ಪೌರ ಕಾರ್ಮಿಕರು, ಮಾವುತರ ಮಕ್ಕಳು ಹಿಮಾಲಯದ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ರೋಮಾಂಚನವಿದು!

ಮೊದಲ ಬಾರಿ ವಿಮಾನ ಹತ್ತಿದ ಅನುಭವ, ಪರ್ವತ ಏರಿದ ಖುಷಿ, ಆ ಚಳಿ, ಜೋರು ಗಾಳಿ ಎಲ್ಲವೂ ನನ್ನ ಜೀವನದ ಸಿಹಿ ನೆನಪುಗಳು. ನಾವು ಕನಸಿನಲ್ಲಿ ಕಾಣುವ ರಸಗಳಿಗೆಗಳು ನನಸಾಗಿ ಬಂದಿದ್ದು ಬದುಕಿನ ದೊಡ್ಡ ವಿಸ್ಮಯವೇ ಸರಿ ಎನ್ನುತ್ತಾರೆ ವಿದ್ಯಾರ್ಥಿ ಚೇತನ್;

Update: 2025-05-29 01:30 GMT

ಮೈಸೂರಿನ ಪೌರ ಕಾರ್ಮಿಕರು, ಮಾವುತರ ಮಕ್ಕಳು, ಅರಣ್ಯ ಇಲಾಖೆಯ ವಾಚ್ ಗಾರ್ಡ್‌ಗಳಿಗೂ ದೂರದ ಉತ್ತರಾಖಾಂಡ್‌ನ 13,989 ಅಡಿ ಎತ್ತರದ ಕೌರಿಪಾಸ್‌ಗೂ ಎತ್ತಣಿಂದೆತ್ತ ಸಂಬಂಧ!  ಬದುಕಿನಲ್ಲಿ ಒಮ್ಮೆಯಾದರೂ ಹಿಮಾಲಯದ ಸರಣಿ ಪರ್ವತಗಳ ತುದಿ ಏರಿ ನಿಲ್ಲಬಲ್ಲೆನೇ ಎನ್ನುವ ಕನಸು ಹೊತ್ತಿದ್ದರೂ ಅದು ಗಗನ ಕುಸುಮ ಎಂದುಕೊಂಡಿದ್ದ ಮಕ್ಕಳು ಅದನ್ನು ಸಾಕಾರ ಮಾಡಿಕೊಂಡ ಕಥೆ ಇದು.

ಆ ಕನಸಿನ ಹಾದಿಯಲ್ಲಿ ಕರೆದುಕೊಂಡು ಹೋದ ತಂಡದ ಸುಂದರ ಮತ್ತು ಸವಾಲಿನ ದಾರಿಯ ಅನಾವರಣ ಇದು…

ಮೈಸೂರಿನ ಟೈಗರ್ ಅಡ್ವೆಂಚರ್ ಫೌಂಡೇಷನ್ (Tiger Adventure Foundation) ದಶಕಗಳಿಂದಲೂ ವಿವಿಧ ವರ್ಗದ ಜನರನ್ನು ಹಿಮಾಲಯದ ಚಾರಣಕ್ಕೆ ಪ್ರತಿ ವರ್ಷವೂ ಕರೆದುಕೊಂಡು ಹೋಗುತ್ತಿದೆ. ಇದರೊಂದಿಗೆ ಹಿಮಾಲಯವನ್ನು ಆಸೆಗಣ್ಣಿನಿಂದ ನೋಡುವ ಶ್ರಮಿಕ ವರ್ಗದ ಜನತೆಗೂ ಅದು ದಕ್ಕಬೇಕು ಎನ್ನುವ ಸದಾಶಯದೊಂದಿಗೆ ಪ್ರತಿ ಬಾರಿಯೂ ಒಂದಷ್ಟು ಪ್ರಾಯೋಜಕರ ಸಹಕಾರದಿಂದ ನಿಯಮಿತ ಸಂಖ್ಯೆಯ ಜನರನ್ನು ಹಿಮಾಲಯದ ತುದಿಗೆ ಕರೆದುಕೊಂಡು ಹೋಗಿ ಬರುತ್ತಿದೆ. ಅದರಂತೆ ಈ ಬಾರಿಯ JUNOON 2025 ಚಾರಣಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ಪೌರ ಕಾರ್ಮಿಕರು, ಮಾವುತರ ಮಕ್ಕಳು, ಅರಣ್ಯ ಇಲಾಖೆಯ ವಾಚ್ ಗಾರ್ಡ್ ಗಳು. ಇದರ ಜೊತೆಗೆ ವಿವಿಧ ಕ್ಷೇತ್ರಗಳ 24 ಮಂದಿಯ ಒಂದು ತಂಡವನ್ನು.

