Ahmedabad Plane Crash | ಏರ್ ಇಂಡಿಯಾ ವಿಮಾನ ಪತನ; ದುರಂತದಲ್ಲಿ ಮೃತಪಟ್ಟವರಿಗೆ ಗಣ್ಯರ ಸಂತಾಪ, ರಕ್ಷಣಾ ಕಾರ್ಯಕ್ಕೆ ಧಾವಿಸಿದ ಭಾರತೀಯ ರೈಲ್ವೆ
ವಿಮಾನದಲ್ಲಿ 159 ಮಂದಿ ಭಾರತೀಯರು, 53 ಬ್ರಿಟನ್ ಪ್ರಜೆಗಳು, ಏಳು ಮಂದಿ ಪೋರ್ಚುಗೀಸ್ ಪ್ರಜೆಗಳು ಹಾಗೂ ಒಬ್ಬ ಕೆನಡಾ ಪ್ರಜೆ ಪ್ರಯಾಣಿಸುತ್ತಿದ್ದರು.;
ಅಹಮದಾಬಾದ್ನಿಂದ ಲಂಡನ್ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಬೋಯಿಂಗ್ ಡ್ರೀಮ್ಲೈನರ್ ವಿಮಾನವು ತಾಂತ್ರಿಕ ದೋಷದಿಂದ ಪತನವಾಗಿದ್ದು, 135ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡಿರುವ ಘಟನೆ ನಡೆದಿದೆ.
ದುರಂತದಲ್ಲಿ ಮೃತಪಟ್ಟಿರುವವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಅಹಮದಾಬಾದ್ನಿಂದ ಲಂಡನ್ಗೆ ಮಧ್ಯಾಹ್ನ 1.38ಕ್ಕೆ ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲ ಕ್ಷಣಗಳಲ್ಲೇ ಮೇಘನಿನಗರದ ಬಳಿ ಪತನಗೊಂಡಿತ್ತು. ವಿಮಾನದಲ್ಲಿ 159 ಮಂದಿ ಭಾರತೀಯರು, 53 ಬ್ರಿಟನ್ ಪ್ರಜೆಗಳು, ಏಳು ಮಂದಿ ಪೋರ್ಚುಗೀಸ್ ಪ್ರಜೆಗಳು ಹಾಗೂ ಒಬ್ಬ ಕೆನಡಾ ಪ್ರಜೆ ಪ್ರಯಾಣಿಸುತ್ತಿದ್ದರು.
ವಿಮಾನ ದುರಂತಕ್ಕೆ ಗಣ್ಯರ ಸಂತಾಪ
ಅಹಮದಾಬಾದ್ನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಿಂದ ತುಂಬಾ ನೋವಾಗಿದೆ. ಇದು ಹೃದಯ ವಿದ್ರಾವಕ ದುರಂತ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ದೇಶದ ಜನರಿದ್ದಾರೆ. ಇಂತಹ ದುಃಖಕರ ಸಮಯದಲ್ಲಿ ಇಡೀ ದೇಶವು ಅವರೊಂದಿಗೆ ನಿಲ್ಲಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದುರಂತದ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ವಿಮಾನ ದುರಂತವು ಪದಗಳಿಗೆ ಮೀರಿದ ಹೃದಯವಿದ್ರಾವಕ ಘಟನೆಯಾಗಿದೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬಗಳೊಂದಿಗೆ ಧೈರ್ಯ ತುಂಬೋಣ ಎಂದು ಸಂತಾಪ ಸೂಚಿಸಿದ್ದಾರೆ.
ಸಂತ್ರಸ್ಥರ ಕುಟುಂಬಗಳೊಂದಿಗೆ ಸರ್ಕಾರ ಇರಲಿದೆ. ದುರಂತದ ಕುರಿತು ಅವಲೋಕನ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಭೀಕರ ವಿಮಾನ ಅಪಘಾತದಿಂದ ಹೇಳಲಾಗದಷ್ಟು ನೋವಾಗಿದೆ. ವಿಪರ್ತು ನಿರ್ವಹಣಾ ಪಡೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗೃಹ ಸಚಿವ ಹರ್ಷ ಸಾಂಘವಿ ಹಾಗೂ ಅಹಮದಾಬಾದ್ ಪೊಲೀಸ್ ಆಯುಕ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಘಟನೆಯ ಮಾಹಿತಿ ಪಡೆಯುತ್ತಿದ್ದೇನೆ ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಹಮದಾಬಾದ್ ವಿಮಾನ ದುರಂತಕ್ಕೆ ಕಂಬನಿ ಮಿಡಿದಿದ್ದಾರೆ. ವಿಮಾನ ಪತನದ ದೃಶ್ಯಗಳು ಭೀಕರವಾಗಿವೆ. ದುರ್ಘಟನೆಯಲ್ಲಿ ಮಡಿದವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿಮಾನ ಪ್ರಯಾಣಿಕರು ಮತ್ತು ಸಿಬ್ಬಂದಿಯ ಕುಟುಂಬಗಳು ಅನುಭವಿಸುತ್ತಿರುವ ನೋವು ಮತ್ತು ಆತಂಕ ಊಹಿಸಲೂ ಅಸಾಧ್ಯ. ಈ ದುರಂತವನ್ನು ನಂಬಲೂ ಆಗದ ಕ್ಷಣವಾಗಿದೆ. ಘಟನೆಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಈ ಸಂದರ್ಭದಲ್ಲಿ ಆಡಳಿತದ ತುರ್ತು ರಕ್ಷಣೆ ಮತ್ತು ಪರಿಹಾರ ಪ್ರಯತ್ನಗಳು ಅತ್ಯಂತ ಅವಶ್ಯವಾಗಿವೆ. ಪ್ರತಿಯೊಂದು ಜೀವವೂ ಮುಖ್ಯ, ಪ್ರತಿ ಸೆಕೆಂಡ್ ಕೂಡ ಮುಖ್ಯ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೈಲಾದ ಸಹಾಯವನ್ನು ಮಾಡಬೇಕು ಎಂದು ಎಕ್ಸ್ ಪೋಸ್ಟ್ ನಲ್ಲಿ ಕರೆ ನೀಡಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಹಮದಾಬಾದ್ ವಿಮಾನ ಅಪಘಾತದ ಘಟನೆಗೆ ಕಂಬನಿ ಮಿಡಿದಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ವಿದೇಶಾಂಗ ಸಚಿವ ಜೈಶಂಕರ್ ಕೂಡ ಸಂತಾಪ ವ್ಯಕ್ತಪಡಿಸಿದ್ದು, ವಿಮಾನ ಅಪಘಾತದ ಸುದ್ದಿ ಆಘಾತ ತಂದಿದೆ. ಪ್ರಯಾಣಿಕರು ಮತ್ತು ಅವರ ಕುಟುಂಬಗಳೊಂದಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಮಾನ ಅಪಘಾತಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ.
ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಅವಿರತ ಶ್ರಮಿಸುತ್ತಿರುವ ವಿಪತ್ತು ನಿರ್ವಹಣಾ ಪಡೆಗೆ ಧನ್ಯವಾದ ತಿಳಿಸಿದ್ದಾರೆ.
ಭಾರತೀಯ ರೈಲ್ವೆಯಿಂದ ಪರಿಹಾರ ಕಾರ್ಯ
ಅಹಮದಾಬಾದ್ ವಿಮಾನ ಅಪಘಾತಕ್ಕೆ ಪಶ್ಚಿಮ ರೈಲ್ವೆಯ ವಿಪತ್ತು ನಿರ್ವಹಣಾ ತಂಡವು ಘಟನಾ ಸ್ಥಳದಲ್ಲಿಸೂಕ್ತ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದೆ. ಗುಜರಾತ್ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ, ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ವಿಮಾನ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಪಶ್ಚಿಮ ರೈಲ್ವೆಯ ವೈದ್ಯಕೀಯ ತಂಡ ಮತ್ತು ರೈಲ್ವೆ ಸುರಕ್ಷತಾ ಪಡೆಯನ್ನು ನಿಯೋಜಿಸಲಾಗಿದೆ.
ಹೆಚ್ಚುವರಿಯಾಗಿ, ಪಶ್ಚಿಮ ರೈಲ್ವೆಯು ಅಹಮದಾಬಾದ್ನಿಂದ ಹೆಚ್ಚುವರಿ ರೈಲುಗಳನ್ನು ಓಡಿಸಲಿದೆ. ಪ್ರಸ್ತುತ, ಮುಂಬೈ ಹಾಗೂ ದೆಹಲಿಗೆ ತಲಾ ಒಂದು ರೈಲು ಅಹಮದಾಬಾದ್ನಿಂದ ಪ್ರಯಾಣಿಸಲಿದೆ.
ವಿಮಾನ ದುರಂತಕ್ಕೆ ವಿದೇಶಿಗರ ಸಂತಾಪ
ಅಹಮದಾಬಾದ್-ಲಂಡನ್ ವಿಮಾನ ದುರಂತಕ್ಕೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 53 ಬ್ರಿಟನ್ ಪ್ರಜೆಗಳನ್ನು ಹೊತ್ತು ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ದೃಶ್ಯಗಳು ಭೀಕರವಾಗಿವೆ. ಪರಿಸ್ಥಿತಿ ಹಾಗೂ ಮಾಹಿತಿ ಅವಲೋಕಿಸಲು ಭಾರತ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಅಮೆರಿಕದ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ ಪ್ರತಿಕ್ರಿಯಿಸಿ, ಭಾರತದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯರಿಗೆ ನನ್ನ ಸಂತಾಪ ತಿಳಿಸುತ್ತೇನೆ.
ಭಾರತ, ಬ್ರಿಟನ್, ಪೋರ್ಚುಗಲ್ ಮತ್ತು ಕೆನಡಾದ ಮೃತ ಪ್ರಯಾಣಿಕರ ಸಂಬಂಧಿಕರು, ಅವರ ಹಿತೈಶಿಗಳಿಗೆ ನನ್ನ ಸಂತಾಪಗಳು. ಈ ದುರಂತದಲ್ಲಿ ಸಾಧ್ಯವಾದಷ್ಟು ಜೀವಗಳನ್ನು ಉಳಿಯಲಿ ಎಂದು ಪ್ರಾರ್ಥಿಸುತ್ತೇವೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.