಯಕ್ಕೆ ಕ್ರಮ
ಈ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು, ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಎಲ್ಲಾ ಜಿಲ್ಲಾಡಳಿತಗಳಿಗೂ ಸೂಚನೆ ನೀಡಲಾಗಿದೆ. ಹಂತಹಂತವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕೆರೆ ರಕ್ಷಣೆಗೆ ಇಲಾಖೆಯು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಕೆರೆ ಒತ್ತುವರಿ ಮಾಡಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿರಂತರ ಸಭೆ ನಡೆಸಿ ಕೆರೆ ಒತ್ತುವರಿ ಕಾರ್ಯದ ಬೆಳವಣಿಗೆ ಕುರಿತು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.