‘ವಿಲಾಯತ್ ಬುದ್ಧ’ ಮಂಕು, ‘ಎಕೋ’ ಸರ್ಪ್ರೈಸ್ ಹಿಟ್: ಪೃಥ್ವಿರಾಜ್‌ಗಿಂತ ಹೊಸಬರಿಗೆ ಪ್ರೇಕ್ಷಕನ ಮಣೆ

ಈ ಹಿಂದೆ, ಪೃಥ್ವಿರಾಜ್ ಅವರು 'ಅಯ್ಯಪ್ಪನಂ ಕೋಶಿಯಂ' ಮತ್ತು 'ಡ್ರೈವಿಂಗ್ ಲೈಸೆನ್ಸ್' ನಂತಹ ಅಹಂಕಾರದ ಘರ್ಷಣೆಯನ್ನು ಆಧರಿಸಿದ ಎರಡು ಅದ್ಭುತ ಚಿತ್ರಗಳನ್ನು ನೀಡಿದ್ದರು.

Update: 2025-11-22 09:30 GMT

ಎಕೋ ಮುಂದೆ ಮಂಕಾದ ವಿಲಾಯತ್ ಬುದ್ಧ

Click the Play button to listen to article

ಮಹೇಶ್ ಬಾಬು–ಎಸ್.ಎಸ್. ರಾಜಮೌಳಿ ಅವರ ‘ವಾರಾಣಸಿ’ಯಲ್ಲಿ ಖಳನಾಯಕನಾಗಿ ಬಿಗ್ ಪರದೆಯ ಮೇಲೆ ಸದ್ದು ಮಾಡಲಿರುವ ಪೃಥ್ವಿರಾಜ್ ಸುಕುಮಾರನ್, ಮಲಯಾಳಂ ಚಿತ್ರರಂಗದಲ್ಲಿ ಈಗ ಸಂಪೂರ್ಣ ಭಿನ್ನ ಚಿತ್ರಣ ಕಂಡಿದ್ದಾರೆ. ಅವರ ಬಹು ನಿರೀಕ್ಷಿತ ಹೊಸ ಮಲಯಾಳಂ ಸಿನಿಮಾ ‘ವಿಲಾಯತ್ ಬುದ್ಧ’ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ದಾಟು ಸಾಧಿಸದೇ ಮಂದಗತಿಯಲ್ಲಿ ಮುಗ್ಗರಿಸಿರುವಾಗ, ಮುಖ ಗುರುತೇ ಇಲ್ಲದ ಹೊಸಬರ ಮಿಸ್ಟರಿ–ಥ್ರಿಲ್ಲರ್ ‘ಎಕೋ’ ಮಾತ್ರ ಮೌಖಿಕ ಪ್ರಚಾರದ ಬೆನ್ನಿಗೆ ಕುಳಿತು ಹಿಟ್ ಟ್ರ್ಯಾಕ್ ಹಿಡಿದಿದೆ.

ರಾಜ್ಯದಲ್ಲಿ ದೊಡ್ಡ ಸ್ಟಾರ್ ವರ್ಚಸ್ಸು ಹೊಂದಿರುವ ಪೃಥ್ವಿರಾಜ್‌ರ ‘ವಿಲಾಯತ್ ಬುದ್ಧ’ ಆರಂಭಿಕ ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಚೆನ್ನಾಗಿ ಓಡಿದರೂ, ಚಿತ್ರವು ಮೂಲವಿಷಯ ಮತ್ತು ಪ್ರಸ್ತುತಿಯಲ್ಲಿ ಯಾವುದೇ ಹೊಸತನ ತೋರಿಸದೆ ಸಾಮಾನ್ಯ ವಾಣಿಜ್ಯ ರೇಖೆಯಲ್ಲೇ ಸೀಮಿತವಾಗಿದೆ ಎಂಬ ಅಭಿಪ್ರಾಯ ಪ್ರಧಾನವಾಗಿದೆ.

ಚಿತ್ರದ ಟ್ರೇಲರ್ ಬಿಡುಗಡೆಯಾದ ಕ್ಷಣದಿಂದಲೇ, ಅಲ್ಲು ಅರ್ಜುನ್‌ನ ‘ಪುಷ್ಪ’ ಶೈಲಿಯನ್ನು ನೆನಪಿಸಿತು, ಚಿತ್ರವೂ ಅದೇ ಮಸಾಲೆ ಜಗತ್ತಿಗೆ ಸೇರುತ್ತದೆಯೇ ಎಂಬ ಸಂಶಯ ಹುಟ್ಟಿಸಿತು. ಪೃಥ್ವಿರಾಜ್ ಎಂಬ ಹೆಸರಿನ ಆಕರ್ಷಣೆ ಮತ್ತು ಸ್ಟಾರ್‌ಡಮ್‌ನ ಬಲದಿಂದ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಓಟ ನಿರೀಕ್ಷಿಸಿದ್ದ ನಿರ್ಮಾಪಕರು, ಈಗ ಕಂಡುಕೊಳ್ಳುತ್ತಿರುವುದು ಕುಸಿಯುತ್ತಿರುವ ಕಲೆಕ್ಷನ್‌ಗಳ ವಾಸ್ತವ ಚಿತ್ರ.