ಪೌರ ಕಾರ್ಮಿಕರಿಗೆ ನಾವು ಹೆಚ್ಚೆಂದರೆ ಹಳೆ ಬಟ್ಟೆ, ಉಳಿದ ಊಟ, ಬಳಸಿದ ವಸ್ತುಗಳನ್ನು ನೀಡುತ್ತೇವೆ. ಆದರೆ ಅವರಿಗೆ ಹೊಸದೇನಾದರೂ ನೀಡಬೇಕು. ಅವರು ಕಂಡಿರದ ಲೋಕವನ್ನು ಅವರಿಗೆ ತೋರಿಸಬೇಕು ಎನ್ನುವ ಆಲೋಚನೆಯ ಅಂಗವಾಗಿಯೇ ಈ ಬಾರಿಯ ಜಿನೂನ್ 2025 ಆಯೋಜನೆಯಲ್ಲಿ ಇವರಿಗೆ ಅವಕಾಶ ನೀಡುವ ಆಲೋಚನೆ ಬಂದಿತು ಎನ್ನುತ್ತಾರೆ ಟೈಗರ್ ಅಡ್ವೆಂಚರ್ ಫೌಂಡೇಷನ್ ನ ಟೈಗರ್ ಸೋಲಂಕಿ.

ಚಾರಣಕ್ಕೆ ಅಣಿ ಮಾಡಿದ್ದೇ ಸಾಹಸಗಾಥೆ..

