Caste Census | ಹೊಸ ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆಗೆ ಸಂಪುಟ ಅಸ್ತು; ಹಳೆಯ ಸಮೀಕ್ಷೆಗೆ ಎಳ್ಳು ನೀರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಹೊಸದಾಗಿ ಜಾತಿಗಣತಿ ಸಮೀಕ್ಷೆ ನಡೆಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರವೇ ನಡೆಸಿದ್ದ ಕಾಂತರಾಜ್ ನೇತೃತ್ವದ ಸಮೀಕ್ಷಾ ವರದಿಗೆ ಎಳ್ಳು ನೀರು ಬಿಟ್ಟಂತಾಗಿದೆ.;
2015 ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸಿದ್ಧಪಡಿಸಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯನ್ನು ತೆರೆಮರೆಗೆ ಸರಿಸಿರುವ ರಾಜ್ಯ ಸರ್ಕಾರ, ಹೊಸದಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲು ನಿರ್ಧರಿಸಿದೆ.
ಗುರುವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಹೊಸದಾಗಿ ಸಮೀಕ್ಷೆ ನಡೆಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಕಾಂತರಾಜ್ ಸಮೀಕ್ಷೆಯು ಹತ್ತು ವರ್ಷಗಳ ಹಳೆಯ ವರದಿಯಾದ ಕಾರಣ ಹೊಸದಾಗಿ ಸಮೀಕ್ಷೆ ನಡೆಸಿ, ಜಾತಿವಾರು ಜನಸಂಖ್ಯೆ ಹಾಗೂ ಸಾಮಾಜಿಕ, ಶೈಕ್ಷಣಿಕ ಅಂಶಗಳನ್ನು ಕಲೆ ಹಾಕಲು ಸಚಿವ ಸಂಪುಟ ಒಮ್ಮತದ ನಿರ್ಣಯ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಮರು ಸಮೀಕ್ಷೆ ನಡೆಸುವ ಕುರಿತು ಚರ್ಚಿಸಲು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮರು ಸಮೀಕ್ಷೆ ಕುರಿತಂತೆ ಸಚಿವರು ಪರ-ವಿರೋಧದ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೊಸ ಸಮೀಕ್ಷೆಗೆ ನಿರ್ಧರಿಸಲಾಗಿದೆ.
ಕಾಂತರಾಜ್ ಹಾಗೂ ಜಯ ಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಿದ್ಧಪಡಿಸಿರುವ ಜಾತಿಗಣತಿ ವರದಿಯನ್ನೇ ಅಂಗೀಕರಿಸಬೇಕು. ಯಾವುದೇ ಕಾರಣಕ್ಕೂ ಮರು ಸಮೀಕ್ಷೆ ಬೇಡ ಎಂದು ಅಹಿಂದ ವರ್ಗಗಳ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ಸಚಿವರು ಮರು ಸಮೀಕ್ಷೆ ನಡೆಸಲೇಬೇಕು ಎಂದು ಪಟ್ಟು ಹಿಡಿದಿದ್ದರು.
ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಕಾಂಗ್ರೆಸ್ ವರಿಷ್ಠರು ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಂಡು ದತ್ತಾಂಶಗಳ ಮರು ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿತ್ತು.
ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಈಗಾಗಲೇ ಚರ್ಚೆಗೆ ಬಂದಿರುವ ವರದಿಯನ್ನು ಏನು ಮಾಡಬೇಕು, ಯಾವ ರೀತಿಯಲ್ಲಿ ಮರು ಸಮೀಕ್ಷೆ ನಡೆಸಬೇಕು, ಸರ್ಕಾರದ ಮುಂದಿನ ನಡೆ ಹೇಗಿರಬೇಕು ಎಂದು ಎಲ್ಲಾ ಸಚಿವರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಪ್ರಬಲ ಸಮುದಾಯಗಳ ಸ್ವಾಗತ
2015 ರಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್ ನೇತೃತ್ವದಲ್ಲಿ ನಡೆಸಲಾಗಿದ್ದ ಸಮೀಕ್ಷಾ ವರದಿಯನ್ನು ಪ್ರಬಲ ಸಮುದಾಯಗಳು ವಿರೋಧಿಸಿದ್ದವು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 ರ ದತ್ತಾಂಶಗಳನ್ನು ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಅಧ್ಯಯನ ಮಾಡಿ ವರದಿ ಸಲ್ಲಿಸಿದ್ದರೂ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ತಮ್ಮ ಜಾತಿಗಳ ಜನಸಂಖ್ಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ವರದಿ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಆದಾಗ್ಯೂ, ಹೈಕಮಾಂಡ್ ನಿರ್ದೇಶನದಂತೆ ಜಾತಿಗಣತಿ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಸಚಿವರ ಅಭಿಪ್ರಾಯ ಸಂಗ್ರಹಿಸಲಾಗಿತ್ತು.
ಹೈಕಮಾಂಡ್ ನಿರ್ದೇಶನದ ಹಿನ್ನೆಲೆ ಸಚಿವರು ವರದಿಗೆ ನೇರವಾಗಿ ವಿರೋಧ ವ್ಯಕ್ತಪಡಿಸದೇ ಹೋದರೂ ಪ್ರಬಲ ಸಮುದಾಯಗಳ ಮುಖಂಡರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದರಿಂದ ವರದಿಯನ್ನು ವಿಸ್ತೃತವಾಗಿ ಚರ್ಚಿಸಲು ಅಂಕಿ ಅಂಶಗಳ ಕರಡು ಪ್ರತಿಯನ್ನು ಸಂಪುಟ ಸಚಿವರಿಗೆ ನೀಡಿ, ಅಭಿಪ್ರಾಯ ತಿಳಿಸಲು ಸೂಚಿಸಲಾಗಿತ್ತು.
ಕಾಂತರಾಜ್ ವರದಿ ಹತ್ತು ವರ್ಷಗಳ ಹಿಂದಿನ ಅಂಕಿ ಅಂಶ ಒಳಗೊಂಡಿದೆ. ಜಾತಿಗಣತಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಿಲ್ಲ ಎಂದು ಆರೋಪಿಸಲಾಗಿತ್ತು.
ಹೀಗೆ ವರದಿಗೆ ವಿರೋಧ ಹೆಚ್ಚಿದ್ದರಿಂದ ಹೈಕಮಾಂಡ್ ಮಧ್ಯಪ್ರವೇಶಿಸಿ ಮರು ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ನಿರ್ದೇಶನ ನೀಡಿದೆ.
ವರದಿ ಅಂಗೀಕಾರಕ್ಕೆ ಅಹಿಂದ ವರ್ಗಗಳ ಆಗ್ರಹ
ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿ ಜಾರಿಗೆ ಅಹಿಂದ ವರ್ಗಗಳು ಈ ಮೊದಲಿನಿಂದಲೂ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಬಂದಿವೆ.
ಹೀಗಿರುವಾಗ ಎರಡು ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದು ಮರು ಸಮೀಕ್ಷೆ ನಡೆಸಲು ನಿರ್ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿವೆ.
ಈ ಮಧ್ಯೆ ಪ್ರತಿಪಕ್ಷಗಳು ಕೂಡ ಸರ್ಕಾರದ ಮರು ಪರೀಕ್ಷೆ ನಿರ್ಧಾರವನ್ನು ಟೀಕಿಸಿದ್ದು, ಜಾತಿಗಣತಿ ಸಮೀಕ್ಷೆಗೆ ಖರ್ಚು ಮಾಡಿದ ಜನರ ತೆರಿಗೆ ಹಣಕ್ಕೆ ಹೊಣೆ ಯಾರು ಎಂದು ವಾಗ್ದಾಳಿ ನಡೆಸಿವೆ.
