ಬಂಡೀಪುರದಲ್ಲಿ ಹುಲಿ ದಾಳಿಗೆ ಮಹಿಳೆ ಬಲಿ: 9 ದಿನಗಳಲ್ಲಿ ಎರಡನೇ ಘಟನೆ, ಕಾಡಂಚಿನ ಗ್ರಾಮಗಳಲ್ಲಿ ಭೀತಿ

ದೇಶಿಪುರ ಕಾಲೋನಿಯ ಪುಟ್ಟಮ್ಮ (32) ಎಂಬ ಮಹಿಳೆ ಹುಲಿ ದಾಳಿಗೆ ಬಲಿಯಾದವರು. ಪುಟ್ಟಮ್ಮ ಗುರುವಾರ ದನಗಳನ್ನು ಮೇಯಿಸುತ್ತಿದ್ದಾಗ ಹುಲಿ ಆಕೆಯ ಮೇಲೆ ಎರಗಿದೆ. ಮಹಿಳೆಯನ್ನು ಸ್ಥಳದಿಂದ 100 ಮೀಟರ್ ದೂರ ಎಳೆದುಕೊಂಡು ಹೋಗಿತ್ತು.;

Update: 2025-06-20 10:49 GMT

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಅಭಯಾರಣ್ಯ ವ್ಯಾಪ್ತಿಯ ಓಂಕಾರ್ ಶ್ರೇಣಿ ಬಳಿ ಪುಟ್ಟಮ್ಮ (32) ಎಂಬ ಮಹಿಳೆಯೊಬ್ಬರು ಹುಲಿ ದಾಳಿಗೆ ಬಲಿಯಾಗಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಇದು ಎರಡನೇ ಇಂತಹ ಘಟನೆಯಾಗಿದೆ. ಗುರುವಾರ ಮಧ್ಯಾಹ್ನ ನಡೆದ ಈ ದುರ್ಘಟನೆ ಕಾಡಂಚಿನ ಗ್ರಾಮಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ದೇಶಿಪುರ ಕಾಲೊನಿಯ ನಿವಾಸಿಯಾದ ಪುಟ್ಟಮ್ಮ ಅವರು ಗುರುವಾರ ದನಗಳನ್ನು ಮೇಯಿಸಲು ಹೋಗಿದ್ದಾಗ ಹುಲಿಯು ಅವರ ಮೇಲೆ ಎರಗಿದೆ. ಹುಲಿಯು ಮಹಿಳೆ ಮೇಲೆ ದಾಳಿ ಮಾಡಿ ಸ್ಥಳದಿಂದ ಸುಮಾರು 100 ಮೀಟರ್ ದೂರ ಎಳೆದುಕೊಂಡು ಹೋಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದ್ದು, ಶೋಧ ಕಾರ್ಯ ನಡೆಸಿದಾಗ ದೂರದಲ್ಲಿ ಪುಟ್ಟಮ್ಮ ಅವರ ಮೃತದೇಹ ಪತ್ತೆಯಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, "ಹುಲಿ ದಾಳಿಯಿಂದ ಮಹಿಳೆ ಮೃತಪಟ್ಟಿರುವುದು ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಹುಲಿಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗುವುದು" ಎಂದು ತಿಳಿಸಿದ್ದಾರೆ.

ನಿರಂತರ ಹುಲಿ ದಾಳಿಗಳು: ಹೆಚ್ಚಿದ ಭೀತಿ

ಕಳೆದ ಒಂಬತ್ತು ದಿನಗಳಲ್ಲಿ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಇದು ಎರಡನೇ ಹುಲಿ ದಾಳಿಯಾಗಿದೆ. ಜೂನ್ 10 ರಂದು ಬೆಡಗುಳಿ ಗ್ರಾಮದ (ಬಿಆರ್‌ಟಿ) ವಲಯದ ರಂಗಮ್ಮ ಎಂಬ ಮಹಿಳೆ ಹುಲಿ ದಾಳಿಗೆ ಬಲಿಯಾಗಿದ್ದರು. ಆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದಲ್ಲದೆ, ಸೋಮವಾರ ರಾತ್ರಿ ಚಾಮರಾಜನಗರದ ಬೇಡುಗುಳಿ ಸಮೀಪದ ರಾಮಯ್ಯನ ಪೋಡಿನಲ್ಲಿ ಬಹಿರ್ದೆಸೆಗೆ ಹೋಗಿದ್ದ ರವಿ ಎಂಬವರ ಮೇಲೂ ಹುಲಿ ದಾಳಿ ನಡೆದಿತ್ತು. ಗಾಯಗೊಂಡ ರವಿ ಅವರಿಗೆ ಚಾಮರಾಜನಗರ ಸರ್ಕಾರಿ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿರಂತರವಾಗಿ ನಡೆಯುತ್ತಿರುವ ಈ ಹುಲಿ ದಾಳಿಗಳು ದೇಶಿಪುರ ಕಾಲೋನಿ, ಬೆಡಗುಳಿ, ರಾಮಯ್ಯನ ಪೋಡು ಮತ್ತು ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳ ಜನರಲ್ಲಿ ತೀವ್ರ ಭೀತಿ ಮೂಡಿಸಿವೆ. ಜಾನುವಾರುಗಳನ್ನು ಮೇಯಿಸಲು ಹೋಗಲೂ ಭಯವಾಗುತ್ತಿದೆ ಎಂದು ಹಾಡಿ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರಿಂದ ಹುಲಿ ಸೆರೆಗೆ ಒತ್ತಾಯ

ಮಹಿಳೆಯನ್ನು ಕೊಂದ ಹುಲಿಯನ್ನು ಕೂಡಲೇ ಸೆರೆ ಹಿಡಿಯಬೇಕು, ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡಬೇಕು ಎಂದು ಗ್ರಾಮಸ್ಥರು ಮತ್ತು ರೈತ ಸಂಘದ ಮುಖಂಡರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಸದ್ಯಕ್ಕೆ, ಅರಣ್ಯ ಇಲಾಖೆಯು ಹುಲಿಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದು, ಮುಂದಿನ ಬೆಳವಣಿಗೆಗಳು ನಿರೀಕ್ಷಿತವಾಗಿವೆ. 

Tags:    

Similar News