ಕಳೆದ ಎರಡು ದಶಕಗಳಿಂದಲೂ ವಿವಿಧ ವರ್ಗದ ಜನರನ್ನು ಹಿಮಾಲಯದ ಚಾರಣಕ್ಕೆ ಕರೆದುಕೊಂಡು ಹೋಗಿ ಬರುತ್ತಿರುವ ಟೈಗರ್ ಸೋಲಂಕಿ ಅವರು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿ 2025ರ ಚಾರಣದ ವಿಶೇಷತೆಗಳ ಬಗ್ಗೆ ತಿಳಿಸಿದರು. ನಾವು ಈ ಬಾರಿ ಪೌರ ಕಾರ್ಮಿಕರ ಮಕ್ಕಳನ್ನು ಚಾರಣಕ್ಕೆ ಕರೆದುಕೊಂಡು ಹೋಗಬೇಕು, ಅವರಿಗೆ ಹೊಸ ಲೋಕದ ಪರಿಚಯ ಮಾಡಿಸಬೇಕು ಎಂದುಕೊಂಡು ಪ್ರಯತ್ನವನ್ನು ಆರಂಭಿಸಿದೆವು. ಆದರೆ ನಮಗೆ ಸಿಕ್ಕಿದ್ದು ಮಾತ್ರ ನೀರಸ ಪ್ರತಿಕ್ರಿಯೆ. ಜನವರಿಯಿಂದಲೇ ನಾವು ಹುಡುಕಾಟ ಆರಂಭಿಸಿದೆವು. ನಮ್ಮ ಯೋಜನೆ ಬಗ್ಗೆ ಹೇಳಿದರೂ ಏನೂ ಪ್ರಯೋಜನ ಆಗಲಿಲ್ಲ. ಆಮೇಲೆ ಸ್ಥಳೀಯ ಕಾರ್ಪೊರೇಟರ್ ಆಗಿದ್ದ ಪ್ರೇಮಾ ಶಂಕರೇಗೌಡ ಅವರ ಸಹಕಾರ ಕೇಳಿದಾಗ ಅವರು ನಮ್ಮೊಂದಿಗೆ ಕೈಜೋಡಿಸಿದರು. ಇದಾದ ಮೇಲೆ ನಾವು ಪ್ರೆಸ್ ಮೀಟ್ ಮಾಡಿ ಫೆಬ್ರವರಿಯಲ್ಲಿ ಆಸಕ್ತರಿಗೆ ಆಹ್ವಾನ ನೀಡಿದೆವು. ಬೆಳಿಗ್ಗೆ 6.30ಕ್ಕೆ ಕುಕ್ಕರಹಳ್ಳಿ ಕೆರೆ ಬಳಿ ಬರಲು ಹೇಳಿದರೆ 7.30 ಆದರೂ ಬಂದಿದ್ದು ಮಾತ್ರ ಒಬ್ಬರೇ. ನಮಗೆ ಬೇಸರ ಆಗಿದ್ದು ನಿಜ. ಒಂದಷ್ಟು ಸಮಯ ಕಾದ ಬಳಿಕ ಸಂಖ್ಯೆ 12ಕ್ಕೆ ಏರಿತು. ಅದರಲ್ಲಿ ಫಿಸಿಕಲ್ ಟೆಸ್ಟ್ ಮಾಡಿದಾಗಿ ಆಯ್ಕೆ ಆಗಿದ್ದು 8 ಜನರು ಮಾತ್ರ. ಈ ಪ್ರತಿಕ್ರಿಯೆ ಕಂಡು ನಮ್ಮೊಂದಿಗೆ ಇದ್ದ ಪತ್ರಕರ್ತರೊಬ್ಬರು ಇವರೊಂದಿಗೆ ಮಾವುತರ ಮಕ್ಕಳನ್ನು ಸೇರಿಸಿಕೊಳ್ಳಿ ಎಂದು ಸಲಹೆ ಕೊಟ್ಟರು. ಆಗ ಅರಣ್ಯ ಇಲಾಖೆಯ ಕುಮಾರ್ ಪುಷ್ಕರ್ ಅವರನ್ನು ಸಂಪರ್ಕ ಮಾಡಿ ಮಾವುತರ ಮಕ್ಕಳ ಪರಿಗಣನೆಗೆ ವಿನಂತಿ ಮಾಡಿದೆವು. ಅವರು ಒಪ್ಪಿದರು. ಅದರ ಜೊತೆಗೆ ಅರಣ್ಯ ಇಲಾಖೆಯ ವಾಚ್ ಗಾರ್ಡ್, ಬೀಟ್ ಗಾರ್ಡ್ಸ್ ಅವರನ್ನೂ ಪರಿಗಣನೆ ಮಾಡಿ ಎಂದು ಸಲಹೆ ಕೊಟ್ಟರು. ನಾಗರಹೊಳೆ ಅಭಯಾರಣ್ಯದ ಡಿಸಿಎಫ್ ಸೀಮಾ ಮೇಡಂ, ಎಪಿಎಸ್ ಲಕ್ಷ್ಮೀಕಾಂತ್ ಅವರೂ ಬೀಟ್ ಗಾರ್ಡ್ಸ್ ಗಳ ಪರಿಗಣನೆಗೆ ಸಲಹೆ ನೀಡಿದರು. ನಾವು ಈ ಸಲಹೆ ಒಪ್ಪಿ ಮಾರ್ಚ್ ಮೊದಲ ವಾರದಲ್ಲಿ ನಮ್ಮ ಆಯ್ಕೆ ಪೂರ್ಣ ಮಾಡಿಕೊಂಡೆವು ಎಂದು ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿಸಿದರು ಟೈಗರ್ ಸೋಲಂಕಿ.

ತರಬೇತಿಗೆ ಅಣಿ ಮಾಡಿದ್ದು ಮತ್ತೊಂದು ಸಾಹಸ

ಯಾವುದನ್ನೂ ಉಚಿತವಾಗಿ ನೀಡಬಾರದು. ನೀಡಿದರೆ ಅದು ತನ್ನ ಗುರಿ ಮುಟ್ಟುವುದಿಲ್ಲ ಎನ್ನುವ ಕಾರಣಕ್ಕೆ ಚಾರಣಕ್ಕೆ ತಗುಲುವ ವೆಚ್ಚದ ಶೇ. 10ರಷ್ಟುನ್ನು ಭರಿಸಬೇಕು ಎಂದು ಷರತ್ತು ಹಾಕಿದ್ದೆವು. ಮಾರ್ಚ್ ಅಂತ್ಯಕ್ಕೆ ಬಂದರೂ ಯಾರೂ ಹಣ ಕೊಟ್ಟಿರಲಿಲ್ಲ. ಆಮೇಲೆ ನಾವು ಎಲ್ಲರೊಂದಿಗೆ ಮಾತನಾಡಿದ ಬಳಿಕ ಹೆಚ್ಚಿನವರು ಕೊಟ್ಟರು. ಏಪ್ರಿಲ್ 6ರ ಬಳಿಕ ಎಲ್ಲರನ್ನೂ ಚಾರಣಕ್ಕೆ ಅಣಿ ಮಾಡಲು ಶುರು ಮಾಡಿದೆವು. ಕುಕ್ಕರಹಳ್ಳಿ ಕರೆಯಲ್ಲಿ ಸುತ್ತಾಟ, ಚಾಮುಂಡಿ ಬೆಟ್ಟ, ಕುಂತಿ ಬೆಟ್ಟ, ಬೆಟ್ಟದಪುರದ ಬೆಟ್ಟ, ಕಬಿನಿ ಹಿನ್ನೀರು ಸೇರಿ ಎಲ್ಲ ಕಡೆ ವಾರಾಂತ್ಯದಲ್ಲಿ ತರಬೇತಿ ನೀಡಿದೆವು. ಎಲ್ಲವೂ ಮುಗಿಯಿತು ಎನ್ನುವಾಗ ಏ. 22 ರಂದು ಪೆಹಲ್ಗಾಮ್ ದಾಳಿ ಆದ ಬಳಿಕ ನಮ್ಮ ಉತ್ಸಾಹವೆಲ್ಲಾ ಕುಗ್ಗಿತು. ಪೋಷಕರು ತಮ್ಮ ಮಕ್ಕಳನ್ನು ಚಾರಣಕ್ಕೆ ಕಳಿಸಲು ಹಿಂದೇಟು ಹಾಕಿದರು. ನಂತರ ನಾವು ಹೋಗುತ್ತಿರುವುದು ಕಾಶ್ಮೀರಕ್ಕೆ ಅಲ್ಲ, ಉತ್ತರಖಾಂಡ್‌ಗೆ ಎಂದು ಹೇಳಿ ಎಲ್ಲರ ಮನವೊಲಿಸಿ ಹೊರಟೆವು. ಇವೆಲ್ಲವೂ ಒಂದು ರೀತಿಯ ಸಾಹಸವೇ ಸರಿ ಎನ್ನುತ್ತಾರೆ ಟೈಗರ್ ಸೋಲಂಕಿ.

