Booker Award 2025: ಕನ್ನಡದ ಲೇಖಕಿ ಬಾನು ಮುಷ್ತಾಕ್ಗೆ ಪ್ರತಿಷ್ಠಿತ ಬೂಕರ್ ಗೌರವ!
ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಕನ್ನಡತಿಯೊಬ್ಬರಿಗೆ ಈ ಪ್ರಶಸ್ತಿ ದೊರೆತಿರುವುದು ಇದೇ ಮೊದಲು ಎಂಬ ಹೆಮ್ಮೆಯು ಈಗ ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದೆ.;
ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ಗರಿಮೆ. ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರಿಗೆ 2025ರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಕನ್ನಡತಿಯೊಬ್ಬರಿಗೆ ಈ ಪ್ರಶಸ್ತಿ ದೊರೆತಿರುವುದು ಇದೇ ಮೊದಲು ಎಂಬ ಹೆಮ್ಮೆಯು ಈಗ ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದೆ. ಬಾನು ಮುಷ್ತಾಕ್ ಅವರ ಕನ್ನಡ ಕಥೆಗಳ ಅನುವಾದಿತ ಕೃತಿ 'ಹಾರ್ಟ್ ಲ್ಯಾಂಪ್' ಈ ಮಹೋನ್ನತ ಗೌರವಕ್ಕೆ ಪಾತ್ರವಾಗಿದೆ.
ಮೇ 21ರಂದು ಲಂಡನ್ನಲ್ಲಿ ನಡೆದ ಸಮಾರಂಭದಲ್ಲಿ ಈ ಕುರಿತ ಅಧಿಕೃತ ಘೋಷಣೆ ಹೊರಬಿದ್ದಿದೆ. ಈ ಪ್ರತಿಷ್ಠಿತ ಪ್ರಶಸ್ತಿಯು 50,000 ಪೌಂಡ್ (ಸುಮಾರು 57.34 ಲಕ್ಷ ರೂಪಾಯಿ) ನಗದು ಒಳಗೊಂಡಿದೆ. ವಿಜೇತರಿಗೆ ದೊರೆಯುವ ಈ ಬಹುಮಾನವನ್ನು ಲೇಖಕರು ಮತ್ತು ಅನುವಾದಕರ ನಡುವೆ ಹಂಚಿಕೊಳ್ಳಲಾಗುತ್ತದೆ. ಶಾರ್ಟ್ಲಿಸ್ಟ್ನಲ್ಲಿ ಆಯ್ಕೆಯಾದ ಎಲ್ಲ ಲೇಖಕರನ್ನು ಲಂಡನ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಬಾನು ಮುಷ್ತಾಕ್ ಅವರು ತಮ್ಮ ಅನುವಾದಕಿ ''ದೀಪಾ ಭಸ್ತಿ' ಅವರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.
ಕನ್ನಡ ಸಾಹಿತ್ಯಕ್ಕೆ ಸಂದ ಮಹೋನ್ನತ ಗೌರವ
ಮೇ 2024 ಮತ್ತು ಏಪ್ರಿಲ್ 2025 ರ ನಡುವೆ ಯುಕೆ ಮತ್ತು ಐರ್ಲೆಂಡ್ನಲ್ಲಿ ಪ್ರಕಟವಾದ ಇಂಗ್ಲಿಷ್ಗೆ ಅನುವಾದಿಸಲಾದ ಅತ್ಯುತ್ತಮ ಕಾದಂಬರಿ ಅಥವಾ ಸಣ್ಣ ಕಥೆಗಳ ಸಂಗ್ರಹಕ್ಕೆ ಈ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಬಾನು ಮುಷ್ತಾಕ್ ಅವರ ಈ ಸಾಧನೆಗೆ ಕನ್ನಡದ ಬರಹಗಾರರು ಅಪಾರ ಹರ್ಷ ವ್ಯಕ್ತಪಡಿಸಿದ್ದು, ಇದು ಕನ್ನಡ ಸಾಹಿತ್ಯಕ್ಕೆ ಸಂದ ಮಹೋನ್ನತ ಗೌರವ ಎಂದು ಬಣ್ಣಿಸಿದ್ದಾರೆ. ಈ ಪ್ರಶಸ್ತಿಯು ಕನ್ನಡ ಸಾಹಿತ್ಯವನ್ನು ಜಗತ್ತಿಗೆ ಮತ್ತಷ್ಟು ಪರಿಚಯಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಾನು ಮುಷ್ತಾಕ್ ಅವರ ಜೀವನದ ಹಾದಿ
