Totapuri Mango Crisis |ತೋತಾಪುರಿ ಮಾವಿನ ಬೆಲೆ ಕುಸಿತ; ರಾಜ್ಯದ ಮಾವು ಬೆಳೆಗಾರರ ಸ್ಥಿತಿ ಅತಂತ್ರ

ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ತೋತಾಪುರಿ ಸೇರಿದಂತೆ ಹಲವು ವಿಧದ ಮಾವು ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರಸಕ್ತ ಹಂಗಾಮಿನಲ್ಲಿ ಈ ಮೂರೂ ರಾಜ್ಯಗಳಲ್ಲಿ ಏಕಕಾಲದಲ್ಲಿ ಇಳುವರಿ ಬಂದಿರುವುದು ಮಾರಾಟ ಸಮಸ್ಯೆ ತಂದೊಡ್ಡಿದೆ. ಇದರ ಪರಿಣಾಮ ಬೆಲೆ ಕುಸಿತವಾಗಿದೆ.;

Update: 2025-06-12 06:15 GMT

ಕೋಲಾರದಲ್ಲಿ ಮಾವು ಬೆಳೆಗಾರರು ಫಸಲನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು

ರಾಜ್ಯದಲ್ಲಿ ‌ತೀವ್ರ ಬೆಲೆ ಕುಸಿತದಿಂದ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಏಕಕಾಲದಲ್ಲಿ ಮಾರುಕಟ್ಟೆಗೆ ಬಂದ ಆವಕ,  ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ರಾಜ್ಯದ ತೋತಾಪುರಿ ಮಾವು ಮಾರಾಟಕ್ಕೆ ನಿಷೇಧ, ಮಾವು ಸಂಸ್ಕರಣಾ ಘಟಕಗಳ ಅಲಭ್ಯತೆಯಿಂದ ಬೆಲೆ ಕುಸಿದಿದ್ದು, ಮಾವು ಬೆಳೆಗಾರರ ಪರಿಸ್ಥಿತಿ ಅಯೋಮಯವಾಗಿದೆ.

ಈ ಮಧ್ಯೆ, ಕೋಲಾರದಲ್ಲಿ ರೈತರು ಮಾವಿನ ಫಸಲನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ರಾಜ್ಯ ಸರ್ಕಾರವು ಆಂಧ್ರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದು, ತೋತಾಪುರಿ ಮಾವು ನಿಷೇಧ ಆದೇಶ ಹಿಂಪಡೆಯುವಂತೆ ಮನವಿ ಮಾಡಿದೆ.  

ಹವಾಮಾನ ವೈಫರೀತ್ಯದಿಂದ ಬೆಳೆ ವಿಳಂಬ

ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಫರೀತ್ಯದಿಂದಾಗಿ ಫಸಲು ವಿಳಂಬವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಮಾವಿನ ಇಳುವರಿ ಮಾರುಕಟ್ಟೆ ಪ್ರವೇಶಿಸಿದ್ದೇ ದಿಢೀರ್‌ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಹೆಚ್ಚು ಮಾವಿನ ಫಸಲು ಮಾರುಕಟ್ಟೆಗೆ ಬಂದಿದೆ.

ರಾಜ್ಯದಲ್ಲಿ ಈ ಬಾರಿ ಶೇ 30-40ರಷ್ಟು ಮಾತ್ರ ಫಸಲಿದ್ದರೂ ಯೋಗ್ಯ ಬೆಲೆ ಮರೀಚಿಕೆಯಾಗಿದೆ. ಪ್ರತಿ ವರ್ಷ ರಾಜ್ಯ ಮಾವನ್ನು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಉತ್ತರದ ರಾಜ್ಯಗಳಿಗೆ ಪೂರೈಸಲಾಗುತ್ತಿತ್ತು. ಆದರೆ ಈ ಬಾರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಮ್ಮೆಲೆ ಮಾವಿನ ಫಸಲು ಮಾರುಕಟ್ಟೆಗೆ ಬಂದಿರುವುದರಿಂದ ಸಮಸ್ಯೆ ಎದುರಾಗಿದೆ.