ಪ್ರಯಾಣದ ಉದ್ದಕ್ಕೂ ಪ್ರವಾಸ

ಹೀಗೆ ಏ. 22ರಂದೇ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಹೋಮ್ ಸೆಕ್ರೆಟರಿ ರವಿ ಅವರು ರಾಷ್ಟ್ರಧ್ವಜ ಹಸ್ತಾಂತರ ಮಾಡಿ ನಮ್ಮನ್ನು ಬೀಳ್ಕೊಟ್ಟರು. ಅಲ್ಲಿಂದ ದೆಹಲಿ ಸಾಗಿದ ನಮ್ಮ ಪ್ರಯಾಣ ಸಂಸತ್ ಭವನ, ತಾಜ್ ಮಹಲ್, ಮಥುರಾ, ರಾಷ್ಟ್ರಪತಿ ಭವನದ ಒಳಗೆ ಸುತ್ತಾಟ ಹೀಗೆ ನಮ್ಮೊಂದಿಗೆ ಬಂದಿದ್ದ ಪೌರ ಕಾರ್ಮಿಕರು, ಮಾವುತರ ಮಕ್ಕಳು, ವಾಚ್ ಗಾರ್ಡ್ಸ್, ವಿವಿಧ ಕ್ಷೇತ್ರದ ಸಾಧಕರಿಗೆ ಹೊಸ ಜಾಗಗಳ ದರ್ಶನ ಮಾಡಿಸಿದೆವು. ಆಮೇಲೆ ನಮ್ಮ ಪ್ರಯಾಣ ಉತ್ತರಖಾಂಡ್‌ನತ್ತ ಸಾಗಿತು. ಅಲ್ಲಿ ಪೀಪಲ್ ಕೋಟ್ ಎನ್ನುವ ಕಡೆ ಚಾರಣಕ್ಕೆ ಹೋಗುವ ಎಲ್ಲರಿಗೂ ಮೆಡಿಕಲ್ ಟೆಸ್ಟ್ ಮಾಡುತ್ತಾರೆ. ಅಲ್ಲಿ ಫಿಟ್ ಆದವರನ್ನು ಮಾತ್ರವೇ ಹಿಮಾಲಯದ ಮೇಲೆರಲು ಬಿಡುವುದು.

ಹೀಗೆ ಸಾಗಿದ ನಾವು ಮೇ 1 ವಿಶ್ವ ಕಾರ್ಮಿಕರ ದಿನಾಚರಣೆ ಇದ್ದ ದಿನ ನಾವು ಕೌರಿ ಪಾಸ್ ಹೋಗಿ ಮುಟ್ಟಬೇಕು ಎಂದು ಗುರಿ ಇಟ್ಟುಕೊಂಡಿದ್ದೆವು. ಅದನ್ನು ನಾವು ಸಾಧಿಸಿ ಅಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದೆವು. 2ನೇ ತಾರೀಖು ನಾವು ಅಲ್ಲಿಂದ ವಾಪಸ್ ಆಗುವಾಗ ಸರಸ್ವತಿ ನದಿಯ ಉಗಮ ಸ್ಥಳ, ಡೆಹರಾಡೂನ್, ಅಮೃತಸರ್, ಗೋಲ್ಡನ್ ಟೆಂಪಲ್, ಜಲಿಯನ್ ವಾಲಾಬಾಗ್ ಸೇರಿ ಎಲ್ಲವನ್ನೂ ನೋಡಿಕೊಂಡು ಬಂದೆವು. ಇದೇ ವೇಳೆಯಲ್ಲಿ ದೇಶದಾದ್ಯಂತ ಪೆಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ಚರ್ಚೆ ಆಗುತ್ತಿತ್ತು. ಇದೇ ಕಾರಣಕ್ಕೆ ನಮ್ಮ ವಿಮಾನಯಾನದಲ್ಲಿ ತುಸು ವ್ಯತ್ಯಾಸ ಆಗಿತ್ತು. ಮೇ 8ನೇ ತಾರೀಖು ನಾವು ಮೈಸೂರಿಗೆ ವಾಪಸ್ ಆಗಿದೆವು. ಈ ವೇಳೆ ಮರಿಮಲ್ಲಪ್ಪ ಕಾಲೇಜಿನ ಶಿಕ್ಷಕರಾದ ಅನಿಲ್ ಕುಮಾರ್ ಅವರು ನಮಗೆ ತುಂಬಾ ಸಹಾಯ ಮಾಡಿದರು ಎಂದು ಮಾಹಿತಿ ನೀಡಿದರು ಟೈಗರ್ ಸೋಲಂಕಿ.

