"ಮೊದಲು ನಿಮ್ಮ ಶಾಸಕರ ಪ್ರಶ್ನೆಗೆ ಉತ್ತರಿಸಿ": ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು
"ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಎಲ್ಲಿಗೆ ಹೋದರೂ ಜನ ಸಿದ್ದರಾಮಯ್ಯನವರ ಸರ್ಕಾರದ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ," ಎಂದು ವಿಜಯೇಂದ್ರ ಹೇಳಿದರು.;
"ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧ ಪಕ್ಷದವರಿಗೆ ಸವಾಲು ಹಾಕುವ ಮೊದಲು, ತಮ್ಮದೇ ಆಡಳಿತ ಪಕ್ಷದ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲಿ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತೀಕ್ಷ್ಣವಾಗಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಂತರಿಕ ಬೇಗುದಿ ಮತ್ತು ಆಡಳಿತ ವೈಫಲ್ಯಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು. "ಮೈಸೂರಿನ ಸಮಾವೇಶದಲ್ಲಿ ಏನು ನಡೆದಿದೆ ಎಂಬುದನ್ನು ಇಡೀ ರಾಜ್ಯದ ಜನ ನೋಡಿದ್ದಾರೆ. ಸಿದ್ದರಾಮಯ್ಯನವರು ಮೊದಲು ತಮ್ಮ ಶಾಸಕರನ್ನು ಸಮಾಧಾನಪಡಿಸಲಿ, ನಂತರ ನಮ್ಮ ಬಗ್ಗೆ ಮಾತನಾಡಲಿ," ಎಂದು ವ್ಯಂಗ್ಯವಾಡಿದರು.
ಅನುದಾನ ತಾರತಮ್ಯ ಮತ್ತು ಆಡಳಿತ ವೈಫಲ್ಯದ ಆರೋಪ
ರಾಜ್ಯದಲ್ಲಿ ಅನುದಾನದ ಕೊರತೆಯಿಂದಾಗಿ ಶಾಸಕರು ಪರದಾಡುತ್ತಿದ್ದಾರೆ ಎಂದು ಆರೋಪಿಸಿದ ವಿಜಯೇಂದ್ರ, "ಸಿದ್ದರಾಮಯ್ಯ ಅವರು ಇಡೀ ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಮುಖ್ಯಮಂತ್ರಿಗಳೋ ಎಂಬ ಚರ್ಚೆ ಜನರಲ್ಲಿ ನಡೆಯುತ್ತಿದೆ. ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಅವರು ಕೇವಲ ಕಾಂಗ್ರೆಸ್ ಶಾಸಕರಿಗೆ ಪತ್ರ ಬರೆದಿದ್ದಾರೆ. ವಿರೋಧ ಪಕ್ಷದ ಶಾಸಕರಿಗೆ ಅನುದಾನ ನೀಡುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ," ಎಂದು ಟೀಕಿಸಿದರು.
"ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಎಲ್ಲಿಗೆ ಹೋದರೂ ಜನ ಸಿದ್ದರಾಮಯ್ಯನವರ ಸರ್ಕಾರದ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ," ಎಂದು ಅವರು ಹೇಳಿದರು.
"ಆಡಳಿತ ಪಕ್ಷದಲ್ಲಿ ಕುದುರೆ ವ್ಯಾಪಾರ ಜೋರಾಗಿದೆ"
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದೆ ಎಂದು ಹೇಳಿದ ಅವರು, "ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒಳಗೊಳಗೆ ಸಮಾಲೋಚನೆಗಳು ನಡೆಯುತ್ತಿವೆ. ಆಡಳಿತ ಪಕ್ಷದಲ್ಲಿ ಕುದುರೆ ವ್ಯಾಪಾರ ಭರ್ಜರಿಯಾಗಿ ಆರಂಭವಾಗುವ ಮುನ್ಸೂಚನೆಗಳು ಕಾಣಿಸುತ್ತಿವೆ. ತಮ್ಮ ಶಾಸಕರೇ ತಿರುಗಿಬೀಳುವ ಹಂತಕ್ಕೆ ಬಂದಿದ್ದರಿಂದಲೇ ಮುಖ್ಯಮಂತ್ರಿಗಳು 50 ಕೋಟಿ ಅನುದಾನದ ಭರವಸೆ ನೀಡಿದ್ದಾರೆ. ಆದರೂ, ಶಾಸಕರಿಗೆ ತಮ್ಮ ಮುಖ್ಯಮಂತ್ರಿಗಳ ಮೇಲೆಯೇ ವಿಶ್ವಾಸವಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಪದೇ ಪದೇ ಕರ್ನಾಟಕಕ್ಕೆ ಬಂದು ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ," ಎಂದು ವಿಶ್ಲೇಷಿಸಿದರು.
ನವೆಂಬರ್ ಒಳಗೆ ಕ್ರಾಂತಿಯ ಸುಳಿವು
"ಮೈಸೂರಿನ ಸಮಾವೇಶದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಮುಸುಕಿನ ಗುದ್ದಾಟವು, ನವೆಂಬರ್ ಅಥವಾ ಅದಕ್ಕೂ ಮುಂಚಿತವಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಕ್ರಾಂತಿಯಾಗುವ ಸುಳಿವನ್ನು ನೀಡಿದೆ," ಎಂದು ವಿಜಯೇಂದ್ರ ಭವಿಷ್ಯ ನುಡಿದರು.
ಶ್ರೀರಾಮುಲು-ರೆಡ್ಡಿ ಒಂದಾಗಿದ್ದಾರೆ
ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಅವರಿಬ್ಬರೂ ನಮ್ಮ ಪಕ್ಷದ ದೊಡ್ಡ ಶಕ್ತಿ. ಅವರು ಒಟ್ಟಾಗಿ ಚುನಾವಣೆಗೆ ಹೋದಾಗಲೆಲ್ಲಾ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಅವರಿಬ್ಬರೂ ಪಕ್ಷಕ್ಕೆ ನಿಷ್ಠರಾಗಿದ್ದು, ಸಂಘಟನೆಯನ್ನು ಬಲಪಡಿಸಲು ಸಹಕಾರ ನೀಡುತ್ತಿದ್ದಾರೆ," ಎಂದು ಸ್ಪಷ್ಟಪಡಿಸಿದರು.
ಕೊಪ್ಪಳದ ಕೆಆರ್ಐಡಿಎಲ್ನಲ್ಲಿ ನಡೆದಿದೆ ಎನ್ನಲಾದ 72 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಮಾತನಾಡಿದ ಅವರು, ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಇಂತಹ ಹಗರಣಗಳು ನಡೆಯುತ್ತಿದ್ದು, ಬಿಜೆಪಿ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ತಿಳಿಸಿದರು