ಆಂಧ್ರದಲ್ಲಿ ಏಕೆ ತೋತಾಪುರಿಗೆ ನಿರ್ಬಂಧ? 

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಹೆಚ್ಚಾಗಿರುವ ತೋತಾಪುರಿ ಮಾವಿನ ಸಂಸ್ಕರಣಾ ಘಟಕಗಳು ಸಾಮರ್ಥ್ಯಕ್ಕಿಂತ ಹೆಚ್ಚಿನ ಉತ್ಪನ್ನವನ್ನು ಹೊಂದಿವೆ. ಈಗಾಗಲೇ ಆಂಧ್ರಪ್ರದೇಶದಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರ ರಕ್ಷಣೆಗೆ ಸರ್ಕಾರ ಧಾವಿಸಿದೆ. ಕೆ.ಜಿ ತೋತಾಪುರಿ ಮಾವಿಗೆ 4 ರೂ.ಬೆಂಬಲ ಬೆಲೆಯನ್ನು ಘೋಷಿಸಿದೆ. ಹೀಗಾಗಿ, ರಾಜ್ಯದ ತೋತಾಪುರಿ ಮಾವು ಮಾರಾಟಕ್ಕೆ ಚಿತ್ತೂರು ಜಿಲ್ಲಾಡಳಿತ ನಿಷೇಧ ಹೇರಿದೆ.

ನಿಷೇಧ ಹಿಂಪಡೆಯಲು ಕರ್ನಾಟಕ ಸರ್ಕಾರ ಮನವಿ

ಆಂಧ್ರ ಗಡಿ ಭಾಗದ ಜಿಲ್ಲೆಗಳಲ್ಲಿ ತೋತಾಪುರಿ ಮಾವು ಮಾರಾಟಕ್ಕೆ ನಿಷೇಧ ಹೇರಿರುವ ಆಂಧ್ರಪ್ರದೇಶ ಸರ್ಕಾರಕ್ಕೆ ಕರ್ನಾಟಕ ಪತ್ರ ಬರೆದಿದ್ದು, ನಿಷೇಧ ಆದೇಶ ಹಿಂಪಡೆಯುವಂತೆ ಮನವಿ ಮಾಡಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ವಿಜಯಾನಂದ್ ಅವರಿಗೆ ಬರೆದು " ಮಾವು ಮಾರಾಟಕ್ಕೆ ದಿಢೀರ್‌ ಹಾಗೂ ಏಕಪಕ್ಷೀಯ ನಿರ್ಬಂಧ ಕೈಗೊಂಡಿರುವುದರಿಂದ ಕರ್ನಾಟಕದ ಮಾವು ಬೆಳೆಗಾರರು, ಅದರಲ್ಲೂ ಗಡಿ ಜಿಲ್ಲೆಗಳಲ್ಲಿ ತೋತಾಪುರಿ ಮಾವು ಬೆಳೆಯುವ ಬೆಳೆಗಾರರಿಗೆ ಹೊಡೆತ ಬಿದ್ದಿದೆ.  ಮಾವು ಮಾರಾಟ ನಿಷೇಧದ ಕ್ರಮ ಸಹಕಾರಿ ಒಕ್ಕೂಟದ ಮನೋಭಾವಕ್ಕೆ ವಿರುದ್ಧವಾಗಿದೆ. ಪ್ರತೀಕಾರದ ಭಾವನೆಗಳನ್ನು ಪ್ರಚೋದಿಸುವ ಅಪಾಯ ಹೊಂದಿದೆ. ಹಾಗಾಗಿ ನಿಷೇಧ ಆದೇಶ ತೆರವು ಮಾಡಬೇಕು " ಎಂದು ಕೋರಿ ಪತ್ರ ಬರೆದಿದ್ದಾರೆ.