ಎರಡು ಡಜನ್ ಮಂದಿಯ ತುಂಬು ಪ್ರವಾಸ

ಉತ್ತರಾಖಾಂಡ್‌ನ ಎತ್ತರದ ಹಿಮಾಲಯ ಪರ್ವತ ಶ್ರೇಣಿಗಳನ್ನು ಹತ್ತಲು ಹೊರಡಿದ್ದ ತಂಡದಲ್ಲಿ ಇದ್ದದ್ದು 24 ಮಂದಿ. ಎಂಟು ಮಂದಿ ಪೌರ ಕಾರ್ಮಿಕರ ಮಕ್ಕಳು (ಆರು ಗಂಡು, ಇಬ್ಬರು ಹೆಣ್ಣು ಮಕ್ಕಳು). ಇನ್ನು ಇಬ್ಬರು ಮಾವುತರ ಮಕ್ಕಳು, ನಾಲ್ಕು ಮಂದಿ ಫಾರೆಸ್ಟ್ ಬೀಟ್ ಗಾರ್ಡ್ ಗಳು, ಶಾಶ್ವತ ಸೇವಾ ಸಮಾಜ ಇಬ್ಬರು ವಿದ್ಯಾರ್ಥಿಗಳು ಸೇರಿದ್ದರು. ಇವರೊಂದಿಗೆ ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯೋಗಿಗಳು, ವಿವಿಧ ಕ್ಷೇತ್ರದ 12 ಮಂದಿ ಸೇರಿ ಒಟ್ಟು 24 ಮಂದಿ 15 ದಿನಗಳ ಕಾಲ ತುಂಬು ಪ್ರವಾಸ ಮಾಡಿ ಬಂದಿದ್ದು, ದಿಯಾ ಫೌಂಡೇಷನ್, ಲೇಡಿ ಸರ್ಕಲ್ ಇಂಡಿಯಾ ಸೇರಿ 160 ಮಂದಿ ಇದಕ್ಕೆ ಆರ್ಥಿಕ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಟೈಗರ್ ಸೋಲಂಕಿ.

ಮೊದ ಮೊದಲು ನನಗೆ ಇಷ್ಟವೇ ಇರಲಿಲ್ಲ

ಈ ಸಾಹಸ ಯಾತ್ರೆಯ ಭಾಗವಾಗಿದ್ದ, ಮೈಸೂರಿನ ಪೌರ ಕಾರ್ಮಿಕರ ಮಗಳಾದ ಪಲ್ಲವಿ ದ ಫೆಡರಲ್ ಕರ್ನಾಟಕೊಂದಿಗೆ ತನ್ನ ಹಿಮಾಲಯ ಚಾರಣದ ಬಗ್ಗೆ ಅನುಭವ ಹಂಚಿಕೊಂಡಿದ್ದು ಹೀಗೆ.. ನನಗೆ ಹೀಗೊಂದು ಅವಕಾಶ ಇದೆ ಎಂದಾಗ ಅಷ್ಟು ದೂರ ಯಾಕೆ ಹೋಗುವುದು, ಅಲ್ಲಿ ಏನೇನು ಆಗುತ್ತದೋ ಎನ್ನುವ ಅಸಡ್ಡೆ ಇತ್ತು. ನೋಡೋಣ ಎಂದು ತರಬೇತಿಗೆ ಹೋದೆ. ಮೊದಲಿನಿಂದಲೇ ನನಗೆ ಧೈರ್ಯ ತುಂಬಿದರು. ಚಾರಣ ಮಾಡುವುದು ಹೇಗೆ, ಅದರಿಂದ ಏನೆಲ್ಲಾ ಪ್ರಯೋಜನ ಆಗುತ್ತದೆ ಎಂದು ಗೊತ್ತಾಯಿತು. ಅಲ್ಲಿಗೆ ಹೋಗಿ ಬಂದ ನನಗೆ ಸಾಕಷ್ಟು ಧೈರ್ಯ ಬಂದಿದೆ. ಏನನ್ನೂ ಬೇಕಾದರೂ ಎದುರಿಸುವೆ ಎನ್ನುವ ಶಕ್ತಿ ಬಂದಿದೆ. ಹಿಮಾಲಯದ ಪರ್ವತಗಳ ಬಗ್ಗೆ ಓದಿ, ಕೇಳಿ ತಿಳಿದಿದ್ದ ನಮಗೆ ಅದನ್ನು ಏರಿ ತುದಿ ತಲುಪುತ್ತೇವೆ ಎನ್ನುವುದೇ ದೊಡ್ಡ ಸಾಹಸಗಾಥೆ. ಇದನ್ನು ಟೈಗರ್ ಸೋಲಂಕಿ ಸರ್ ಮತ್ತು ಇತರರ ಸಲಹೆ ಸಹಕಾರದಿಂದ ಸಾಧ್ಯವಾಗಿಸಿಕೊಂಡಿದ್ದೇವೆ. ಅಲ್ಲಿಗೆ ಹೋಗಿ ಬಂದ ಬಳಿಕ ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ ಎನ್ನುತ್ತಾರೆ.

