ಮಡೆನೂರು ಮನುಗೆ ಚಿತ್ರರಂಗದ ಅಸಹಾಕಾರ; ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತೀರ್ಮಾನ
ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಆಡಿಯೋದಲ್ಲಿ ಮನು, ಶಿವರಾಜ್ಕುಮಾರ್, ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಜನಪ್ರಿಯ ನಟರ ಕುರಿತು ಮಾತನಾಡಿದ್ದಾರೆ.;
ಕಾಮಿಡಿ ಕಿಲಾಡಿ ನಟ ಮಡೆನೂರು ಮನು
ಶಿವರಾಜಕುಮಾರ್, ದರ್ಶನ್ ಮತ್ತು ಧ್ರುವ ಸರ್ಜಾ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ ಎನ್ನಲಾದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನುಗೆ ಅಸಹಾಕಾರ ನೀಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಿದೆ. ಈ ಮೂಲಕ ಮನು ಅವರನ್ನು ಚಿತ್ರರಂಗದಿಂದ ಪರೋಕ್ಷವಾಗಿ ಬ್ಯಾನ್ ಮಾಡಲಾಗಿದೆ.
ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಆಡಿಯೋದಲ್ಲಿ ಮನು, ಕನ್ನಡ ಚಿತ್ರರಂಗದ ಹಲವು ಜನಪ್ರಿಯ ನಟರ ಕುರಿತು ಮಾತನಾಡಿದ್ದಾರೆ. ‘ಶಿವರಾಜಕುಮಾರ್ ಇನ್ನೊಂದಾರು ವರ್ಷಗಳಲ್ಲಿ ಸತ್ತು ಹೋಗುತ್ತಾನೆ. ಧ್ರುವ ಸರ್ಜಾ ಇನ್ನೊಂದು ಎಂಟು ವರ್ಷ ಇರಬಹುದು. ದರ್ಶನ್ ಸತ್ತೋದ. ದರ್ಶನ್ಗೆ ಇನ್ನೊಂದು ಆರು ವರ್ಷ ಕ್ರೇಜ್ ಇರುತ್ತದೆ. ಆದರೆ, ಸಿನಿಮಾ ಮಾಡುವುದಿಲ್ಲ. ಈ ಮೂರು ಜನರ ಮಧ್ಯೆ ಕಾಂಪಿಟೇಷನ್ ಕೊಡೋಕೆ ಬಂದಿರೋ ಗಂಡುಗಲಿ ರೀ ನಾನು’ ಎಂಬ ಮಾತಗಳು ಕೇಳಿಬರುತ್ತವೆ.
ಇಷ್ಟಕ್ಕೂ ಈ ಧ್ವನಿ ಮನು ಅವರದ್ದಾ? ಅಥವಾ ಬೇರೆ ಯಾರಾದರೂ ಮನು ಧ್ವನಿಯನ್ನು ನಕಲು ಮಾಡಿದ್ದಾರಾ? ಎಂಬ ಪ್ರಶ್ನೆಗಳ ನಡುವೆಯೇ, ದರ್ಶನ್, ಶಿವರಾಜಕುಮಾರ್ ಮತ್ತು ಧ್ರುವ ಸರ್ಜಾ ಅಭಿಮಾನಿಗಳು, ತಮ್ಮ ಮೆಚ್ಚಿನ ನಟರ ಬಗ್ಗೆ ಮನು ಹೀಗೆ ಮಾತನಾಡಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರರಂಗದ ಎಲ್ಲಾ ವಲಯಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಕಿರುತೆರೆ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಒಕ್ಕೂಟ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಮನು ಅವರು ಎಲ್ಲಾ ಪ್ರಕರಣಗಳಿಂದಲೂ ಮುಕ್ತರಾಗುವವರೆಗೂ ಅವರಿಗೆ ಸಹಕಾರ ನೀಡಬಾರದು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಭೆಯ ನಂತರ ಈ ಕುರಿತು ಮಾತನಾಡಿರುವ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು, ‘ಮನು ಅವರದ್ದು ದುರಹಂಕಾರದ ವರ್ತನೆಯಾಗಿದ್ದು, ಅವರಿಗೆ ಯಾವುದೇ ರೀತಿಯ ಸಹಕಾರ ಕೊಡಬಾರದು ಎಂದು ಸಭೆಯಲ್ಲಿ ಚರ್ಚೆಯಾಗಿದೆ. ಅದಕ್ಕೂ ಮೊದಲು ವಾನಿಜ್ಯ ಮಂಡಳಿ ಕಡೆಯಿಂದ ಕಮಿಷನರ್ ಅವರಿಗೆ ದೂರು ಕೊಡುತ್ತಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿ ಮನು ಅವರದ್ದೇನಾ? ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು. ಈಗಾಗಲೇ ಅವರ ಮೇಲೆ ಹಲವು ಪ್ರಕರಣಗಳಿವೆ. ಎಲ್ಲಾ ಪ್ರಕರಣಗಳಿಂದ ಮುಕ್ತವಾಗುವವರೆಗೂ ಸಹಕಾರ ಕೊಡಬಾರದು ಎಂದು ತೀರ್ಮಾನವಾಗಿದೆ. ಕಿರುತೆರೆ ಸೇರಿ ಯಾವುದೇ ರೀತಿಯ ಚಟವಟಿಕೆಗಳಲ್ಲೂ ಭಾಗವಹಿಸುವ ಹಾಗಿಲ್ಲ’ ಎಂದು ಹೇಳಿದರು.
ಅಂದಹಾಗೆ, ಮನು ನಾಯಕನಾಗಿ ಅಭಿನಯಿಸಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವು ಕಳೆದ ಶುಕ್ರವಾರ (ಮೇ 23) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.