‘ಅಯ್ಯಪ್ಪನಂ ಕೋಶಿಯಂ’ ಛಾಯೆ, ಆದರೆ ಅದೇ ತೀಕ್ಷ್ಣತೆ ಇಲ್ಲ

ಹಿಂದೆ ‘ಅಯ್ಯಪ್ಪನಂ ಕೋಶಿಯಂ’ ಮತ್ತು ‘ಡ್ರೈವಿಂಗ್ ಲೈಸೆನ್ಸ್’ ಮೂಲಕ ಅಹಂಕಾರ, ಪುರುಷಪ್ರಧಾನ ಘರ್ಷಣೆ, ಪವರ್ ಪ್ಲೇ ಇತ್ಯಾದಿ ಮನೋಭಾವಗಳನ್ನು ಚುಚ್ಚುವ ರೀತಿಯಲ್ಲಿ ತೋರಿಸಿದ ಪೃಥ್ವಿರಾಜ್, ಈ ಬಾರಿ ‘ವಿಲಾಯತ್ ಬುದ್ಧ’ ಮೂಲಕ ಅದೇ ಜಗತ್ತಿಗೆ ಹಿಂತಿರುಗಿದ್ದಾರೆ.

ಇದರಿಂದಲೇ ಪ್ರೇಕ್ಷಕರ ನಿರೀಕ್ಷೆ ಸಹಜವಾಗಿ ಹೆಚ್ಚಿತ್ತು. ಆದರೆ, ಕಥೆಯ ಕಟ್ಟಣೆ, ಡ್ರಾಮಾದ ತೀವ್ರತೆಗೆ ತಕ್ಕ ಹೈಪಾಯಿಂಟ್‌ಗಳ ಕೊರತೆ ಮತ್ತು ಪಾತ್ರಗಳ ಒಳಜಗತ್ತನ್ನು ತೀವ್ರವಾಗಿ ಅನ್ವೇಷಿಸದ ದೃಷ್ಟಿಕೋನ ಈ ಚಿತ್ರವನ್ನು ಮಧ್ಯಮ ಮಟ್ಟದ, ಫಾರ್ಮುಲಾ ಕಾಮರ್ಷಿಯಲ್ ಚಿತ್ರಗಳ ಸಾಲಿಗೆ ತಳ್ಳಿದೆ. ಫಲಿತಾಂಶ – ಸ್ಟಾರ್ ಹೆಸರಿದ್ದರೂ, ಭಾವನಾತ್ಮಕ ‘ಹುಕ್’ ಇರದ ಕಾರಣ ಚಿತ್ರವು ಬಾಯಿಂದ ಬಾಯಿಗೆ ಹಾರುವ ಹಿಟ್ ಆಗಲು ವಿಫಲವಾಗಿದೆ.

ಹೊಸಬರ ‘ಎಕೋ’ – ಸ್ಮಾಲ್ ಫಿಲ್ಮ್, ಬಿಗ್ ಇಂಪ್ಯಾಕ್ಟ್

ಇದರ ವಿರುದ್ಧದ ಧ್ರುವದಲ್ಲಿ ನಿಂತಿರುವುದು ‘ಎಕೋ’. ದೊಡ್ಡ ಸ್ಟಾರ್ ಮುಖವಿಲ್ಲ, ಮೈತ್ರಿ ರಾಜ್ಯವ್ಯಾಪ್ತಿ ಪ್ರಚಾರವಿಲ್ಲ, ಆದರೆ ಮೌಖಿಕ ಪ್ರಚಾರದ ಜೋರು ಇದೆ. ಮಿಸ್ಟರಿ–ಥ್ರಿಲ್ಲರ್ ಶೈಲಿಯ ಈ ಚಿಕ್ಕ ಚಿತ್ರವು ಮೊದಲ ದಿನ ಬೆಳಗಿನ ಶೋಗಳಲ್ಲಿ ನೀರಸ ಆರಂಭ ಕಂಡರೂ, ಪ್ರೇಕ್ಷಕರ ರಿವ್ಯೂಗಳು ಹೊರಬಂದ ನಂತರ ಸಂಜೆ ಹಾಗೂ ರಾತ್ರಿ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಸಂಚಾರ ಹೆಚ್ಚಿದ್ದು, ಕಲೆಕ್ಷನ್‌ಗಳಲ್ಲಿ ಸ್ಪಷ್ಟ ಏರಿಕೆ ಕಾಣಿಸಿದೆ.