ಬೆಲೆ ಕುಸಿತ ಕುರಿತಂತೆ ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿದ ಶ್ರೀನಿವಾಸಪುರ ತಾಲೂಕಿನ ಮೀಸಗಾನಪಲ್ಲಿ ರೈತ ಶ್ರೀನಿವಾಸ್‌,  ತೋತಾಪುರಿ ಮಾವು ಕೆ.ಜಿ 4 ರೂ. ಗಳಂತೆ ಮಾರಾಟವಾಗುತ್ತಿದೆ. ಆದರೆ, ಇದರಿಂದ ನಾವು ಹಾಕಿರುವ ಬಂಡವಾಳವೂ ಬರುವುದಿಲ್ಲ. ಪ್ರತಿ ವರ್ಷ ಆಂಧ್ರಪ್ರದೇಶದ ತೋತಾಪುರ ಮಾವು ಸಂಸ್ಕರಣಾ ಘಟಕಗಳಿಗೆ ಮಾರಾಟ ಮಾಡುತ್ತಿದ್ದೆವು. ಈಗ ತೋತಾಪುರಿ ಮಾವಿನ ಹಣ್ಣುಗಳನ್ನು ತೆಗೆದುಕೊಳ್ಳುತ್ತಿಲ್ಲ. ಮಾರುಕಟ್ಟೆಯಲ್ಲಿ ಆವಕ ಹೆಚ್ಚಾಗಿರುವುದರಿಂದ ಕಡಿಮೆ ಬೆಲೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡಿದ್ದರು. 

ದಕ್ಷಿಣ ಭಾರತದಲ್ಲಿ ಹೆಚ್ಚು ತೋತಾಪುರಿ ಇಳುವರಿ

ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ತೋತಾಪುರಿ ಸೇರಿದಂತೆ ಹಲವು ವಿಧದ ಮಾವು ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರಸಕ್ತ ಹಂಗಾಮಿನಲ್ಲಿ ಈ ಮೂರೂ ರಾಜ್ಯಗಳಲ್ಲಿ ಏಕಕಾಲದಲ್ಲಿ ಇಳುವರಿ ಬಂದಿರುವುದು ಮಾರಾಟ ಸಮಸ್ಯೆ ತಂದೊಡ್ಡಿದೆ. ಇದರ ಪರಿಣಾಮ ಬೆಲೆ ಕುಸಿತವಾಗಿದೆ.  

ತೋತಾಪುರಿಯನ್ನು ಆಂಧ್ರಪ್ರದೇಶದ ಚಿತ್ತೂರು, ಕಡಪ, ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ತಮಿಳುನಾಡಿನ ಕೃಷ್ಣಗಿರಿ ಮತ್ತು ಕರ್ನಾಟಕದ ಶ್ರೀನಿವಾಸಪುರದಲ್ಲಿ ತೋತಾಪುರ ಮಾವು ಬೆಳೆಯಲಾಗುತ್ತದೆ. ತೋತಾಪುರಿ ಸಂಸ್ಕರಣಾ ಘಟಕಗಳು ಆಂಧ್ರಪ್ರದೇಶದ ಚಿತ್ತೂರು ಹಾಗೂ ತಮಿಳುನಾಡಿನ ಕೃಷ್ಣಗಿರಿಯಲ್ಲಿವೆ.  