ಮಹದಾಸೆಯೊಂದು ಈಡೇರಿದೆ ಈಗ

ಚಾರಣಕ್ಕೆ ಹೋಗಿ ಬಂದ ಅಶೋಕಪುರಂನ ಪೌರ ಕಾರ್ಮಿಕರ ಮಗನಾದ ಚೇತನ್ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿ, ಹಿಮಾಲಯದ ಬಗ್ಗೆ ಕೇಳುವಾಗಲೆಲ್ಲಾ ನಾನು ಅಲ್ಲಿಗೆ ಹೋಗಬೇಕು ಎನ್ನುವ ಆಸೆ ಉಂಟಾಗುತ್ತಿತ್ತು. ಅದು ಇಷ್ಟು ಬೇಗ ಈಡೇರುತ್ತದೆ ಎಂದುಕೊಂಡಿರಲಿಲ್ಲ. ನಾನು ಅಲ್ಲಿಗೆ ಹೋಗಿ ಬಂದ ವಿಚಾರವನ್ನು ಎಲ್ಲರ ಮುಂದೆ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನ್ನಿಸುತ್ತದೆ. ನಮ್ಮ ತಂದೆ, ತಾಯಿಯೂ ಖುಷಿ ಪಡುತ್ತಿದ್ದಾರೆ. ಮೊದಲ ಬಾರಿ ವಿಮಾನ ಹತ್ತಿದ ಅನುಭವ, ಪರ್ವತ ಏರಿದ ಖುಷಿ, ಆ ಚಳಿ, ಜೋರು ಗಾಳಿ ಎಲ್ಲವೂ ನನ್ನ ಜೀವನದ ಸಿಹಿ ನೆನಪುಗಳು. ನಾವು ಕನಸಿನಲ್ಲಿ ಕಾಣುವ ರಸಗಳಿಗೆಗಳು ನನಸಾಗಿ ಬಂದಿದ್ದು ಬದುಕಿನ ದೊಡ್ಡ ವಿಸ್ಮಯವೇ ಸರಿ ಎನ್ನುತ್ತಾರೆ ವಿದ್ಯಾರ್ಥಿ ಚೇತನ್.

ಹೀಗೆ ಭಿನ್ನ ಆಯಾಮದಲ್ಲಿ ಆಲೋಚನೆ ಮಾಡುವ ಸಂಘ, ಸಂಸ್ಥೆಗಳು ವಿಭಿನ್ನ ರೀತಿಯಲ್ಲಿ ಸೇವೆ ಸಲ್ಲಿಸುವುದೇ ಅನನ್ಯವಾದ ಸಂಗತಿ. ತಂದೆ ತಾಯಿಗಳು ಪೂರೈಸಲು ಆಗದೇ ಇರುವ ಕನಸುಗಳನ್ನು ನನಸು ಮಾಡುವುದು, ವಿದ್ಯಾರ್ಥಿಗಳು, ಆರ್ಥಿಕವಾಗಿ ಹಿಂದುಳಿದವರಲ್ಲಿ ಹೊಸ ಚೈತನ್ಯ ನೀಡಿ ಮುಖದಲ್ಲಿ ನಗು, ನೆನಪಿನಂಗಳದಲ್ಲಿ ಸುಂದರ ಸಾಹಸಗಾಥೆಗಳನ್ನು ಬಿತ್ತುವುದೇ ರೋಮಂಚನಕಾರಿ ಸಂಗತಿ. ಇದನ್ನು ಮೈಸೂರಿನ ಟೈಗರ್ ಅಡ್ವೆಂಚರ್ ಫೌಂಡೇಶನ್ ಮತ್ತು ಇತರರು ಆಗು ಮಾಡಿದ್ದಾರೆ.

Tags:    

Similar News