ಕರ್ನಾಟಕದ ಹಾಸನ ಪಟ್ಟಣದಲ್ಲಿ 1948ರಲ್ಲಿ ಜನಿಸಿದ ಬಾನು ಮುಷ್ತಾಕ್, ಅವಿಭಕ್ತ ಮುಸ್ಲಿಂ ಕುಟುಂಬದಲ್ಲಿ ಬೆಳೆದವರು. ಆರಂಭದಲ್ಲಿ ಉರ್ದು ಮಾಧ್ಯಮ ಶಾಲೆಯಲ್ಲಿ ಕಲಿತ ಇವರು, ಎಂಟನೇ ವಯಸ್ಸಿನಲ್ಲಿ ಕನ್ನಡ ಶಾಲೆಗೆ ಸೇರಿಕೊಂಡರು. ಹಿಂದಿನ ಮೈಸೂರು ರಾಜ್ಯದಲ್ಲಿ ಸರ್ಕಾರಿ ಆರೋಗ್ಯ ನಿರೀಕ್ಷಕರಾಗಿದ್ದ ಅವರ ತಂದೆ, ತಮ್ಮ ಸೂಕ್ಷ್ಮ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ, ಬಾನು ಅವರ ಬರವಣಿಗೆಯನ್ನು ಪ್ರೋತ್ಸಾಹಿಸಿದರು ಮತ್ತು ಅವರಿಗಾಗಿ ಕನ್ನಡ ಪುಸ್ತಕಗಳನ್ನು ಖರೀದಿಸಿದರು. ಶಾಲೆಯಲ್ಲಿದ್ದಾಗಲೇ ಅವರ ಬರವಣಿಗೆ ಪ್ರಾರಂಭವಾಯಿತು. 26 ನೇ ವಯಸ್ಸಿನಲ್ಲಿ ಮದುವೆಯಾದ ನಂತರ, ಅವರ ಮೊದಲ ಸಣ್ಣ ಕಥೆ ಜನಪ್ರಿಯ ಕನ್ನಡ ನಿಯತಕಾಲಿಕೆ ಪ್ರಜಾಮತ'ದಲ್ಲಿ ಪ್ರಕಟವಾಯಿತು. ಸಂದರ್ಶನಗಳಲ್ಲಿ ಬಾನು ಅವರು ತಮ್ಮ ತಂದೆಯ ಅಳಿಸಲಾಗದ ಪ್ರಭಾವ, ಶಾಲೆಯ ಸರ್ವಾಧಿಕಾರಿ ವಾತಾವರಣದ ವಿರುದ್ಧದ ಹೋರಾಟದಲ್ಲಿ ಅವರ ನಿರಂತರ ಬೆಂಬಲದ ಬಗ್ಗೆ ಮಾತನಾಡಿದ್ದಾರೆ.
ಹಿಂದಿನ ವಿಜೇತರು ಮತ್ತು ಈ ಬಾರಿಯ ಶಾರ್ಟ್ಲಿಸ್ಟ್
2022 ರಲ್ಲಿ, ಗೀತಾಂಜಲಿ ಶ್ರೀ ಮತ್ತು ಅನುವಾದಕಿ ಡೈಸಿ ರಾಕ್ವೆಲ್ ಅವರು ಮೊದಲ ಹಿಂದಿ ಕಾದಂಬರಿ ಟಾಂಬ್ ಆಫ್ ಸ್ಯಾಂಡ್’ ಪ್ರಶಸ್ತಿಯನ್ನು ಗೆದ್ದಿದ್ದರು. 2023 ರಲ್ಲಿ ಪೆರುಮಾಳ್ ಮುರುಗನ್ ಅವರ ತಮಿಳು ಕಾದಂಬರಿ ''‘ಪೈರ್’ ಅನ್ನು ಅನುವಾದಕ ಅನಿರುದ್ಧನ್ ವಾಸುದೇವನ್ ಅವರು ಇಂಗ್ಲಿಷ್ಗೆ ಅನುವಾದಿಸಿದ್ದರು. ಈ ಕೃತಿಯು ದೀರ್ಘ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
ಬೂಕರ್ ಶಾರ್ಟ್ಲಿಸ್ಟ್ನಲ್ಲಿದ್ದ ಇತರ ಕೃತಿಗಳು
ಸೋಲ್ವೆಜ್ ಬಲ್ಲೆ ಅವರ ಆನ್ ದಿ ಕ್ಯಾಲ್ಕುಲೇಷನ್ ಆಫ್ ವಾಲ್ಯೂಮ್ I’ (ಡ್ಯಾನಿಶ್ನಿಂದ ಬಾರ್ಬರಾ ಜೆ. ಹ್ಯಾವೆಲ್ಯಾಂಡ್ ಅನುವಾದಿಸಿದ್ದಾರೆ);
ವಿನ್ಸೆಂಟ್ ಡೆಲೆಕ್ರೊಯಿಕ್ಸ್ ಅವರ ‘ಸ್ಮಾಲ್ ಬೋಟ್’ (ಫ್ರೆಂಚ್ನಿಂದ ಹೆಲೆನ್ ಸ್ಟೀವನ್ಸನ್ ಅನುವಾದಿಸಿದ್ದಾರೆ);
ಹಿರೊಮಿ ಕವಾಕಾಮಿ ಅವರ ‘ಅಂಡರ್ ದಿ ಐ ಆಫ್ ದಿ ಬಿಗ್ ಬರ್ಡ್’ (ಜಪಾನೀಸ್ನಿಂದ ಆಸಾ ಯೊನೆಡಾ ಅನುವಾದಿಸಿದ್ದಾರೆ);
ವಿನ್ಸೆಂಜೊ ಲ್ಯಾಟ್ರೊನಿಕೊ ಅವರ ‘ಪರ್ಫೆಕ್ಷನ್’ (ಇಟಾಲಿಯನ್ನಿಂದ ಸೋಫಿ ಹ್ಯೂಸ್ ಅನುವಾದಿಸಿದ್ದಾರೆ);
ಮತ್ತು ಅನ್ನೆ ಸೆರ್ರೆ ಅವರ ‘ಎ ಲೆಪರ್ಡ್-ಸ್ಕಿನ್ ಹ್ಯಾಟ್’ (ಫ್ರೆಂಚ್ನಿಂದ ಮಾರ್ಕ್ ಹಚಿನ್ಸನ್ ಅನುವಾದಿಸಿದ್ದಾರೆ).