ವಿಜಯಪುರ ಕೆನರಾ ಬ್ಯಾಂಕ್‌ನಲ್ಲಿ 56.26 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ದರೋಡೆ

ನಕಲಿ ಕೀ ಬಳಸಿ ಲಾಕರ್‌ ತೆಗೆದು ಚಿನ್ನ ಹಾಗೂ ನಗದು ಲೂಟಿ ಮಾಡಿ, ತಮ್ಮ ಗುರುತು ಸಿಗಬಾರದೆಂದು ಬ್ಯಾಂಕ್‌ನ ಸಿಸಿ ಕ್ಯಾಮೆರಾ ಆಫ್‌ ಮಾಡಿ ಎನ್‌ವಿಆರ್‌ ಸಮೇತ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.;

Update: 2025-06-03 07:46 GMT

ಮನುಗೋಳಿಯ ಕೆನರಾ ಬ್ಯಾಂಕ್‌.

ವಿಜಯಪುರ ಜಿಲ್ಲೆಯ ಮನುಗೂಳಿ ಕೆನರಾ ಬ್ಯಾಂಕ್‌ನಲ್ಲಿ ಅಂದಾಜು 56.26 ಕೋಟಿ ರೂ. ಮೌಲ್ಯದ 54 ಕೆ.ಜಿ. 976 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ರೂ. ನಗದು ಕಳ್ಳತನವಾಗಿರುವ ಬೃಹತ್ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಣದ ಮೌಲ್ಯದ ಲೆಕ್ಕಾಚಾರದಲ್ಲಿ ಇದು ರಾಜ್ಯದ ಇತಿಹಾಸದಲ್ಲಿಯೇ ಅತಿ ದೊಡ್ಡ ಚಿನ್ನದ ದರೋಡೆ ಪ್ರಕರಣ ಎಂದು ಹೇಳಲಾಗಿದೆ.

ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಕಲ್ಮೇಶ್ ಪೂಜಾರಿ ಅವರು ಮನುಗೋಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೇ 23 ರಿಂದ ಮೇ 25 ರ ನಡುವೆ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ದರೋಡೆಕೋರರನ್ನು ಪತ್ತೆ ಹಚ್ಚಲು ಎಂಟು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ತಿಳಿಸಿದ್ದಾರೆ. ಮೇ 23ರಂದು ಎಂಟು ಜನರ ತಂಡದಿಂದ ಈ ದರೋಡೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಕಳ್ಳರು ಬ್ಯಾಂಕಿನ ಪ್ರವೇಶದ್ವಾರದ ಬೀಗ ಒಡೆದು ಒಳನುಗ್ಗಿದ ಬಳಿಕ, ಮೊದಲು ಸೈರನ್ ಆಫ್ ಮಾಡಿದ್ದಾರೆ. ನಂತರ, ನಕಲಿ ಕೀ ಬಳಸಿ ಲಾಕರ್ ತೆರೆದು ಚಿನ್ನಾಭರಣ ಹಾಗೂ ನಗದು ಲೂಟಿ ಮಾಡಿದ್ದಾರೆ. ತಮ್ಮ ಗುರುತು ಸಿಗಬಾರದೆಂದು ಬ್ಯಾಂಕಿನ ಸಿಸಿ ಕ್ಯಾಮೆರಾ ಆಫ್ ಮಾಡಿ ಎನ್‌ವಿಆರ್‌ (ನೆಟ್‌ವರ್ಕ್ ವಿಡಿಯೋ ರೆಕಾರ್ಡರ್) ಸಮೇತ ಪರಾರಿಯಾಗಿದ್ದಾರೆ.

ದಿಕ್ಕು ತಪ್ಪಿಸಲು ವಾಮಾಚಾರದ ತಂತ್ರ

ಕಳ್ಳತನ ಮಾಡಿದ ಬಳಿಕ, ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರ ದಿಕ್ಕು ತಪ್ಪಿಸಲು ದರೋಡೆಕೋರರು ಒಂದು ವಿಚಿತ್ರ ತಂತ್ರ ಬಳಸಿದ್ದಾರೆ. ಸ್ಥಳದಲ್ಲಿ ಕಪ್ಪು ಬಣ್ಣದ ಗೊಂಬೆಯೊಂದನ್ನು ಇಟ್ಟು, ವಾಮಾಚಾರ ಮಾಡಿದ್ದಾರೆ ಎಂದು ಬಿಂಬಿಸಿದ್ದಾರೆ. ಈ ಮೂಲಕ ತನಿಖೆಯ ದಾರಿಯನ್ನು ತಪ್ಪಿಸಲು ಕಳ್ಳರು ಯೋಜಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ರಾಜ್ಯಾದ್ಯಂತ ಬ್ಯಾಂಕ್ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಮಂಗಳೂರು, ನ್ಯಾಮತಿ ಹಾಗೂ ಹುಬ್ಬಳ್ಳಿಯಲ್ಲೂ ಇದೇ ರೀತಿಯ ಬ್ಯಾಂಕ್ ದರೋಡೆ ಪ್ರಕರಣಗಳು ವರದಿಯಾಗಿದ್ದವು. 

Tags:    

Similar News