ಆರೋಗ್ಯ ಸಂಜೀವಿನಿ ಪರಿಷ್ಕೃತ ಮಾರ್ಗಸೂಚಿಗೆ ಸಂಪುಟ ಒಪ್ಪಿಗೆ; ಯಾರಿಗೆಲ್ಲಾ ಅನುಕೂಲ?

ಅಲೋಪತಿ ಮತ್ತು ಆಯುಷ್ ಚಿಕಿತ್ಸಾ ಪದ್ಧತಿ ಒಳಗೊಂಡ ಎಲ್ಲ ಹೊರರೋಗಿ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರ, ಒಳರೋಗಿ ಚಿಕಿತ್ಸೆ ಹಾಗೂ ವಾರ್ಷಿಕ ಆರೋಗ್ಯ ತಪಾಸಣೆ ಸೌಲಭ್ಯ ಒದಗಿಸುವ ಕುರಿತು ಪರಿಷ್ಕೃತ ಮಾರ್ಗಸೂಚಿಗೆ ಸಂಪುಟ ಅನುಮೋದನೆ ನೀಡಿದೆ.;

Update: 2025-03-28 06:45 GMT
ಆರೋಗ್ಯ ಸಂಜೀವಿನಿ ಪರಿಷ್ಕೃತ ಮಾರ್ಗಸೂಚಿಗೆ ಸಂಪುಟ ಒಪ್ಪಿಗೆ; ಯಾರಿಗೆಲ್ಲಾ ಅನುಕೂಲ?

ರಾಜ್ಯ ಸರ್ಕಾರಿ ನೌಕರರು ಹಾಗೂ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ ಪರಿಷ್ಕೃತ 'ಕರ್ನಾಟಕ ಆರೋಗ್ಯ ಕುಟುಂಬ ಸಂಜೀವಿನಿ ಯೋಜನೆ'ಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಯೋಜನೆಯ ಮೊದಲ ಹಂತದಲ್ಲಿ ಅಲೋಪತಿ ಚಿಕಿತ್ಸಾ ವಿಧಾನದಲ್ಲಿ ಒಳರೋಗಿ ಚಿಕಿತ್ಸೆ ಆರಂಭಿಸಲು ಉದ್ದೇಶಿಸಲಾಗಿದೆ. ಅಲೋಪತಿ ಮತ್ತು ಆಯುಷ್ ಚಿಕಿತ್ಸಾ ಪದ್ಧತಿ ಒಳಗೊಂಡ ಎಲ್ಲ ಹೊರರೋಗಿ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರ, ಒಳರೋಗಿ ಚಿಕಿತ್ಸೆ ಹಾಗೂ ವಾರ್ಷಿಕ ಆರೋಗ್ಯ ತಪಾಸಣೆ ಸೌಲಭ್ಯ ಒದಗಿಸುವ ಕುರಿತು ಪರಿಷ್ಕೃತ ಮಾರ್ಗಸೂಚಿಗೆ ಸಂಪುಟ ಅನುಮೋದನೆ ನೀಡಿದೆ.

ಆದರೆ, ಈ ಎಲ್ಲ ಚಿಕಿತ್ಸೆಗಳನ್ನು ಏಕಕಾಲದಲ್ಲಿ ಆರಂಭಿಸಲು ಸಾಧ್ಯವಿಲ್ಲ. ಹಾಗಾಗಿ ಸಿಜಿಎಚ್ಎಸ್, ಎಬಿ-ಎಆರ್‌ಕೆ, ಎನ್ಎಚ್ಎ ಪ್ರಕಟಿಸಿರುವ ಎಚ್‌ಬಿಪಿ 2022 ಯೋಜನೆಯಡಿ ಕೆಎಎಸ್ಎಸ್ ಪ್ಯಾಕೇಜ್ ಮಾಸ್ಟರ್ ಅಡಿ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಸಿಜಿಎಚ್ಎಸ್ ಪ್ಯಾಕೇಜ್ ಅಡಿ ಎನ್ಎಬಿಎಚ್ ಮಾನ್ಯತೆ ಪಡೆದಿರುವ ನೋಂದಾಯಿತ ಆಸ್ಪತ್ರೆಗಳಿಗೆ ನೀಡುತ್ತಿರುವ ಶೇ.15 ಹೆಚ್ಚುವರಿ ಪ್ರೋತ್ಸಾಹ ಧನವನ್ನು ಕೆಎಎಸ್ಎಸ್ನಲ್ಲಿ ಒಳಗೊಂಡಿರುವ ಎಲ್ಲಾ ಪ್ಯಾಕೇಜ್‌ಗಳಿಗೂ ಅನ್ವಯಿಸಲು ಪರಿಷ್ಕೃತ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸರ್ಕಾರಿ ನೌಕರನ ಮಗ/ಮಗಳು ವೈದ್ಯಕೀಯ ಚಿಕಿತ್ಸೆ ಪಡೆಯಲು 30 ವರ್ಷಗಳ ಗರಿಷ್ಠ ಮಿತಿಯಲ್ಲಿರಬೇಕು. ಸ್ವಂತ ಸಂಪಾದನೆ ಮಾಡುವವರೆಗೆ ಅಥವಾ ಮದುವೆಯಾಗುವವರೆಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ನೌಕರನ ಮೇಲೆ ಅವಲಂಬಿತರಾಗಿರುವ ತಂದೆ-ತಾಯಿಯರ ತಿಂಗಳ ಆದಾಯ ಮಿತಿ 17ಸಾವಿರ ರೂ.ಗಳಿಗೆ ನಿಗದಿಪಡಿಸಲಾಗಿದೆ. ಅಲ್ಲದೇ ವಿಧವೆ/ವಿಚ್ಛೇದಿತ ಮಗಳಿಗೆ ಕೂಡ ವೈದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿದೆ.

30 ವರ್ಷ ಮೀರಿದ ಅವಿವಾಹಿತ ಮಗ ಅಥವಾ ಮಗಳು ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಸ್ವಂತ ಸಂಪಾದನೆ ಮಾಡಲು ಅಸಮರ್ಥರಾಗಿದ್ದರೆ ಅಂತಹವರಿಗೆ ಗರಿಷ್ಠ ಮಿತಿ ಇಲ್ಲದೆ ಚಿಕಿತ್ಸೆ ಪಡೆಯಲು ಹೊಸ ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

Tags:    

Similar News