ಒಟ್ಟಾರೆ, ಇಂದು ನಡೆಯುವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕುರಿತು ತೀವ್ರ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಕಾಲ್ತುಳಿತ ಪ್ರಕರಣವನ್ನು ಮರೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿಯನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಇತ್ತೀಚೆಗೆ ಸಿಎಂ ಹಾಗೂ ಡಿಸಿಎಂನ್ನು ದೆಹಲಿಗೆ ಕರೆಸಿಕೊಂಡಿದ್ದ ಹೈಕಮಾಂಡ್ ಜನರ ಮನಸ್ಸಿನಿಂದ ಕಾಲ್ತುಳಿತ ಪ್ರಕರಣವನ್ನು ಮರೆಸಲು ಹೊಸ ವಿಷಯವನ್ನು ಜನರ ಮುಂದಿಡಿ ಎಂದು ಸಲಹೆ ನೀಡಿದೆ. ಆದ್ದರಿಂದ ಈಗ ಜಾತಿ ಗಣತಿ ವಿಷಯ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಜಾತಿ ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಮರು ಜಾತಿ ಜನಗಣತಿ ಅವಶ್ಯಕತೆಯಿಲ್ಲ ಅಂಕಿ ಅಂಶಗಳಲ್ಲಿ ವ್ಯತ್ಯಾಸವಿದ್ದರೆ ಸರಿಪಡಿಸಿ. ಆದರೆ ಮರು ಸಮೀಕ್ಷೆ ಬೇಡ ಎಂದು ಅಹಿಂದ ವರ್ಗದ ಸಚಿವರು ವಿಶೇಷ ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಜಾತಿ ಗಣತಿ ಕುರಿತು ಈಗಾಗಲೇ ಎರಡೂ ಸಮಾಜಗಳು ಆತಂಕಗೊಂಡಿವೆ. ಆದ್ದರಿಂದ ಮರು ಜಾತಿ ಗಣತಿ ಅವಶ್ಯಕ ಎಂದ ತಿಳಿಸಿದ್ದಾರೆ.
ಈಗಾಗಲೇ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ. ಅದರಂತೆ ನಾವು ತೀರ್ಮಾನ ಮಾಡೋಣ. ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ತೀರ್ಮಾನ ಮಾಡಿ ಎಂದು ಕೆಲವು ಸಚಿವರು ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.
ಜಾತಿ ಜನಗಣತಿ ವಿಚಾರದಲ್ಲಿ ಮರು ಸರ್ವೇ ಅವಶ್ಯಕತೆ ಇಲ್ಲ. ಬಿಟ್ಟಿರುವ ಹೆಸರನ್ನು ಸೇರಿಸಿ ಪರಿಷ್ಕರಣೆ ಮಾಡಬೇಕು. ಕೇಂದ್ರ ಸರ್ಕಾರ ಜಾತಿ ಜನಗಣತಿ ಮಾಡದೇ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಮತದಾರರ ಪಟ್ಟಿ ತಿದ್ದುಪಡಿಗೆ ಅವಕಾಶ ಇದೆ. ಹಾಗೆಯೇ ಸಮೀಕ್ಷೆಯನ್ನು