‘ವಿಲಾಯತ್ ಬುದ್ಧ’ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ನೆಲ ಕಚ್ಚಿದಂತೆ ಕಾಣುತ್ತಿರುವುದರಿಂದ, ವೀಕೆಂಡ್ ಅಂತ್ಯದ ವೇಳೆಗೆ ಮಲಯಾಳಂ ಬಾಕ್ಸ್ ಆಫೀಸ್‌ನಲ್ಲಿ ‘ಎಕೋ’ ಒಡೆಯನಾಗಿ ಹೊರಹೊಮ್ಮುವುದು ಬಹುತೇಕ ಖಚಿತ ಎಂದು ವ್ಯಾಪಾರ ವಲಯ ಅಂದಾಜು ಮಾಡುತ್ತಿದೆ.

ಬಾಕ್ಸ್ ಆಫೀಸ್‌ನಲ್ಲಿ ‘ಎಕೋ’ ಶಕ್ತಿ

ಸ್ಯಾಕ್ನಿಲ್ಕ್‌ ವರದಿ ಪ್ರಕಾರ, ‘ಎಕೋ’ ತನ್ನ ಮೊದಲ ದಿನ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 0.85 ಕೋಟಿ ರೂ. ಸಂಗ್ರಹಿಸಿದೆ. ಸಣ್ಣ ಚಿತ್ರವಾಗಿದ್ದರೂ, ಈ ಅಂಕಿಯನ್ನು ಪಾಸಿಟಿವ್ ವರ್ಲ್ಡ್‌ ಆಫ್ ಮಾಉತ್‌ನ ಶಕ್ತಿ ಎಂದು ಚಿತ್ರವಲಯ ವಿಶ್ಲೇಷಿಸುತ್ತಿದೆ. ಸ್ಲೋ ಬರ್ನ್ ಥ್ರಿಲ್ಲರ್ ಸ್ವಭಾವದ ಚಿತ್ರಗಳು multiplex–centred ಆಗಿ ಬಲವಾದ ಪ್ರೇಕ್ಷಕವರ್ಗ ಹೊಂದಿರುವ ಪ್ರಸ್ತುತ ಕಾಲಘಟ್ಟದಲ್ಲಿ, ‘ಎಕೋ’ ಒಂದಿಷ್ಟು ಕ್ಲಾಸಿಕ್ ಮೌತ್‌ಪಬ್ಲಿಸಿಟಿ ಕೇಸ್ ಸ್ಟಡಿಯಾಗುವ ಲಕ್ಷಣ ತೋರಿಸಿದೆ.

Full View

ಮಂಜು, ಪುರಾಣ, ಮಾನವರ ಮಿತಿಮೀರಿ ಹೋಗುವ ಕತೆ

‘ಎಕೋ’ಯ ಕಥಾ ಹಿನ್ನೆಲೆ ಕೇರಳದ ಮಂಜು ತುಂಬಿದ ಬೆಟ್ಟಗಳ ನಡುವೆ. ಒಂಟಿ ಜೀವನ ನಡೆಸುವ ವೃದ್ಧೆ ಮ್ಲಾಥಿ ಚೆಡಾಥಿ ಮತ್ತು ಅವಳ ಸಹಾಯಕ ಪೀಯೂಸ್ ಅವರ ಬದುಕೇ ಚಿತ್ರದ ಕೇಂದ್ರಬಿಂದು. ಬದುಕಿನ ಕಠಿಣ ದಿನಗಳನ್ನು ದಾಟಲು ಅವರು ಪ್ರಯತ್ನಿಸುತ್ತಿರುವ ನಡುವೆ, ತಮ್ಮ ಹಿಂದೆ ಕಾಡು ಭೂತಕಾಲವಿರುವ ಕುರಿಯಾಚನ್ ಎಂಬ ವ್ಯಕ್ತಿ ಅವರ ಜೀವನಕ್ಕೆ ಪ್ರವೇಶಿಸುತ್ತಾನೆ.

