ನಾನು ಹೃದಯ ಆದರೆ, ಹಂಸಲೇಖ ನನ್ನ ಹಾರ್ಟ್ಬೀಟ್: ರವಿಚಂದ್ರನ್
ಇವತ್ತು ಎಲ್ಲದಕ್ಕೂ ಲೆಕ್ಕಾಚಾರ ಶುರುವಾಗಿವಿದೆ ಎಂದ ರವಿಚಂದ್ರನ್, ‘ಸ್ನೇಹದಲ್ಲೂ ಲೆಕ್ಕಾಚಾರ, ಸಿನಿಮಾದಲ್ಲೂ ಲೆಕ್ಕಾಚಾರ, ಪ್ರತಿಯೊಂದಕ್ಕೂ ಲೆಕ್ಕಾಚಾರ. ಲೆಕ್ಕಾಚಾರ ಹಾಕಿಕೊಂಡೇ ಮಾತನಾಡುತ್ತೇವೆ. ಆದರೆ, ನನ್ನ ಮತ್ತು ಹಂಸಲೇಖ ಮಧ್ಯೆ ಯಾವತ್ತೂ ಲೆಕ್ಕಾಚಾರ ಇರಲೇ ಇಲ್ಲ.;
ರವಿಚಂದ್ರನ್ ಹಾಗೂ ಹಂಸಲೇಖ
ಅದೊಂದು ಪ್ರಶ್ನೆಗೆ ಇವತ್ತಿಗೂ ಸಮಂಜಸ ಉತ್ತರ ಸಿಕ್ಕಿಲ್ಲ. ಕನ್ನಡದ ಅತ್ಯಂತ ಜನಪ್ರಿಯ ನಟ-ಸಂಗೀತ ನಿರ್ದೇಶಕ ಜೋಡಿಯಾಗಿ ರವಿಚಂದ್ರನ್ ಮತ್ತು ಹಂಸಲೇಖ ಸುಮಾರು 25 ವರ್ಷಗಳ ಹಿಂದೆ ದೂರಾದರು. ಅಲ್ಲಿಯವರೆಗೂ ಹಲವು ಹಿಟ್ ಹಾಡುಗಳು ಮತ್ತು ಚಿತ್ರಗಳನ್ನು ನೀಡಿದ್ದ ಅವರಿಬ್ಬರೂ ಬೇರೆಬೇರೆ ದಾರಿ ಹಿಡಿದರು.
ಇಷ್ಟಕ್ಕೂ ಅವರಿಬ್ಬರೂ ದೂರ ಆಗಿದ್ದು ಯಾಕೆ? ಎಂಬ ಪ್ರಶ್ನೆಗೆ, ಏನೇನೋ ಕಾರಣಗಳು ಕೇಳಿ ಬಂದವು. ಇಬ್ಬರೂ ದೂರಾದರು ಎಂಬ ಕಾರಣಕ್ಕೆ ಅವರಿಬ್ಬರ ಸ್ನೇಹ ಕಡಿಮೆಯಾಗಿಲ್ಲ. ಹಂಸಲೇಖ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ, ಅವರು ತಮ್ಮ ಯಜಮಾನರನ್ನು (ರವಿಚಂದ್ರನ್) ಮೊದಲು ನೆನಪಿಸಿಕೊಳ್ಳುತ್ತಾರೆ. ರವಿಚಂದ್ರನ್ ಸಹ ಮೊದಲು ಹೋಗಿ ಶುಭ ಹಾರೈಸುತ್ತಾರೆ. ಇತ್ತೀಚೆಗೆ ಹಂಸಲೇಖ, ‘ಓಕೆ’ ಎಂಬ ಚಿತ್ರ ಪ್ರಾರಂಭಿಸಿದಾಗಲೂ ರವಿಚಂದ್ರನ್ ಬಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಮ್ಮ ಸ್ನೇಹದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು.