ತಿದ್ದುಪಡಿ ಮಾಡಲು ಅವಕಾಶ ನೀಡಬೇಕು. ನಾವು ಜಾತಿ ಗಣತಿ ಮಾಡಿಲ್ಲ, ಅದು ಸಾಮಾಜಿಕ ಶೈಕ್ಷಣಿಕ ವರದಿ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರತಿಪಕ್ಷದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರಕ್ಕೆ ನಾನು ಪತ್ರ ಬರೆದಿದ್ದೇನೆ. ಬಿಜೆಪಿ ಸರ್ಕಾರ ಇದ್ದಾಗ ಸಮೀಕ್ಷೆ ವರದಿಯನ್ನು ಏಕೆ ಜಾರಿಗೆ ತಂದಿಲ್ಲ. ಸಮೀಕ್ಷೆ ಪರಿಷ್ಕರಣೆಗೆ ಮಾತ್ರ ಅವಕಾಶ ನೀಡಬೇಕು. ಸಂಪುಟದಲ್ಲಿ ಈ ಕುರಿತು ಇನ್ನೂ ಚರ್ಚೆ ಆಗಬೇಕಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಜಾತಿ ಗಣತಿ ವರದಿಯ ಮರು ಸಮೀಕ್ಷೆ ನಡೆಸುವಂತೆ ಕಾಂಗ್ರೆಸ್ ಹೈಕಮಾಂಡ್ ನೀಡಿರುವ ನಿರ್ದೇಶನ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಎಲ್ಲಾ ಸಚಿವರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಈಗಾಗಲೇ ಸಂಪುಟ ಸಭೆಯಲ್ಲಿ ಕಾಂತರಾಜ್ ಹಾಗೂ ಜಯಪ್ರಕಾಶ್ ಹೆಗ್ಡೆ ನೀಡಿರುವ ಸಮೀಕ್ಷಾ ವರದಿ ಬಗ್ಗೆ ಚರ್ಚೆ ನಡೆಸಲಾಗಿದೆ. ಈಗ ಕೆಲ ಸಮುದಾಯಗಳು ಜನಸಂಖ್ಯೆಯ ವ್ಯತ್ಯಾಸಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮರು ಸಮೀಕ್ಷೆಗೆ ವರಿಷ್ಠರು ಸೂಚಿಸಿದ್ದಾರೆ. ಹಾಗಾಗಿ ಮರು ಸಮೀಕ್ಷೆ ಹೇಗೆ ನಡೆಸಬೇಕು ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಧಾರದ ಕುರಿತು ಆರಂಭದಲ್ಲೇ ಸಚಿವರಿಗೆ ಮಾಹಿತಿ ನೀಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಾತಿ ಗಣತಿಯ ಮರು ಸಮೀಕ್ಷೆ ಸೂಚಿಸಿದ್ದಾರೆ. ಈ ವಿಚಾರವಾಗಿ ಎಲ್ಲ ಸಚಿವರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ಸಿಎಂ ಮನವಿ ಮಾಡಿದರು.
ಜಾತಿಗಣತಿ ವರದಿ ಮರು ಸಮೀಕ್ಷೆ ಹೇಗೆ ನಡೆಸಬೇಕು. ವರದಿ ಕುರಿತು ಪರ-ವಿರೋಧದ ಅಭಿಪ್ರಾಯಗಳನ್ನು ಸರ್ಕಾರ ಯಾವ ರೀತಿ ಸ್ವೀಕರಿಸಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ.