ಈ ಕುರಿಯಾಚನ್ ನಾಯಕನಾ ಅಥವಾ ಖಳನಾಯಕನಾ ಎಂಬುದು ಪ್ರೇಕ್ಷಕರಿಗೂ ಸ್ಪಷ್ಟವಾಗದಿರುವುದು ಚಿತ್ರದ ದೊಡ್ಡ ಕುತೂಹಲ ಬಿಂದು. ಒಂದೆಡೆ ಅವನನ್ನು ಅಪರಾಧಿ ಎಂದು ಕರೆಯಲಾಗುತ್ತದೆ, ಮತ್ತೊಂದೆಡೆ ರಕ್ಷಕ ಎಂದು ಕಾಣಲಾಗುತ್ತದೆ. ಈ ಗೊಂದಲದ ಮಧ್ಯೆ, ಯಾರು ವಾಸ್ತವ ನಿಯಂತ್ರಣ ಹೊಂದಿದ್ದಾರೆ – ಮನುಷ್ಯನಾ, ಪ್ರಾಣಿಯನಾ, ಇಲ್ಲವೇ ಪುರಾಣಗಳೇನಾ – ಎನ್ನುವುದನ್ನು ಸಿನಿಮಾವು ಪ್ರೇಕ್ಷಕರಿಂದಲೇ ಊಹೆ ಮಾಡಿಸಿಕೊಳ್ಳುತ್ತ ಸಾಗುತ್ತದೆ. ‘ಯಾರು ಹಗ್ಗ ಎಳೆಯುತ್ತಾರೆ, ಯಾರು ನಿಜವಾಗಿ ಓಡುತ್ತಿದ್ದಾರೆ’ ಎಂಬ ಅನುಮಾನಾಚ್ಛಾದಿತ ವಾತಾವರಣ ಸಿನಿಮಾವನ್ನು ಸಾಮಾನ್ಯ ಥ್ರಿಲ್ಲರ್‌ಗಳಿಂದ ಬೇರ್ಪಡಿಸುತ್ತದೆ.

Full View

ಪಾತ್ರಗಳು, ತಂಡ ಮತ್ತು ಲೊಕೇಷನ್ – ಅಚ್ಚುಕಟ್ಟಾದ ‘ಎಂಬಿಯನ್ಸ್’

ಪೀಯೂಸ್ ಪಾತ್ರದಲ್ಲಿ ಸಂದೀಪ್ ಪ್ರದೀಪ್, ಮ್ಲಾಥಿ ಚೆಡಾಥಿಯಾಗಿ ಬಿಯಾನಾ ಮೋಮಿನ್, ಮೋಹನ್ ಪೋತನ್ ಆಗಿ ವಿನೀತ್ ತಮ್ಮ ಪಾತ್ರಗಳಲ್ಲಿ ನೈಸರ್ಗಿಕ ಅಭಿನಯ ತೋರಿಸಿದ್ದಾರೆ. ನರೇನ್, ಬಿನು ಪಪ್ಪು, ಅಶೋಕನ್, ಸಾಹೀರ್ ಮುಹಮ್ಮದ್, ಸಿಮ್ ಝಿ ಫೀ, ಪ ponvannan, ರಂಜಿತ್ ಶೇಖರ್ ಹಾಗೂ ಕುರಿಯಾಚನ್ ಪಾತ್ರದ ಮೂಲಕ ತೀವ್ರ ಹೊಳಪು ನೀಡಿರುವ ಸೌರಭ್ ಸಚ್‌ದೇವ – ಈ ಎಲ್ಲರ ಹಾಜರಾತಿ ಚಿತ್ರಕ್ಕೆ ಮಲ್ಟಿ–ಲೇಯರ್ಡ್ ಕ್ಯಾಸ್ಟಿಂಗ್ ಶಕ್ತಿ ನೀಡಿದೆ.

ದಿಂಜಿತ್ ಅಯ್ಯಥನ್ ನಿರ್ದೇಶನ ಮಾಡಿರುವ ‘ಎಕೋ’ಗೆ ಬಹುಲ್ ರಮೇಶ್ ಕಥೆ ಮತ್ತು ಛಾಯಾಗ್ರಹಣ ಎರಡರಲ್ಲೂ ಸಹಿ ಹಾಕಿದ್ದಾರೆ. ಕೇರಳದ ಇಡುಕ್ಕಿ ಜಿಲ್ಲೆಯ ಪ್ರಾಕೃತಿಕ ಸೌಂದರ್ಯ, ಮಂಜು, ಕಾಡು, ಬೆಟ್ಟಗಳು – ಇವೆಲ್ಲವೂ ಚಿತ್ರದ ಕಥೆಗೆ ಬೆಂಬಲಿಸುವ ಪಾತ್ರಗಳಂತೆ ಕೆಲಸಮಾಡುತ್ತವೆ. ದೃಷ್ಯಗಳನ್ನು ಸೆರೆ ಹಿಡಿಯುವ ರೀತಿ, ಸೌಂಡ್ ಡಿಸೈನ್ ಮತ್ತು ಶಬ್ದದ ಸುತ್ತ ಕಟ್ಟಿದ ‘ಎಕೋ’ಯ ಕಾನ್ಸೆಪ್ಟ್ – ಪರದೆ ಮೇಲೆ ಒಟ್ಟಿಗೆ ಬೆರೆತು ಅದ್ಭುತ ವಾತಾವರಣ ರಚಿಸಿದೆ.

Tags:    

Similar News