ಉಪೇಂದ್ರ ಮಗ ಆಯುಷ್ ಚಿತ್ರರಂಗಕ್ಕೆ; 21ನೇ ಹುಟ್ಟುಹಬ್ಬದಂದು ಸ್ಕ್ರಿಪ್ಟ್ ಪೂಜೆ
ಆಯುಷ್ ಉಪೇಂದ್ರ, ಸೋಮವಾರ ತಮ್ಮ 21ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಪೇಂದ್ರ ಅವರ ಕುಟುಂಬ ಮಂತ್ರಾಲಕ್ಕೆ ತೆರಳಿ ರಾಯರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಬಂದಿದೆ.;
ನಟ ಉಪೇಂದ್ರ
ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ, ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದು ಆಯ್ತು. ಇದೀಗ ಮಗನ ಸರದಿ. ಉಪೇಂದ್ರ ಅವರ ಮಗ ಆಯುಷ್, ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದು, ಮೊದಲ ಹಂತವಾಗಿ ಸೋಮವಾರ ಮಂತ್ರಾಲಯದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದೆ.
ಆಯುಷ್ ಉಪೇಂದ್ರ, ಸೋಮವಾರ ತಮ್ಮ 21ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಪೇಂದ್ರ ಅವರ ಕುಟುಂಬ ಮಂತ್ರಾಲಕ್ಕೆ ತೆರಳಿ ರಾಯರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಬಂದಿದೆ. ಈ ಸಂದರ್ಭದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಸಹ ನಡೆದಿದೆ. ನಂತರ ಖಾಸಗೀ ಹೋಟೆಲ್ನಲ್ಲಿ ಆಯುಷ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ.
ಕೆಲವು ವರ್ಷಗಳ ಹಿಂದೆ ಮಾಧ್ಯಮದವರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಆಯುಷ್ಗೆ ಮುಂದೇನು ಎಂಬ ಪ್ರಶ್ನೆ ಕೇಳಿದಾಗ, ಹೀರೋ ಆಗುತ್ತೇನೆ ಎಂದು ಆಯುಷ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಉಪೇಂದ್ರ, ಇದನ್ನೆಲ್ಲಾ ನಾವು ಪ್ಲಾನ್ ಮಾಡುವುದಲ್ಲ, ಅದೆಲ್ಲಾ ಕೂಡಿಬರಬೇಕು, ಸಮಯ ಬರಬೇಕು ಎಂದು ಹೇಳಿದ್ದರು.
ಈಗ ಆಯುಷ್ ಮೊದಲ ಚಿತ್ರವನ್ನು ಪುರುಷೋತ್ತಮ್ ನಿರ್ದೇಶನ ಮಾಡುತ್ತಿದ್ದು, ಅಭಿಷೇಕ್ ಸಿರಿವಂತ್ ನಿರ್ಮಿಸುತ್ತಿದ್ದಾರಂತೆ. ಸದ್ಯ ಲೊಕೇಶ್ ಹುಡುಕಾಟ ನಡೆಯುತ್ತಿದ್ದು, ತಾರಾಗಣದ ಆಯ್ಕೆ ಸಹ ನಡೆಯುತ್ತಿದೆಯಂತೆ. ಫೋಟೋ ಶೂಟ್ ಮುಗಿದ ನಂತರ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗುತ್ತದಂತೆ. ಈ ಚಿತ್ರಕ್ಕೆ ಆಯುಷ್ ಸಾಕಷ್ಟು ತಯಾರಿ ನಡೆಸುತ್ತಿದ್ದು, ಸದ್ಯದಲ್ಲೇ ಕ್ಯಾಮೆರಾ ಮುಂದೆ ಬರಲಿದ್ದಾರೆ.
ಈ ಚಿತ್ರಕ್ಕೆ ಹಿರಿಯ ಛಾಯಾಗ್ರಾಹಕ ಎಚ್.ಸಿ. ವೇಣು ಛಾಯಾಗ್ರಹಣ ಮಾಡುತ್ತಿದ್ದು, ಉಳಿದ ತಂತ್ರಜ್ಞರ ಪಟ್ಟಿ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.