ಜಾತಿಗಣತಿ ವರದಿ ಸರಿಯಾಗಿದೆ ಆದರೆ ಕೆಲವು ಗೊಂದಲಗಳಿರುವುದರಿಂದ ಮತ್ತೊಮ್ಮೆ ಎಲ್ಲರ ಅಭಿಪ್ರಾಯ ಪಡೆಯಲು ಸಂಪುಟ ಸಭೆ ಕರೆಯಲಾಗಿದೆ. ವರದಿಯನ್ನು ಸಾರ್ವಜನಿಕವಾಗಿ ತೆರೆದಿಡುವ ಕೆಲಸ ಮಾಡಲಾಗುವುದು. ಅಂಕಿ ಅಂಶಗಳನ್ನು ವೆಬ್ ಸೈಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ವ್ಯತ್ಯಾಸ ಇದ್ದರೆ ಪ್ರಶ್ನೆ ಮಾಡಬಹುದು, ಪರಿಷ್ಕರಣೆಯೂ ಆಗಬಹುದು. ಮರುಸರ್ವೇ ಮಾಡಿದರೂ ತೊಂದರೆ ಇಲ್ಲ. ಜಾತಿ ಗಣತಿ ವಿಚಾರದಲ್ಲಿ ಜನರನ್ನ ಗೊಂದಲದಲ್ಲಿ ಇಡುವುದು ಸರಿಯಲ್ಲ. ಸಮೀಕ್ಷೆ ಕುರಿತು ವಿವಿಧ ಮಠಾಧೀಶರು, ಸಂಘ ಸಂಸ್ಥೆಗಳು ವಿರೋಧ ಮಾಡಿದ್ದಾರೆ. ಆದ್ದರಿಂದ ಮರು ಸಮೀಕ್ಷೆ ಮಾಡಬೇಕಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಜಾತಿಗಣತಿ ಮರು ಸಮೀಕ್ಷೆ ಕುರಿತು ಪ್ರತಿಪಕ್ಷಗಳು ಮೊದಲು ಆರೋಪ- ಆತಂಕಕ್ಕಿರುವ ವ್ಯತ್ಯಾಸ ತಿಳಿದುಕೊಳ್ಳಬೇಕು. ಸರ್ಕಾರ ವರದಿ ಜಾರಿ ಮಾಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಸಣ್ಣ ಪುಟ್ಟ ಹಾಗೂ ಪ್ರಬಲ ಸಮುದಾಯಗಳು ತಮ್ಮ ಜನಸಂಖ್ಯೆಯ ಅಂಕಿ ಅಂಶಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಮರು ಸಮೀಕ್ಷೆಗೆ ಸೂಚಿಸಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಜಾತಿಗಣತಿ ವರದಿಯನ್ನು ಅನುಷ್ಠಾನ ಮಾಡಲು ಬದ್ಧವಾಗಿದೆ. ಆದರೆ, ಕಾಂತರಾಜ್ ವರದಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅನುಷ್ಠಾನ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಜಾತಿ ಗಣತಿ ವರದಿ ಬಗ್ಗೆ ಕೆಲವೇ ಕ್ಷಣಗಳಲ್ಲಿ ವಿಶೇಷ ಸಚಿವ ಸಂಪುಟ ಸಭೆ ಆರಂಭವಾಗಲಿದೆ. ಜಾತಿ ಗಣತಿ ವರದಿ ಅಂಗೀಕಾರಕ್ಕೆ ತಡೆ ಹಾಕಿದ್ದ ಹೈಕಮಾಂಡ್ನಿಂದ ಹೊಸ ಸಮೀಕ್ಷೆಗೆ ಸೂಚನೆ ನೀಡಿದ ಹಿನ್ನೆಲೆ ಗುರುವಾರ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಎಲ್ಲಾ ಸಚಿವರ ಅಭಿಪ್ರಾಯವನ್ನು ಸಿ.ಎಂ ಸಿದ್ದರಾಮಯ್ಯ ಪಡೆಯಲಿದ್ದಾರೆ.
ಜಾತಿ ಗಣತಿ ವರದಿ ಬಗ್ಗೆ ಒಕ್ಕಲಿಗ ಮತ್ತು ಲಿಂಗಾಯತ ಸಚಿವರಿಂದ ವರದಿಗೆ ವಿರೋಧ ಇದ್ದರೆ ಉಳಿದ ಸಚಿವರು ಪರ ಇದ್ದಾರೆ. ಇದೀಗ ಹೈಕಮಾಂಡ್ ಸೂಚನೆ ಹಿನ್ನಲೆ ಮುಂದೆ ಯಾವ ರೀತಿ ಸಮೀಕ್ಷೆ ಏನು ಮಾಡಬೇಕು ಎಂದು ಪ್ರತಿ ಸಚಿವರ ಅಭಿಪ್ರಾಯವನ್ನು ಸಿದ್ದರಾಮಯ್ಯ ಅವರು ಪಡೆಯಲಿದ್ದಾರೆ.