ಬಘೀರ’ ಬಳಿಕ ಘರ್ಜನೆಗೆ ಸಜ್ಜಾದ ಶ್ರೀಮುರಳಿ: 700 ವರ್ಷಗಳ ಹಿಂದಿನ ಕಥೆಯ ‘ಉಗ್ರಾಯುಧಮ್’ ಶುರು!

ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸುತ್ತಿರುವ ಮತ್ತು ಪುನೀತ್ ರುದ್ರನಾಗ್ ಅವರ ಮೊದಲ ನಿರ್ದೇಶನದ ಚಿತ್ರವಾದ ‘ಉಗ್ರಾಯುಧಮ್’ ಚಿತ್ರಕ್ಕೆ ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿದ್ದಾರೆ.

Update: 2025-10-07 06:13 GMT

ರೋರಿಂಗ್ ಸ್ಟಾರ್ ಶ್ರೀಮುರಳಿ 

Click the Play button to listen to article

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಚಿತ್ರ ‘ಉಗ್ರಾಯುಧಮ್’ಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಏಳು ಶತಮಾನಗಳ ಹಿಂದಿನ ಐತಿಹಾಸಿಕ ಕಥಾಹಂದರವನ್ನು ಹೊಂದಿರುವ ಈ ಚಿತ್ರದ ಮೂಲಕ, ಪುನೀತ್ ರುದ್ರನಾಗ್ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಹಿರಿಯ ನಿರ್ಮಾಪಕ ಹಾಗೂ ಶ್ರೀಮುರಳಿ ಅವರ ತಂದೆಯಾದ ಎಸ್.ಎ. ಚಿನ್ನೇಗೌಡ ಅವರು ಆರಂಭ ಫಲಕ ತೋರಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಚಿತ್ರದ ಬೃಹತ್ ಪ್ರಮಾಣದ ಬಗ್ಗೆ ಮಾತನಾಡಿದ ನಿರ್ದೇಶಕ ಪುನೀತ್ ರುದ್ರನಾಗ್, "ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಶ್ರೀಮುರಳಿ ಅವರ ಕುಟುಂಬ ನನಗೆ ಬೆನ್ನೆಲುಬಾಗಿ ನಿಂತಿದೆ. ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ಅವರೇ ನಾಯಕರಾಗಿರುವುದು ಸಂತಸ ತಂದಿದೆ. ಇದು 700 ವರ್ಷಗಳ ಹಿಂದಿನ ಪಿರಿಯಾಡಿಕ್ ಡ್ರಾಮಾ. ಡಾ. ರಾಜ್‌ಕುಮಾರ್ ಅವರ ಐತಿಹಾಸಿಕ ಚಿತ್ರಗಳೇ ನನಗೆ ಸ್ಫೂರ್ತಿ. ಈ ಚಿತ್ರಕ್ಕಾಗಿ ಸಕಲೇಶಪುರದ ಬಳಿ 135 ಎಕರೆ ಜಾಗದಲ್ಲಿ ಬೃಹತ್ ಸೆಟ್ ನಿರ್ಮಿಸಲಾಗುತ್ತಿದ್ದು, ನವೆಂಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ" ಎಂದು ತಿಳಿಸಿದರು.

200 ಕಥೆಗಳನ್ನು ಕೇಳಿ ಈ ಚಿತ್ರ ಒಪ್ಪಿಕೊಂಡ ಮುರಳಿ

'ಬಘೀರ' ಚಿತ್ರದ ನಂತರ ಮುಂದಿನ ಹೆಜ್ಜೆಯ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ನಾಯಕ ಶ್ರೀಮುರಳಿ, "‘ಬಘೀರ’ ನಂತರ ಸುಮಾರು 200 ಕಥೆಗಳನ್ನು ಕೇಳಿದ್ದೆ, ಆದರೆ ಅವುಗಳಲ್ಲಿ ಕೇವಲ ಮೂರು ಮಾತ್ರ ನನಗೆ ಇಷ್ಟವಾದವು. ‘ಉಗ್ರಾಯುಧಮ್’ ಆ ಚಿತ್ರಗಳಲ್ಲಿ ಒಂದು. ನಿರ್ದೇಶಕ ಪುನೀತ್ ಅವರು ಅತ್ಯಂತ ಶ್ರದ್ಧೆಯಿಂದ ಈ ಕಥೆಯನ್ನು ಸಿದ್ಧಪಡಿಸಿದ್ದಾರೆ. ನಿರ್ಮಾಪಕ ಜಯರಾಮ್ ಅವರು ಅದ್ದೂರಿಯಾಗಿ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಪ್ರೇಕ್ಷಕರಿಗೆ ಒಂದು ಅತ್ಯುತ್ತಮ ಚಿತ್ರವನ್ನು ನೀಡುವ ಭರವಸೆ ನಮಗಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:    

Similar News