ಸಾಮಾಜಿಕ ಪಿಡುಗಿನ ವಿರುದ್ಧ ಸಮರ ಸಾರಿದ ಹಂಸಲೇಖ

ನಿರ್ದೇಶಕರಾಗಬೇಕು ಎನ್ನುವುದು ಹಂಸಲೇಖ ಅವರ ಬಹುವರ್ಷಗಳ ಕನಸು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಹಂಸಲೇಖ ಕೊನೆಗೂ ‘ಓಕೆ’ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ.;

Update: 2025-06-27 06:38 GMT

ಹಂಸಲೇಖ 

ಹೆಣ್ಣು ಭ್ರೂಣ ಪತ್ತೆ ಮತ್ತು ಭ್ರೂಣ ಹತ್ಯೆ ಕುರಿತು ಕನ್ನಡದಲ್ಲಿ ‘ತಾರಿಣಿ’ ಸೇರಿದಂತೆ ಕೆಲವು ಚಿತ್ರಗಳು ಬಂದಿವೆ. ಈ ನಿಟ್ಟಿನಲ್ಲಿ ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಸಹ ಹೆಜ್ಜೆ ಇಟ್ಟಿದ್ದಾರೆ. ‘ಓಕೆ’ ಎಂಬ ಚಿತ್ರದಲ್ಲಿ ಅವರು ಹೆಣ್ಣು ಭ್ರೂಣ ಪತ್ತೆ ಮತ್ತು ಭ್ರೂಣ ಹತ್ಯೆ ವಿರುದ್ಧ ಸಮರ ಸಾರಿದ್ದಾರೆ.

ನಿರ್ದೇಶಕರಾಗಬೇಕು ಎನ್ನುವುದು ಹಂಸಲೇಖ ಅವರ ಬಹುವರ್ಷಗಳ ಕನಸು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಹಂಸಲೇಖ ಕೊನೆಗೂ ‘ಓಕೆ’ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರವು ಇತ್ತೀಚೆಗೆ ಸೆಟ್ಟೇರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

‘ಓಕೆ’ ಚಿತ್ರವನ್ನು ನಾಗೇಶ್ ವಾಷ್ಟರ್ ಮತ್ತು ಹಂಸಲೇಖ ಅವರ ಮಗ ಸೂರ್ಯಪ್ರಕಾಶ್ (ಅಲಂಕಾರ್), ಆಕಾಂಕ್ಷ ಪ್ರೊಡಕ್ಷನ್ ಮತ್ತು ಐದನಿ ಎಂಟರ್ಟೈನ್ ಮೆಂಟ್ ಸಂಸ್ಥೆಯಡಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಅದೀಬ್‍ ಅಖ್ತರ್ ಅವರ ‘ಪಂಜರ’ ಕಥೆಯನ್ನಾಧರಿಸಿ ಚಿತ್ರ ಮಾಡಲಾಗುತ್ತಿದೆ. ಕಿಶೋರ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಮಗೆ ಮಣ್ಣಿನ ಗುಣವಿರುವ ಕಥೆಗಳು, ಕಥೆಗಾರರು ಚಿತ್ರರಂಗಕ್ಕೆ ಬೇಕು ಎನ್ನುವ ಹಂಸಲೇಖ, ‘ಅಂತಹ ಸಿನಿಮಾಗಳು ಬಂದರೆ ಸಾಮಾನ್ಯ ಪ್ರೇಕ್ಷಕರು ಬರುತ್ತಾರೆ. ಕಥೆಗಳಲ್ಲಿ ಕನ್ನಡದ ಡಿಎನ್‌ಎ ಇದ್ದರೆ ಜನ ಚಿತ್ರ ನೋಡುತ್ತಾರೆ. ನಮ್ಮ ಸಂಸ್ಕೃತಿ ಇರುವ ಕಥೆಗಳ ಚಿಕ್ಕ ಚಿಕ್ಕ ಸಿನಿಮಾ ಮಾಡುವುದು ಇವತ್ತಿನ ಅಗತ್ಯ. ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಆಂದೋಲನ ಮಾಡುತ್ತಿದ್ದೇವೆ’ ಎಂದರು.

‘ಓಕೆ’ ಕುರಿತು ಮಾತನಾಡಿದ ಅವರು, ‘ಐದು ವರ್ಷಗಳ ಹಿಂದೆ ಆದೀಬ್‍ ಅಖ್ತರ್ ಅವರ ‘ಪಂಜರ’ ಎಂಬ ಕಥೆಯನ್ನು ‘ಪ್ರಜಾವಾಣಿ’ಯಲ್ಲಿ ಓದಿದ್ದೆ. ಕಥೆ ಓದಿ ಅವರನ್ನು ಕರೆಸಿ, ಅದರ ಹಕ್ಕುಗಳನ್ನು ಪಡೆದೆ. ಸಾಮಾಜಿಕ ಪಿಡುಗಾಗಿರುವ ಹೆಣ್ಣು ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಸಮರ ಸಾರುವಂತಹ ಚಿತ್ರ ಇದಾಗಿರುತ್ತದೆ. ಈ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ವೈದ್ಯಕೀಯ ವಲಯಕ್ಕೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ಕಥೆಗಾರ ಅದೀಬ್‍ ಅಖ್ತರ್‍ ಮಾತನಾಡಿ, ‘ನಾನು ಮೂಲತಃ ಉರ್ದು ಲೇಖಕ. ನನ್ನ 45ನೇ ವರ್ಷದಲ್ಲಿ ಕನ್ನಡ ಕಲಿತು, ಕನ್ನಡದಲ್ಲಿ ಕಥೆಗಳನ್ನು ಬರೆಯುತ್ತಿದ್ದೇನೆ. ನೈಜ ಸುದ್ದಿಗಳನ್ನು ಆಧರಿಸಿ ನಾನು ಕಥೆ ಬರೆಯುತ್ತಾ ಬಂದಿದ್ದೇನೆ. ಹಂಸಲೇಖ ಅವರಿಗೂ ಮೊದಲು ಇಬ್ಬರು ನಿರ್ದೇಶಕರು ಈ ಕಥೆಯನ್ನು ಆಧರಿಸಿ ಚಿತ್ರ ಮಾಡುವುದಾಗಿ ಹೇಳಿದರು. ಅವರ್ಯಾರು ಎಂದು ನನಗೆ ಗೊತ್ತಿಲ್ಲದ ಕಾರಣ, ಕಥೆ ಕೊಟ್ಟಿರಲಿಲ್ಲ. ಹಂಸಲೇಖ ಫೋನ್‍ ಮಾಡಿದಾಗ, ಖುಷಿಯಿಂದ ಅವರಿಗೆ ಕಥೆ ಕೊಟ್ಟಿದ್ದೇನೆ’ ಎಂದರು.

‘ಓಕೆ’ ಚಿತ್ರಕ್ಕೆ ಸತ್ಯ ಹೆಗಡೆ ಛಾಯಗ್ರಹಣವಿದೆ. ಹಂಸಲೇಖ ಅವರೇ ಹಾಡುಗಳನ್ನು ಬರೆಯುವುದರ ಜೊತೆಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

Tags:    

Similar News