Booker Prize | ಬೂಕರ್ ಅಂದ್ರೆ ಏನು ಅಂತ ನನಗೆ ಗೊತ್ತಿರಲಿಲ್ಲ... ಬಾನು ಮುಷ್ತಾಕ್‌ ಮನದಾಳ

ದೀಪಾ ಭಾಸ್ತಿಗೆ ನನ್ನ ʼಹಸೀನಾ ಹಾಗೂ ಕಥೆಗಳುʼ ಕೊಟ್ಟು ಅನುವಾದ ಮಾಡ್ತೀರ ಅಂತ ಕೇಳಿದ್ದೆ. ಅವರು ಬಹಳ ಚಂದ ಅನುವಾದ ಮಾಡಿ ಒಂದು ಸ್ಪರ್ಧೆಗೆ ಕಳುಹಿಸಿದ್ದರು. ಆದು ನಂತರ ಎಲ್ಲೆಲ್ಲೋ‌ ಹೋಗಿ ಈಗ ಬೂಕರ್ ಬಂದಿದೆ ಎಂದು ಬಾನು ಮುಷ್ತಾಕ್‌ ಹೇಳಿದ್ದಾರೆ.;

Update: 2025-05-28 20:18 GMT

ಬೂಕರ್ ಪ್ರಶಸ್ತಿ ಪಡೆದುಕೊಂಡ ಬಳಿಕ ಇಡೀ ಕರ್ನಾಟಕ ಸಂಭ್ರಮ ಪಟ್ಟಿದೆ. ಇದರ ಜತೆಗೆ ಇಂಗ್ಲೆಂಡ್‌ ಕೂಡಾ ಕನ್ನಡದ ಸಂಭ್ರಮವನ್ನು ಅನುಭವಿಸಿದೆ. ಕನ್ನಡ ಇದೇ ರೀತಿ ವಿರಾಜಮಾನವಾಗಬೇಕು ಎಂದು ಕನ್ನಡದ ಸಾಹಿತಿ, ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಬಾನು ಮುಷ್ತಾಕ್‌ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್‌ನಿಂದ ಮರಳಿದ ಬಳಿಕ ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದನೆ ಸ್ವೀಕರಿಸಿದ ಬಾನು ಮುಷ್ತಾಕ್‌ ಅವರು, ಇದೊಂದು ಅಭಿಮಾನಪೂರ್ವ ಘಳಿಗೆ. ಕನ್ನಡದ ಪ್ರತಿನಿಧಿಯಾಗಿ ಜಾಗತಿಕ ಮನ್ನಣೆ ಪಡೆಯುವುದು ಸಾರ್ಥಕ. ಕನ್ನಡ ಸಾಹಿತ್ಯವೊಂದು ಮರ ಹಾಗೂ ನಾನು ಅದರ ಕೊಂಬೆಯಷ್ಟೇ ಎಂದು ಭಾವಪೂರ್ಣವಾಗಿ ಬಣ್ಣಿಸಿದರು.

"ಬೂಕರ್ ಅಂದ್ರೆ ಏನು ಅಂತ ನನಗೆ ಗೊತ್ತಿರಲಿಲ್ಲ. ನನ್ನ ಕೃತಿಗಳು ಇಂಗ್ಲಿಷ್‌ಗೆ ಅನುವಾದ ಆಗಬೇಕು ಎನ್ನುವ ಆಸೆ ಇತ್ತು. ದೀಪಾ ಭಾಸ್ತಿಗೆ ನನ್ನ ʼಹಸೀನಾ ಹಾಗೂ ಕಥೆಗಳುʼ ಕೊಟ್ಟು ಅನುವಾದ ಮಾಡ್ತೀರ ಅಂತ ಕೇಳಿದ್ದೆ. ಅವರು ಬಹಳ ಚಂದ ಅನುವಾದ ಮಾಡಿ ಒಂದು ಸ್ಪರ್ಧೆಗೆ ಕಳುಹಿಸಿದ್ದರು. ಆದು ನಂತರ ಎಲ್ಲೆಲ್ಲೋ‌ ಹೋಗಿ ಈಗ ಬೂಕರ್ ಬಂದಿದೆ," ಎಂದು ಬೂಕರ್‌ ಪ್ರಶಸ್ತಿ ಪಡೆದ ದಾರಿಯನ್ನು ನೆನಪಿಸಿಕೊಂಡರು.

