Kamal Haasan Controversy |ಕಮಲ್‌ ಹಾಸನ್‌ ಇನ್ನೂ ಕ್ಷಮೆ ಕೇಳಿಲ್ಲವೇ? ; ವಿವೇಚನೆ ಬಳಸಲು ತಿಳಿಸಿ ಎಂದ ಹೈಕೋರ್ಟ್‌

ವಿವೇಚನೆಯು ಶೌರ್ಯದ ಅತ್ಯುತ್ತಮ ಭಾಗ ಎಂದು ಹೇಳಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು, ಕಮಲ್‌ ಹಾಸನ್‌ಗೆ ಈ ಬಗ್ಗೆ ತಿಳಿಸಿ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚ್ಯವಾಗಿ ಹೇಳಿತು.;

Update: 2025-06-13 08:31 GMT

ಕರ್ನಾಟಕದಲ್ಲಿ "ಥಗ್ ಲೈಫ್" ಚಿತ್ರ ಬಿಡುಗಡೆಗೆ ಅಗತ್ಯ ಬಂದೋಬಸ್ತ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಜೂನ್‌ 20ಕ್ಕೆ ಮುಂದೂಡಿದೆ. 

ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ನೇತೃತ್ವದ ಏಕ ಸದಸ್ಯ ಪೀಠವು ಕಮಲ್‌ ಹಾಸನ್‌ ಇನ್ನೂ ಕ್ಷಮೆ ಕೇಳಿಲ್ಲವೇ, ಸುಪ್ರೀಂಕೋರ್ಟ್‌ ಕತೆ ಏನಾಯಿತು ಎಂದು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಕನ್ನಡ ಸಾಹಿತ್ಯ ಪರಿಷತ್‌ ಪರ ಹಿರಿಯ ವಕೀಲ ಎಸ್‌. ಬಸವರಾಜು ಅವರು, ಕಮಲ್‌ ಹಾಸನ್‌ ಅವರು ಕ್ಷಮೆ ಕೇಳಿಲ್ಲ. ಸುಪ್ರೀಂಕೋರ್ಟ್‌ ಇಂದು ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಅವರು ಸಲ್ಲಿಸಿರುವ ಅರ್ಜಿ ಊರ್ಜಿತವಾಗುವುದಿಲ್ಲ. ವಿವಾದ ಸೃಷ್ಟಿಸಿರುವುದೇ ಕಮಲ್‌ ಹಾಸನ್‌. "ಮನೆಯೊಳಗಣ ಕಿಚ್ಚು ಮನೆಯ ಸುಡುವುದಲ್ಲದೇ ನೆರೆಯ ಮನೆಯ ಸುಡುವುದೇ" ಎಂಬ ಅಕ್ಕಮಹಾದೇವಿಯವರ ವಚನ ಉಲ್ಲೇಖಿಸಿದರು.  ಕಮಲ್‌ ಹಾಸನ್‌ ಅವರು ಮೂರ್ಖ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.

ಕನ್ನಡ ಸಾಹಿತ್ಯ ಪರಿಷತ್‌ ಪರ ವಕೀಲರ "ಮೂರ್ಖ" ಹೇಳಿಕೆಗೆ ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಆಗ ನ್ಯಾಯಪೀಠ ಕೂಡ ಇಂತಹ ಪದ ಬಳಸಬಾರದು ಎಂದು ಹಿರಿಯ ವಕೀಲರಿಗೆ ಸೂಚಿಸಿತು.

ತಮ್ಮ ಹೇಳಿಕೆಗೆ ವಿಷಾಧ ವ್ಯಕ್ತಪಡಿಸಿದ ಎಸ್‌. ಬಸವಾರಾಜು ಅವರು ಪ್ರತಿಕ್ರಿಯೆಗಾಗಿ ಮೂರ್ಖ ಎಂಬ ಪದ ಬಳಕೆ ಮಾಡಲಾಗಿದೆ. ಅನ್ಯ ಉದ್ದೇಶವಿಲ್ಲ. ಕನ್ನಡ ಭಾಷೆಯ ಇತಿಹಾಸದ ಬಗ್ಗೆ ಅರ್ಜಿದಾರರ ಪರ ವಕೀಲರು ಕಮಲ್‌ ಹಾಸನ್‌ ಗಮನಕ್ಕೆ ತರಬೇಕು ಎಂದು ಕೋರಿದರು.

ಕನ್ನಡ ಸಾಹಿತ್ಯ ಪರಿಷತ್‌ ಮಧ್ಯಪ್ರವೇಶ ಕೋರಿದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಪೀಠವು ಅರ್ಜಿದಾರರ ಪರ ವಕೀಲರು ಒಪ್ಪಿದರು. ಆಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ವಿವೇಚನೆಯು ಶೌರ್ಯದ ಅತ್ಯುತ್ತಮ ಭಾಗ ಎಂಬುದನ್ನು ಮತ್ತೊಮ್ಮೆ ನೆನಪಿಸಲು ಬಯಸುತ್ತೇನೆ ಎಂದು ಅರ್ಜಿದಾರರಿಗೆ ಸೂಚ್ಯವಾಗಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಶಾನ್‌ಬಾಗ್‌ ಅವರು, ಈ ಕುರಿತು ಕಮಲ್‌ ಹಾಸನ್‌ ಅವರಿಗೆ ತಿಳಿಸಲಾಗುವುದು ಎಂದು ಹೇಳಿದ ಬಳಿಕ ವಿಚಾರಣೆ ಮುಂದೂಡಲಾಯಿತು.

Tags:    

Similar News