ನಾವಿಬ್ಬರು ದೂರ ಆಗಿದ್ದು ಯಾಕೆ ಎಂದು ಇದುವರೆಗೂ ಗೊತ್ತಿಲ್ಲ ಎಂದು ಹೇಳಿರುವ ರವಿಚಂದ್ರನ್, ‘ಇದ್ದಕ್ಕಿದ್ದಂತೆ ಒಂದು ದಿನ ನಾವಿಬ್ಬರೂ ದೂರ ಆಗಿಬಿಟ್ಟೆವು. ನಾವಿಬ್ಬರೂ ಇದುವರೆಗೂ ಜಗಳ ಆಡಿಲ್ಲ. ಯಾಕೆ ದೂರ ಆಗಿದ್ದು ಎಂದು ನನಗೂ ಗೊತ್ತಿಲ್ಲ. ಬಿಟ್ಟು ಹೋಗುವಂತಹ ಕಾರಣಗಳು ಇಲ್ಲ. ಸಮಯ, ವಿಧಿ ನಮ್ಮನ್ನು ಹೇಗೆ ಸೇರಿಸಿತೋ, ಹಾಗೆಯೇ ದೂರ ಮಾಡಿತು. ಬಹುಶಃ ಬೇರೆ ದಾರಿಗಳು ಓಪನ್ ಆಗಬೇಕಿತ್ತೇನೋ? ಗೊತ್ತಿಲ್ಲ. ಅದರಿಂದ ನಾವಿಬ್ಬರೂ ದೂರ ಆಗಬೇಕಾದಂಥಹ ಪರಿಸ್ಥಿತಿ ಬಂದಿರಬಹುದು’ ಎಂದರು.
ಇವತ್ತು ಎಲ್ಲದಕ್ಕೂ ಲೆಕ್ಕಾಚಾರ ಶುರುವಾಗಿವಿದೆ ಎಂದ ರವಿಚಂದ್ರನ್, ‘ಸ್ನೇಹದಲ್ಲೂ ಲೆಕ್ಕಾಚಾರ, ಸಿನಿಮಾದಲ್ಲೂ ಲೆಕ್ಕಾಚಾರ, ಪ್ರತಿಯೊಂದಕ್ಕೂ ಲೆಕ್ಕಾಚಾರ. ಲೆಕ್ಕಾಚಾರ ಹಾಕಿಕೊಂಡೇ ಮಾತನಾಡುತ್ತೇವೆ. ಆದರೆ, ನನ್ನ ಮತ್ತು ಹಂಸಲೇಖ ಮಧ್ಯೆ ಯಾವತ್ತೂ ಲೆಕ್ಕಾಚಾರ ಇರಲೇ ಇಲ್ಲ. ಇದರಿಂದ ಏನು ಲಾಭ ಬರುತ್ತೆ, ಏನು ವಾಪಸ್ಸು ಪಡೆಯುತ್ತೇವೆ ಎಂದು ನಾವು ಯಾವತ್ತೂ ಯೋಚಿಸಲಿಲ್ಲ. ನಾನು ಸುಮ್ಮನೆ ಸಿನಿಮಾ ಮಾಡಿಕೊಂಡು ಹೋದೆವು. ಸಿನಿಮಾ ಚೆನ್ನಾಗಿರಬೇಕು ಎಂಬುದಷ್ಟೇ ಉದ್ದೇಶವಾಗಿತ್ತು. ‘ಪ್ರೇಮಲೋಕ’ ಆಗಲೀ, ‘ರಣಧೀರ’ ಆಗಲೀ ಲಾಭ ಎಷ್ಟು ಎಂದು ಗೊತ್ತಿಲ್ಲ’ ಎಂದರು.
ನಾನು ಹೃದಯ ಆದರೆ, ಹಂಸಲೇಖ ನನ್ನ ಹಾರ್ಟ್ಬೀಟ್ ಎನ್ನುವ ರವಿಚಂದ್ರನ್, ‘ನಾನು ನಗೋದು ಕಡಿಮೆ. ಹಂಸಲೇಖ ಇದ್ದಾಗ ಮಾತ್ರ ನಾನು ಜಾಸ್ತಿ ನಗುತ್ತೇನೆ. ಅವರ ಜೊತೆಗೆ ಬರುವ ನಗು, ಬೇರೆ ಯಾರ ಜೊತೆಗೂ ಬರುವುದಿಲ್ಲ. ನಾವು ದೂರ ಆಗಿರಬಹುದು. ಆದರೆ, ನಮ್ಮ ನಡುವೆ ಸ್ನೇಹ ಕಡಿಮೆ ಆಗಿಲ್ಲ. ಗಟ್ಟಿಯಾಗಿಯೇ ಇದೆ. ನಾವು ಜೊತೆಗೆ ಸಿನಿಮಾ ಮಾಡೋಕೆ ಆಗಿಲ್ಲದಿರಬಹುದು. ಸಮಯ ಬಂದಾಗ, ಮತ್ತೆ ಜೊತೆಗೆ ಸಿನಿಮಾ ಮಾಡಬಹುದು’ ಎಂದರು.