"ನನ್ನ ಇಂಗ್ಲೀಷ್ ಅನುವಾದದ Heart Lamp ಪುಸ್ತಕ ಪಬ್ಲಿಷ್ ಮಾಡಿದ ಪಬ್ಲಿಷರ್ ಗೆ 6 ಕೋಟಿ ಲಾಭ ಬಂದಿದೆ. ಬೂಕರ್ ಪ್ರಶಸ್ತಿಗೆ ಕೃತಿ ಶಾರ್ಟ್ ಲಿಸ್ಟ್ ಆಗಿದೆ ಅಂದಾಗ ನಾನು ಥ್ಯಾಂಕ್ಸ್ ಅಂದೆ. ಅದುವರೆಗೂ ಬೂಕರ್ ಅಂದ್ರೇನು? ಅದರಲ್ಲಿ ಶಾರ್ಟ್ ಲಿಸ್ಟ್ ಆದ್ರೆ ಏನಾಗುತ್ತೆ ಅಂತ ಗೊತ್ತಿರಲಿಲ್ಲ," ಎಂದು ಬಾನು ಮುಷ್ತಾಕ್ ತಮ್ಮ ಮನದಾಳದಿಂದ ಹೇಳಿದರು.


"ನನ್ನ ಬಗ್ಗೆ ಪತ್ರಿಕರ್ತರ ತೋರಿದ ಬಹಳ ಸಂತೋಷವಾಗಿದೆ. ನನಗಿಂತ ಹೆಚ್ಚು ಅವರೇ ಈ ಬೂಕರ್ ಅನ್ನು ಸಂಭ್ರಮಿಸಿದ್ದಾರೆ. ಪತ್ರಕರ್ತರ ಕುತೂಹಲ ನೋಡಿ ನನಗೆ ಅಚ್ಚರಿ ಆಯ್ತು. ಇಂಗ್ಲೆಂಡ್ ನಲ್ಲಿ CNN ಚ್ಯಾನೆಲ್ ನಲ್ಲಿ ಇಂಟರ್ ವ್ಯೂ ಮಾಡಿದ್ರು. ಅಲ್ಲಿ‌ನ ಆ್ಯಂಕರ್ ಗೆ ಕನ್ನಡ ಅಂದ್ರೆ ಏನು ಅಂತ ಗೊತ್ತಿರಲಿಲ್ಲ. CNN ಆ್ಯಂಕರ್ ಗೆ ಕೊನೆಗೆ ನಾನು ಕನ್ನಡ ಅಂತ ಪರಿಚಯ ಮಾಡಿ ಬಂದೆ," ಎಂದು ಅಭಿಮಾನಪೂರ್ವಕವಾಗಿ ಬಾನು ಮುಷ್ತಾಕ್‌ ಅಭಿಪ್ರಾಯಪಟ್ಟರು.

ಭಾನು ಮುಷ್ತಾಕ್‌ ಅವರನ್ನು ಸನ್ಮಾನಿಸಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ಬಾನು ಮುಷ್ತಾಕ್ ನಾಲ್ಕು ಗೋಡೆಗಳ ನಡುವೆ ಮೈಗೆ ಎಣ್ಣೆ ಹಚ್ವಿಕೊಂಡು ಸುರಕ್ಷಿತವಾಗಿ ಕುಳಿತು ಬರೆದ ಲೇಖಕಿಯಲ್ಲ,ಚಳವಳಿಗಳಲ್ಲಿ ಬೆರೆತ ಬಂಡಾಯಗಾರ್ತಿ ಎಂದು ವಿಶ್ಲೇಷಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ‌ ಅಧ್ಯಕ್ಷೆ ಆಯೆಷಾ ಖಾನುಂ, ಬಹುರೂಪಿ ಜಿ.ಎನ್.ಮೋಹನ್, ಪತ್ರಕರ್ತ ಚನ್ನೇಗೌಡ, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಗಾಂಧಿ ಭವನದ ಹೆಚ್.ಸಿ. ದಿನೇಶ್ ಅವರು ಉಪಸ್ಥಿತರಿದ್ದರು.

Tags:    

Similar News