ಚಿತ್ತೂರು ಜಿಲ್ಲೆಯಲ್ಲಿಅಂದಾಜು 70 ಸಾವಿರ ಹೆಕ್ಟೇರ್ ಭೂಮಿಯಲ್ಲಿ ತೋತಾಪುರಿ ಬೆಳೆಯಲಾಗುತ್ತದೆ. ರೈತರಿಂದ ಮಾವು ಖರೀದಿಸುವ ಹಣ್ಣಿನ ಸಂಸ್ಕರಣಾ ಘಟಕಗಳು ಮಾವಿನ ತಿರುಳನ್ನು ಹೊರದೇಶಗಳಿಗೆ ರಫ್ತು ಮಾಡುತ್ತವೆ. ತೋತಾಪುರಿ ಸೇರಿ ಭಾರತದ ಮಾವಿನ ತಿರುಳಿನಿಂದಲೇ ವಾರ್ಷಿಕ ಸುಮಾರು 720 ಕೋಟಿ ರೂ. ವಹಿವಾಟು ನಡೆಯುತ್ತದೆ.

ಮಾವಿನ ತಿರುಳು ಹಾಗೂ ಮಾವಿನ ಹೋಳುಗಳನ್ನು ಹೆಚ್ಚಾಗಿ ಮಧ್ಯ ಏಷ್ಯಾ, ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ.

ಈಡೇರಲಿಲ್ಲ ರೈತರ ಬಹುದಿನಗಳ ಬೇಡಿಕೆ

ಮಾವು ಹೆಚ್ಚಾಗಿ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಆರಂಭಿಸುವಂತೆ ಈ ಭಾಗದ ಮಾವು ಬೆಳೆಗಾರರು ದಶಕಗಳ ಬೇಡಿಕೆಗೆ ಈವರೆಗೂ ಸರ್ಕಾರ ಸ್ಪಂದಿಸಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕದ ಅಲಭ್ಯತೆಯಿಂದ ಕೋಲಾರ ಜಿಲ್ಲೆಯ ರೈತರು ಗಡಿಭಾಗದಲ್ಲಿರುವ ಆಂಧ್ರದ ಚಿತ್ತೂರು ಹಾಗೂ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಗಳಲ್ಲಿರುವ ಸಂಸ್ಕರಣಾ ಘಟಕಗಳನ್ನೇ ಅವಲಂಬಿಸಿದ್ದಾರೆ. ಆದರೆ, ಪ್ರಸ್ತುತ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಬೆಳೆಗಾರರ ಹಿತ ರಕ್ಷಿಸಲು ಅಲ್ಲಿನ ಸಂಸ್ಕರಣಾ ಘಟಕಗಳು ಆದ್ಯತೆ ನೀಡಿವೆ. ಹಾಗಾಗಿ ಕರ್ನಾಟಕದ ಮಾವು ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬೆಂಬಲ ಬೆಲೆಯ ಭರವಸೆ ನೀಡಿದ ಸಿಎಂ

ತೋತಾಪುರಿ ಮಾವಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಕೋಲಾರದಲ್ಲಿ ಬುಧವಾರ ರೈತರು ಹಣ್ಣುಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರ ನೆರವಿಗೆ ಧಾವಿಸಲು ಸರ್ಕಾರ ಮುಂದಾಗಿದೆ. 

ತೋತಾಪುರಿ ಮಾವು ಬೆಲೆ ತೀವ್ರ ಕುಸಿತ ಕಂಡಿರುವುದರಿಂದ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಿಸಲು ರಾಜ್ಯ ಸರ್ಕಾರ ಚಿಂತನೆ ಡೆಸಿದೆ. ಒಂದು ಕೆ.ಜಿ ತೋತಾಪುರಿ ಮಾವಿಗೆ ಆಂಧ್ರಪ್ರದೇಶದಲ್ಲಿ ನೀಡುತ್ತಿರುವಂತೆ 4ರೂ. ಬೆಂಬಲ ಬೆಲೆ ನೀಡಬೇಕು ಎಂಬ ರೈತರ ಒತ್ತಾಯಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಗುರುವಾರ (ಜೂ.12) ನಡೆಯುವ ಸಂಪುಟ ಸಭೆಯಲ್ಲಿ ಬೆಂಬಲ ಬೆಲೆ ಘೋಷಣೆ ಕುರಿತು ಚರ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Tags:    

Similar News