ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಏಕಕಾಲದಲ್ಲಿ ಬಾಂಬ್ ಬೆದರಿಕೆ
ಇ-ಮೇಲ್ನಿಂದ ಸಂದೇಶ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ಮಾಡಿದ್ದಾರೆ.;
ಬೆಂಗಳೂರಿನ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ.
ಬೆಂಗಳೂರಿನ ಆರ್.ಆರ್ ನಗರ, ಕೆಂಗೇರಿ ಸೇರಿದಂತೆ 40 ಖಾಸಗಿ ಶಾಲೆಗಳಿಗೆ ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಪೋಷಕರು ಹಾಗೂ ಶಾಲಾ ನಿರ್ವಹಣಾ ಮಂಡಳಿಯಲ್ಲಿ ಭೀತಿ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
roadkill333@atomicmail.io ಎಂಬ ಇ-ಮೇಲ್ನಿಂದ ಸಂದೇಶ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ಮಾಡಿದ್ದಾರೆ.
ಬಾಂಬ್ ಬೆದರಿಕೆ ಇ-ಮೇಲ್ನಲ್ಲಿ ಏನಿದೆ?
ನಮಸ್ಕಾರ, ಶಾಲಾ ತರಗತಿಗಳಲ್ಲಿ ನಾನು ಹಲವು ಸ್ಫೋಟಕ ವಸ್ತುಗಳು ಇರಿಸಿದ್ದೇನೆ. ಸ್ಫೋಟಕಗಳನ್ನು ಕಪ್ಪು ಪ್ಲಾಸ್ಟಿಕ್ ಚೀಲಗಳಿಂದ ಮುಚ್ಚಿಡಲಾಗಿದೆ. ನಿಮ್ಮೆಲ್ಲರನ್ನೂ ಈ ಲೋಕದಿಂದ ನಾಶ ಮಾಡುತ್ತೇನೆ. ಯಾರೊಬ್ಬರು ಬದುಕುಳಿಯುವುದಿಲ್ಲ. ಆ ಸುದ್ದಿಯನ್ನು ನಾನು ಓದುವಾಗ ಸಂತೋಷದಿಂದ ನಗುತ್ತೇನೆ ಎಂದು ಕಿಡಿಗೇಡಿ ಇ-ಮೇಲ್ನಲ್ಲಿ ಉಲ್ಲೇಖಿಸಿದ್ದಾನೆ.
ನೀವೆಲ್ಲರೂ ಕಷ್ಟ ಅನುಭವಿಸಲೇಬೇಕು. ಈ ಸುದ್ದಿ ಹೊರ ಬಂದ ನಂತರ ನಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನಗೆ ಯಾರೊಬ್ಬರು ನಿಜವಾಗಿಯೂ ಸಹಾಯ ಮಾಡಿಲ್ಲ. ಮನೋವೈದ್ಯರು, ಮನೋವಿಜ್ಞಾನಿಗಳು, ಯಾರೂ ಕಾಳಜಿ ವಹಿಸಿಲ್ಲ ಮತ್ತು ಯಾರೂ ಎಂದಿಗೂ ಕಾಳಜಿ ವಹಿಸುವುದಿಲ್ಲ ಎಂದಿದ್ದಾನೆ.
ನೀವು ಅಸಹಾಯಕ ಮತ್ತು ಅಜ್ಞಾನಿ ಮನುಷ್ಯರಿಗೆ ಔಷಧ ನೀಡುವುದರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ. ಆ ಔಷಧಗಳು ನಿಮ್ಮ ಅಂಗಗಳನ್ನು ಹಾಳುಮಾಡುತ್ತವೆ ಅಥವಾ ಅದು ತೂಕ ಹೆಚ್ಚಿಸಲು ಕಾರಣವಾಗುತ್ತವೆ ಎಂದು ಮನೋವೈದ್ಯರು ಎಂದಿಗೂ ನಿಮಗೆ ಹೇಳುವುದಿಲ್ಲ.
ಮನೋವೈದ್ಯಕೀಯ ಔಷಧಗಳು ಜನರಿಗೆ ಸಹಾಯ ಮಾಡುತ್ತವೆ ಎಂದು ಯೋಚಿಸುವಂತೆ ಜನರ ಬ್ರೈನ್ ವಾಶ್ ಮಾಡುತ್ತಾರೆ. ಆದರೆ ಅದು ಹಾಗೆ ಆಗುವುದಿಲ್ಲ ಎಂಬುದಕ್ಕೆ ನಾನು ಜೀವಂತ ಸಾಕ್ಷಿ ನೀಡುತ್ತೇನೆ. ನೀವೆಲ್ಲರೂ ಇದಕ್ಕೆ ಅರ್ಹರು. ನನ್ನಂತೆಯೇ ನೀವು ಸಹ ಕಷ್ಟ ಅನುಭವಿಸಲು ಅರ್ಹರು ಎಂದು ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿ, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಯಾವುದೇ ಹೇಳಿಕೆ ನೀಡುವುದಿಲ್ಲ. ಇದು ಕಾನೂನು ಮತ್ತು ತನಿಖಾ ಸಂಸ್ಥೆಗಳ ಕಾರ್ಯಕ್ಷೇತ್ರ. ಅವರು ತಕ್ಕ ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.