ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿಯಾಗಿ ಇಸ್ರೋ ಮಾಜಿ ಅಧ್ಯಕ್ಷ ಸೋಮನಾಥ್ ನೇಮಕ
ಇಸ್ರೋ ಮಾಜಿ ಅಧ್ಯಕ್ಷ ಸೋಮನಾಥ್ ಅವರನ್ನು ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ನೇಮಕ ಮಾಡಲಾಗಿದೆ. ಗುರುವಾರ(ಜೂ.12) ಎಸ್.ಸೋಮನಾಥ್ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು ಎಂದು ವಿವಿ ಪ್ರಕಟಣೆ ತಿಳಿಸಿದೆ.;
ಇಸ್ರೋ ಮಾಜಿ ಅಧ್ಯಕ್ಷ ಸೋಮನಾಥ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಅವರನ್ನು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ನೂತನ ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ.
ಗುರುವಾರ (ಜೂ.12) ರಂದು ಎಸ್.ಸೋಮನಾಥ್ ಅವರು ಅಧಿಕೃತವಾಗಿ ಅಧಿಕಾರ ವಹಿಸಲಿದ್ದಾರೆ. ಈ ಮೂಲಕ ಅವರು ಸ್ಥಾಪಕ ಕುಲಪತಿ ಪ್ರೊ. ಎಂ.ಕೆ. ಶ್ರೀಧರ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಪ್ರೊ. ಶ್ರೀಧರ್ ಅವರು ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ಸದಸ್ಯರಾಗಿ ತಮ್ಮ ಪಾತ್ರ ನಿರ್ವಹಿಸಲಿದ್ದು, ಸಂಸ್ಥೆಯ ಬೆಳವಣಿಗೆಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಚಾಣಕ್ಯ ವಿಶ್ವವಿದ್ಯಾಲಯವು ತನ್ನ ಆಡಳಿತ ಮಂಡಳಿಯ ಪುನರಚನೆ ಮಾಡಿಕೊಂಡಿದ್ದು, ಈ ಹೊಸ ಮಂಡಳಿಯಲ್ಲಿ ಹಲವು ಗಣ್ಯರು ಸ್ಥಾನ ಪಡೆದಿದ್ದಾರೆ. ಇನ್ಫೋಸಿಸ್ನ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಆರಿನ್ ಕ್ಯಾಪಿಟಲ್ನ ಅಧ್ಯಕ್ಷ ಟಿ.ವಿ. ಮೋಹನದಾಸ್ ಪೈ, ಐಐಎಂ ಬೆಂಗಳೂರು ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಬಿ. ಮಹಾದೇವನ್, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯೆ ಡಾ. ಶಮಿಕಾ ರವಿ, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕಿ ನಂದಿನಿ ಎನ್, ಚಾಣಕ್ಯ ವಿಶ್ವವಿದ್ಯಾಲಯದ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ನಾಗರಾಜ್ ರೆಡ್ಡಿ ಹಾಗೂ ರಿಜಿಸ್ಟ್ರಾರ್ ಮತ್ತು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಸುಶಾಂತ್ ಜೋಶಿ ಅವರು ಎಕ್ಸ್-ಆಫಿಸಿಯೋ ಸದಸ್ಯರಾಗಿ ಆಡಳಿತ ಮಂಡಳಿಗೆ ಸೇರಿದ್ದಾರೆ.
“ಚಾಣಕ್ಯ ವಿಶ್ವವಿದ್ಯಾಲಯವು ಮಾಜಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರನ್ನು ಕುಲಪತಿಯಾಗಿ ಘೋಷಿಸಲು ಹೆಮ್ಮೆಪಡುತ್ತಿದೆ. ಅವರ ನೇಮಕಾತಿ ನಮ್ಮ ಶ್ರೇಷ್ಠತೆಯ ಹೆಜ್ಜೆಗುರುತುಗಳಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ,” ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಸೋಮನಾಥ್ ಅವರ ಸಾಧನೆಗಳೇನು?
ಜುಲೈ 1963ರಲ್ಲಿ ಕೇರಳದಲ್ಲಿ ಜನಿಸಿದ ಡಾ. ಶ್ರೀಧರ ಪಣಿಕ್ಕರ್ ಸೋಮನಾಥ್ ಅವರು ಭಾರತದ ಪ್ರಸಿದ್ಧ ಏರೋಸ್ಪೇಸ್ ಎಂಜಿನಿಯರ್ಗಳಲ್ಲೊಬ್ಬರಾಗಿದ್ದು, ಇಸ್ರೋ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಇಸ್ರೋ ಚಂದ್ರಯಾನ-3 ಎಂಬ ಮಹತ್ವದ ಚಂದ್ರಮ ಪರಿಶೋಧನಾ ಯೋಜನೆಗೆ ಮುಂದಾಗಿದ್ದು, 2023ರ ಆಗಸ್ಟ್ 23ರಂದು ಸಂಜೆ 6:04 ಗಂಟೆಗೆ “ವಿಕ್ರಮ್” ಲ್ಯಾಂಡರ್ ಮತ್ತು “ಪ್ರಜ್ಞಾ” ರೋವರ್ಗಳನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲಾಯಿತು. ಈ ಮೂಲಕ ಭಾರತವು ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ವಿಶ್ವದ ಮೊದಲ ದೇಶ ಎನಿಸಿಕೊಂಡಿತು. ಚಂದ್ರನ ಮೇಲೆ ಮೃದುವಾಗಿ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಸೋಮನಾಥ್ ಅವರು ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಹಾಗೂ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC) ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಉಡಾವಣಾ ವಾಹನಗಳ ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ಅವರ ಪಾತ್ರ ಬಹುಮುಖ್ಯವಾಗಿದ್ದು, ವಿಶೇಷವಾಗಿ ಎಂಜಿನಿಯರಿಂಗ್, ರಚನಾತ್ಮಕ ವಿನ್ಯಾಸ, ಚಲನಶಾಸ್ತ್ರ ಮತ್ತು ಪೈರೋಟೆಕ್ನಿಕ್ಸ್ ಕ್ಷೇತ್ರಗಳಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.
ಡಾ. ಸೋಮನಾಥ್ ಅವರು ಕೇರಳದ ಅಲಪ್ಪುಳ ಜಿಲ್ಲೆಯ ತುರವೂರ್ ಎಂಬ ಗ್ರಾಮದಲ್ಲಿ ಮಲಯಾಳಿ ನಾಯರ್ ಕುಟುಂಬದಲ್ಲಿ ಜನಿಸಿದ್ದು, ಅವರ ತಂದೆ ವಿ. ಶ್ರೀಧರ ಪಣಿಕ್ಕರ್ ಹಿಂದಿ ಶಿಕ್ಷಕರಾಗಿದ್ದು, ತಾಯಿ ತಂಕಮ್ಮ. ತನ್ನ ಶ್ರಮ ಮತ್ತು ಬುದ್ಧಿವಂತಿಕೆಯಿಂದ ಇಂದಿನ ಈ ಪ್ರಭಾವಶಾಲಿ ಸ್ಥಾನಕ್ಕೆ ಬಂದಿದ್ದಾರೆ.