ಆಯಿಲ್ ಗೋಡೌನ್ಗೆ ಬೆಂಕಿ; 30 ಕೋಟಿ ರೂ. ಮೌಲ್ಯದ ಆಯಿಲ್ ಬೆಂಕಿಗಾಹುತಿ
ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಕಂಪನಿ ಸಾಕಷ್ಟು ಪ್ರಮಾಣದಲ್ಲಿ ಆಯಿಲ್ ಶೇಖರಣೆ ಮಾಡಿತ್ತು. ರಾಜ್ಯದಲ್ಲಿ ಯಾವುದೇ ಆಯಿಲ್ ಸಮಸ್ಯೆ ಬಾರದಂತೆ ಸಂಗ್ರಹಣೆ ಮಾಡಲಾಗಿತ್ತು. ಆದರೆ, ಬೆಂಕಿ ಅವಘಡದಿಂದ ಆಯಿಲ್ ನಷ್ಟವಾಗಿದೆ.;
ಅಡಕಮಾರನಹಳ್ಳಿ ಬಳಿ ಆಯಿಲ್ ಗೋಡೌನ್ಗೆ ಬೆಂಕಿ ತಗುಲಿದೆ.
ಬೆಂಗಳೂರಿನ ನೆಲಮಂಗಲ ಬಳಿಯ ಅಡಕಮಾರನಹಳ್ಳಿಯಲ್ಲಿ ಇಂದು (ಮಂಗಳವಾರ) ಮುಂಜಾನೆ ಶಾರ್ಟ್ ಸರ್ಕ್ಯೂಟ್ನಿಂದ ಆಯಿಲ್ ಗೋಡೌನ್ಗೆ ಬೆಂಕಿ ತಗುಲಿದೆ. ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಸಂಭವಿಸಿದ ಈ ದುರ್ಘಟನೆಯಲ್ಲಿ, ಶೆಲ್ ಕಂಪನಿಗೆ ಸೇರಿದ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಆಯಿಲ್ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
ನೆಲಮಂಗಲ, ಪೀಣ್ಯಾ, ಯಶವಂತಪುರ ಭಾಗದ ಎಂಟಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಸುಮಾರು 40 ಸಾವಿರ ಅಡಿ ವಿಸ್ತೀರ್ಣದ ಈ ಗೋದಾಮು ಬೆಂಕಿಯಿಂದ ಸಂಪೂರ್ಣವಾಗಿ ನಾಶವಾಗಿದೆ. ಈ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಆಯಿಲ್ ಸಮಸ್ಯೆ ಉಂಟಾಗದಂತೆ ಈ ಕಂಪನಿಯು ಸಾಕಷ್ಟು ಪ್ರಮಾಣದಲ್ಲಿ ಆಯಿಲ್ ಸಂಗ್ರಹಿಸಿತ್ತು. ಆದರೆ, ದುರದೃಷ್ಟವಶಾತ್ ಬೆಂಕಿ ಅವಘಡದಿಂದಾಗಿ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದೆ.
ಈ ಗೋದಾಮು ಕಂದಾಯದ ಮಾಜಿ ಸಚಿವ ಹೆಚ್.ಸಿ.ಶ್ರೀಕಂಠಯ್ಯ ಅವರ ಅಳಿಯ ಕೃಷ್ಣಪ್ಪ ಅವರಿಗೆ ಸೇರಿದ್ದು, ಇದನ್ನು ಶೆಲ್ ಕಂಪನಿಗೆ ಬಾಡಿಗೆಗೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.